Breaking; 'ಪೇ ಸಿಎಂ ಅಭಿಯಾನ' ಅರುಣ್ ಸಿಂಗ್ ಗರಂ
ಬೆಂಗಳೂರು, ಅಕ್ಟೋಬರ್ 07; ಕರ್ನಾಟಕ ಬಿಜೆಪಿಯ ಒಂದು ದಿನದ ರಾಜ್ಯ ಕಾರ್ಯಕಾರಿಣಿ ಸಭೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿದೆ. ಸಭೆಯಲ್ಲಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ರಾಜ್ಯ ನಾಯಕರ ವಿರುದ್ಧ ಗರಂ ಆಗಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ವಿವಿಧ ನಾಯಕರು ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಸಭೆಯಲ್ಲಿ ಅರುಣ್ ಸಿಂಗ್ ಕಾಂಗ್ರೆಸ್ ನಡೆಸಿದ 'ಪೇಸಿಎಂ' ಅಭಿಯಾನವನ್ನು ಪ್ರಸ್ತಾಪಿಸಿದ್ದಾರೆ.
ಕಾಂಗ್ರೆಸ್ ಮುಖ್ಯಮಂತ್ರಿಗಳ ಫೋಟೋ ಬಳಕೆ ಮಾಡಿಕೊಂಡು 'ಪೇಸಿಎಂ' ಎಂಬ ಅಭಿಯಾನ ನಡೆಸಿದೆ. ರಾಷ್ಟ್ರಮಟ್ಟದಲ್ಲಿ ಇದು ಸುದ್ದಿಯಾಗಿದೆ. ಇಂತಹ ಅಭಿಯಾನದ ಬಗ್ಗೆ ಮೊದಲೇ ಏಕೆ ಸರ್ಕಾರಕ್ಕೆ ಮಾಹಿತಿ ಸಿಗಲಿಲ್ಲ? ಎಂದು ಅರುಣ್ ಸಿಂಗ್ ಪ್ರಶ್ನಿಸಿದ್ದಾರೆ.

ಅಭಿಯಾನ ಆರಂಭವಾಗುವ ತನಕ ಸರ್ಕಾರ ಏನು ಮಾಡುತ್ತಿತ್ತು. ಗೃಹ, ಗುಪ್ತಚರ ಇಲಾಖೆಗಳಿಗೆ ಮಾಹಿತಿಯೇ ಸಿಗಲಿಲ್ಲವೇ ಎಂದು ಅರುಣ್ ಸಿಂಗ್ ರಾಜ್ಯ ನಾಯಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಪೇಸಿಎಂ ಅಭಿಯಾನ ಆರಂಭಗೊಂಡ ಬಳಿಕ ಬಿಜೆಪಿ ನಾಯಕರು ಸೂಕ್ತ ತಿರುಗೇಟು ನೀಡುವಲ್ಲಿಯೂ ವಿಫಲರಾಗಿದ್ದಾರೆ. ಸರ್ಕಾರದ ಭಾಗವಾಗಿರುವ ಸಚಿವರು ಸಹ ಸೂಕ್ತವಾಗಿ ಪ್ರತಿಕ್ರಿಯೆ ನೀಡಿಲ್ಲ ಎಂದು ರಾಜ್ಯ ಉಸ್ತುವಾರಿ ಸಭೆಯಲ್ಲಿ ಹೇಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಕಾಂಗ್ರೆಸ್ ನಡೆಸಿದ 'ಪೇ ಸಿಎಂ' ಅಭಿಯಾನದ ಬಗ್ಗೆ ದೇಶದಲ್ಲೇ ಚರ್ಚೆ ನಡೆಯುತ್ತಿದೆ. ಪ್ರತಿಪಕ್ಷಗಳ ನಡೆಗಳನ್ನು ತಿಳಿದುಕೊಂಡು ಅದಕ್ಕೆ ಸೂಕ್ತ ರೀತಿಯಲ್ಲಿ ಉತ್ತರ ನೀಡಬೇಕು ಎಂದು ಅರುಣ್ ಸಿಂಗ್ ರಾಜ್ಯ ನಾಯಕರಿಗೆ ಸೂಚಿಸಿದ್ದಾರೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಒಂದು ದಿನದ ಕಾರ್ಯಕಾರಿಣಿ ಸಭೆ ನಡೆಯುತ್ತಿದೆ. ಅರುಣ್ ಸಿಂಗ್, ಬಿ. ಎಸ್. ಯಡಿಯೂರಪ್ಪ ಕೋರ್ ಕಮಿಟಿ ಸದಸ್ಯರು, ಸಚಿವರು, ಶಾಸಕರು ಸಭೆಯಲ್ಲಿ ಪಾಲ್ಗೊಂಡಿದ್ದಾರೆ.












Click it and Unblock the Notifications