ದಲಿತರಿಗೆ ಮೀಸಲಿಟ್ಟ 12 ಸಾವಿರ ಕೋಟಿ ಹಣ ವರ್ಗಾವಣೆ: ಸರ್ಕಾರದ ವಿರುದ್ಧ ಬಿಜೆಪಿ ಹೋರಾಟ
ಬೆಂಗಳೂರು, ಜುಲೈ 11: ಸಿದ್ದರಾಮಯ್ಯನವರ ನೇತೃತ್ವದ ರಾಜ್ಯದ ಕಾಂಗ್ರೆಸ್ ಸರಕಾರವು ದಲಿತರಿಗೆ ಮೀಸಲಿಟ್ಟ ಹಣವನ್ನು ಗ್ಯಾರಂಟಿಗೆ ವರ್ಗಾವಣೆ ಮಾಡಿ ದಲಿತರಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ಟೀಕಿಸಿದರು.
ಬಿಜೆಪಿ ಕಚೇರಿಯಲ್ಲಿ ಗುರುವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ತಮ್ಮ ನೇತೃತ್ವದಲ್ಲಿ ಆರಂಭವಾದ ರಾಜ್ಯ ಪದಾಧಿಕಾರಿಗಳ ಸಭೆಯನ್ನು ಉದ್ಘಾಟನೆ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ರಾಜ್ಯ ಸರಕಾರವು ಒಂದೆಡೆ ಎಸ್ಟಿ ಅಭಿವೃದ್ಧಿ ನಿಗಮ, ಎಸ್ಇಪಿ ಟಿಎಸ್ಪಿಗಳಲ್ಲಿ ದಲಿತರಿಗೆ ಮೀಸಲಿಟ್ಟ ಹಣವನ್ನು ಗ್ಯಾರಂಟಿಗೆ ವರ್ಗಾಯಿಸಿದೆ.

ಮತ್ತೊಂದು ಕಡೆ ವಾಲ್ಮೀಕಿ ನಿಗಮದಲ್ಲಿ ದಲಿತರಿಗೆ ಮೀಸಲಿಟ್ಟ ಹಣವನ್ನು ಲೂಟಿ ಮಾಡಿ ಲೋಕಸಭಾ ಚುನಾವಣೆಯಲ್ಲಿ ದುರ್ಬಳಕೆ ಮಾಡಿಕೊಂಡಿದೆ. ಇವುಗಳನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಿ ಹೋರಾಟ ಮಾಡುತ್ತಿದೆ ಎಂದು ತಿಳಿಸಿದರು.
ಸಿದ್ದರಾಮಯ್ಯನವರು ದಲಿತರಿಗೆ ಮೀಸಲಿಟ್ಟ 12 ಸಾವಿರ ಕೋಟಿ ಹಣವನ್ನು ಗ್ಯಾರಂಟಿಗೆ ವರ್ಗಾವಣೆ ಮಾಡಿಕೊಂಡಿದ್ದಾರೆ. ತದನಂತರ ಕೂಡ ಸುಮಾರು ಅಷ್ಟೇ ಮೊತ್ತ ವರ್ಗಾಯಿಸಿದ್ದಾರೆ. ಒಟ್ಟಾಗಿ 24,500 ಕೋಟಿ ಮೊತ್ತವನ್ನು ಗ್ಯಾರಂಟಿಗಳಿಗೆ ಬಳಕೆ ಮಾಡಿಕೊಳ್ಳಲಾಗಿದೆ. ಈ ಕುರಿತು ದೆಹಲಿಯಿಂದ ಬಂದ ಪತ್ರಕ್ಕೆ ಸರಕಾರ ಉತ್ತರ ಕೊಡಬೇಕಿದೆ ಎಂದು ವಿವರಿಸಿದರು.
ಇದನ್ನು ದಲಿತರಿಗೇ ಬಳಸಿದ್ದೇವೆ; ದುರುಪಯೋಗ ಆಗಿಲ್ಲ ಎಂದಿದ್ದಾರೆ. ರಾಜ್ಯ ಸರಕಾರವು ದಲಿತರಿಗೆ ಅನ್ಯಾಯ ಮಾಡಿದೆ. ಇದು ಅಕ್ಷಮ್ಯ ಅಪರಾಧ. ಬಿಜೆಪಿ, ಸದನದ ಒಳಗೆ ಮತ್ತು ಹೊರಗೆ ಇದರ ವಿರುದ್ಧ ಹೋರಾಟ ಮುಂದುವರೆಸಲಿದೆ ಎಂದು ಅವರು ತಿಳಿಸಿದರು.
ಸಿದ್ದರಾಮಯ್ಯನವರು ಅಹಿಂದ ನಾಯಕರು ಎಂದು ಹೇಳಿಕೊಂಡು ತಮ್ಮ ಬೆನ್ನನ್ನು ತಾವು ತಟ್ಟಿಕೊಳ್ಳುತ್ತಾರೆ. ದಲಿತರ ಉದ್ಧಾರಕರು ಎಂದು ಹೇಳಿ, ತಾವೇ ದಲಿತರ ಉದ್ಧಾರ ಮಾಡಿರುವುದಾಗಿ ತಮ್ಮ ಬಗ್ಗೆ ತಾವು ಕೊಚ್ಚಿಕೊಳ್ಳುತ್ತಾರೆ ಎಂದು ಟೀಕಿಸಿದರು.
ರಾಜ್ಯ ಅಧ್ಯಕ್ಷೆ ಕು.ಮಂಜುಳಾ ಅವರು ಮಾತನಾಡಿ, ಸಿಆರ್ಪಿಸಿ 125ರ ಪ್ರಕಾರ ಮುಸ್ಲಿಂ ಮಹಿಳೆಯರಿಗೆ ಜೀವನಾಂಶ ಪಡೆಯುವ ಹಕ್ಕನ್ನು ಭಾರತದ ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿರುವುದನ್ನು ಕರ್ನಾಟಕ ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ತುಂಬು ಹೃದಯದಿಂದ ಸ್ವಾಗತಿಸುತ್ತದೆ ಎಂದು ತಿಳಿಸಿದ್ದಾರೆ.
ಈ ಮೂಲಕ 1985ರಲ್ಲಿ ಸುಪ್ರೀಂ ಕೋರ್ಟ್ ಇದೇ ಸಿಆರ್ಪಿಸಿ 125ರ ಪ್ರಕಾರ ಮುಸ್ಲಿಂ ಮಹಿಳೆಯರಿಗೆ ವಿಚ್ಛೇದನ ನೀಡುವ ಪತಿ ಜೀವನಾಂಶ ಕೊಡಬೇಕೆಂದು ತೀರ್ಪು ನೀಡಿತ್ತು. ಅದನ್ನು ರಾಜೀವ್ ಗಾಂಧಿಯವರ ನೇತೃತ್ವದ ಕಾಂಗ್ರೆಸ್ ಸರಕಾರ ಸಂಸತ್ತಿನಲ್ಲಿ ತಡೆ ಒಡ್ಡಿ, ಮುಸ್ಲಿಂ ವೈಯಕ್ತಿಕ ಕಾನೂನಿಗೆ ಬೆಂಬಲ ಕೊಟ್ಟು, ಸುಪ್ರೀಂ ಕೋರ್ಟಿನ ತೀರ್ಪನ್ನು ನಿರಾಕರಿಸಿತ್ತು ಎಂದು ನೆನಪಿಸಿದ್ದಾರೆ.
ಈ ಮೂಲಕ ಅವರು ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿದ್ದರು. ಅಲ್ಲದೆ, ಮಹಿಳಾಪರವಾದ ನಿಲುವಿನ ವಿರುದ್ಧ ಇಡೀ ಕಾಂಗ್ರೆಸ್ ಪಕ್ಷ ನಿಂತಿತ್ತು. ಪುನಃ ಇದೀಗ ಅದೇ ಜೀವನಾಂಶದ ವಿಚಾರ ಬಂದಿದ್ದು, ಭಾರತದ ಸುಪ್ರೀಂ ಕೋರ್ಟ್ ಮುಸ್ಲಿಂ ಮಹಿಳೆಯರಿಗೆ ಕೂಡ ಜೀವನಾಂಶ ಕೊಡುವುದನ್ನು ಎತ್ತಿ ಹಿಡಿದಿದೆ ಎಂದು ಸ್ವಾಗತಿಸಿದ್ದಾರೆ.
ಭಾರತದ ಸಂವಿಧಾನದ ಕುರಿತು ಪದೇಪದೇ ಮಾತನಾಡುವ, ಒಂದು ಡೋಂಗಿ ಪ್ರಚಾರ ಮಾಡುವ ಕಾಂಗ್ರೆಸ್ ಪಕ್ಷದವರು ಇವತ್ತು ಮಹಿಳಾಪರವಾಗಿ ಹೇಗೆ ನಡೆದುಕೊಳ್ಳುತ್ತಾರೆ ಎಂಬುದನ್ನು ನಿರೀಕ್ಷಿಸುವುದಾಗಿ ತಿಳಿಸಿದ್ದಾರೆ. ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿಯವರು ಸಂಸತ್ತಿನಲ್ಲಿ ಹೇಗೆ ನಡೆದುಕೊಳ್ಳಲಿದ್ದಾರೆ? ಅವರ ತಂದೆ ಮಾಡಿದ್ದನ್ನು ಬೆಂಬಲಿಸುವರೇ ಅಥವಾ ಭಾರತದ ಸುಪ್ರೀಂ ಕೋರ್ಟ್ ನಿಲುವನ್ನು ಗೌರವಿಸುವರೇ ಎಂದು ಪ್ರಶ್ನಿಸಿದ್ದಾರೆ.
1985ರಲ್ಲಿ ಕಾಂಗ್ರೆಸ್ಸಿಗೆ ಬಹುಮತ ಇದ್ದಾಗ ಮುಸ್ಲಿಂ ಮಹಿಳೆಯರ ನ್ಯಾಯವನ್ನು, ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಘನತೆಯನ್ನು ಗಾಳಿಗೆ ತೂರಿದ ಕಾಂಗ್ರೆಸ್ ಇವತ್ತು ಅಧಿಕಾರದಲ್ಲಿ ಇಲ್ಲ. ಸನ್ಮಾನ್ಯ ನರೇಂದ್ರ ಮೋದಿಯವರ ನೇತೃತ್ವದ ಎನ್ಡಿಎ ಇವತ್ತು ಆಡಳಿತ ನಡೆಸುತ್ತಿದೆ.
ಯಾವ ತ್ರಿವಳಿ ತಲಾಖ್ ಅನ್ನು ರದ್ದು ಮಾಡಿದ ಮೋದಿಜೀ ಅವರ ಸರಕಾರವು ಈ ಮಹಿಳೆಯರ ಪರವಾಗಿ ಕೂಡ ನಿಲ್ಲಲಿದೆ. ಭಾರತದ ಮಹಿಳೆಯರು ಮೋದಿಜೀ ಅವರ ಸರಕಾರದಲ್ಲಿ ಸುರಕ್ಷಿತರಾಗಿದ್ದಾರೆ ಎಂದೂ ಅವರು ವಿಶ್ಲೇಷಿಸಿದ್ದಾರೆ.












Click it and Unblock the Notifications