'ಗಣೇಶೋತ್ಸವಕ್ಕೆ ಈ ಆದೇಶ ಕೂಡಲೇ ವಾಪಸ್ ಪಡೀರಿʼ ಎಂದು ಯತ್ನಾಳ್ ಪಟ್ಟು; ಏನದು?
ನಾಳೆ ಎಲ್ಲೆಡೆ ಗಣೇಶೋತ್ಸವಕ್ಕೆ ಭರ್ಜರಿ ಸಿದ್ಧತೆಗಳು ನಡೆದಿವೆ. ಈ ಬಾರಿ ಗಣೇಶೋತ್ಸವಕ್ಕೆ ಕಟ್ಟುನಿಟ್ಟಿನ ರೂಲ್ಸ್ ಕೂಡ ಜಾರಿಯಾಗಿದ್ದು, ಪ್ರಸಾದದ ವಿತರಣೆಗೆ ಈ ಸಲ ಪ್ರತ್ಯೇಕ ನಿಯಮ ರೂಪಿಸಿರುವುದು ಗಣೇಶ ಕೂರಿಸುವವರ ಕೋಪಕ್ಕೂ ಕಾರಣವಾಗಿದೆ. ಈ ಬಗ್ಗೆ ಧ್ವನಿ ಎತ್ತಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ʼಗಣೇಶೋತ್ಸವ ಪ್ರಸಾದಕ್ಕೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದಿಂದ (FSSAI) ಪರವಾನಗಿ ಪಡೆದಿರುವ ವ್ಯಕ್ತಿ ಅಥವಾ ಸಂಸ್ಥೆಗಳಿಂದ ಮಾತ್ರ ಪ್ರಸಾದ ಪಡೆಯಬೇಕೆಂಬ ನಿಯಮಾವಳಿ ಅವೈಜ್ಞಾನಿಕವಾಗಿದೆ. ಇದು ಹಿಂದೂ ಹಬ್ಬಗಳನ್ನು, ಆಚರಣೆಗಳನ್ನು ಹತ್ತಿಕ್ಕುವ ಪ್ರಯತ್ನ. ಅಷ್ಟಕ್ಕೂ, ರಾಜ್ಯದ ಜನರ ಮೇಲೆ ಅಷ್ಟೊಂದು ಕಾಳಜಿ ಇದ್ದಲ್ಲಿ ಇದೆ ನಿಯಮವನ್ನು ಹೋಟೆಲ್, ಡಾಬಾ ಹಾಗೂ ಹಲಾಲ್ ಮಾಂಸವನ್ನು ಮಾರಾಟ ಮಾಡುವ ಅಂಗಡಿ ಮುಂಗಟ್ಟುಗಳಿಗೂ ಅನ್ವಯ ಆಗಬೇಕಾಗಿತ್ತುʼ ಎಂದು ದೂರಿದ್ದಾರೆ.

ʼಇನ್ನೇನು, ಹಬ್ಬಕ್ಕೆ ಎರಡು ದಿನಗಳು ಇರಬೇಕಾದರೆ ಪಾಲಿಸಲಾಗದ ನಿಯಮವನ್ನು ಹೇರುವುದು ಸರ್ಕಾರದ ಹಿಂದೂ ವಿರೋಧಿ ನೀತಿ ತೋರಿಸುತ್ತದೆ. ಅನ್ಯಕೋಮಿನ ಹಬ್ಬಗಳಲ್ಲಿ ಬೀದಿ ಬೀದಿಯಲ್ಲಿ ಪ್ರಾಣಿಬಲಿ ನೀಡಿ ಅದರಿಂದ ಮಾಂಸ ಮಾರಾಟ ಮಾಡುವವರಿಗೂ ಈ ನಿಯಮ ಅನ್ವಯ ಆಗುತ್ತಾ?' ಎಂದು ಪ್ರಶ್ನಿಸಿದ್ದಾರೆ.
ʼಅಂಗನವಾಡಿಗಳಲ್ಲಿ ಮಕ್ಕಳಿಗೆ ನೀಡುತ್ತಿರುವ ಆಹಾರ ತಯಾರು ಮಾಡಬೇಕಾದರೆ FSSAI ಪರವಾನಗಿ ಪಡೆದವರಿಂದ ಸರ್ಕಾರ ಮಾಡಿಸುತ್ತಿದೆಯಾ? ಬೀದಿ, ಬೀದಿಗಳಲ್ಲಿ ಕಳಪೆ ಗುಣಮಟ್ಟದ ಉತ್ಪನ್ನಗಳನ್ನು ಉಪಯೋಗಿಸಿ ತಿಂಡಿ, ಊಟ ಮಾಡುವವರಿಗೂ ಈ ನಿಯಮ ಅನ್ವಯವಾಗುತ್ತಾ?' ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಶುಚಿತ್ವದ ಪಾಲನೆ ಸರಿ, ಆದರೆ ಹಬ್ಬಕ್ಕೆ ಎರಡು ದಿನ ಇರಬೇಕಾದರೆ ಎಫ್ಎಸ್ಎಸ್ಎಐ ಅನುಮೋದಿತ ವ್ಯಕ್ತಿ ಅಥವಾ ಸಂಸ್ಥೆಗಳಿಂದ ಪ್ರಸಾದ ತಯಾರು ಮಾಡಬೇಕೆಂಬ ಫರ್ಮಾನು ಹೊರಡಿಸುವ ಆದೇಶವನ್ನು ಕೂಡಲೇ ಹಿಂಪಡೆಯಬೇಕು ಎಂದು ಯತ್ನಾಳ್ ಆಗ್ರಹಿಸಿದ್ದಾರೆ.

ರಾಜ್ಯ ಸರ್ಕಾರವೇ ನಡೆಸುವ ಅಂಗನವಾಡಿಯ ಆಹಾರ, ಇಫ್ತಾರ್ ಕೂಟದಲ್ಲಿ ನೀಡುವ ಆಹಾರ, ಚುನಾವಣೆ ಗೆದ್ದ ನಂತರ ಸಾವಿರಾರು ಜನಕ್ಕೆ ಕೊಡುವ ಬಾಡೂಟ, ಅನ್ಯಕೋಮಿನ ಹಬ್ಬಗಳಲ್ಲಿ ಯಾವುದೇ ಶುಚಿತ್ವವಿಲ್ಲದೆ ತಯಾರಾಗುವ ಮಾಂಸಾಹಾರ ಇವೆಲ್ಲ FSSAI ಪ್ರಮಾಣಿತವೇ? ಎಂದು ಸಿಡಿದಿದ್ದಾರೆ.
ʼಶಕ್ತಿ ಕೇಂದ್ರ ವಿಧಾನ ಸೌಧದ ಕ್ಯಾಂಟೀನ್ನಲ್ಲಿ ನಿತ್ಯ ನೂರಾರು ಜನ ಸಿಬ್ಬಂದಿ, ರಾಜಕಾರಣಿಗಳು ಇತ್ಯಾದಿ ಆಹಾರ ಸೇವನೆ ಮಾಡುತ್ತಾರೆ?
ಎಂದಾದರೂ ಕ್ಯಾಂಟೀನ್ ಶುಚಿತ್ವ ಅಥವಾ ಆಹಾರ ಕೊಡುವವರು FSSAI ಪ್ರಮಾಣಿತ ಮಾತ್ರ ನಡೆಸಬೇಕೆಂಬ ಫರ್ಮಾನು ಹೊರಡಿಸಿದ್ದೀರಾ? ಸರ್ಕಾರಕ್ಕೆ ಪ್ರಶ್ನೆ ಹಾಕಿದ್ದಾರೆ. ಜಾತ್ಯತೀತತೆ, ಸರ್ವ ಧರ್ಮ ಸಮನ್ವಯತೆ ಹಿಂದೂ ಹಬ್ಬಗಳಿಗೆ ಮಾತ್ರವಷ್ಟೇನಾ?ʼ ಎಂದು ಆಕ್ರೋಶ ಹೊರಹಾಕಿದ್ದಾರೆ.
ಏನಿದು ನಿಯಮ?: ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು ಗಣೇಶನ ಉತ್ಸವದ ವೇಳೆ ಆಹಾರ ಪದಾರ್ಥ ಹಾಗೂ ಪ್ರಸಾದ ಸೇವೆಯ ಮೇಲೆ ನಿಗಾ ಇಡಲಾಗಿದ್ದು, ಪ್ರಾಧಿಕಾರದಿಂದ ಅನುಮತಿ ಪಡೆಯದೆ ಆಹಾರ ವಿತರಿಸಿದರೆ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿದೆ.

ಈ ಬಗ್ಗೆ ಆದೇಶ ಕೂಡ ಮಾಡಲಾಗಿದ್ದು, ಗೌರಿಗಣೇಶ ಹಬ್ಬದ ಹಿನ್ನೆಲೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸುವ ಪೆಂಡಾಲ್ಗಳಲ್ಲಿ ಪ್ರಸಾದವಾಗಿ ವಿತರಿಸಲಾಗುವ ಆಹಾರ ಪದಾರ್ಥಗಳ ಶುಚಿತ್ವ, ಗುಣಮಟ್ಟ ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು FSSAI ಪರವಾನಗಿ ಪಡೆದಿರುವ ವ್ಯಕ್ತಿ ಅಥವಾ ಸಂಸ್ಥೆಗಳಿಂದ ಮಾತ್ರ ಪ್ರಸಾದ ಸಿದ್ಧಪಡಿಸುವಂತೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಆದೇಶಿಸಿದೆ.












Click it and Unblock the Notifications