ಟ್ವಿಟ್ಟರ್ನಲ್ಲಿ ಒಣ ಪೌರುಷ ನಿಲ್ಲಿಸಿ: ಸಿದ್ದರಾಮಯ್ಯಗೆ ಬಿಜೆಪಿ ತಾಕೀತು
ಬೆಂಗಳೂರು, ಜನವರಿ 5: ಟ್ವಿಟ್ಟರ್ನಲ್ಲಿ ಒಣ ಪೌರುಷ ತೋರಿಸುವುದನ್ನು ನಿಲ್ಲಿಸಿ ಎಂದು ರಾಜ್ಯ ಬಿಜೆಪಿಯು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಗ್ರಹಿಸಿದೆ.
ಕನ್ನಡ ನಟ ಮತ್ತು ನಿರ್ಮಾಪಕರ ಮೇಲಿನ ಐಟಿ ದಾಳಿಗೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಮಾಡಿರುವ ಟ್ವೀಟ್, ಬಿಜೆಪಿಯನ್ನು ಕೆರಳಿಸಿದೆ. ತೆರಿಗೆ ಪಾವತಿಯಲ್ಲಿ ವ್ಯತ್ಯಾಸವಾಗಿದ್ದರೆ ಅದಕ್ಕೆ ಸಂಬಂಧಿಸಿದ ಲೆಕ್ಕಪತ್ರಗಳನ್ನು ನಡೆಸು ಅಧಿಕಾರ ಐಟಿ ಇಲಾಖೆಗೆ ಇದೆ. ಅದನ್ನು ಗೌರವಿಸೋಣ ಎಂದು ಹೇಳಿರುವ ಸಿದ್ದರಾಮಯ್ಯ, ಈ ದಾಳಿಯ ಹಿಂದೆ ಮೋದಿ ಸರ್ಕಾರದ ಕೈವಾಡವಿದೆ ಎಂಬ ಗುಮಾನಿಯನ್ನೂ ವ್ಯಕ್ತಪಡಿಸಿದ್ದಾರೆ.
ಮೋದಿ ಅವರ ಸರ್ಕಾರದಲ್ಲಿ ಐಟಿ ಇಲಾಖೆಯ ಕಾರ್ಯವೈಖರಿಯನ್ನು ನೋಡಿದರೆ ದಾಳಿಯ ಹಿಂದೆ ದುರುದ್ದೇಶ ಇರಬಹುದು ಎಂಬ ಅನುಮಾನ ಮೂಡುತ್ತಿದೆ ಎಂದು ಸಹ ಸಿದ್ದರಾಮಯ್ಯ ಹೇಳಿದ್ದಾರೆ.
ನಟರ ಮನೆ ಮೇಲೆ ಐಟಿ ದಾಳಿ: ಸಿದ್ದರಾಮಯ್ಯ, ಕುಮಾರಸ್ವಾಮಿ ಹೇಳಿದ್ದೇನು?
ಈ ಟ್ವೀಟ್ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಕರ್ನಾಟಕ ಟ್ವಿಟ್ಟರ್ ಖಾತೆ, ಸಿದ್ದರಾಮಯ್ಯ ಅವರ ವಿರುದ್ಧ ಹರಿಹಾಯ್ದಿದೆ. ಐಟಿ ದಾಳಿಯ ಬಗ್ಗೆ ಮಾತನಾಡುವುದನ್ನು ಬಿಟ್ಟು, ನಿಮ್ಮ ಆತ್ಮೀಯ ಸಚಿವ ಪುಟ್ಟರಂಗಶೆಟ್ಟಿ ಅವರ ಕಚೇರಿಯಲ್ಲಿ ದೊರೆತ ಹಣದ ಬಗ್ಗೆ ಮಾತನಾಡಿ. ಅವರಿಂದ ರಾಜೀನಾಮೆ ಕೊಡಿಸಿ ಎಂದು ಆಗ್ರಹಿಸಿದೆ.
ವಿಧಾನಸೌಧದಲ್ಲಿಯೇ ದಂಧೆ ಆರಂಭಿಸಿದ್ದೀರಿ. ಭ್ರಷ್ಟಾಚಾರ ಮುಕ್ತ ಸರ್ಕಾರ ಇದೇನಾ ಎಂದು ಬಿಜೆಪಿ ಟ್ವೀಟ್ ಮಾಡಿದೆ.
|
ರಾಜೀನಾಮೆ ಕೊಡಿಸಿ, ಪೌರುಷ ತೋರಿಸಿ
ಸಿದ್ದರಾಮಯ್ಯ ಅವರೇ, ಟ್ವಿಟರ್ ನಲ್ಲಿ ಒಣ ಪೌರುಷ ತೋರಿಸುವುದನ್ನು ನಿಲ್ಲಿಸಿ. ನಿಮ್ಮ ಆತ್ಮೀಯ, ಸಚಿವ ಪುಟ್ಟರಂಗಶೆಟ್ಟಿ ಅವರ ಕಚೇರಿಯಲ್ಲಿ 25.76 ಲಕ್ಷ ಹಣ ಸಿಕ್ಕಿದೆ. ವಿಧಾನಸೌಧದಲ್ಲಿಯೇ ದಂಧೆ ಶುರು ಮಾಡಿದ್ದೀರಿ. ಇದೇನಾ ನಿಮ್ಮ ಭ್ರಷ್ಟ ಮುಕ್ತ ಸರಕಾರ? ಮೊದಲು ಪುಟ್ಟರಂಗಶೆಟ್ಟಿ ಅವರಿಂದ ರಾಜೀನಾಮೆ ಕೊಡಿಸಿ ನಿಮ್ಮ ಪೌರುಷ ತೋರಿಸಿ ಎಂದು ಬಿಜೆಪಿ ಹೇಳಿದೆ.
ಪುಟ್ಟರಂಗ ಶೆಟ್ಟಿ ಕೂಡಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು: ಯಡಿಯೂರಪ್ಪ
|
ಕುಂಬಳಕಾಯಿ ಕಳ್ಳ ಅಂದರೆ...
ಸಿದ್ದರಾಮಯ್ಯ ಅವರೇ, ಕುಂಬಳಕಾಯಿ ಕಳ್ಳ ಅಂದರೆ ನೀವೇಕೆ ಹೆಗಲು ಮುಟ್ಟಿ ನೋಡಿಕೊಳ್ಳುತ್ತೀರಿ? ಕೇಂದ್ರ ಸರಕಾರ ಮತ್ತು ಐ.ಟಿ ಇಲಾಖೆ ಬಗ್ಗೆ ಇಲ್ಲಸಲ್ಲದ ಆರೋಪ ಮಾಡಿ ಜನರ ದಾರಿತಪ್ಪಿಸುವುದನ್ನು ನಿಲ್ಲಿಸಿ. ವಕೀಲರು, ಮಾಜಿ ಮುಖ್ಯಮಂತ್ರಿ ಆಗಿರುವ ನೀವು ಆ ಸ್ಥಾನದ ಗೌರವ ಕಾಪಾಡಿಕೊಳ್ಳಿ. ಅಜ್ಞಾನಿಯಂತೆ ಮಾತನಾಡಿ ಮಾನ-ಮರ್ಯಾದೆ ಕಳೆದುಕೊಳ್ಳಬೇಡಿ ಎಂದು ಮತ್ತೊಂದು ಟ್ವೀಟ್ನಲ್ಲಿ ಬಿಜೆಪಿ ತರಾಟೆಗೆ ತೆಗೆದುಕೊಂಡಿದೆ.
ವಿಧಾನಸೌಧದಲ್ಲಿ 25.76ಲಕ್ಷ ಹಣ ಪತ್ತೆ, ವ್ಯಕ್ತಿ ವಶಕ್ಕೆ
|
ಬಾಲಿಶವಾಗಿ ಮಾತನಾಡಬೇಡಿ
ಸ್ವತಃ ಕಾನೂನು ಪದವಿಧಾರಾಗಿರುವ ನೀವು ಈ ರೀತಿ ಮಾತನಾಡುವುದು ಬಾಲಿಶವಾಗಿ ಕಾಣುತ್ತದೆ. ಮಾಜಿ ಮುಖ್ಯಮಂತ್ರಿಗಳೇ ಸ್ವತಃ ತೆರಿಗೆ ದಾಳಿಗೆ ಒಳಗಾಗಿರುವ ನಾಯಕನಟರು ಯಾರೂ ಸಹ ಈ ರೀತಿ ಆಪಾದನೆ ಮಾಡಿಲ್ಲ. ಮೊಸರಲ್ಲೂ ಕಲ್ಲು ಹುಡುಕುವ ಬುದ್ದಿ ನಿಮ್ಮಿಂದ ನೋಡಿ ಕಲಿಯಬೇಕು. ಶಿವಣ್ಣ ಸುದೀಪ್ ಅಪ್ಪು ಏನು ಹೇಳಿದ್ದಾರೆ ಅಂತ ನೋಡಿ ಮಾತನಾಡಿ ಮಾಜಿ ಮುಖ್ಯಮಂತ್ರಿಗಳೇ ಎಂದು ನಿಷ್ಕಾಮ ಕರ್ಮ ಎಂಬ ಟ್ವಿಟ್ಟರ್ ಖಾತೆಯಿಂದ ಸಿದ್ದರಾಮಯ್ಯ ಅವರ ಟ್ವೀಟ್ಗೆ ಪ್ರತಿಕ್ರಿಯೆ ನೀಡಲಾಗಿದೆ.
|
ರಾಜಕುಮಾರ್ ಮೇಲೆ ಐಟಿ ದಾಳಿಯಾಗಿತ್ತಲ್ಲ?
ಸ್ವಾಮಿ 1984 ರಲ್ಲಿ ಡಾ.ರಾಜ್ ಕುಮಾರ್ ಅವರ ಮನೆಯ ಮೇಲೆ IT ದಾಳಿಯಾಗಿತ್ತು. ಆವಾಗ ನಿಮ್ಮ ಇಂದಿರಾ ಪ್ರಿಯದರ್ಶಿನಿ ಪ್ರಧಾನಿಯಾಗಿದ್ದರು. ಆ ದಾಳಿಯ ಹಿಂದೆ ಯಾವ ಉದ್ದೇಶ ಇತ್ತು ಸ್ವಾಮಿ ಎಂದು ಕುಬೇರಪ್ಪ ಎಂಬುವವರು ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದ್ದಾರೆ.
|
ಲೆಕ್ಕ ಪರಿಶೋಧನೆ ಮಾಡಿಸಿ
ಸ್ವಾಮಿ ಸಿದ್ದರಾಮಯ್ಯನವರೇ ನರೇಂದ್ರ ಮೋದಿಯವರು ಮೂರು ಬಾರಿ ಮುಖ್ಯಮಂತ್ರಿಯಾಗಿ ಒಂದು ಬಾರಿ ಪ್ರಧಾನಮಂತ್ರಿಯಾಗಿ ಅಧಿಕಾರ ಅನುಭವಿಸಿದ್ದಾರೆ... ದಯಮಾಡಿ ನರೇಂದ್ರ ಮೋದಿ ಮತ್ತು ಅವರ ಕುಟುಂಬದ ಆದಾಯ ತೆರಿಗೆಯನ್ನು ಲೆಕ್ಕ ಹಾಕಿಸಿ ಮತ್ತು ತಾವು ಹಾಗೂ ತಮ್ಮ ಕುಟುಂಬದವರು ಹಾಗೂ ನಿಮ್ಮ ಪಕ್ಷದ ಇತರ ರಾಜಕಾರಣಿಗಳ ಲೆಕ್ಕ ಪರಿಶೋಧನೆ ಮಾಡಿಸಿ ಎಂದು ಕೆ. ರಂಗಸ್ವಾಮಿ ಎಂಬುವವರು ಸವಾಲು ಹಾಕಿದ್ದಾರೆ.