ಮುಖ್ಯಮಂತ್ರಿ ಸಿದ್ದರಾಮಯ್ಯ ಒಬ್ಬ ನರಹಂತಕ: ನಳಿನ್ ಕುಮಾರ್ ಕಟೀಲ್
ಮಂಗಳೂರು, ಮಾರ್ಚ್ 6: ಸಿದ್ದರಾಮಯ್ಯ ನರಹಂತಕ ಮುಖ್ಯಮಂತ್ರಿ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದ್ದಾರೆ.
ಮಂಗಳೂರು ಹೊರವಲಯದ ಕುಳಾಯಿಯಲ್ಲಿ ನಡೆದ ಜನಸುರಕ್ಷಾ ಯಾತ್ರೆಯ ಬಹಿರಂಗ ಸಭೆಯನ್ನು ಉದ್ದೇಶಿಸಿ ಕಟೀಲ್ ಮಾತನಾಡಿದರು.
"ರಾಜ್ಯದಲ್ಲಿ ಹುಲಿ, ಚಿರತೆ, ಸಿಂಹವನ್ನು ನೋಡಿದ್ದೇವೆ. ನರಹಂತಕ ವೀರಪ್ಪನ್ ನ್ನೂ ನೋಡಿದ್ದೇವೆ. ಆದ್ರೆ ದೇಶದಲ್ಲಿ ಮುಖ್ಯಮಂತ್ರಿಗಳ ಪೈಕಿ ನರಹಂತಕ ಇದ್ರೆ ಸಿದ್ಧರಾಮಯ್ಯ ಮಾತ್ರ," ಎಂದು ಅವರು ಕಿಡಿಕಾರಿದರು.

ಪಾತಕ ಸರ್ಕಾರ
ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಕೌಶಾಲ್ಯಾಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗಡೆ, "ಕರ್ನಾಟಕವನ್ನು ಆಳುತ್ತಿರೋದು ಪಾತಕ ಸರ್ಕಾರ. ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಪಿ. ರಾಜ್ಯದಲ್ಲಿರುವುದು ಕೊಲೆಗಡುಕ ಸರ್ಕಾರ. ಈ ಕಟುಕ ಸಿಎಂ ಇರೋವರೆಗೂ ರಾಜ್ಯದ ಜನರಿಗೆ ನೆಮ್ಮದಿ ಇರಲ್ಲ," ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ಅಧಿಕಾರಕ್ಕೆ ಬರಲ್ಲ
ಮುಖ್ಯಮಂತ್ರಿ ಸಿದ್ಧರಾಮಯ್ಯ ಪಾಪಿಯಾಗಿದ್ದು ಮುಂದೆ ಅಧಿಕಾರಕ್ಕೆ ಬರಲ್ಲ. ಅಧಿಕಾರಕ್ಕೆ ಬರಲು ಕಾಂಗ್ರೆಸ್ ನವರೇ ಬಿಡಲ್ಲ ಅಂತ ಅನಂತ್ ಕುಮಾರ್ ಹೆಗಡೆ ಟೀಕಿಸಿದ್ದಾರೆ.
ಇದೇ ವೇಳೆ ಕಾಪುವಿನಲ್ಲಿ ಜನಸುರಕ್ಷಾ ಯಾತ್ರೆಯಲ್ಲಿ ಮಾತನಾಡಿದ ಕಾರ್ಕಳ ಶಾಸಕ ಸುನಿಲ್ ಕುಮಾರ್, "ಕರಾವಳಿಯಲ್ಲಿ ಯುವಕರು ಕೇಸರಿ ಶಾಲು ಧರಿಸಿ ಮುಂಜಾನೆ ಮನೆ ಬಿಟ್ಟರೆ ಸಂಜೆ ಮನೆಗೆ ಬರೋದು ಖಾತ್ರಿ ಇಲ್ಲ. ಹಿಂದೂ ಯುವಕರಿಗೆ ರಕ್ಷಣೆ ಇಲ್ಲ," ಎಂದು ಆತಂಕ ವ್ಯಕ್ತಪಡಿಸಿದರು. ಹಿಂದೂ ಯುವಕರಿಗೆ ರಕ್ಷಣೆ ನೀಡಬೇಕಾಗಿದ್ದ ಗೃಹ ಇಲಾಖೆ ಮೌನವಾಗಿದೆ ಎಂದು ಅವರು ದೂರಿದರು.

ಹಿಂದೂ ಕಾರ್ಯಕರ್ತರ ಹತ್ಯೆ ಸರಕಾರದ ಭಾಗ
ಕೆಎಫ್ ಡಿ, ಪಿಎಫ್ಐ ಕಾರ್ಯಕರ್ತರು ಪಾಕಿಸ್ಥಾನದ ಪರ ಘೋಷಣೆ ಕೂಗುತ್ತಾರೆ. ಕೆಲವರು ಬಂಧನವಾದರೂ ಆರೇ ತಿಂಗಳಲ್ಲಿ ಎಲ್ಲಾ ಕೇಸ್ ವಾಪಾಸಾಗುತ್ತದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ರಸ್ತೆ, ಕರೆಂಟು, ಸೇತುವೆ ಇಲ್ಲಾಂದ್ರೆ ಬದುಕುತ್ತೇವೆ. ಆದರೆ, ಬೆಳಿಗ್ಗೆ ಮನೆಯಿಂದ ಹೊರಟ ಯುವಕ ಮನೆಗೆ ಬಂದಿಲ್ಲ ಅಂದ್ರೆ ಆತಂಕ ಆಗುತ್ತದೆ. ರಾಜ್ಯದಲ್ಲಿ ನಡೆದ 20 ಕಾರ್ಯಕರ್ತರ ಹತ್ಯೆ ಸರ್ಕಾರದ ಒಂದು ಭಾಗ ಎಂದು ಅವರು ಕಿಡಿಕಾರಿದರು.

ರಾಜ್ಯ ಸರಕಾರದಿಂದ ಷಡ್ಯಂತ್ರ
ಈ ಸಂದರ್ಭದಲ್ಲಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಸಂಸದೆ ಶೋಭಾ ಕರಂದ್ಲಾಜೆ ರಾಜ್ಯ ಸರಕಾರದ ವಿರುದ್ದ ವಾಗ್ದಾಳಿ ನಡೆಸಿದರು. "ದಕ್ಷ ಐಎಎಸ್ ಅಧಿಕಾರಿ ರಶ್ಮಿ ಮಹೇಶ್ ಎಲ್ಲಿದ್ದಾರೆ? ಕಳೆದ ಹತ್ತು ತಿಂಗಳಿನಿಂದ ರಶ್ಮಿ ಮಹೇಶ್ ನಾಪತ್ತೆಯಾಗಿದ್ದಾರೆ. ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರನ್ನು ಹುಡುಕಿ ಹುಡುಕಿ ಕೊಲ್ಲಲಾಗುತ್ತಿದೆ . ಸರಕಾರ ಕೊಲೆಗಳ ತನಿಖೆಯನ್ನು ವ್ಯವಸ್ಥಿತವಾಗಿ ಮುಚ್ಚಿ ಹಾಕುವ ಷಡ್ಯಂತ್ರ ನಡೆಸುತ್ತಿದೆ," ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರಕಾರದ ಚೇಲಾಗಳಾಗಬೇಡಿ
ಪೊಲೀಸರನ್ನು ಸರಕಾರ ಕೈಗೊಂಬೆಯನ್ನಾಗಿಸಿದೆ ಎಂದು ದೂರಿದ ಅವರು ಪೊಲೀಸರೇ ನೀವು ಸರಕಾರದ ಚೇಲಾಗಳಾಗಿ ಕೆಲಸ ಮಾಡ್ಬೇಡಿ. ಸರಕಾರ ಬರುತ್ತೆ, ಹೋಗುತ್ತೆ ನೀವು ನಿಮ್ಮ ಕೆಲಸ ಮಾಡಿ. ಮೊಹಮ್ಮದ್ ನಲಪಾಡ್ ಬಳಿ 7 ರಿವಾಲ್ವರ್ ಗಳಿವೆ. ಹಾಗಿದ್ರೆ ನಲಪಾಡ್ ಗೂ, ಅಕ್ರಮ ಶಸ್ತ್ರಾಸ್ತ್ರ ಪೂರೈಕೆಗೂ ಏನು ಸಂಬಂಧ? ಎಂದು ಅವರು ಪ್ರಶ್ನಿಸಿದರು.

ನೈಸ್ ಡೀಲಿಂಗ್ ವಿತ್ ಕಾಂಗ್ರೆಸ್
ಸಭೆಯನ್ನು ಉದ್ದೇಶಿಸಿ ಮಾತನಾಡಿದ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್, "ಈ ಹಿಂದೆ ಅಶೋಕ್ ಖೇಣಿ ಬಗ್ಗೆ ಟೀಕೆ, ಆರೋಪ ಮಾಡಿದವರು ಸಿದ್ದರಾಮಯ್ಯ. ಈಗ ಅದೇ ಖೇಣಿಯವರನ್ನು ಪಾರ್ಟಿಗೆ ತೆಗೆದುಕೊಂಡಿದ್ದಾರೆ," ಎಂದು ವ್ಯಂಗ್ಯವಾಡಿದರು. "ನಿನ್ನೆ ಖೇಣಿ ಸಿದ್ದರಾಮಯ್ಯರನ್ನು ಭೇಟಿಯಾಗಿ ನೈಸ್ ಡೀಲಿಂಗ್ ಮಾಡಿದ್ದಾರೆ. ಅಂದ್ರೆ ನೈಸ್ ಡೀಲಿಂಗ್ ವಿತ್ ಕಾಂಗ್ರೆಸ್. ಕಾಂಗ್ರೆಸ್ ನ ದ್ವಂದ್ವ ನೀತಿ ನಗೆಪಾಟಲಿಗೆ ಈಡಾಗಿದೆ," ಎಂದು ಅವರು ಹೇಳಿದರು.

ಮೋದಿ ಟೀಕಿಸದಿದ್ದರೆ ಸಿಎಂಗೆ ನಿದ್ದೆ ಬರಲ್ಲ
ಸಿದ್ದರಾಮಯ್ಯ ಸರಕಾರ ಬಂದ ಮೇಲೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ. ಕೆಟ್ಟ ನಡವಳಿಕೆಯ, ಅಹಂಕಾರಿ ಮುಖ್ಯಮಂತ್ರಿ ಅಂತ ಇದ್ದರೆ ಅದು ಸಿದ್ದರಾಮಯ್ಯ ಎಂದು ಅವರು ಕಿಡಿಕಾರಿದರು.
ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕೆ ಮಾಡದಿದ್ದರೆ ಸಿದ್ದರಾಮಯ್ಯನವರಿಗೆ ನಿದ್ದೆ ಬರಲ್ಲ. ಇದರಿಂದ ಹಾನಿ ಆಗೋದು ಕಾಂಗ್ರೆಸ್ ಗೆ. ರಾಹುಲ್ ಎಷ್ಟು ಸಲ ಬಂದರೂ ನಮ್ಮ ಸ್ವಾಗತ ಇದೆ. ಅವರು ಹೋದಲ್ಲೆಲ್ಲಾ ಕಾಂಗ್ರೆಸ್ ಸೋಲುತ್ತದೆ ಎಂದು ಶೆಟ್ಟರ್ ಅಭಿಪ್ರಾಯಪಟ್ಟಿದ್ದಾರೆ.

ಈಗ ಗುಡಿ ಗುಂಡಾರ ನೆನಪಾಗಿದೆ
ಕಾಂಗ್ರೆಸ್ ಗೆ ಈಗ ಗುಡಿ ಗುಂಡಾರ ನೆನಪಾಗಿದೆ. ಹಿಂದುಗಳಿಗೆ ರಕ್ಷಣೆ ನೀಡೋದು ಸಿದ್ದರಾಮಯ್ಯರಿಗೆ ಸಾಧ್ಯ ಆಗಿಲ್ಲ. ಇಡೀ ರಾಜ್ಯದಲ್ಲಿ ಅರಾಜಕತೆ ಸೃಷ್ಟಿ ಆಗಿದೆ ಎಂದು ಅವರು ಹರಿಹಾಯ್ದರು.
ಇದೇ ಸಂದರ್ಭದಲ್ಲಿ, "ಉಡುಪಿಗೆ ಐದಾರು ಬಾರಿ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೃಷ್ಣಮಠಕ್ಕೆ ಬಂದಿಲ್ಲ. ಆದರೆ ರಾಹುಲ್ ಗಾಂಧಿ ಬಂದರೆ ಬರ್ತಾರಾ?" ಎಂದು ಶೆಟ್ಟರ್ ಪ್ರಶ್ನಿಸಿದರು.












Click it and Unblock the Notifications