ಕಾಂಗ್ರೆಸ್ ಏಜೆಂಟ್ ಅನ್ನುವುದಕ್ಕೂ ಯತ್ನಾಳ್ ಆಡುತ್ತಿರುವುದಕ್ಕೂ ಸರೀ ಇದೆ..
ಸದಾ ಒಂದಲ್ಲಾ ಒಂದು ಹೇಳಿಕೆಗಳನ್ನು ಮುಖ್ಯಮಂತ್ರಿ ಯಡಿಯೂರಪ್ಪನವರ ವಿರುದ್ದ ಸಿಡಿಸುತ್ತಿರುವ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಹಾಲೀ ಅಧಿವೇಶನದಲ್ಲಿ ಮತ್ತೆ ಬಿಜೆಪಿಗೆ ಮುಜುಗರವನ್ನು ತಂದೊಡ್ಡಿದ್ದಾರೆ.
ಪಂಚಮಶಾಲಿ ಸಮುದಾಯದ ಹೋರಾಟದ ವೇಳೆ ಬಿಎಸ್ವೈ ಮತ್ತು ಅವರ ಕುಟುಂಬದ ಬಗ್ಗೆ ಸಾರ್ವಜನಿಕವಾಗಿ ಟೀಕೆಗಳನ್ನು ಮಾಡುತ್ತಾ, ವರಿಷ್ಠರಿಂದ ನೊಟೀಸ್ ಪಡೆದಿದ್ದ ಯತ್ನಾಳ್ ಅವರ ಬಿಎಸ್ವೈ ವಿರೋಧಿ ವರ್ತನೆ ಇನ್ನೂ ಕಮ್ಮಿಯಾದಂತಿಲ್ಲ.
2A ಮೀಸಲಾತಿಗಾಗಿ ಪಂಚಮಶಾಲಿ ಸಮುದಾಯದವರು ಪ್ರತಿಭಟನೆ/ಪಾದಯಾತ್ರೆ ನಡೆಸಿದ್ದಾಗ ಅದರ ನಾಯಕತ್ವನ್ನು ವಹಿಸಿಕೊಂಡವರಲ್ಲಿ ಯತ್ನಾಳ್ ಕೂಡಾ ಒಬ್ಬರಾಗಿದ್ದರು. ಈ ವೇಳೆ, ಇವರನ್ನು ಕಾಂಗ್ರೆಸ್ ಏಜೆಂಟ್ ಎಂದು ಬಿಜೆಪಿಯವರು ಜರಿದಿದ್ದರು.
ಪಂಚಮಶಾಲಿ ಸಮುದಾಯದ ಸಮಾವೇಶದ ನಂತರ ದೆಹಲಿಗೆ ತೆರಳಿದ್ದ ಯತ್ನಾಳ್, ಕಾಂಗ್ರೆಸ್ ಏಜೆಂಟ್ ಹೇಳಿಕೆಗೆ ದೆಹಲಿಯಿಂದಲೇ ಪ್ರತಿಕ್ರಿಯಿಸಿ, ರಾಜ್ಯಕ್ಕೆ ಬಂದ ಮೇಲೆ ನಿಮಗೆ ಉತ್ತರ ಕೊಡುತ್ತೇನೆ ಎಂದು ಘರ್ಜಿಸಿದ್ದರು.

ಹಾಲೀ ಅಧಿವೇಶನದಲ್ಲಿ ಮತ್ತೆ ಬಿಜೆಪಿಗೆ ಮುಜುಗರವಾಗುವ ಹೇಳಿಕೆ
ಇದಾದ ಮೇಲೆ ಈ ಬಗ್ಗೆ ಸಾರ್ವಜನಿಕವಾಗಿ ಏನೂ ಹೇಳಿಕೆಯನ್ನು ನೀಡದ ಯತ್ನಾಳ್, ಹಾಲೀ ಅಧಿವೇಶನದಲ್ಲಿ ಮತ್ತೆ ಬಿಜೆಪಿಗೆ ಮುಜುಗರವಾಗುವ ಹಾಗೇ ನಡೆದುಕೊಂಡಿದ್ದಾರೆ. ಮಂಗಳವಾರ (ಮಾ 9) ವಿಧಾನಸೌಧದ ಮೊಗಶಾಲೆಯಲ್ಲಿ ಬಿಎಸ್ವೈ ಜೊತೆ ಮುಖಾಮುಖಿಯಾದಾಗ ಸಮುದಾಯಕ್ಕೆ ಮೀಸಲಾತಿ ನೀಡುವ ವಿಚಾರವನ್ನು ಪ್ರಸ್ತಾವಿಸಿದ್ದಾರೆ. ನಾಳೆ, ಈ ಬಗ್ಗೆ ಸದನದಲ್ಲಿ ಮಾತನಾಡುತ್ತೇನೆ ಎನ್ನುವ ಭರವಸೆಯನ್ನು ಯತ್ನಾಳ್ ಗೆ ಬಿಎಸ್ವೈ ನೀಡಿದ್ದರು.

ಚರ್ಚೆಗೆ ಅವಕಾಶ ನೀಡಲಾಗುವುದು ಎಂದ ಸ್ಪೀಕರ್ ಕಾಗೇರಿ
ನಿನ್ನೆಯ ಸದನದ ಕಲಾಪದಲ್ಲೂ ಚರ್ಚೆಗೆ ಅವಕಾಶ ನೀಡಬೇಕೆಂದು ಯತ್ನಾಳ್ ಅವರು ಸ್ಪೀಕರ್ ಅವರಲ್ಲಿ ಮನವಿ ಮಾಡಿದ್ದರು. ನಾಳೆ, ಅವಕಾಶ ನೀಡಲಾಗುವುದು ಎಂದು ಸ್ಪೀಕರ್ ಹೇಳಿದ್ದರು. ಇಂದು ಮತ್ತೆ ಚರ್ಚೆಗೆ ಅವಕಾಶ ನೀಡಬೇಕೆಂದು ಮನವಿ ಮಾಡಿದಾಗ, ವಿರೋಧ ಪಕ್ಷದ ನಾಯಕರು ಮಾತನಾಡುತ್ತಿದ್ದಾರೆ. ಆಮೇಲೆ ಸಮಯಾವಕಾಶ ನೀಡುತ್ತೇನೆ ಎಂದು ಸ್ಪೀಕರ್ ಹೇಳಿದರು. ಆಗ, ಸಿದ್ದರಾಮಯ್ಯನವರು, ಯತ್ನಾಳ್ ಮಾತಾಡಲಿ, ನಾನು ಆಮೇಲೆ ಮಾತನಾಡುತ್ತೇನೆ ಎಂದು ಹೇಳಿದರು.

ಸಿದ್ದರಾಮಯ್ಯನವರನ್ನು ಹೊಗಳಿದ ಯತ್ನಾಳ್
ಸದನದಲ್ಲಿ ಮಾತನಾಡಲು ಆರಂಭಿಸಿದ ಯತ್ನಾಳ್, "ನಿನ್ನೆ ಮುಖ್ಯಮಂತ್ರಿಗಳು ನಾಳೆ ಸದನದಲ್ಲಿ ಚರ್ಚೆ ನಡೆಸೋಣ ಎಂದು ಹೇಳಿದ್ದರು. ಆದರೆ, ಇಂದು ಸದನದಿಂದ ನಾಪತ್ತೆಯಾಗಿದ್ದಾರೆ. ಮಾನ್ಯ ವಿರೋಧ ಪಕ್ಷದ ನಾಯಕರು ಅವರ ಅಮೂಲ್ಯ ಸಮಯವನ್ನು ನನಗೆ ನೀಡಿದ್ದಾರೆ. ಯಾಕೆಂದರೆ, ಸಿದ್ದರಾಮಯ್ಯನವರಿಗೆ ನಮ್ಮ ಸಮುದಾಯದ ಮೇಲೆ ಪ್ರೀತಿಯಿದೆ"ಎಂದು ಯತ್ನಾಳ್ ಅವರು ಸಿದ್ದರಾಮಯ್ಯನವರನ್ನು ಹೊಗಳಿದ್ದಾರೆ.
Recommended Video

ಯಡಿಯೂರಪ್ಪ ಮತ್ತು ಬಸನಗೌಡ ಪಾಟೀಲ್ ಯತ್ನಾಳ್
ಮುಖ್ಯಮಂತ್ರಿಗಳಿಗೆ ಮುಜುಗರ ತರುವ ಹೇಳಿಕೆಗಳನ್ನು ಯತ್ನಾಳ್ ಹಿಂದೆಯೂ ಸದನದಲ್ಲಿ ಆಡಿದ್ದರು. ಈಗ, ಬಹಿರಂಗವಾಗಿಯೇ ಸಿದ್ದರಾಮಯ್ಯನವರನ್ನು ಹೊಗಳುವ ಮೂಲಕ ಬಿಜೆಪಿಗೆ ಮುಜುಗರ ತಂದೊಡ್ಡಿದ್ದಾರೆ. ಹಾಗಾಗಿ, ಯತ್ನಾಳ್ ಅವರು ಕಾಂಗ್ರೆಸ್ ಏಜೆಂಟ್ ಎನ್ನುವ ಬಿಜೆಪಿ ಹೇಳಿಕೆಗೂ ಅವರ ಇಂದಿನ ಸದನದಲ್ಲಿನ ಹೇಳಿಕೆಗೂ ಒಂದಕ್ಕೊಂದು ತಾಳೆಯಾಗುತ್ತಿದೆ ಎನ್ನುವ ಮಾತು ಮೊಗಶಾಲೆಯಲ್ಲಿ ಕೇಳಿಬರುತ್ತಿತ್ತು.












Click it and Unblock the Notifications