ಸಿಎಂ ಅಂದ್ರೆ ಸೈಟ್ ಕಳ್ಳ, ಮೋದಿ ಅಂದ್ರೆ ಮರ್ಯಾದೆ!
ಪ್ರಧಾನಿ ಮೋದಿ ಅವರನ್ನು ಸಿಎಂ ಸಿದ್ದರಾಮಯ್ಯ ಅವರು ನಿಂದನೆ ಮಾಡಿರುವ ವಿಚಾರಕ್ಕೆ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಕಿಡಿಕಾರಿದ್ದಾರೆ. ಪ್ರಧಾನಿ ಮೋದಿ ಅವರು ಎಲ್ಲಿಗೆ ಹೋದರೂ ಜನ ಗೌರವ ಮರ್ಯಾದೆ ಕೊಡ್ತಾರೆ. ಆದ್ರೆ ಸಿಎಂ ಸಿದ್ದರಾಮಯ್ಯ ಬಂದ್ರೆ ಸೈಟ್ ಕಳ್ಳ ಬಂದ ಅಂತಾರೆ. ಜನರಿಗೆ ಅಂತಹ ಕೆಟ್ಟ ಭಾವನೆ ಇದೆ ಎಂದು ದೂರಿದ್ದಾರೆ.
ತಾವು ರೈತರ ಪರ ಎಂದು ಬಿಂಬಿಸಲು ತಾತ್ಕಾಲಿಕವಾಗಿ ಪಹಣಿಯಲ್ಲಿರುವ "ವಕ್ಫ್" ಹೆಸರನ್ನು ತೆಗೆದು ರೈತರ ಹಿತಚಿಂತಕನಾಗಿ ಕಾಣಿಸಿಕೊಳ್ಳಲು ಯತ್ನಿಸುತ್ತಿದ್ದೀರಿ. ಆದರೆ, ಇದನ್ನು ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡು ತಾತ್ಕಾಲಿಕ ಶಮನ ಗಿಟ್ಟಿಸಿಕೊಳ್ಳುವ ತಂತ್ರವೇನೂ ಅಲ್ಲದೆ, ರೈತರ ಮೇಲಿನ ನಿಮ್ಮ ನಿಜವಾದ ಕಾಳಜಿಯ ಪರಿಪೂರ್ಣತೆಯ ಆಧಾರವು ಇಲ್ಲ ಎಂದು ಸ್ಪಷ್ಟವಾಗಿದೆ ಎಂದು ಛಲವಾದಿ ವಾಗ್ದಾಳಿ ನಡೆಸಿದ್ದಾರೆ.

ನೀವು ಪ್ರಾಮಾಣಿಕವಾಗಿ ರೈತರ ಪರ ಇದ್ದರೆ, 1974ರಲ್ಲಿ ನಿಮ್ಮ ಕಾಂಗ್ರೆಸ್ ಸರ್ಕಾರವೇ ಪ್ರಕಟಿಸಿದ ರಾಜ್ಯ ಪತ್ರವನ್ನು (ಗೆಜೆಟ್) ಹಿಂಪಡೆಯಿರಿ. ತಾವು ನಿಜವಾಗಿಯೂ ರೈತರನ್ನು ಬೆಂಬಲಿಸುತ್ತಿದ್ದರೆ, ವಕ್ಫ್ ಕಾಯ್ದೆಯನ್ನು ತಿದ್ದುಪಡಿ ಮಾಡುವ ಅಥವಾ ರದ್ದುಗೊಳಿಸುವ ಶಿಫಾರಸ್ಸು ರಾಜ್ಯ ಸರ್ಕಾರದಿಂದಲೇ ಕೇಂದ್ರಕ್ಕೆ ಮಾಡಿ ಎಂದು ಆಗ್ರಹಿಸಿದ್ದಾರೆ.
ನೋಟೀಸ್ ಅನ್ನು ಹಿಂತೆಗೆದು ಕೇವಲ ಕಣ್ಣೊರೆಸುವ ತಂತ್ರವನ್ನು ತೋರಿಸುತ್ತಿರುವ ನಿಮ್ಮ ಸರ್ಕಾರ, ಹೆಜ್ಜೆ ಹೆಜ್ಜೆಗೂ ತಮ್ಮ ನಿಜವಾದ ಮುಖವಾಡವನ್ನು ಕಳಚುತ್ತಿದೆ ಎಂದು ಕುಟುಕಿದ್ದಾರೆ. ರಾಜ್ಯದ ಜನತೆಗೆ ನೀಡಿರುವ ಅವಾಸ್ತವಿಕ ಭರವಸೆಗಳನ್ನು ಈಡೇರಿಸಲಾಗದೆ ಮಾನ್ಯ ಸಿಎಂ ಸಿದ್ದರಾಮಯ್ಯನವರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ರೈತರಿಗೆ ನೀಡಿರುವ ನೋಟಿಸ್ ವಾಪಸ್ ಪಡೆದರೆ ಸಾಲದು. ಬದಲಿಗೆ ಕಾಂಗ್ರೆಸ್ ಸರ್ಕಾರವೇ ಹೊರಡಿಸಿರುವ ಗೆಜೆಟ್ ವಾಪಸ್ ಪಡೆಯಬೇಕು ಎಂದು ಪಟ್ಟು ಹಿಡಿದಿದ್ದಾರೆ.
ಕೇಂದ್ರ ಸರ್ಕಾರವು ಎಂದಿಗೂ ದೇಶದ ಎಲ್ಲ ರಾಜ್ಯಗಳ ಸಮಗ್ರ ಅಭಿವೃದ್ಧಿಗೆ ಬದ್ಧವಾಗಿದೆ. ತಿಳುವಳಿಕೆ ಇಲ್ಲದೇ ಉಡಾಫೆ ಮಾತಾಡುವ ಮೊದಲು ಯುಪಿಎ ಸರ್ಕಾರದ ಅವಧಿಯಲ್ಲಿ ಕರ್ನಾಟಕಕ್ಕೆ ನೀಡಿದ ಕೊಡುಗೆಗಳೇನು ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರವು ಕರ್ನಾಟಕಕ್ಕೆ ಎಷ್ಟೆಲ್ಲ ಅನುದಾನ ನೀಡಿವೆ ಎಂದು ಪರಾಮರ್ಶೆ ಮಾಡೋಣ ಎಂದು ಸವಾಲು ಹಾಕಿದ್ದಾರೆ.

2004-2014ರ ಯುಪಿಎ ಸರ್ಕಾರದ ವೇಳೆ 10 ವರ್ಷಗಳಲ್ಲಿ ಕರ್ನಾಟಕದ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ ನೀಡಿದ್ದು ಕೇವಲ 3,560 ಕೋಟಿ ರೂ. ಮಾತ್ರ. ಅನೇಕ ಯೋಜನೆಗಳು ಬ್ರಹ್ಮಾಂಡ ಭ್ರಷ್ಟಾಚಾರದಿಂದಾಗಿ ಹಳ್ಳ ಹಿಡಿದು ವಿಫಲವಾಯಿತು. 2014-2023ರ ಎನ್ಡಿಎ ಸರ್ಕಾರದ ಅವಧಿಯಲ್ಲಿ ಕರ್ನಾಟಕದ ಹೆದ್ದಾರಿ ಅಭಿವೃದ್ಧಿಗೆ 40,000 ಕೋಟಿಗಿಂತಲೂ ಹೆಚ್ಚು ಮೀಸಲಾಗಿದ್ದು, ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇ ಬೆಂಗಳೂರಿನ ಸುತ್ತಮುತ್ತ ಬೃಹತ್ ರೈಲ್ವೆ ಸಂಪರ್ಕ ಸೌಲಭ್ಯಗಳು, ಹಾಗೂ ಇತರೆ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲಾಗುತ್ತಿದೆ ಎಂದು ಲೆಕ್ಕ ಬಿಚ್ಚಿಟ್ಟಿದ್ದಾರೆ.
ಕೇಂದ್ರ ಸರ್ಕಾರವು 2022-23 ಬಜೆಟ್ನಲ್ಲಿ ಕರ್ನಾಟಕಕ್ಕೆ ಹಂಚಿದ ಮೊತ್ತ ಸುಮಾರು 7,800 ಕೋಟಿ ರೂ. ಇದು ಯುಪಿಎ ಸರ್ಕಾರದ ನೀಡಿದ್ದಕ್ಕಿಂತ ದುಪ್ಪಟ್ಟಾಗಿದೆ. ಕೇಂದ್ರ ಸರ್ಕಾರವು ಕರ್ನಾಟಕದ ಕೃಷಿ ಬೆಳೆಗಾರರಿಗಾಗಿ ಪ್ರತಿ ವರ್ಷ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ 2 ಸಾವಿರ ರೂ.ಗಳು ನೇರವಾಗಿ ಡಿಬಿಟ್ ಮೂಲಕ ರೈತರ ಖಾತೆಗೆ ಜಮಾ ಮಾಡುತ್ತಿದೆ. ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಸುಮಾರು 7 ಲಕ್ಷ ಮನೆಗಳನ್ನು ನಿರ್ಮಿಸಲಾಗಿದೆ, ಇವು ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದಿದ್ದಾರೆ.
ಪ್ರಧಾನಿ ಮೋದಿ ನೇತೃತ್ವದ ಎನ್ಡಿಎ ಸರ್ಕಾರವು ಕರ್ನಾಟಕದ ಪ್ರಗತಿಗೆ, ಮೂಲಭೂತ ಸೌಲಭ್ಯಗಳು ಮತ್ತು ಜನಜೀವನದ ಸುಧಾರಣೆಗಾಗಿ ತಂತ್ರಜ್ಞಾನದ ಪ್ರಾಮುಖ್ಯತೆಯನ್ನು ಪರಿಣಾಮಕಾರಿ ರೀತಿಯಲ್ಲಿ ಕಾರ್ಯರೂಪಕ್ಕೆ ತರುತ್ತಿದೆ. ಇಂತಹ ಪ್ರಮುಖ ಯೋಜನೆಗಳು ಆರ್ಥಿಕ ಪ್ರಗತಿಯೊಂದಿಗೆ ಸಾಮಾಜಿಕ ಸುಧಾರಣೆಯನ್ನು ತರಲು ಸಹಕಾರಿಯಾಗಿವೆ. ಕರ್ನಾಟಕದ ಜನತೆ ಇಂತಹ ಸಹಕಾರಕ್ಕೆ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರವನ್ನು, ಮೆಚ್ಚಿಕೊಂಡಿದ್ದಾರೆ ಎಂದು ಛಲವಾದಿ ಹೇಳಿದ್ದಾರೆ.
ಹೀಗಿರುವಾಗ, ನಿಮ್ಮ ಅಸೂಯೆ ಮತ್ತು ಅಸಂಬದ್ಧ ಆರೋಪಗಳು ನಮ್ಮ ರಾಜ್ಯಕ್ಕೆ ಕೇಂದ್ರ ಸರ್ಕಾರ ನೀಡುತ್ತಿರುವ ಮಹತ್ವದ ಯೋಜನೆಗಳನ್ನು ಹಾಸ್ಯಾಸ್ಪದ ಮಾಡುವಂತಿದೆ. ಇನ್ನಾದರೂ ನಿಮ್ಮ ಭಂಡತನ ನಿಲ್ಲಿಸಿ, ಇಲ್ಲವಾದಲ್ಲಿ ನಿಮ್ಮನ್ನು ಬದಲಾಯಿಸಲು ಕನ್ನಡಿಗರು ಸಶಕ್ತರಿದ್ದಾರೆ..! ಎಂದು ಸಿದ್ದರಾಮಯ್ಯಗೆ ತಿರುಗೇಟು ನೀಡಿದ್ದಾರೆ.












Click it and Unblock the Notifications