ಫೆ.13, 14ರಂದು ಕಡ್ಡಾಯ ಹಾಜರಾತಿಗೆ ಬಿಜೆಪಿಯಿಂದ ವಿಪ್ ಜಾರಿ
ಬೆಂಗಳೂರು, ಫೆಬ್ರವರಿ 12 : ಕರ್ನಾಟಕ ಬಿಜೆಪಿ ಪಕ್ಷದ ಎಲ್ಲಾ ಶಾಸಕರಿಗೂ ವಿಪ್ ಜಾರಿ ಮಾಡಿದೆ. ಫೆಬ್ರವರಿ 13 ಮತ್ತು 14ರಂದು ಎಲ್ಲರೂ ವಿಧಾನಸಭೆ ಕಲಾಪದಲ್ಲಿ ಕಡ್ಡಾಯವಾಗಿ ಹಾಜರಿರಬೇಕು ಎಂದು ಸೂಚನೆ ನೀಡಲಾಗಿದೆ.
ಮಂಗಳವಾರ ವಿಧಾನಸೌಧದಲ್ಲಿ ಮುಖ್ಯ ಸಚೇತಕ ಸುನೀಲ್ ಕುಮಾರ್ ಅವರು ಎಲ್ಲಾ ಶಾಸಕರಿಗೆ ವಿಪ್ ನೀಡಿದ್ದಾರೆ. ಸ್ಪೀಕರ್ ರಮೇಶ್ ಕುಮಾರ್ ಅವರು ಸದನವನ್ನು ಮುಂದೂಡುವ ತನಕ ಎಲ್ಲರೂ ಕಲಾಪದಲ್ಲಿ ಹಾಜರಿರಬೇಕು ಎಂದು ನಿರ್ದೇಶನ ನೀಡಿದ್ದಾರೆ.
ಎರಡು ದಿನ ಹಣಕಾಸು ವಿಧೇಯಕ ಮಂಡನೆಯಾಗಲಿದ್ದು, ಮೈತ್ರಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರತಿಪಕ್ಷ ಬಿಜೆಪಿ ತಂತ್ರ ಮಾಡಿದೆ. ಅತೃಪ್ತ ಶಾಸಕರು ಕಲಾಪದಿಂದ ದೂರ ಉಳಿದರೆ ವಿಧೇಯಕ ಅನುಮೋದನೆ ಯಾಗದಂತೆ ನೋಡಿಕೊಳ್ಳಲು ಬಿಜೆಪಿ ಪ್ರಯತ್ನ ನಡೆಸುವ ಸಾಧ್ಯತೆ ಇದೆ.

ಫೆ.8ರಂದು ಹಣಕಾಸು ಸಚಿವರು ಆಗಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಬಜೆಟ್ ಮಂಡನೆ ಮಾಡಿದ್ದಾರೆ. ಆದರೆ, ಧನವಿನಿಯೋಗ ವಿಧೇಯಕ ವಿಧಾನಸಭೆಯಲ್ಲಿ ಅಂಗೀಕಾರವಾಗಿಲ್ಲ. ಫೆ.13 ಮತ್ತು 14ರಂದು ವಿಧೇಯಕದ ಕುರಿತು ಚರ್ಚೆ ನಡೆಯಲಿದೆ.
ಧನವಿನಿಯೋಗ ವಿಧೇಯಕದ ಚರ್ಚೆ ನಡೆಯುವಾಗ ಕಾಂಗ್ರೆಸ್ನ ಅತೃಪ್ತ ಶಾಸಕರು ಸದನಕ್ಕೆ ಆಗಮಿಸಲಿದ್ದಾರೆಯೇ? ಎಂದು ಕಾದು ನೋಡಬೇಕು. ವಿಧೇಯಕ ಅಂಗೀಕಾರವಾಗದಿದ್ದರೆ ಸರ್ಕಾರಕ್ಕೆ ತೀವ್ರ ಮುಖಭಂಗವಾಗಲಿದೆ.
ಸೋಮವಾರ ಮತ್ತು ಮಂಗಳವಾರ ಆಪರೇಷನ್ ಕಮಲದ ಆಡಿಯೋ ಬಗ್ಗೆ ವಿಧಾನಸಭೆಯಲ್ಲಿ ವಿವರವಾದ ಚರ್ಚೆ ನಡೆದಿದೆ. ಬುಧವಾರ ಬೆಳಗ್ಗೆ 10.30ಕ್ಕೆ ಸ್ಪೀಕರ್ ರಮೇಶ್ ಕುಮಾರ್ ಆಡಳಿತ ಮತ್ತು ವಿರೋಧ ಪಕ್ಷದ ನಾಯಕರ ಸಭೆ ಕರೆದಿದ್ದಾರೆ.
ಆಡಿಯೋ ಬಗ್ಗೆ ಎಸ್ಐಟಿ ತನಿಖೆಗೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸುತ್ತಿದೆ. ಆದ್ದರಿಂದ, ಯಾವ ತನಿಖೆಯಾಗಬೇಕು? ಎಂದು ಬುಧವಾರ ತೀರ್ಮಾನವನ್ನು ಕೈಗೊಳ್ಳಲಾಗುತ್ತದೆ.












Click it and Unblock the Notifications