ದಸರಾ ಮುನ್ನವೇ ಸಿದ್ದರಾಮಯ್ಯ ರಾಜೀನಾಮೆ, ಸಿಎಂ ಇಲ್ಲದೆ ಜಂಬೂಸವಾರಿ: ಭವಿಷ್ಯ ನುಡಿದಿದ್ಯಾರು?
ಮುಡಾ ಪ್ರಕರಣವು ಸಿದ್ದರಾಮಯ್ಯ ಅವರ ಸಿಎಂ ಕುರ್ಚಿಯನ್ನೇ ಅಲುಗಾಡಿಸುತ್ತಿದೆ. ಎಲ್ಲೆಡೆಯಿಂದಲೂ ಸಿದ್ದರಾಮಯ್ಯ ರಾಜೀನಾಮೆಯ ಕೂಗು ಕೇಳಿಬರುತ್ತಿದೆ. ಇನ್ನೇನು ನಾಡಹಬ್ಬ ದಸರಾಗೆ ಕ್ಷಣಗಣನೆ ಶುರುವಾಗಿದ್ದು, ದಸರಾ ಉತ್ಸವಕ್ಕೂ ಮುನ್ನವೇ ರಾಜ್ಯದ ಸಿಎಂ ಕುರ್ಚಿ ಖಾಲಿಯಾಗಲಿದೆ ಎಂಬ ಮಾತುಗಳು ಜೋರಾಗಿ ಸದ್ದು ಮಾಡುತ್ತಿದೆ.
ಈ ಬಗ್ಗೆ ಮಾತನಾಡಿರುವ ಬಿಜೆಪಿ ಶಾಸಕ ಶ್ರೀವತ್ಸ, ಈ ಬಾರಿಯ ದಸರಾ ಜಂಬೂ ಸವಾರಿಗೆ ಸಿಎಂ ಸಿದ್ದರಾಮಯ್ಯ ಪುಷ್ಪಾರ್ಚನೆ ಮಾಡುವುದೇ ಅನುಮಾನ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ. ದಸರಾ ಹೊತ್ತಿನಲ್ಲೇ ಸಿಎಂ ಸಿದ್ದರಾಮಯ್ಯ ಅವರು ರಾಜೀನಾಮೆ ಕೊಡುವ ಸಂದರ್ಭ ಬರಲಿದೆ ಎಂದು ಭವಿಷ್ಯವನ್ನೂ ನುಡಿದಿದ್ದಾರೆ.

ಶಾಸಕರ ಈ ಹೇಳಿಕೆಯು ಸದ್ಯ ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿದೆ. ಸಿದ್ದರಾಮಯ್ಯ ಅವರ ಮೇಲಿನ ಪ್ರಕರಣಗಳಲ್ಲಿ ಇದಕ್ಕೆ ಪುಷ್ಟಿ ನೀಡುವಂತಹ ಬೆಳವಣಿಗೆಗಳೇ ನಡೆಯುತ್ತಿವೆ. ಹಾಗಾಗಿ ಈ ದಸರಾ ಹಬ್ಬಕ್ಕೆ ಸಿಎಂ ಇರುತ್ತಾರಾ? ಇಲ್ಲವಾ? ಎಂಬ ಚರ್ಚೆಗಳು ಜೋರಾಗಿವೆ.
ಇನ್ನು ಕೆಲವೇ ದಿನಗಳಲ್ಲಿ ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಬೆಳವಣಿಗೆಗಳು ನಡೆಯಲಿವೆ. ಸಿಎಂ ಸಿದ್ದರಾಮಯ್ಯ ಅವರ ಇಂದಿನ ಸ್ಥಿತಿಗೆ ಅವರ ಸುತ್ತಲೂ ಇರುವ ಹಿತಶತ್ರುಗಳ ಸಲಹೆಯೇ ಕಾರಣ ಎಂದು ಶಾಸಕ ಶ್ರೀವತ್ಸ ದೂರಿದ್ದಾರೆ.

ಸಿಎಂ ಪತ್ನಿ ಮುಡಾ ಕೇಸ್ಗಳನ್ನು ವಾಪಸ್ ನೀಡುವುದಾಗಿ ಪತ್ರ ಬರೆದಿರುವ ವಿಚಾರದ ಬಗ್ಗೆ ಮಾತನಾಡಿ, ಸಿಎಂ ಪತ್ನಿ ಇಷ್ಟೆಲ್ಲ ಕುತ್ತಿಗೆಗೆ ಬಂದ ಮೇಲೆ ನಿವೇಶನಗಳನ್ನು ವಾಪಸ್ ನೀಡುವ ಬಗ್ಗೆ ಪತ್ರ ಬರೆದಿದ್ದಾರೆ. ಅವರಿಗೆ ಕಳೆದ ಮೂರು ತಿಂಗಳಿಂದ ತಮ್ಮ ಪತಿ ಸಿದ್ದರಾಮಯ್ಯ ಅವರ ಘನತೆ ಬೀದಿಪಾಲಾಗುತ್ತಿದೆ ಎಂಬುದು ಗೊತ್ತಿರಲಿಲ್ಲವೇ? ಈಗ ಜಾರಿ ನಿರ್ದೇಶನಾಲಯ (ಇಡಿ) ಈ ಕೇಸ್ಗೆ ಪ್ರವೇಶಿಸಿದ ಮೇಲೆ ಬುದ್ಧಿ ಬಂತಾ? ಎಂದು ಪ್ರಶ್ನಿಸಿದ್ದಾರೆ.
ಶ್ರೀವತ್ಸ ಅವರ ಹೇಳಿಕೆ ಬೆನ್ನಲ್ಲೇ ದಸರಾ ಮಹೋತ್ಸವಕ್ಕೂ ಮುನ್ನವೇ ಸಿಎಂ ಕುರ್ಚಿ ಖಾಲಿಯಾಗಲಿದೆಯೇ? ಸಿಎಂ ಇಲ್ಲದೆಯೇ ಜಂಬೂಸವಾರಿ ನಡೆಯಲಿದೆಯೇ? ಅಥವಾ ದಸರಾ ವೇಳೆಗೆ ಹೊಸ ಸಿಎಂ ಕುರ್ಚಿಯಲ್ಲಿದ್ದು, ಅವರೇ ಜಂಬೂಸವಾರಿ ಮಾಡಲಿದ್ದಾರಾ? ಹಾಗಾದರೆ ಹೊಸ ಸಿಎಂ ಯಾರಾಗಬಹುದು? ಎಂದೆಲ್ಲ ಪ್ರಶ್ನೆಗಳನ್ನು ಮುಂದಿಟ್ಟು ಚರ್ಚೆ ಆರಂಭಿಸಿದ್ದಾರೆ.

ಮತ್ತೊಂದೆಡೆ ಸಿದ್ದರಾಮಯ್ಯ ವಿರುದ್ಧ ದೂರು ನೀಡಿರುವ ಸ್ನೇಹಮಯಿ ಕೃಷ್ಣ ಕೂಡ ಆರೋಪಿ ಸ್ಥಾನದಲ್ಲಿರುವ ಸಿದ್ದರಾಮಯ್ಯ ಅವರು ದಸರಾದಲ್ಲಿ ನಾಡದೇವತೆ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡಬಾರದು ಎಂದು ಒತ್ತಾಯಿಸಿದ್ದಾರೆ. ಮುಡಾ ಕೇಸ್ನಲ್ಲಿ ಆರೋಪಿಯಾಗಿರುವ ಸಿದ್ದರಾಮಯ್ಯ ಅವರಲ್ಲಿ ಕೈಯಲ್ಲಿ ನಾಡಿನ ಅಧಿದೇವತೆಗೆ ಪುಷ್ಪಾರ್ಚನೆ ಮಾಡಿಸುವುದು ಸರಿಯಲ್ಲ. ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ಸಿದ್ದರಾಮಯ್ಯ ಪುಷ್ಪಾರ್ಚನೆ ಮಾಡಬಾರದು ಎಂದು ಹೇಳಿದ್ದಾರೆ.
ವಿಶ್ವವಿಖ್ಯಾತದ ದಸರಾ ಜಂಬೂಸವಾರಿಗೆ ಕ್ಷಣಗಣನೆ ಶುರುವಾಗಿದ್ದು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡನೇ ವರ್ಷದ ದಸರಾ ಮಹೋತ್ಸವವನ್ನು ಅದ್ಧೂರಿಯಾಗಿ ಆಚರಿಸಲು ಭರದ ಸಿದ್ಧತೆ ಮಾಡಿಕೊಂಡಿದೆ. ಇದೇ ವೇಳೆ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಅಪಸ್ವರ ಕೇಳಿಬರುತ್ತಿದ್ದು, ದಸರಾ ಹೊತ್ತಲ್ಲೇ ಕುರ್ಚಿಗೆ ಕಂಟಕ ಎದುರಾಗಿದೆ.












Click it and Unblock the Notifications