ಸಿಎಂ ಆಯ್ತು, ಈಗ ಕಾಂಗ್ರೆಸ್ ಸಚಿವನ ಬೆನ್ನತ್ತಿದ 'ರಾಜೀನಾಮೆ' ಬೇತಾಳ
ಮುಡಾ ಕೇಸ್ನಿಂದಾಗಿ ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆ ವಿಚಾರ ಬೂದಿಮುಚ್ಚಿದ ಕೆಂಡದಂತಿದೆ. ಹೀಗಿರುವಾಗಲೇ ಕಾಂಗ್ರೆಸ್ ಸಚಿವರೊಬ್ಬರ ರಾಜೀನಾಮೆಯ ಕೂಗು ಶುರುವಾಗಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ರಾಜೀನಾಮೆ ನೀಡುವಂತೆ ಬಿಜೆಪಿ ನಾಯಕರು ಪಟ್ಟು ಹಿಡಿದಿದ್ದಾರೆ.
ವಿಧಾನಪರಿಷತ್ ವಿಪಕ್ಷ ನಾಯಕ ಹಾಗೂ ಬಿಜೆಪಿಯ ಛಲವಾದಿ ನಾರಾಯಣಸ್ವಾಮಿ ಅವರು ಪ್ರಿಯಾಂಕ್ ಖರ್ಗೆ ಅವರ ರಾಜೀನಾಮೆಗೆ ಆಗ್ರಹಿಸಿದ್ದಾರೆ. ಪ್ರಿಯಾಂಕ್ ಖರ್ಗೆ ಅವರು ಕೆಐಎಡಿಬಿ ಭೂಹಗರಣದ ಸೈಟ್ಗಳನ್ನು ಸರ್ಕಾರಕ್ಕೆ ವಾಪಸ್ ನೀಡಿರುವುದು ಸಿದ್ದರಾಮಯ್ಯ ಅವರ ಮುಡಾ ಹಗರಣದ ನಂತರದ ಮತ್ತೊಂದು ಭ್ರಷ್ಟಾಚಾರದ ಘಟನೆಯಾಗಿದೆ ಎಂದು ದೂರಿದ್ದಾರೆ.

ಇದು ನ್ಯಾಯಕ್ಕೆ ಸಿಕ್ಕ ಮತ್ತೊಂದು ಗೆಲುವು ಎಂದು ಪರಿಗಣಿಸಲಾಗಿದ್ದು, ಕಾಂಗ್ರೆಸ್ ಸರ್ಕಾರದ ಹಗರಣಗಳ ವಿರುದ್ಧದ ನಮ್ಮ ಹೋರಾಟ ಸಫಲವಾಗಿದೆ. ಒಂದು ಕಡೆಯಲ್ಲಿ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಡಾ ಹಗರಣ, ಮತ್ತೊಂದೆಡೆಯಲ್ಲಿ ಪ್ರಿಯಾಂಕ್ ಖರ್ಗೆ ಅವರ ಕೆಐಎಡಿಬಿ ಹಗರಣಗಳೆರಡೂ ಕಾನೂನಿನ ಮುಂದೆ ತಲೆಬಾಗಿವೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಮಾನ್ಯ ಪ್ರಿಯಾಂಕ್ ಖರ್ಗೆ ಅವರೇ, ರಾಜೀನಾಮೆ ಯಾವಾಗ? ಮಾನ್ಯ ಎಂ.ಬಿ.ಪಾಟೀಲ್ ಅವರೇ ಇದನ್ನು ಬೆಳಕಿಗೆ ತಂದ ನನ್ನನ್ನು ಅಪಮಾನ ಮಾಡಿದ ತಾವು ಆಗಿರುವ ಅಪರಾಧಕ್ಕೆ ತನಿಖೆ ಮಾಡಿಸಿ. ನೋಟಿಫಿಕೇಶನ್ ರದ್ದುಗೊಳಿಸಿ, ಇಲ್ಲವೇ ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಿ ಎಂದು ಒತ್ತಾಯಿಸಿದ್ದಾರೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಬದಲಿ ನಿವೇಶನ ಹಂಚಿಕೆ ಪ್ರಕರಣ ಕೋರ್ಟ್ ಮೆಟ್ಟಿಲೇರಿದ ಬಳಿಕ ಸಿಎಂ ಸಿದ್ದರಾಮಯ್ಯ ಪತ್ನಿ ಅವರು ನಿವೇಶನಗಳನ್ನು ವಾಪಸ್ ನೀಡುವುದಾಗಿ ಘೋಷಿಸಿದ್ದರು. ಇದರ ಬೆನ್ನಲ್ಲೇ ಖರ್ಗೆ ಕುಟುಂಬ ಕೂಡ ವಿವಾದದ ಸೈಟ್ ಹಿಂತಿರುಗಿಸಲು ಮುಂದಾಗಿದೆ.

ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ಕುಟುಂಬಸ್ಥರೇ ಟ್ರಸ್ಟಿಗಳಾಗಿರುವ ಸಿದ್ದಾರ್ಥ್ ವಿಹಾರ ಟ್ರಸ್ಟ್ ಕೂಡ ಐದು ಎಕರೆಯ ಸಿಎ ನಿವೇಶವನ್ನು ಹಿಂತಿರುಗಿಸಲು ತೀರ್ಮಾನಿಸಿದೆ. ಈ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಅವರೇ ಇಂದು ಮಾಹಿತಿ ನೀಡಿದ್ದರು.
ಕೆಐಎಡಿಬಿ ಹಂಚಿಕೆ ಮಾಡಿದ್ದ ಭೂಮಿಯನ್ನು ವಾಪಸ್ ನೀಡಲು ಟ್ರಸ್ಟ್ ನಿರ್ಧರಿಸಿದೆ. ನಮ್ಮ ಟ್ರಸ್ಟ್ಗೆ ಕಾನೂನು ಬಾಹಿರವಾಗಿ ಸೈಟ್ ಹಂಚಿಕೆಯಾಗಿದೆ ಎನ್ನುವ ಆರೋಪ ಇತ್ತು. ಈ ಬಗ್ಗೆ ಟ್ರಸ್ಟ್ ಅಧ್ಯಕ್ಷರಿಗೆ ಸರಿಯಾದ ಮಾಹಿತಿ ಇರಲಿಲ್ಲ ಎಂದರು.
ನಮ್ಮ ಕುಟುಂಬದಲ್ಲಿ ಮೂರು ಮಂದಿಯಷ್ಟೇ ರಾಜಕಾರಣದಲ್ಲಿದ್ದೇವೆ. ಟ್ರಸ್ಟ್ ಅಧ್ಯಕ್ಷರಾಗಿರುವ ನನ್ನ ಸಹೋದರ ರಾಹುಲ್ ಖರ್ಗೆ ತುಂಬಾ ಮೃದು ಸ್ವಭಾವದವರು. ಈ ವಿವಾದದಿಂದಾಗಿ ಕುಟುಂಬಸ್ಥರಿಗೆ ಬೇಸರ ಆಗಿದೆ ಎಂದು ಅವರು ನೊಂದಿದ್ದಾರೆ. ಹೀಗಾಗಿ ಸೈಟ್ಗಳನ್ನು ವಾಪಸ್ ನೀಡುವುದಾಗಿ ಕೆಐಎಡಿಬಿಗೆ ಪತ್ರ ಕೂಡ ಬರೆದಿದ್ದಾರೆ. ಸೈಟ್ಗಳನ್ನು ನಾವು ಕಾನೂನಾತ್ಮಕವಾಗಿಯೇ ವಾಪಸ್ ನೀಡುತ್ತಿದ್ದೇವೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
ಇದರ ಬೆನ್ನಲ್ಲೇ ಈ ವಿಚಾರವನ್ನು ಸಿಎಂ ಸಿದ್ದರಾಮಯ್ಯ ಅವರ ಪ್ರಕರಣಕ್ಕೆ ಹೋಲಿಕೆ ಮಾಡಿ, ಪ್ರಿಯಾಂಕ್ ಖರ್ಗೆ ಅವರ ರಾಜೀನಾಮೆಗೂ ಬಿಜೆಪಿ ನಾಯಕರು ಪಟ್ಟು ಹಿಡಿದಿದ್ದಾರೆ.












Click it and Unblock the Notifications