ಪೌರತ್ವ ಕಾಯ್ದೆ ಬಗ್ಗೆ ಬಿಜೆಪಿಯಿಂದ ಜನ ಜಾಗೃತಿ; ವಿವಿಧ ಕಾರ್ಯಕ್ರಮ
ಬೆಂಗಳೂರು, ಡಿಸೆಂಬರ್ 24 : ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಜನ ಜಾಗೃತಿ ಮೂಡಿಸಲು ಬಿಜೆಪಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಕರ್ನಾಟಕ ಬಿಜೆಪಿ ಘಟಕವೂ ಡಿಸೆಂಬರ್ 25ರಿಂದ ಜನವರಿ 15ರ ತನಕ ವಿವಿಧ ಕಾರ್ಯಕ್ರಮ ಆಯೋಜನೆ ಮಾಡಿದೆ.
ಮಂಗಳವಾರ ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ಈ ಕುರಿತು ಮಾಹಿತಿ ನೀಡಿದರು. "ಜನರಲ್ಲಿ ಕಾಯ್ದೆ ಬಗ್ಗೆ ಜಾಗೃತಿ ಮೂಡಿಸಲು ಬೆಂಗಳೂರು, ಹುಬ್ಬಳ್ಳಿ, ಸಿಂಧನೂರು, ಕಲಬುರಗಿ, ಮಂಗಳೂರು ಜಿಲ್ಲೆಗಳಲ್ಲಿ ಬೃಹತ್ ಸಾರ್ವಜನಿಕ ಸಭೆಯನ್ನು ಆಯೋಜನೆ ಮಾಡಲಾಗುತ್ತದೆ" ಎಂದರು.
"ಪೌರತ್ವ ತಿದ್ದುಪಡಿ ಕಾಯ್ದೆ ಯಾವುದೇ ಕಾರಣಕ್ಕೂ ಹಿಂದೆ ತೆಗೆದುಕೊಳ್ಳುವ ಪ್ರಶ್ನೆಯೇ ಇಲ್ಲ. ಈ ಕಾಯ್ದೆಯಿಂದ ಯಾವ ಸಮುದಾಯಕ್ಕೂ ತೊಂದರೆ ಇಲ್ಲ. ಭಾರತೀಯ ಮುಸ್ಲಿಮರಿಗೂ ಏನು ತೊಂದರೆ ಇಲ್ಲ. ಆದರೆ, ಕಾಂಗ್ರೆಸ್ ಮತ್ತು ಕಾಂಗ್ರೆಸ್ ನಾಯಕರಿಗೆ ಮಾತ್ರ ತೊಂದರೆ ಆಗುತ್ತಿದೆ" ಎಂದು ಹೇಳಿದರು.
"ರಾಮಚಂದ್ರ ಗುಹಾ ಓರ್ವ ಅರೆ ಬುದ್ಧಿಜೀವಿ. ಪೌರತ್ವ ಕಾಯ್ದೆ ಬಗ್ಗೆ ಜಾಗೃತಿ ಮೂಡಿಸುವುದನ್ನು ಬಿಟ್ಟು ತಪ್ಪು ತಿಳುವಳಿಕೆ ಮೂಡಿಸಿದರು" ಎಂದು ಎನ್. ರವಿ ಕುಮಾರ್ ಟೀಕಿಸಿದರು.

30 ಲಕ್ಷ ಮನೆಗಳನ್ನು ತಲುಪುವ ಗುರಿ
ಬಿಜೆಪಿ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಜನಜಾಗೃತಿ ಕಾರ್ಯಕ್ರಮ ಆಯೋಜನೆ ಮಾಡಿದೆ. ಕರ್ನಾಟಕದಲ್ಲಿ 30 ಲಕ್ಷ ಮನೆಗಳನ್ನು ತಲುಪಿ ಮನೆ-ಮನೆ ಸಂಪರ್ಕ ಮಾಡಿ ಜನಜಾಗೃತಿ ಕಾರ್ಯಕ್ರಮ ಮಾಡುವ ಗುರಿಯನ್ನು ಕರ್ನಾಟಕ ಬಿಜೆಪಿ ಹೊಂದಿದೆ. ಶಕ್ತಿ ಕೇಂದ್ರದಲ್ಲಿ 5 ಜನರ ತಂಡ, ಮಂಡಲದಲ್ಲಿ 5 ಜನರ ತಂಡ, ತಾಲೂಕಿನಲ್ಲಿ 5 ಜನರ ತಂಡ, ರಾಜ್ಯದಲ್ಲಿ 5 ಜನರ ತಂಡ ಒಟ್ಟು 25 ಸಾವಿರ ಜನರು ಸೇರಿಕೊಂಡು ಜನ ಜಾಗೃತಿ ಅಭಿಯಾನ ಮಾಡಲಿದ್ದಾರೆ.

ವಿವಿಧ ಜಿಲ್ಲೆಗಳಲ್ಲಿ ಸಮಾವೇಶ
ವಿವಿಧ ಜಿಲ್ಲೆಗಳಲ್ಲಿ ಬೃಹತ್ ಸಮಾವೇಶವನ್ನು ಆಯೋಜನೆ ಮಾಡಿ ಜನ ಜಾಗೃತಿ ಅಭಿಯಾನವನ್ನು ಮಾಡಲಾಗುತ್ತದೆ. ಪ್ರತಿ ಜಿಲ್ಲೆಯಲ್ಲಿ 5 ರಿಂದ 6 ಸಾವಿರ ಜನರನ್ನು ಸೇರಿಸಿ ಸಮಾವೇಶ ಆಯೋಜನೆ ಮಾಡಲಾಗುತ್ತದೆ. ಬೆಂಗಳೂರು, ಹುಬ್ಬಳ್ಳಿ, ಸಿಂಧನೂರು, ಕಲಬುರಗಿ, ಮಂಗಳೂರು ಜಿಲ್ಲೆಗಳಲ್ಲಿ ಬೃಹತ್ ಸಾರ್ವಜನಿಕರ ಸಭೆ ನಡೆಯಲಿದೆ.

ಗಣ್ಯರ ಜೊತೆ ಸಂವಾದ
ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಕರ್ನಾಟಕದಲ್ಲಿ 50 ಪತ್ರಿಕಾಗೋಷ್ಠಿ ನಡೆಯಲಿದೆ. ಈ ಮೂಲಕ ಜನಜಾಗೃತಿ ಕಾರ್ಯಕ್ರಮ ಮಾಡಲಾಗುತ್ತದೆ. ಕಾಯ್ದೆಯ ಬಗ್ಗೆ ಗಣ್ಯರ ಜೊತೆ ಸಂವಾದ ಕಾರ್ಯಕ್ರಮವನ್ನು ಬಿಜೆಪಿ ಆಯೋಜನೆ ಮಾಡಿದೆ.

ಕರ್ನಾಟಕದಲ್ಲಿ ಪ್ರತಿಭಟನೆ
ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆದಿದೆ. ಮಂಗಳೂರಿನಲ್ಲಿ ಪೊಲೀಸರು ನಡೆಸಿದ ಗೋಲಿಬಾರ್ನಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಬೆಂಗಳೂರಿನಲ್ಲಿಯೂ ಬೃಹತ್ ಪ್ರತಿಭಟನೆ ನಡೆದಿದೆ.












Click it and Unblock the Notifications