ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆ: ಬೆಂಗಳೂರು ಶಾಸಕರೊಬ್ಬರ ಹೆಸರು ಫೈನಲ್?
ಹಾಲೀ ಕರ್ನಾಟಕ ಬಿಜೆಪಿ ಘಟಕದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಸೇವಾ ಅವಧಿ ಈಗಾಗಲೇ ಮುಗಿದಿದೆ. ಗಣೇಶ ಹಬ್ಬದ ನಂತರ ಅಧ್ಯಕ್ಷ ಹುದ್ದೆಗೆ ಹೆಸರನ್ನು ಪ್ರಕಟಿಸಲಾಗುವುದು ಎನ್ನುವ ಮಾತು ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿದೆ.
ರಾಜ್ಯಾಧ್ಯಕ್ಷ ಹುದ್ದೆಗೆ ಯಾರನ್ನು ಆಯ್ಕೆ ಮಾಡಬೇಕು ಎನ್ನುವ ವಿಚಾರದಲ್ಲಿ ರಾಜ್ಯ ಬಿಜೆಪಿಯಲ್ಲಿ ಗೊಂದಲವಿದೆ. ಇಲ್ಲಿ ಯಡಿಯೂರಪ್ಪನವರ ಆಯ್ಕೆ ಒಂದು, ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರ ಆಯ್ಕೆ ಇನ್ನೊಂದು ಎಂದು ಹೇಳಲಾಗುತ್ತಿದೆ.
ಯಡಿಯೂರಪ್ಪನವರಿಗೆ ಕೇಂದ್ರದಲ್ಲಿ ಉನ್ನತ ಸ್ಥಾನ ಸಿಕ್ಕಿದ ನಂತರ, ಈ ಹಿಂದಿನಂತೆ ಯಡಿಯೂರಪ್ಪನವರ ಮಾತಿಗೆ ವರಿಷ್ಠರು ಮಣೆ ಹಾಕಬಹುದು ಎನ್ನುವ ಮಾತು ಕೇಳಿ ಬರುತ್ತಿದೆ. ಸಿಎಂ ಸ್ಥಾನಕ್ಕೆ ಬಸವರಾಜ ಬೊಮ್ಮಾಯಿಯವರನ್ನು ಸೂಚಿಸಿದ್ದು ಇದೇ ಯಡಿಯೂರಪ್ಪನವರು.
ಹಿಂದುತ್ವ ಪ್ರಯೋಗಶಾಲೆಯಲ್ಲಿ ನಳಿನ್ ಕಟೀಲ್ ಯಾಕೆ ಬೇಡ?
ಹಾಲೀ ಇಂಧನ ಮತ್ತು ಕನ್ನಡ ಸಂಸ್ಕೃತಿ ಇಲಾಖೆಯ ಸಚಿವರಾಗಿರುವ ಸುನೀಲ್ ಕುಮಾರ್, ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮತ್ತು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆಯ ಸಚಿವೆ ಶೋಭಾ ಕರಂದ್ಲಾಜೆ ಹೆಸರು ಮಂಚೂಣಿಯಲ್ಲಿತ್ತು. ಈಗ, ಈ ಮೂವರು ಅಲ್ಲ, ಬೆಂಗಳೂರಿನ ಹಿರಿಯ ಶಾಸಕರು ಅಧ್ಯಕ್ಷ ಹುದ್ದೆಗೆ ಆಯ್ಕೆಯಾಗಲಿದ್ದಾರೆ ಎನ್ನುವ ಮಾತು ಜೋರಾಗಿ ಕೇಳಿ ಬರುತ್ತಿದೆ.
ಜ್ಯಾಟ್ ಸಮುದಾಯದ ಭೂಪೇಂದ್ರ ಸಿಂಗ್ ಚೌಧುರಿ
ಕಳೆದ ವಾರ ಉತ್ತರ ಪ್ರದೇಶ ಮತ್ತು ತ್ರಿಪುರಾ ರಾಜ್ಯದ ಅಧ್ಯಕ್ಷರನ್ನು ಬಿಜೆಪಿ ವರಿಷ್ಠರು ಬದಲಾಯಿಸಿದ್ದರು. ಜ್ಯಾಟ್ ಸಮುದಾಯದ ಭೂಪೇಂದ್ರ ಸಿಂಗ್ ಚೌಧುರಿ ಅವರನ್ನು ಉ.ಪ್ರದೇಶದ ಮತ್ತು ರಾಜೀವ್ ಭಟ್ಟಾಚಾರ್ಯ ಅವರನ್ನು ತ್ರಿಪುರಾ ಘಟಕದ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಇದೇ ವೇಳೆ, ಕರ್ನಾಟಕಕ್ಕೂ ಹೊಸ ಅಧ್ಯಕ್ಷರ ಘೋಷಣೆಯಾಗಲಿದೆ ಎನ್ನುವ ಮಾತು ಕೇಳಿ ಬರುತ್ತಿದೆ. ಈಗ, ಗಣೇಶ ಹಬ್ಬದ ನಂತರ ಹೊಸ ಅಧ್ಯಕ್ಷರ ಹೆಸರು ಪ್ರಕಟವಾಗಲಿದೆ ಎಂದು ಹೇಳಲಾಗುತ್ತಿದೆ.
ಬಿ.ಎಲ್.ಸಂತೋಷ್ ಬಣದ ವಾದ ಎಂದು ಹೇಳಲಾಗುತ್ತಿದೆ
ಚುನಾವಣಾ ವರ್ಷವಾಗಿರುವುದರಿಂದ ನಳಿನ್ ಕಟೀಲ್ ಅವರನ್ನೇ ಮುಂದುವರಿಸಬೇಕು ಎನ್ನುವುದು ಬಿ.ಎಲ್.ಸಂತೋಷ್ ಬಣದ ವಾದ ಎಂದು ಹೇಳಲಾಗುತ್ತಿದೆ. ಜೊತೆಗೆ, ಸಿ.ಟಿ.ರವಿ ನೇಮಕಕ್ಕೆ ಈ ಬಣದ ವಿರೋಧವಿದೆ ಎಂದು ಕೆಲವೊಂದು ಮಾಧ್ಯಮಗಳು ವರದಿ ಮಾಡುತ್ತಿವೆ. ಆದರೆ, ಯಡಿಯೂರಪ್ಪನವರು ಇವರಿಂದ ಹೊರತಾದ ಇಬ್ಬರ ಹೆಸರಿಗೆ ಆಕ್ಷೇಪಣೆ ಸಲ್ಲಿಸುವುದಿಲ್ಲ ಎಂದು ಹೇಳಲಾಗುತ್ತಿದೆ.
ಒಕ್ಕಲಿಗ ಸಮುದಾಯದ ಶೋಭಾ ಕರಂದ್ಲಾಜೆ
ಒಕ್ಕಲಿಗ ಸಮುದಾಯದ ಶೋಭಾ ಕರಂದ್ಲಾಜೆ ಮತ್ತು ಪರಿಶಿಷ್ಟ ಜಾತಿಯ ಅರವಿಂದ ಲಿಂಬಾವಳಿ ಹೆಸರಿಗೆ ಯಡಿಯೂರಪ್ಪನವರ ಸಮ್ಮತಿ ಇರುತ್ತದೆ ಎನ್ನುವ ಮಾತು ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿದೆ. ಈ ಹಿಂದೆ ಸಚಿವರಾಗಿದ್ದ ಲಿಂಬಾವಳಿಗೆ ನಂತರ ಸ್ಥಾನ ಸಿಗದಿದ್ದರೂ ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು. ಜೊತೆಗೆ, ಪ್ರಭಲ ಸಮುದಾಯವನ್ನೂ ಲಿಂಬಾವಳಿ ಪ್ರತಿನಿಧಿಸುತ್ತಿರುವುದರಿಂದ ಅವರನ್ನು ಅಧ್ಯಕ್ಷ ಹುದ್ದೆಗೆ ಆಯ್ಕೆ ಮಾಡಬಹುದು ಎಂದು ಹೇಳಲಾಗುತ್ತಿದೆ.
ಬೆಂಗಳೂರಿನ ಶಾಸಕ ಎನ್ನುವ ಕಾರಣಕ್ಕಾಗಿ ಅರವಿಂದ ಲಿಂಬಾವಳಿ ಆಯ್ಕೆ
ಶೋಭಾ ಕರಂದ್ಲಾಜೆ ಈಗಾಗಲೇ ಸಚಿವರಾಗಿದ್ದಾರೆ, ಸಿ.ಟಿ.ರವಿ ಕೂಡಾ ಬಿಜೆಪಿಯಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಸುಮಾರು 35 ವರ್ಷದಿಂದ ಸಂಘದ ಚಟುವಟಿಕೆಯಲ್ಲಿ ಸಕ್ರಿಯರಾಗಿರುವ ಲಿಂಬಾವಳಿ, ಅದಕ್ಕೂ ಮುನ್ನ ಎಬಿವಿಪಿಯ ಸದಸ್ಯರೂ ಆಗಿದ್ದರು. ಜಾತಿ ಮತ್ತು ಬೆಂಗಳೂರಿನ ಶಾಸಕ ಎನ್ನುವ ಕಾರಣಕ್ಕಾಗಿ ಅರವಿಂದ ಲಿಂಬಾವಳಿ ಆಯ್ಕೆ ಆದರೂ ಆಗಬಹುದು ಎನ್ನುವ ಚರ್ಚೆ ಬಿಜೆಪಿಯಲ್ಲಿ ನಡೆಯುತ್ತಿದೆ.