ದೇಶದ ರಾಜಕೀಯ ಸಂಸ್ಕೃತಿ ಬದಲಿಸಿದ ಬಿಜೆಪಿ: ಜೆ.ಪಿ.ನಡ್ಡಾ
ದಾವಣಗೆರೆ, ಜನವರಿ 7: 2014ರಲ್ಲಿ ಬಿಜೆಪಿ ನರೇಂದ್ರ ಮೋದಿಜಿ ಅವರ ನೇತೃತ್ವದಲ್ಲಿ ಅಧಿಕಾರ ವಹಿಸಿಕೊಂಡಾಗ ಅದು ದೇಶದ ರಾಜಕೀಯ ಸಂಸ್ಕೃತಿಯನ್ನೇ ಬದಲಿಸಿತು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ತಿಳಿಸಿದರು.
ಶುಕ್ರವಾರ ದಾವಣಗೆರೆಯಲ್ಲಿ ವೃತ್ತಿಪರರು ಮತ್ತು ಕೀ ಓಟರ್ಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಮತಬ್ಯಾಂಕ್ ರಾಜಕೀಯ, ಧರ್ಮ ಧರ್ಮಗಳ ನಡುವೆ, ಜಾತಿಗಳ ವೈಷಮ್ಯ, ಭ್ರಷ್ಟಾಚಾರ ದೇಶದಲ್ಲಿ ವ್ಯಾಪಕವಾಗಿತ್ತು. ನಾವಿಂದು ರಾಜಕೀಯದ ರಿಪೋರ್ಟ್ ಕಾರ್ಡ್ ಮುಂದಿಟ್ಟು ರಾಜ್ಯದಲ್ಲಿ ಮತ ಕೇಳಲಿದ್ದೇವೆ ಮತ್ತು ರಾಜ್ಯದಲ್ಲಿ ಗೆಲುವು ಪಡೆಯಲಿದ್ದೇವೆ ಎಂದು ತಿಳಿಸಿದರು.

ಕೋವಿಡ್ ದೇಶ ಮಾತ್ರವಲ್ಲ; ಜಗತ್ತಿನಾದ್ಯಂತ ಹಬ್ಬಿತ್ತು. ಅಮೆರಿಕವು ಎಲ್ಲರಿಗೂ ಕೋವಿಡ್ ಲಸಿಕೆ ಕೊಡಲು ಸಾಧ್ಯವಾಗಲಿಲ್ಲ. ಆದರೆ, ಭಾರತವು ಮೋದಿಜಿ ಅವರ ಸಕಾಲಿಕ ನಿರ್ಧಾರದಿಂದ ಕೋವಿಡ್ಮುಕ್ತ ದೇಶ ಮಾಡಲು ಸಾಧ್ಯವಾಯಿತು. ಬಿಜೆಪಿಯ ಕೇಂದ್ರ ಮತ್ತು ರಾಜ್ಯ ಸರಕಾರಗಳ ಸಾಧನೆಯನ್ನು ಗಮನಿಸಿ ಜನರು ಬಿಜೆಪಿಯನ್ನು ಬೆಂಬಲಿಸುವ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಬಿಜೆಪಿ ಇಂದು ಮೋದಿಜಿ ಅವರ ನೇತೃತ್ವದಲ್ಲಿ ಜಾಗತಿಕ ನಾಯಕನ ಸ್ಥಾನವನ್ನು ಪಡೆದಿದೆ. ಗರೀಬ್ ಕಲ್ಯಾಣ್ ಯೋಜನೆ ಸೇರಿದಂತೆ ವಿವಿಧ ಜನಪರ ಯೋಜನೆಗಳನ್ನು ಕೇಂದ್ರ ಸರಕಾರ ಜಾರಿಗೊಳಿಸಿದೆ. ಯಡಿಯೂರಪ್ಪ- ಬೊಮ್ಮಾಯಿಯವರ ನೇತೃತ್ವದ ಸರಕಾರಗಳೂ ಅನೇಕ ಜನೋಪಯೋಗಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿವೆ. ಇನ್ನೂ ರಾಜ್ಯದ ಜನತೆಗೆ ಇವೆಲ್ಲವನ್ನೂ ಪಕ್ಷದ ಕಾರ್ಯಕರ್ತರು ತಿಳಿಸುವ ಮೂಲಕ ಚುನಾವಣೆಯಲ್ಲಿ ಪಕ್ಷವು ಅತಿ ಹೆಚ್ಚು ಸ್ಥಾನಗಳನ್ನು ಪಡೆಯುವಂತೆ ನೋಡಿಕೊಳ್ಳಲು ಸೂಚಿಸಿದರು.
10 ಕೋಟಿಗೂ ಹೆಚ್ಚು ಶೌಚಾಲಯ ನಿರ್ಮಾಣದ ಮೂಲಕ ನಮ್ಮ ಸರಕಾರವು ಮಹಿಳೆಯರ ಘನತೆಯನ್ನು ಹೆಚ್ಚಿಸಿದೆ. ಆಯುಷ್ಮಾನ್ ಭಾರತ ಯೋಜನೆ ಮೂಲಕ ಬಡವರಿಗೆ ಆರೋಗ್ಯ ರಕ್ಷೆಯನ್ನೂ ನೀಡಿದೆ. ಬಡವರ ಮನೆಗೆ ಉಚಿತ ಸಿಲಿಂಡರ್ ಸಂಪರ್ಕ ಸೇರಿ ಅನೇಕ ಜನಪರ ಯೋಜನೆಗಳ ವಿವರವನ್ನು ಜನರಿಗೆ ತಿಳಿಸಬೇಕು ಎಂದು ಅವರು ತಿಳಿಸಿದರು. ರಸ್ತೆ, ರೈಲ್ವೆ ಕ್ಷೇತ್ರ ಸೇರಿ ಮೂಲಸೌಕರ್ಯ ಕ್ಷೇತ್ರದಲ್ಲಿ ಆಗಿರುವ ಅಗಾಧ ಪ್ರಮಾಣದ ಪ್ರಗತಿಯನ್ನು ಅವರು ಉಲ್ಲೇಖಿಸಿದರು.

ಕಾಂಗ್ರೆಸ್ ಒಡೆದು ಆಳುವ ಪಕ್ಷ. ಸೇವೆ ಮತ್ತು ಅಭಿವೃದ್ಧಿ, ದೇಶಸೇವೆಗೆ ಬದ್ಧವಾದ ಪಕ್ಷ ನಮ್ಮದು. ಇದನ್ನು ಗಮನದಲ್ಲಿಡಿ. ಹಿಂದಿನ ಸರಕಾರ ಇದ್ದಾಗ ಕ್ಷಯರೋಗ, ಪೋಲಿಯೋ ಸೇರಿದಂತೆ ಹಲವಾರು ಕಾಯಿಲೆಗಳಿಗೆ ಕೂಡಲೇ ಔಷಧಿ ಲಭಿಸಲಿಲ್ಲ. ಆದರೆ, ಮೋದಿಜಿ ಅವರ ಪ್ರೋತ್ಸಾಹ ಮತ್ತು ಉತ್ಸಾಹಪೂರಿತ ಕ್ರಮದಿಂದ ನಾವು ಕೋವಿಡ್ ಗೆ ಕೂಡಲೇ ಲಸಿಕೆ ಕಂಡುಹಿಡಿದೆವು. ಅದನ್ನು ಬೇಗನೆ ಕೊಟ್ಟ ಕಾರಣ ಅದು ರಕ್ಷಾಕವಚವಾಗಿ ಜನರನ್ನು ಕಾಪಾಡಿದೆ ಎಂದು ವಿವರಿಸಿದರು.
100ಕ್ಕೂ ಹೆಚ್ಚು ದೇಶಗಳಿಗೆ ನಾವು ಲಸಿಕೆ ನೀಡಿದ್ದೇವೆ. ಈಗ ಭಾರತವು ಬೇರೆ ದೇಶಗಳಿಗೆ ಲಸಿಕೆ ಮತ್ತಿತರ ಸೌಲಭ್ಯಗಳನ್ನು ಸರಬರಾಜು ಮಾಡುವ ಸಶಕ್ತ ರಾಷ್ಟ್ರವಾಗಿ ಹೊರಹೊಮ್ಮಿದೆ. ಶಿಕ್ಷಣ, ಆರೋಗ್ಯ, ಮೂಲಸೌಕರ್ಯದ ವಿಚಾರದಲ್ಲಿ ಭಾರತವು ಮೋದಿಜಿ ಅವರ ನೇತೃತ್ವದಲ್ಲಿ ಅಭಿವೃದ್ಧಿಯ ಮಹತ್ವದ ಸಾಧನೆ ಮಾಡಿದೆ ಎಂದು ಮೆಚ್ಚುಗೆ ಸೂಚಿಸಿದರು.
ಅಮಿತ್ ಶಾ ಜಿ ಮತ್ತು ನಡ್ಡಾಜಿ ಅವರ ತಂತ್ರಗಾರಿಕೆ ಮೂಲಕ ಬಿಜೆಪಿ ರಾಜ್ಯದಲ್ಲಿ ಗೆಲುವು: ಕಟೀಲ್
ಈ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್ ಅವರು ಮಾತನಾಡಿ, ಬಡವರಿಗೆ ಆಯುಷ್ಮಾನ್ ಯೋಜನೆ ನೀಡುವ ಕಲ್ಪನೆಯನ್ನು ಸಾಕಾರಗೊಳಿಸಿದವರು ನಡ್ಡಾಜಿ ಎಂದು ತಿಳಿಸಿದರು. ಮೋದಿಜಿ, ಅಮಿತ್ ಶಾ ಜಿ ಮತ್ತು ನಡ್ಡಾಜಿ ಅವರ ತಂತ್ರಗಾರಿಕೆ ಮೂಲಕ ಬಿಜೆಪಿ ರಾಜ್ಯದಲ್ಲಿ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇಲ್ಲಿಂದ ವಿಜಯೀ ಯಾತ್ರೆ ಆರಂಭವಾಗಿದೆ. ಬಿಜೆಪಿ ಗೆಲುವಿನ ಓಟವನ್ನು ಮುಂದುವರಿಸಲಿದೆ. ಅಮಿತ್ ಶಾ ಅವರು ಇಲ್ಲಿ ಬಂದಿದ್ದಾಗ ಇದು ವ್ಯಕ್ತವಾಗಿತ್ತು. ಬೂತ್ಗೆ ರಾಷ್ಟ್ರೀಯ ಅಧ್ಯಕ್ಷರು ಬಂದು ಸಂವಾದ ಮಾಡಿದಾಗ ಅದು ಗೆಲುವಿನ ಸಂಕೇತ ಎಂದು ರಾಜಕೀಯ ವಿಶ್ಲೇಷಕರೊಬ್ಬರು ಬರೆದುದನ್ನು ಅವರು ಉಲ್ಲೇಖಿಸಿದರು. ಬಿಜೆಪಿಯ ವತಿಯಿಂದ 50 ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರು ಮತ್ತು ಅಭಿಮಾನಿಗಳ ಮನೆ ಮೇಲೆ ಧ್ವಜ ಹಾರಿಸಲಿದ್ದೇವೆ ಎಂದು ತಿಳಿಸಿದರು.
ಸಂಸದ ಜಿ.ಎಂ.ಸಿದ್ದೇಶ್ವರ್ ಅವರು ಮಾತನಾಡಿ, ಕೋವಿಡ್ ಸಂದರ್ಭದಲ್ಲಿ ಹಲವು ದೇಶಗಳು ದಿವಾಳಿ ಆಗಿವೆ. ಆದರೆ, ನಮ್ಮ ದೇಶವು ಪ್ರಧಾನಿ ನರೇಂದ್ರ ಮೋದಿ ಅವರಿಂದ ಸರ್ವತೋಮುಖ ಅಭಿವೃದ್ಧಿಯತ್ತ ನಡೆದಿದೆ. ಭ್ರಷ್ಟಾಚಾರರಹಿತ ಆಡಳಿತವನ್ನು ಅವರು ನೀಡಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು.
ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಜಿಲ್ಲಾ ಪ್ರಭಾರಿ ನವೀನ್, ರಾಜ್ಯದ ಸಚಿವರು, ರಾಜ್ಯ ಪದಾಧಿಕಾರಿಗಳು, ಪ್ರಮುಖರು, ಜನಪ್ರತಿನಿಧಿಗಳು ಈ ಸಂದರ್ಭದಲ್ಲಿ ಇದ್ದರು.












Click it and Unblock the Notifications