R.Ashok: ಡಿಕೆಶಿ ಹುಟ್ಟುಹಬ್ಬಕ್ಕೆ ಸಿದ್ದರಾಮಯ್ಯ ಶುಭಕೋರದಷ್ಟು ಸಂಬಂಧ ಹಾಳಾಗಿದೆಯೇ?
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಈ ಬಾರಿಯ ಹುಟ್ಟುಹಬ್ಬಕ್ಕೆ ಬ್ರೇಕ್ ಹಾಕಿದ್ದರು. ಈ ಸಲ ಹುಟ್ಟುಹಬ್ಬ ಆಚರಿಸಿಕೊಳ್ಳಲ್ಲ, ಮನೆ, ಕಚೇರಿ ಬಳಿ ಯಾರೂ ಬರಬೇಡಿ ಎಂದು ಹೇಳಿದ್ದರು. ಆದರೆ ಸೋಶಿಯಲ್ ಮೀಡಿಯಾಗಳಲ್ಲಿ ಡಿಕೆ ಶಿವಕುಮಾರ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳ ಸುರಿಮಳೆ ಹರಿದಿದೆ. ಇನ್ನು ಸಿಎಂ ಸಿದ್ದರಾಮಯ್ಯ ಅವರು ತಮ್ಮದೇ ಪಕ್ಷದ ನಾಯಕನ ಹುಟ್ಟುಹಬ್ಬಕ್ಕೆ ಸೌಜನ್ಯಕ್ಕೂ ಶುಭಾಶಯ ಕೋರಿಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ವ್ಯಂಗ್ಯ ಮಾಡಿದ್ದಾರೆ.
ಸಿಎಂ ಸಿದ್ದರಾಮಯ್ಯ ಹಾಗು ಡಿಸಿಎಂ ಡಿಕೆ ಶಿವಕುಮಾರ್ ಅವರ ನಡುವಿನ ಸಂಬಂಧ ಚೆನ್ನಾಗಿಲ್ಲ ಎನ್ನುವುದು ಇಡೀ ರಾಜ್ಯಕ್ಕೆ ಗೊತ್ತಿರುವ ವಿಷಯ. ಆದರೆ ಡಿ.ಕೆ.ಶಿವಕುಮಾರ್ ಅವರ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಲು ಸಿದ್ದರಾಮಯ್ಯನವರು ಕನಿಷ್ಠ ಪಕ್ಷ ಒಂದು ಟ್ವೀಟ್ ಕೂಡ ಮಾಡದಷ್ಟು ಹದಗೆಟ್ಟಿದೆ ಎಂದು ಗೊತ್ತಿರಲಿಲ್ಲ. ಒಬ್ಬರ ಮುಖ ಒಬ್ಬರು ನೋಡಲಾಗದ ಈ ನಾಯಕರು ರಾಜ್ಯವನ್ನು ಹೇಗೆ ಮುನ್ನಡೆಸುತ್ತಾರೆ? ಕನ್ನಡಿಗರು ಕಾಂಗ್ರೆಸ್ ಸರ್ಕಾರದಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ? ಎಂದು ಟೀಕಿಸಿದ್ದಾರೆ.

ಭಯೋತ್ಪಾದನೆ ವಿರುದ್ಧ ನಮ್ಮ ಯೋಧರು ಪ್ರಾಣ ಪಣಕ್ಕಿಟ್ಟು ಹೋರಾಡುತ್ತಿರುವ ಸಂದರ್ಭವಿದು. ಹೀಗಾಗಿ ಮೇ 15ರಂದು ಯಾರೂ ನನ್ನ ಜನ್ಮದಿನವನ್ನು ಆಚರಣೆ ಮಾಡುವುದು ಬೇಡ ಎಂದು ಡಿಕೆಶಿ ವಿನಂತಿ ಮಾಡಿದ್ದರು. ನಿಮ್ಮ ಆಶೀರ್ವಾದ ಸದಾ ಹೀಗೆ ಇರಲಿ, ಅದುವೇ ನನಗೆ ಶ್ರೀರಕ್ಷೆ ಎಂದು ಮನವಿ ಮಾಡಿದ್ದರು.
ಯಾರಾದರೂ ನನ್ನ ಜನ್ಮದಿನಕ್ಕೆ ಹಾರೈಸಿ ಸಾರ್ವಜನಿಕ ಸ್ಥಳಗಳಲ್ಲಿ ಫ್ಲೆಕ್ಸ್, ಬ್ಯಾನರ್ಗಳನ್ನು ಹಾಕಿದ್ದರೆ ಅವುಗಳ ತೆರವಿಗೆ ಬಿಬಿಎಂಪಿ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಮೇ 15ರಂದು ವೈಯಕ್ತಿಕ ಕಾರಣಗಳಿಂದ ನಾನು ಬೆಂಗಳೂರಿನಲ್ಲಿ ಇರುವುದಿಲ್ಲ. ಕಾಂಗ್ರೆಸ್ ಸರ್ಕಾರದ ಎರಡನೇ ವರ್ಷದ ಸಾಧನಾ ಸಮಾವೇಶದ ಸ್ಥಳ ಪರಿಶೀಲನೆಗೆ ವಿಜಯನಗರಕ್ಕೆ ತೆರಳುತ್ತಿರುವುದರಿಂದ ಮೇ 16ರ ಸಂಜೆಯವರೆಗೂ ಸಾರ್ವಜನಿಕರ ಭೇಟಿಗೆ ನಾನು ಲಭ್ಯವಿರುವುದಿಲ್ಲ. ದಯವಿಟ್ಟು ಇದನ್ನು ಅನ್ಯಥಾ ಭಾವಿಸದೆ, ಸಹಕರಿಸಬೇಕಾಗಿ ಅಭಿಮಾನಿಗಳು ಹಾಗೂ ಹಿತೈಷಿಗಳಲ್ಲಿ ವಿನಂತಿಸಿಕೊಳ್ಳುತ್ತೇನೆ ಎಂದಿದ್ದರು.

ನಾನು ಈ ಬಾರಿ ಹುಟ್ಟುಹಬ್ಬವನ್ನು ಆಚರಿಸದೇ ಇರಲು ನಿರ್ಧರಿಸಿದರೂ, ನನ್ನ ಮೇಲೆ ಪ್ರೀತಿ, ಅಭಿಮಾನವಿಟ್ಟು ರಾಜ್ಯದಾದ್ಯಂತ ವಿವಿಧ ಸೇವಾ ಕಾರ್ಯಗಳು, ಅರ್ಥಪೂರ್ಣ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೀರಿ. ಕೆಪಿಸಿಸಿ ಕಚೇರಿಯಲ್ಲಿ ನಡೆದ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ ಚೆಸ್ ಕಪ್, ರಕ್ತದಾನ ಶಿಬಿರ, ವಿವಿಧ ದೇವಸ್ಥಾನಗಳಲ್ಲಿ ನನ್ನ ಹೆಸರಿನಲ್ಲಿ ನಡೆದ ಪೂಜೆ, ಅರ್ಚನೆ, ಅಂಧ ಮಕ್ಕಳಿಗೆ ನೆರವು ನೀಡುವ ಕಾರ್ಯಕ್ರಮಗಳು ನನ್ನ ಈ ದಿನವನ್ನು ಸ್ಮರಣೀಯವಾಗಿಸಿದೆ. ನಿಮ್ಮ ಈ ಪ್ರೀತಿಗೆ ನಾನು ಚಿರಋಣಿ ಎಂದು ಸಂತಸ ವ್ಯಕ್ತಪಡಿಸಿದರು.
ಕಬಿನಿಯಲ್ಲಿ ಕಾಲ ಕಳೆದ ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್ ಅವರು ಈ ವರ್ಷದ ಹುಟ್ಟುಹಬ್ಬವನ್ನು ವಿಶೇಷವಾಗಿ ಕಬಿನಿಯಲ್ಲಿ ಕಾಲ ಕಳೆಯುವ ಮೂಲಕ ಆಚರಿಸಿದ್ದಾರೆ. ಪ್ರಕೃತಿಯೊಂದಿಗೆ ಒಂದಾದ ಭಾವ, ಕಬಿನಿಯ ಸೌಂದರ್ಯ, ವನ್ಯಸಂಪತ್ತನ್ನು ಕಣ್ತುಂಬಿಕೊಂಡು, ಪ್ರಶಾಂತವಾದ ಜಗತ್ತಿಗೆ ಕಾಲಿಟ್ಟ ಅನುಭವವಾಯಿತು ಎಂದಿದ್ದಾರೆ. 200ರಷ್ಟು ಆನೆಗಳು, ಅಸಂಖ್ಯಾತ ಜಿಂಕೆಗಳನ್ನು ಕಬಿನಿ ವನ್ಯಜೀವಿ ಅಭಯಾರಣ್ಯದಲ್ಲಿ ಕಣ್ತುಂಬಿಕೊಂಡೆ. ಇದು ಏನದ್ಭುತವಾದ ದೃಶ್ಯವದು? ಎಂದು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಕರ್ನಾಟಕದ ಅರಣ್ಯ ಸಂಪತ್ತಿನ ಆಗರವಾಗಿರುವ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿರುವ ಕಬಿನಿ ಅಭಯಾರಣ್ಯವನ್ನು ಜೀವನದಲ್ಲಿ ಒಂದು ಬಾರಿಯಾದರೂ ಎಲ್ಲರೂ ನೋಡಲೇಬೇಕು ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.












Click it and Unblock the Notifications