ಯಡಿಯೂರಪ್ಪ ಶಕುನಿ ಇದ್ದ ಹಾಗೆ: ಬಿಜೆಪಿ ಶಾಸಕ ಯತ್ನಾಳ್ ಬಹಿರಂಗ ವಾಗ್ದಾಳಿ
ವಿಜಯಪುರ, ಡಿಸೆಂಬರ್ 25: ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ವಿರುದ್ಧ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೆ ಬಹಿರಂಗವಾಗಿ ಕಿಡಿಕಾರಿದ್ದು, ಯಡಿಯೂರಪ್ಪ ಶಕುನಿ ಇದ್ದ ಹಾಗೆ ಎಂದು ನೇರವಾಗಿ ವಾಗ್ದಾಳಿ ನಡೆಸಿದ್ದಾರೆ.
ನಾನು ಯತ್ನಾಳ್ ಅವರ ವಿರುದ್ಧ ಯಾವುದೇ ದೂರು ನೀಡಲ್ಲ ಎಂಬ ಯಡಿಯೂರಪ್ಪ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಯಡಿಯೂರಪ್ಪ ಅವರು ಏನು ಹೇಳುತ್ತಾರೋ ಅದರ ಉಲ್ಟಾ ನಡೆದಿರುತ್ತದೆ. ಯಡಿಯೂರಪ್ಪ ಹಾಗೂ ಅವರ ಮಗ ಮಾತನಾಡಿದ್ದು ಉಲ್ಟಾ ಆಗಿರುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹಾಗೂ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಈಗ ಯಡಿಯೂರಪ್ಪ ನನ್ನ ವಿರುದ್ಧ ದೂರು ಕೊಟ್ಟಿದ್ದಾರೆ. ಅದು ಏನೂ ನಡೆಯುತ್ತಿಲ್ಲ. ಹೈಕಮಾಂಡ್ ಯತ್ನಾಳ್ಗೆ ನೋಟಿಸ್ ಕೊಟ್ಟಿಲ್ಲ, ಪಕ್ಷದಿಂದ ಹೊರಕ್ಕೆ ಹಾಕಲಿಲ್ಲ ಇದರಿಂದ ತಮ್ಮ ಮರ್ಯಾದೆ ಹೋಗುತ್ತದೆ ಎನ್ನುವ ಕಾರಣಕ್ಕೆ ಹೀಗೆ ಹೇಳಿದ್ದಾರೆ. ಅವರು ಶಕುನಿ ಇದ್ದ ಹಾಗೆ ಇದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಹಿರಂಗವಾಗಿ ಹೇಳಿದ್ದಾರೆ.
ಹಿಜಾಬ್ ಆದೇಶ ವಾಪಸ್ ಎನ್ನುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಇದೇ ರೀತಿ ಡ್ರೆಸ್ ಇರಬೇಕು ಎಂದು ಈ ಹಿಂದೆ ನಮ್ಮ ಸರ್ಕಾರ ಇದ್ದಾಗ ಎಲ್ಲಿಯೂ ಹಸ್ತಕ್ಷೇಪ ಮಾಡಿಲ್ಲ. ಸಂಪೂರ್ಣ ದೇಶದಲ್ಲಿ ಎಲ್ಲಿಯೂ ಈ ವಿಷಯ ಇಲ್ಲ, ಕರ್ನಾಟಕದಲ್ಲಿ ಯಾಕೆ?. ಈಗ ಇವರೇ ಈ ವಿಚಾರ ತೆಗೆದಿದ್ದು, ಈ ವಿಚಾರ ಕಾಂಗ್ರೆಸ್ಗೆ ಲೋಕಸಭೆಯಲ್ಲಿ ನಿಶ್ಚಿತವಾಗಿ ಮುಳುವಾಗುತ್ತದೆ ಎಂದರು.
ದಲಿತರು, ಹಿಂದೂಳಿದವರ ಮಕ್ಕಳಿಗೆ ಪ್ರವಾಸಕ್ಕೆ ಕಳುಹಿಸುತ್ತೀರಿ. ಬಡವರು ಸೇರಿದಂತೆ ಎಲ್ಲಾ ಮಕ್ಕಳನ್ನು ಒಟ್ಟಿಗೆ ಕಳುಹಿಸಬೇಕು.
ಆಗ ಮಕ್ಕಳಲ್ಲಿ ಪ್ರೀತಿ ವಿಶ್ವಾಸ ಹೆಚ್ಚಾಗುತ್ತದೆ. ನೀವು ಪ್ರತ್ಯೇಕ ಕಳಿಸುವುದರಿಂದ ನೀವೇ ಮಕ್ಕಳನ್ನು ಪ್ರತ್ಯೇಕವಾಗಿಡುತ್ತೀರಿ. ಎಲ್ಲಾ ಸಮುದಾಯದ ಮಕ್ಕಳು ಕೂಡಿ ಓದಬೇಕು, ಕೂಡಿ ಊಟ ಮಾಡಬೇಕು, ಕೂಡಿ ಆಟವಾಡಬೇಕು.ಅಂದಾಗ ಮಾತ್ರ ಸಮಾನತೆ ಬರುತ್ತದೆ. ಸುಮ್ಮಸುಮ್ಮನೆ ಸಮಾನತೆ ಬರಲ್ಲ.
ಪ್ರಧಾನಿ ಮೋದಿ ಅವರು 2024ರ ಚುನಾವಣೆ ಒಳಗೆ ಅಥವಾ ಚುನಾವಣೆ ಬಳಿಕ ಸಮಾನ ನಾಗರಿಕತೆಯನ್ನು ಜಾರಿಗೆ ತರಬಹುದು. ನಮ್ಮ ದೇಶದಲ್ಲಿ ಸಮಾನ ನಾಗರಿಕತೆ ತರಬೇಕು ಎಂದು ಸುಪ್ರೀಂ ಕೋರ್ಟ್ ಸಹ ಸಲಹೆ ಕೊಟ್ಟಿದೆ. ಎಲ್ಲರಿಗೂ ಅನುಕೂಲವಾಗುವಂತಹ ಸಮಾನ ನಾಗರಿಕತೆ ಭಾರತದಲ್ಲಿ ಕೆಲವೇ ದಿನಗಳಲ್ಲಿ ಜಾರಿಯಾಗಲಿದೆ ಎಂದರು.
ರೈತರ ಕುರಿತಾದ ಸಚಿವ ಶಿವಾನಂದ ಪಾಟೀಲ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಇದು ದುರ್ದೈವ, ಯಾಕೆಂದರೆ ಶಿವಾನಂದ ಪಾಟೀಲ್ ಈ ಹಿಂದೆ ರೈತರ ಆತ್ಮಹತ್ಯೆ ಬಗ್ಗೆನೂ ಮಾತನಾಡಿದ್ದರು. ಇವತ್ತು ಬರಗಾಲವನ್ನು ರೈತರು ಬಯಸುತ್ತಾರೆ ಅಂದರೆ ಇದನ್ನು ಯಾವ ರೀತಿ ಖಂಡನೆ ಮಾಡಬೇಕು ತಿಳಿಯುತ್ತಿಲ್ಲ. ಈ ರೀತಿ ಒಬ್ಬ ಜವಾಬ್ದಾರಿಯುತ ಮಂತ್ರಿಗಳು, ಅದರಲ್ಲಿಯೂ ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವರು ಮಾತನಾಡುತ್ತಾರೆ ಅಂದರೆ, ದೇಶದಲ್ಲಿರುವಂತಹ ಅನ್ನದಾತ ಬರಗಾಲ ಬರಲಿ ಎಂದು ಬಯಸುವುದಿಲ್ಲ ಎಂದರು.
ಐದು ಲಕ್ಷ ಕೊಡುತ್ತೇವೆ ಅಂತ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಹೀಗೆಲ್ಲಾ ಹೇಳಿಕೆ ನೀಡುವವರಿಗೆ ನಾಡಿನ ಜನ ಹಾಗೂ ಮುಖ್ಯಮಂತ್ರಿಗಳು ಇಂತಹ ಸಚಿವರನ್ನು ಕರೆದು ಎಚ್ಚರಿಕೆ ಕೊಡಬೇಕು. ಈ ರೀತಿ ಹೇಳಿಕೆ ಕೊಡಬಾರದು, ಕೊಟ್ಟರೆ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಸಿದ್ದರಾಮಯ್ಯ ಹೇಳಬೇಕು. ಆದರೆ ಬಹುಶಃ ಅವರು ಸಿದ್ದರಾಮಯ್ಯ ಕಂಟ್ರೋಲ್ನಲ್ಲಿ ಅವರು ಇಲ್ಲ. ಅವರು ಡಿ.ಕೆ.ಶಿವಕುಮಾರ್ ಅವರ ಕಂಟ್ರೋಲ್ನಲ್ಲಿದ್ದಾರೆ. ಸರ್ಕಾರದಲ್ಲಿ ಎರಡು ಗುಂಪುಗಳಿವೆ. ಒಂದು ಸಿದ್ದರಾಮಯ್ಯ ಮತ್ತೊಂದು ಡಿ.ಕೆ.ಶಿವಕುಮಾರ್ ಅವರದು. ಶಿವಾನಂದ ಪಾಟೀಲರು ಡಿ.ಕೆ.ಶಿವಕುಮಾರ್ ಟೀಮ್ ಎಂದು ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದರು.












Click it and Unblock the Notifications