ದಸರಾ ಸ್ತಬ್ದಚಿತ್ರಗಳಲ್ಲಿ ಪೆರಿಯಾರ್ ಫೋಟೋ ಏಕೆ ಬಂತು?: ಗುಡುಗಿದ ಯತ್ನಾಳ್
ನಿನ್ನೆ ವಿಶ್ವವಿಖ್ಯಾತ ದಸರಾ ಜಂಬೂಸವಾರಿ ಅದ್ಧೂರಿಯಾಗಿ ನೆರವೇರಿದೆ. ಕೋಟ್ಯಂತರ ಜನ ದಸರಾ ಕಣ್ತುಂಬಿಕೊಂಡಿದ್ದಾರೆ. ಇನ್ನು ದಸರಾ ಅಂಗವಾಗಿ ಏರ್ಪಡಿಸಿದ್ದ ಸ್ತಬ್ದಚಿತ್ರಗಳ ಪ್ರದರ್ಶನ ಕೂಡ ನಿನ್ನೆ ಹೆಚ್ಚು ಗಮನ ಸೆಳೆದಿದೆ. ಮತ್ತೊಂದೆಡೆ ಈ ವಿಚಾರ ರಾಜಕೀಯ ಸ್ವರೂಪ ಪಡೆದುಕೊಂಡಿದೆ.
ನಿನ್ನೆ ದಸರಾ ಸ್ತಬ್ದಚಿತ್ರ ಪ್ರದರ್ಶನದ ವೇಳೆ ಪೆರಿಯಾರ್ ರಾಮಸ್ವಾಮಿ ಅವರ ಚಿತ್ರ ಬಳಕೆ ಮಾಡಿರುವುದು ಕಮಲ ನಾಯಕರ ಕೆಂಗಣ್ಣಿಗೆ ಗುರಿಯಾಗಿದೆ. ದಸರಾ ಸ್ತಬ್ದಚಿತ್ರಗಳ ಪ್ರದರ್ಶನದಲ್ಲಿ ಪೆರಿಯಾರ್ ಅವರ ಚಿತ್ರವನ್ನು ಪ್ರದರ್ಶಿಸುವ ಮೂಲಕ ರಾಜ್ಯ ಸರ್ಕಾರ ಆಸ್ತಿಕರ ಭಾವನೆಗಳನ್ನು ಘಾಸಿಗೊಳಿಸಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಖಂಡನೆ ವ್ಯಕ್ತಪಡಿಸಿದ್ದಾರೆ.

ಸ್ತಬ್ದಚಿತ್ರಗಳ ಪ್ರದರ್ಶನ ರಾಜ್ಯದ ಸಂಸ್ಕೃತಿಯನ್ನು ಪ್ರತಿಬಿಂಬಿಸಬೇಕೇ ಹೊರತು ಯಾವುದೇ ಪಕ್ಷದ, ಅಥವಾ ವ್ಯಕ್ತಿಯ ಸಿದ್ದಾಂತಗಳನ್ನಲ್ಲ. 1971ರಲ್ಲಿ ನಡೆದ ಮೂಢನಂಬಿಕೆಗಳ ವಿರುದ್ಧದ ಸೇಲಂ ಪ್ರತಿಭಟನೆಯಲ್ಲಿ ಪೆರಿಯಾರ್ ಮತ್ತು ಆತನ ಸಂಗಡಿಗರು ಹಿಂದೂ ದೇವರುಗಳ ಮೂರ್ತಿಗಳನ್ನು ಭಗ್ನಗೊಳಿಸಿದರು ಎಂದು ಹೇಳಿದ್ದಾರೆ.
ಈ ಕೃತ್ಯವನ್ನು ತುಘಲಕ್ ಪತ್ರಿಕೆಯಲ್ಲಿ ಸಚಿತ್ರವಾಗಿ ಖಂಡಿಸಲಾಗಿತ್ತು. ಹಿಂದೂಗಳ ಆಚರಣೆಗಳನ್ನು, ಆಚಾರ-ವಿಚಾರ, ಸಂಸ್ಕೃತಿಯನ್ನ ವಿರೋಧ ಮಾಡುವ ದ್ರಾವಿಡ ಮುನ್ನೇತ್ರ ಕಡಗಂ (ಡಿಎಂಕೆ) ಪತ್ರಿಕೆಯಾದ 'ದಿ ರೈಸಿಂಗ್ ಸನ್' ಸಹ ಹಿಂದೂ ದೇವರುಗಳನ್ನು ಭಗ್ನಗೊಳಿಸಿದ ಪೆರಿಯಾರ್ ಮತ್ತು ಸಂಗಡಿಗರ ವರದಿಯನ್ನು ಪ್ರಕಟ ಮಾಡಿತ್ತು ಎಂದು ಯತ್ನಾಳ್ ಉಲ್ಲೇಖಿಸಿದ್ದಾರೆ.
ಈತನನ್ನು ಸಾಂಸ್ಕೃತಿಕ ಹಾಗೂ ಸಾಮಾಜಿಕ ರಾಯಭಾರಿಯೆಂದು ತೋರಿಸುತ್ತಿರುವ ರಾಜ್ಯ ಸರ್ಕಾರ ಕಿಂಚಿತ್ತಾದರೂ ಈತನ ಬಗ್ಗೆ ಸಂಶೋಧನೆ ಮಾಡುವ ಅವಶ್ಯಕತೆಯಿತ್ತು. ಹಿಂದೂ ವಿರೋಧಿಗಳನ್ನು ವೈಭವೀಕರಿಸುತ್ತಿರುವ ಸರ್ಕಾರದ ನಡೆ ಖಂಡನೀಯ ಎಂದಿದ್ದಾರೆ.

ಬಸವಣ್ಣ, ಪುರಂದರ ದಾಸರು, ಕನಕದಾಸರು, ಅಕ್ಕ ಮಹಾದೇವಿ, ರಾಣಿ ಚೆನ್ನಮ್ಮ, ಬ್ರಿಟಿಷರ ಹುಟ್ಟಡಗಡಿಸಿದ ರಾಯಣ್ಣ, ಕೋಟೆಯನ್ನು ಕಾಪಾಡಲು ಜೀವ ಕೊಟ್ಟ ಓಬ್ಬವ್ವ, ನಾಡನ್ನು ಬೆಳಗಿಸಿದ ಯದುವಂಶದ ಅರಸರು, ಸರ್.ಎಂ.ವಿಶ್ವೇಶ್ವರಯ್ಯನವರು, ಸಿದ್ದೇಶ್ವರ ಸ್ವಾಮೀಜಿ, ತ್ರಿವಿಧ ದಾಸೋಹಿ ಶಿವಕುಮಾರ ಸ್ವಾಮೀಜಿ ಹುಟ್ಟಿದ ನಾಡಿನಲ್ಲಿ ರಾಮಸ್ವಾಮಿಯಂತ ವ್ಯಕ್ತಿಯನ್ನು ಸ್ತಬ್ದಚಿತ್ರಗಳಲ್ಲಿ ತೋರಿಸಿದ್ದು ಈ ಸರ್ಕಾರದ ನೈತಿಕ ದಿವಾಳಿತನವನ್ನು ತೋರಿಸುತ್ತದೆ ಎಂದು ದೂರಿದ್ದಾರೆ.
ರಾಮಸ್ವಾಮಿಯ ಚಿತ್ರ ತೋರಿಸುವುದು ಹಿಂದೂಗಳ ಮಾಡಿದ ಅಪಮಾನವಷ್ಟೇ ಅಲ್ಲ, ನಾಡದೇವತೆ ಚಾಮುಂಡಮ್ಮನಿಗೆ ಮಾಡಿದ ಅಪಮಾನವೂ ಹೌದು. ಕರ್ನಾಟಕ ದಾಸರ, ಶರಣರ ನಾಡೇ ಹೊರತು ಮೂರ್ತಿ ಭಂಜಕರ ನಾಡಲ್ಲ. ಯಾರನ್ನೋ ಮೆಚ್ಚಿಸುವ ಭರದಲ್ಲಿ ದಸರೆಯ ಪಾವಿತ್ರ್ಯತೆಯನ್ನು, ಸಂಸ್ಕೃತಿಯನ್ನು ಹಾಳುಗೆಡವಿದ ಸರ್ಕಾರದ ನಡೆಗೆ ಧಿಕ್ಕಾರವಿರಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕನ್ನಡ ಸಂಸ್ಕೃತಿ ಸಚಿವರು, ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದರ ಬಗ್ಗೆ ಸ್ಪಷ್ಟೀಕರಣವನ್ನು ರಾಜ್ಯದ ಜನತೆಗೆ ನೀಡಬೇಕು ಎಂದು ಶಾಸಕ ಯತ್ನಾಳ್ ಒತ್ತಾಯಿಸಿದ್ದಾರೆ. ಈ ವಿಚಾರವಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಟ್ವೀಟ್ ಮಾಡಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.












Click it and Unblock the Notifications