ರಾಜ್ಯ ಪ್ರವಾಸ ಹೊರಟ ಬಿಜೆಪಿ ನಾಯಕರು, ಮುಂದೇನು?
ಬೆಂಗಳೂರು, ಅಕ್ಟೋಬರ್ 10; ಕರ್ನಾಟಕದ ಬಿಜೆಪಿ ನಾಯಕರ ಬಹುದಿನದ ಘೋಷಣೆಯಾದ ರಾಜ್ಯ ಪ್ರವಾಸಕ್ಕೆ ಮಂಗಳವಾರ ಚಾಲನೆ ದೊರೆಯಲಿದೆ. ಕಾಂಗ್ರೆಸ್ನ ಭಾರತ್ ಜೋಡೋ ಯಾತ್ರೆ, ಜೆಡಿಎಸ್ನ ಸಮಾವೇಶಗಳ ನಡುವೆ ರಾಜ್ಯದ ಆಡಳಿತ ಪಕ್ಷ ಬಿಜೆಪಿಯ ನಾಯಕರು ಪ್ರವಾಸ ಕೈಗೊಂಡಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಕಲ್ಯಾಣ ಕರ್ನಾಟಕ ಭಾಗದ ರಾಯಚೂರಿನಿಂದ ಅಕ್ಟೋಬರ್ 11ರಂದು ರಾಜ್ಯ ಪ್ರವಾಸ ಆರಂಭಿಸಲಿದ್ದಾರೆ. ಈ ಮೂಲಕ ಬಹಳ ದಿನಗಳಿಂದ ಬಾಕಿ ಉಳಿದಿದ್ದ ಯಡಿಯೂರಪ್ಪ ರಾಜ್ಯ ಪ್ರವಾಸಕ್ಕೂ ಚಾಲನೆ ದೊರೆಯಲಿದೆ.
ಬಿಜೆಪಿ ನಾಯಕರ ಮತ್ತೊಂದು ತಂಡದಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ಕರ್ನಾಟಕ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ರಾಜ್ಯ ಪ್ರವಾಸ ಮಾಡಲಿದ್ದಾರೆ. ಎರಡೂ ತಂಡಗಳು ಸೇರಿ ಡಿಸೆಂಬರ್ ಅಂತ್ಯಕ್ಕೆ 165 ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ನೀಡಲಿದ್ದಾರೆ.
ರಾಜ್ಯದ ಬಿಜೆಪಿ ನಾಯಕರು ಈ ಹಿಂದೆಯೇ ರಾಜ್ಯ ಪ್ರವಾಸದ ಘೋಷಣೆ ಮಾಡಿದ್ದರು. ಆದರೆ ಈಗ ಅದಕ್ಕೆ ಕಾಲ ಕೂಡಿ ಬಂದಿದೆ. ವಿವಿಧ ಕಾರಣಗಳಿಂದ ಮುಂದೂಡಲಾಗಿದ್ದ ಪ್ರವಾಸ ಈಗ ಆರಂಭವಾಗಿದೆ. ಕಾಂಗ್ರೆಸ್ನ ಭಾರತ್ ಜೋಡೋ ಯಾತ್ರೆಗೆ ಪ್ರತಿಕ್ರಿಯೆ ಎಂಬಂತೆ ಈಗ ಪ್ರವಾಸ ಹೊರಡುತ್ತಿಲ್ಲ ಎಂದು ಬಿಜೆಪಿ ನಾಯಕರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ.

ಸಭೆ, ಸಮಾವೇಶ, ಸಂವಾದ
ರಾಜ್ಯದ ವಿಧಾನಸಭಾ ಕ್ಷೇತ್ರಗಳ ಪ್ರವಾಸ ಮಾಡಲಿರುವ ಬಿಜೆಪಿ ನಾಯಕರು ಪಕ್ಷದ ಬೂತ್ ಮಟ್ಟದ ಕಾರ್ಯಕರ್ತರ ಜೊತೆ ಸಭೆ ನಡೆಸಲಿದ್ದಾರೆ, ಪಕ್ಷ ಸಂಘಟನೆ ಬಗ್ಗೆ ಮಾಹಿತಿ ಪಡೆಯಲಿದ್ದಾರೆ. ಕೆಲವು ವಿಧಾನಸಭಾ ಕ್ಷೇತ್ರಗಳಲ್ಲಿ ಸಮಾವೇಶಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳ ಜೊತೆ ಸಂವಾದ ನಡೆಸಲಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ಮಂಗಳವಾರ ರಾಯಚೂರು ಜಿಲ್ಲೆಯಲ್ಲಿ ಪ್ರವಾಸಕ್ಕೆ ಚಾಲನೆ ನೀಡಲಿದ್ದು, ಮೂರು ದಿನಗಳ ಕಾಲ ಜಿಲ್ಲೆಯಲ್ಲಿಯೇ ಪ್ರವಾಸ ಮಾಡಲಿದ್ದಾರೆ.

ಎ, ಬಿ, ಸಿ ಎಂದು ವಿಂಗಡನೆ
ರಾಜ್ಯದ ಬಿಜೆಪಿ ನಾಯಕರು ಸಾಕಷ್ಟು ಅಧ್ಯಯನ ಮಾಡಿ, ಯೋಜನೆ ತಯಾರು ಮಾಡಿಕೊಂಡು ರಾಜ್ಯ ಪ್ರವಾಸ ಕೈಗೊಂಡಿದ್ದಾರೆ. ಒಟ್ಟು 165 ವಿಧಾನಸಭಾ ಕ್ಷೇತ್ರಗಳನ್ನು ಎ, ಬಿ ಮತ್ತು ಸಿ ಎಂದು ವಿಭಾಗ ಮಾಡಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಯಡಿಯೂರಪ್ಪ 52 ಕ್ಷೇತ್ರಗಳಲ್ಲಿ ಪ್ರವಾಸ ಮಾಡಲಿದ್ದಾರೆ.
ಬಿಜೆಪಿಗೆ ನೆಲೆ ಇರುವ, ಕಳೆದ ಬಾರಿಗೆ ಗೆದ್ದಿರುವ ಕ್ಷೇತ್ರ 'ಎ' ಕೆಟಗರಿ. 2018ರಲ್ಲಿ ಸೋತಿರುವ ಮತ್ತು ಸ್ವಲ್ಪ ಶ್ರಮ ಹಾಕಿದರೆ ಗೆಲ್ಲುವ ಕ್ಷೇತ್ರ 'ಬಿ' ಕೆಟಗರಿ, ಪಕ್ಷಕ್ಕೆ ನೆಲೆಯೇ ಇಲ್ಲದ, ಗೆಲುವು ಕಷ್ಟ ಎನ್ನುವ ಕ್ಷೇತ್ರಗಳನ್ನು'ಸಿ' ಕೆಟಗರಿಗೆ ಹಾಕಲಾಗಿದೆ.

ಒಂದು ವಾರದಲ್ಲಿ ಮೂರು ದಿನ ಪ್ರವಾಸ
ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಸರ್ಕಾರದ ಯೋಜನೆಗಳ ಆಧಾರದ ಮೇಲೆ ಪ್ರವಾಸ ಮಾಡಲಿದ್ದಾರೆ. ಅರುಣ್ ಸಿಂಗ್ ಮತ್ತು ನಳಿನ್ ಕುಮಾರ್ ಕಟೀಲ್ ಸಂಘಟನಾತ್ಮಕ ವಿಚಾರಗಳ ಮೇಲೆ ಪ್ರವಾಸ ಮಾಡಲಿದ್ದಾರೆ.
ಯಡಿಯೂರಪ್ಪ, ಮುಖ್ಯಮಂತ್ರಿಗಳು ವಾರದಲ್ಲಿ ಮೂರು ದಿನಗಳ ಕಾಲ ರಾಜ್ಯ ಪ್ರವಾಸ ಮಾಡಲಿದ್ದಾರೆ. ಮೂರು ದಿನಗಳ ಬಳಿಕ ಬೆಂಗಳೂರಿಗೆ ವಾಪಸ್ ಆಗಿ ಮುಂದಿನ ವಾರ ಪ್ರವಾಸ ಮುಂದುವರೆಸಲಿದ್ದಾರೆ.

ಒಟ್ಟು 7 ಕಡೆ ಸಮಾವೇಶಗಳು
ರಾಜ್ಯ ಪ್ರವಾಸದ ಜೊತೆಗೆ ರಾಜ್ಯದ 7 ಜಿಲ್ಲೆಗಳಲ್ಲಿ ಸಮಾವೇಶಗಳು ನಡೆಯಲಿವೆ. ಇದರ ಜೊತೆಗೆ ಧಾರ್ಮಿಕ ಕೇಂದ್ರಗಳಿಗೆ ಭೇಟಿ, ಎಸ್ಸಿ/ ಎಸ್ಟಿ/ ಒಬಿಸಿ ಸಮುದಾಯದ ನಾಯಕರ ಸಭೆ, ಅವರ ಮನೆಯಲ್ಲಿ ಊಟ, ಉಪಹಾರಕ್ಕೂ ಸಹ ಯೋಜನೆ ರೂಪಿಸಲಾಗಿದೆ. ಮಂಡಲ, ಬೂತ್, ಶಕ್ತಿ ಕೇಂದ್ರದ ಪ್ರಮುಖರ ಸಭೆಗಳನ್ನು ಸಹ ನಡೆಸಲಿದ್ದಾರೆ.
2021ರ ಜುಲೈ 26ರಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಬಿ. ಎಸ್. ಯಡಿಯೂರಪ್ಪ ರಾಜ್ಯ ಪ್ರವಾಸ ಮಾಡುವುದಾಗಿ ಘೋಷಣೆ ಮಾಡಿದ್ದರು. ಆದರೆ ಹೈಕಮಾಂಡ್ ಆಗ ಪ್ರವಾಸಕ್ಕೆ ಬ್ರೇಕ್ ಹಾಕಿತ್ತು. ಈಗ ಮುಖ್ಯಮಂತ್ರಿಗಳ ಜೊತೆಗೆ ಅವರು ರಾಜ್ಯ ಪ್ರವಾಸ ಹೊರಟಿದ್ದಾರೆ.

ಫಲ ಕೊಡಲಿದೆಯೇ ರಾಜ್ಯ ಪ್ರವಾಸ
ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಕರ್ನಾಟಕದಲ್ಲಿದೆ. ಕಾಂಗ್ರೆಸ್ ನಾಯಕರು ಪಾದಯಾತ್ರೆಯನ್ನು ಯಶಸ್ವಿಗೊಳಿಸಲು ಶ್ರಮಿಸುತ್ತಿದ್ದಾರೆ. ಉತ್ತಮ ಜನ ಬೆಂಬಲವೂ ವ್ಯಕ್ತವಾಗುತ್ತಿದೆ.
ಜೆಡಿಎಸ್ ಪಕ್ಷದ ಜನತಾ ಪಂಚರತ್ನ ಯಾತ್ರೆ ನವೆಂಬರ್ 1ರಿಂದ ಆರಂಭವಾಗಲಿದೆ. ಈಗಾಗಲೇ ಹಲವು ಸಮಾವೇಶಗಳ ಮೂಲಕ ಪಕ್ಷ ಚುನಾವಣೆ ತಯಾರಿ ಆರಂಭಿಸಿದೆ.
ರಾಜ್ಯದ ಆಡಳಿತ ಪಕ್ಷ ಬಿಜೆಪಿ ಈಗ ರಾಜ್ಯ ಪ್ರವಾಸ ಆರಂಭಿಸಿದೆ. ಮುಂದಿನ ಚುನಾವಣೆ ಗೆಲ್ಲಲೇಬೇಕು ಎಂಬ ಗುರಿ ಹೊಂದಿರುವ ಪಕ್ಷಕ್ಕೆ ಪ್ರವಾಸ ಹೇಗೆ ಪುಷ್ಠಿ ನೀಡಲಿದೆ? ಎಂದು ಕಾದು ನೋಡಬೇಕಿದೆ.












Click it and Unblock the Notifications