ಸಿಎಂ ಸಿದ್ದು ಬಗ್ಗೆ ರಾಜ್ಯಪಾಲರಿಗೆ ದೂರುಕೊಟ್ಟ ಬಿಜೆಪಿ
ಬೆಂಗಳೂರು, ಮೇ 7 : ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಆರೋಪಿಸಿ ಪ್ರತಿಪಕ್ಷ ಬಿಜೆಪಿ ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅವರಿಗೆ ದೂರು ನೀಡಿದೆ. ರಾಜ್ಯ ಸರ್ಕಾರ ಬಸ್ ಏರಿಕೆ ಮಾಡಿರುದನ್ನು ಪತ್ರದಲ್ಲಿ ಪ್ರಸ್ತಾಪಿಸಿರುವ ಬಿಜೆಪಿ, ರಾಜ್ಯ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕೆಂದು ಮನವಿ ಮಾಡಿದೆ.
ಬುಧವಾರ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ, ಮಾಜಿ ಸಿಎಂ ಡಿವಿ ಸದಾನಂದ ಗೌಡ, ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪ, ಆರ್,ಅಶೋಕ್, ಬೆಂಗಳೂರಿನ ಶಾಸಕರು ರಾಜಭವನಕ್ಕೆ ಭೇಟಿ ನೀಡಿ, ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯಗಳ ಕುರಿತು ದೂರು ನೀಡಿದರು.

ರಾಜ್ಯದ ಬರ ಪರಿಸ್ಥಿತಿ, ಬೆಲೆ ಏರಿಕೆ, ಸಚಿವರ ಕಾರ್ಯವೈಖರಿ, ಪ್ರಯಾಣ ದರ ದುಬಾರಿ, ಸಚಿವರ ದುಂದು ವೆಚ್ಚ ಮುಂತಾದವ ವಿಚಾರಗಳ ಕುರಿತು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುತ್ತಿಲ್ಲ. ಸರ್ಕಾರ ಜನಪರ ಆಡಳಿತ ನೀಡಲು ವಿಫಲವಾಗಿದ್ದು, ಸರಿಯಾಗಿ ಆಡಳಿತ ನಡೆಸುವಂತೆ ನಿರ್ದೇಶನ ನೀಡಬೇಕೆಂದು ರಾಜ್ಯಾಪಾಲರಿಗೆ ಮನವಿ ಮಾಡಿದರು. [ಸಿದ್ದರಾಮಯ್ಯ ಕಿವಿ ಹಿಂಡಿದ ರಾಜ್ಯಪಾಲರು]
ರಾಜ್ಯದಲ್ಲಿ ತೀವ್ರವಾದ ಬರ ಪರಿಸ್ಥಿತಿ ಇದ್ದು, ಜನರು ಮತ್ತು ಜಾನುವಾರುಗಳಿಗೆ ಕುಡಿಯುವ ನೀರು ಪೂರೈಕೆಗೆ ಸರ್ಕಾರ ಅಗತ್ಯಕ್ರಮ ಕೈಗೊಂಡಿಲ್ಲ ಎಂದು ಇದರಿಂದ ಜನರಿಗೆ ತೊಂದರೆಯಾಗಿದೆ. ವಿದ್ಯುತ್ ಉತ್ಪಾದನೆ ಹೆಚ್ಚಿದೆ ಎಂದು ಹೇಳುವ ರಾಜ್ಯ ಸರ್ಕಾರ ಅನಿಯಮಿತ ವಿದ್ಯುತ್ ಕಡಿತ ಮಾಡುತ್ತಿದೆ ಎಂದು ಬಿಜೆಪಿ ದೂರಿದೆ.
ರಾಜ್ಯ ಸರ್ಕಾರ ಲೋಕಸಭೆ ಚುನಾವಣೆ ಮುಗಿಯುತ್ತಿದ್ದಂತೆ ಬಿಎಂಟಿಸಿ, ಕೆಎಸ್ಆರ್ ಟಿಸಿ ಬಸ್ ದರವನ್ನು ಏರಿಕೆ ಮಾಡಿ ಜನರ ಮೇಲೆ ಅನಗತ್ಯ ಹೊರೆ ವಿಧಿಸಿದೆ. ಲೋಕೋಪಯೋಗಿ ಸಚಿವರು ದುಬಾರಿ ಹಣ ವೆಚ್ಚ ಮಾಡಿ ತಮ್ಮ ಬಂಗಲೆ ನವೀಕರಣ ಮಾಡಿಸಿದ್ದಾರೆ. ವಿದ್ಯುತ್ ದರ ಏರಿಕೆ ಮಾಡಲು ಸಿದ್ಧತೆ ನಡೆಸುತ್ತಿದೆ ಎಂದು ಬಿಜೆಪಿ ದೂರಿನದಲ್ಲಿ ಹೇಳಿದೆ.[ಕೆಎಸ್ಆರ್ ಟಿಸಿ ದರ ಎಷ್ಟು ಹೆಚ್ಚಾಗಿದೆ]
ರಾಜ್ಯ ಸರ್ಕಾರದಲ್ಲಿ ಸಚಿವರು ಮತ್ತು ಅಧಿಕಾರಗಳ ನಡುವೆ ಸಮನ್ವಯತೆ ಕೊರತೆ ಎದ್ದು ಕಾಣುತ್ತಿದೆ. ಇದು ಆಡಳಿತದ ಮೇಲೆ ಪರಿಣಾಮ ಬೀರಲಿದೆ. ಆದ್ದರಿಂದ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಿ, ಜನಪರವಾದ ಆಡಳಿತ ನೀಡುವಂತೆ ಸೂಚನೆ ನೀಡಬೇಕೆಂದು ಬಿಜೆಪಿ ನಾಯಕರ ನಿಯೋಗ ಮನವಿ ಮಾಡಿದೆ.












Click it and Unblock the Notifications