ಪಾಕಿಸ್ತಾನ ಜಿಂದಾಬಾದ್ ಎಂದವರ ಮೇಲೆ ಎಫ್ಐಆರ್ ಯಾಕಿಲ್ಲ?
ಒಂದು ಜವಾಬ್ದಾರಿಯುತ ಸಚಿವ ಸ್ಥಾನದಲ್ಲಿದ್ದಿರುವ ತಾವು ಹಿಂದೂಗಳ ಬಗ್ಗೆ, ಹಿಂದೂ ಧಾರ್ಮಿಕ ಗುರುಗಳ ಬಗ್ಗೆ ಮಾತನಾಡುವಾಗ ಸ್ವಲ್ಪ ಎಚ್ಚರಿಕೆಯಿಂದ ಮಾತನಾಡಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ವಾರ್ನಿಂಗ್ ಕೊಟ್ಟಿದ್ದಾರೆ. ಕ್ರಿಮಿನಲ್ ಕೆಲ್ಸ ಮಾಡಿ ಜೈ ಶ್ರೀರಾಮ ಅಂದ್ರೆ ಎಲ್ಲವೂ ಮುಚ್ಚಿ ಹೋಗುತ್ತಾ? ಎಂದು ತಮ್ಮ ನಾಲಿಗೆ ಹರಿಬಿಟ್ಟಿದ್ದೀರಿ. ಕ್ರಿಮಿನಲ್ ಕೆಲಸ ಮಾಡಿರೋದು ಸ್ವಾಮೀಜಿ ಅಲ್ಲ. ಪ್ರಜಾಪ್ರಭುತ್ವದ ದೇಗುಲವಾದ ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ್ದು ಕ್ರಿಮಿನಲ್ ಕೆಲಸ ಎಂದು ಹೇಳಿದ್ದಾರೆ.
ಸಂವಿಧಾನ ರಕ್ಷಿಸಬೇಕಾದ ಜಾಗದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ ದೇಶದ್ರೋಹಿಗಳನ್ನ ಸಮರ್ಥನೆ ಮಾಡಿಕೊಂಡು ಆ ಸುದ್ದಿ ಬಿತ್ತರ ಮಾಡಿದ ಮಾಧ್ಯಮಗಳ ಮೇಲೆ ಗೂಬೆ ಕೂರಿಸಿದ್ದು ಕ್ರಿಮಿನಲ್ ಕೆಲಸ. ಸಂವಿಧಾನದ ಮೇಲೆ ಪ್ರಮಾಣವಚನ ಸ್ವೀಕರಿಸಿ ದೇಶದ್ರೋಹಿಗಳ ರಕ್ಷಣೆಗೆ ನಿಂತಿದ್ದು ಕ್ರಿಮಿನಲ್ ಕೆಲಸ ಎಂದು ಹಿಂದಿನ ಘಟನೆಗಳನ್ನು ಉಲ್ಲೇಖಿಸಿದ್ದಾರೆ.

ಇಷ್ಟಕ್ಕೂ ಎಫ್ಎಸ್ಎಲ್ ವರದಿಯಲ್ಲಿ ಪಾಕಿಸ್ತಾನ ಜಿಂದಾಬಾದ್ ಅಂತ ಕೂಗಿದ್ದು ನಿಜ ಅಂತ ಸಾಬೀತಾಯಿತಲ್ಲ? ಆಮೇಲೆ ಮಾಧ್ಯಮಗಳಿಗೆ ಕ್ಷಮೆ ಕೇಳುವ ಕನಿಷ್ಠ ಸೌಜನ್ಯ ಆದರೂ ತಾವು ತೋರಿದ್ರಾ? ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ, ಒಂದು ಸಮುದಾಯವನ್ನು ಓಲೈಸುವುದಕ್ಕಾಗಿ ದೇಶದ್ರೋಹಿಗಳನ್ನೇ ಸಮರ್ಥನೆ ಮಾಡಿಕೊಳ್ಳುತ್ತೀರಲ್ಲ, ನಿಮ್ಮ ಕಾಂಗ್ರೆಸ್ ಪಕ್ಷದವರಿಗೆ ನಾಚಿಕೆ ಆಗುವುದಿಲ್ಲವಾ? ಎಂದು ವಾಗ್ದಾಳಿ ನಡೆಸಿದ್ದಾರೆ.
ಚಂದೇಶೇಖರನಾಥ ಸ್ವಾಮೀಜಿಗಳು ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿ ಕ್ಷಮೆ ಕೇಳಿದ ಮೇಲೂ ಎಫ್ಐಆರ್ ಹಾಕಿದ್ದೀರಲ್ಲ, ಇದು ದ್ವೇಷ ರಾಜಕಾರಣ ಅಲ್ಲದೆ ಮತ್ತೇನು? ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಎಫ್ಐಆರ್ ಹಾಕಿದ್ದೀರಾ? ಅಂತಹ ಪುಡಾರಿಗಳನ್ನು ವಿಧಾನಸೌಧಕ್ಕೆ ಕರೆದುಕೊಂಡು ಬಂದ ತಮ್ಮ ತಂದೆಯವರ ಆಪ್ತ, ರಾಜ್ಯಸಭಾ ಸದಸ್ಯ ನಾಸಿರ್ ಹುಸೇನ್ ಅವರ ಮೇಲೆ FIR ಹಾಕಿದ್ದೀರಾ? ಎಂದು ಪ್ರಶ್ನಿಸಿದ್ದಾರೆ.
ಈ ಘಟನೆ ನಡೆದು 9 ತಿಂಗಳಾದರೂ ಇನ್ನೂ ತಪ್ಪಿತಸ್ಥರನ್ನ ಪತ್ತೆ ಮಾಡದ ನಿಮ್ಮಿಂದ ನಾವು ಸಂವಿಧಾನ ರಕ್ಷಣೆಯ ಪಾಠ ಕಲಿಯಬೇಕಾ? ಹಿಂದೂಗಳನ್ನು ಕಾಫಿರರು ಎಂದು ಹೇಳಿಕೊಡುವ ಧರ್ಮ ಯಾವುದು? ಜಿಹಾದ್ ಹೆಸರಿನಲ್ಲಿ ಇಡೀ ವಿಶ್ವದಲ್ಲಿ ಅಶಾಂತಿ ಉಂಟುಮಾಡುತ್ತಿರುವ ಧರ್ಮ ಯಾವುದು? ವೋಟ್ ಬ್ಯಾಂಕ್ಗಾಗಿ ಆ ಧರ್ಮದ ಓಲೈಕೆ ಮಾಡುತ್ತಿರುವುದು ಯಾವ ಪಕ್ಷ ಅಂತ ಇಡೀ ದೇಶಕ್ಕೆ ಗೊತ್ತಿದೆ ಎಂದು ತಿರುಗೇಟು ನೀಡಿದ್ದಾರೆ.

ಇತ್ತೀಚೆಗೆ ತಾವು ಎಲ್ಲದಕ್ಕೂ ಮೂಗು ತೂರಿಸಿಕೊಂಡು ಬರುವ ವಿಚಿತ್ರ ಧೋರಣೆ ನೋಡಿದರೆ ಬಹುಶಃ ತಾವೇ ಎಐಸಿಸಿ ಅಧ್ಯಕ್ಷರು ಎನ್ನುವ ಭ್ರಮೆಯಲ್ಲಿ ಇರುವಂತಿದೆ. ನಿಮ್ಮ ಸರ್ಕಾರದ ದುರಾಡಳಿತ, ನಿರ್ಲಕ್ಷ್ಯದಿಂದ ರಾಜ್ಯದಲ್ಲಿ 28 ಬಾಣಂತಿ ಮಹಿಳೆಯರು, 111 ನವಜಾತ ಶಿಶುಗಳ ದಾರುಣ ಸಾವಾಗಿದೆ. ಅದರ ಬಗ್ಗೆ ಮಾತಾಡಿ ಎಂದು ವಾಗ್ದಾಳಿ ನಡೆಸಿದ್ದಾರೆ. ಮುಸ್ಲಿಮರನ್ನು ಓಲೈಸುವ ಭರದಲ್ಲಿ ಹಿಂದೂ ಧರ್ಮದ ಬಗ್ಗೆ, ಹಿಂದೂ ಸಮಾಜದ ಧಾರ್ಮಿಕ ಮುಖಂಡರ ಬಗ್ಗೆ ಕೀಳಾಗಿ ಮಾತನಾಡಿದರೆ ನಿಮ್ಮ ವಿರುದ್ಧ ಜನ ದಂಗೆ ಏಳುತ್ತಾರೆ, ಎಚ್ಚರಿಕೆ ಎಂದು ಅಶೋಕ್ ಕಿಡಿಕಾರಿದ್ದಾರೆ.












Click it and Unblock the Notifications