ಫೆ.18ರಂದು ಮಂಗಳೂರು, ದಾವಣಗೆರೆಯಲ್ಲಿ ಮೋದಿ ಮೋಡಿ
ದಾವಣಗೆರೆ, ಫೆ.17 : ಲೋಕಸಭೆ ಚುನಾವಣೆಗೆ ಪ್ರಚಾರ ನಡೆಸಲು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಮಂಗಳವಾರ ಕರ್ನಾಟಕಕ್ಕೆ ಆಗಮಿಸಲಿದ್ದಾರೆ. ದಾವಣಗೆರೆ ಮತ್ತು ಮಂಗಳೂರಿನಲ್ಲಿ ನರೇಂದ್ರ ಮೋದಿ ಅವರ ಸಮಾವೇಶಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಎರಡೂ ಸಮಾವೇಶದ ಯಶಸ್ಸಿಗೆ ಬಿಜೆಪಿಯೂ ಸಕಲ ರೀತಿಯಲ್ಲಿ ಸಜ್ಜಾಗಿದೆ.
ಬಿಜೆಪಿ ಪ್ರಧಾನಿ ಅಭ್ಯರ್ಥಿಯಾಗಿ ನರೇಂದ್ರ ಮೋದಿ ನೇಮಕಗೊಂಡ ಬಳಿಕ ರಾಜ್ಯದಲ್ಲಿ ನಡೆಯುತ್ತಿರುವ ಎರಡನೇ ಸಮಾವೇಶವಿದಾಗಿದೆ. ಭಾರತ ಗೆಲ್ಲಿಸಿ ಎಂದು ಸಮಾವೇಶಕ್ಕೆ ನಾಮಕರಣ ಮಾಡಲಾಗಿದ್ದು, ಬೆಳಗ್ಗೆ 11 ಗಂಟೆಗೆ ಮತ್ತು ಮಧ್ಯಾಹ್ನ 3 ಗಂಟೆಗೆ ಸಮಾವೇಶಗಳು ನಡೆಯಲಿವೆ.
ದಾವಣಗೆರೆಯ ಹೈಸ್ಕೂಲ್ ಮೈದಾನದಲ್ಲಿ ಬೆಳಗ್ಗೆ 11 ಗಂಟೆಗೆ ಸಮಾವೇಶ ನಡೆಯಲಿದೆ. ನಂತರ ಮಧ್ಯಾಹ್ನ 3 ಗಂಟೆಗೆ ಮಂಗಳೂರಿನ ಬಜಪೆ ವಿಮಾನ ನಿಲ್ದಾಣಕ್ಕೆ ಆಗಮಿಸುವ ಮೋದಿ, ನೆಹರೂ ಮೈದಾನದಲ್ಲಿ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ. [ಮೋದಿ ಸಮಾವೇಶದ ಚಿತ್ರಗಳು]
ನರೇಂದ್ರ ಮೋದಿ ಅವರ ಸಮಾವೇಶದ ಹಿನ್ನಲೆಯಲ್ಲಿ ಗುಜರಾತ್ನಿಂದ ಆಗಮಿಸಿರುವ ಹಿರಿಯ ಪೊಲೀಸ್ ಅಧಿಕಾರಿಗಳು, ಮಂಗಳೂರು ಮತ್ತು ದಾವಣಗೆರೆಯಲ್ಲಿ ಸಮಾವೇಶ ನಡೆಯುವ ವೇದಿಕೆಯನ್ನು ತಮ್ಮ ವಶಕ್ಕೆ ಪಡೆದು ಅಗತ್ಯ ಭದ್ರತಾಕ್ರಮಗಳನ್ನು ಕೈಗೊಂಡಿದ್ದಾರೆ. [ಕಾಂಗ್ರೆಸ್ಸಿಗೆ ರಾಜಕಾರಣ ಎಂದರೆ ವ್ಯಾಪಾರ : ಮೋದಿ]
ಮುಂಜಾಗ್ರತೆ ಕ್ರಮವಾಗಿ ಬಾಂಬ್ ನಿಷ್ಕ್ರಿಯ ದಳ ಸಹ ಅಗತ್ಯ ತಪಾಸಣೆ ಕೈಗೊಂಡಿದ್ದು, ಭದ್ರತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ನಗರದ ಹೊರವಲಯದಲ್ಲಿ ಚೆಕ್ ಪೋಸ್ಟ್ ಗಳನ್ನು ನಿರ್ಮಿಸಲಾಗಿದ್ದು, ನಗರ ಪ್ರವೇಶಿಸುವ ಹಾಗೂ ಹೊರ ಹೋಗುವ ವಾಹನಗಳ ತಪಾಸಣೆ ನಡೆಸಲಾಗುತ್ತಿದೆ.
ಮಂಗಳೂರು ಮತ್ತು ದಾವಣಗೆರೆಯಲ್ಲಿ ಸಮಾವೇಶ ನಡೆಯುವ ಮೈದಾನದ ಸುತ್ತಮುತ್ತ 500 ಮೀಟರ್ ವ್ಯಾಪ್ತಿಯಲ್ಲಿ ಸೋಮವಾರ ಸಂಜೆಯಿಂದಲೇ ಎಲ್ಲ ರೀತಿಯ ವಾಹನಗಳ ನಿಲುಗಡೆ ನಿಷೇಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಇವುಗಳಿಗೆ ನಿಷೇಧ : ಸಮಾವೇಶದಲ್ಲಿ ಭಾಗವಹಿಸುವವರು ಬೆಂಕಿ ಪೊಟ್ಟಣ, ನೀರಿನ ಬಾಟಲಿ, ಲೈಟರ್, ಬ್ಯಾಗ್, ಕ್ಯಾಮರಾ ಇತ್ಯಾದಿ ಯಾವುದೇ ವಸ್ತು, ಆಯುಧಗಳನ್ನು ತರುವುದನ್ನು ನಿಷೇಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಬಾಡಿಗೆ ಮನೆಗಳಿಗೆ ಹೊಸತಾಗಿ ವಾಸ್ತವ್ಯಕ್ಕೆ ಬಂದಿರುವವರ ಮತ್ತು ಶಂಕಿತರ ವಿವರ ಪಡೆಯಲು ಕ್ರಮ ಕೈಗೊಳ್ಳಲಾಗಿದೆ.