ನಾನ್ಯಾಕೆ ಸಿಎಂ ಆಗಬಾರದು: ಬಿಎಸ್ವೈ, ಈಶ್ವರಪ್ಪ ಭಿನ್ನಮತ ಜೋರು
ನಮ್ಮಲ್ಲಿ ಎಲ್ಲಾ ಸರಿಯಿದೆ, ನಾವೆಲ್ಲಾ ಒಂದೇ ಎಂದು ಯಡಿಯೂರಪ್ಪನವರನ್ನು ಭೇಟಿ ಮಾಡುವ ಈಶ್ವರಪ್ಪ ವಾಪಸ್ ಕಾರು ಹತ್ತುವಾಗ ಹೇಳೋದು ಇನ್ನೊಂದು.
ರಾಜ್ಯ ಬಿಜೆಪಿ ಘಟಕದಲ್ಲಿ ಭಿನ್ನಮತವಿರುವುದು ಹೌದು ಎಂದು ಹೇಳುವ ಈಶ್ವರಪ್ಪ, ಮರುದಿನ ಶಿವಮೊಗ್ಗದಲ್ಲಿ ಯಡಿಯೂರಪ್ಪ ಮನೆಯಲ್ಲಿ ಫಲಾಹಾರ ಸೇವಿಸುತ್ತಾರೆ, ಬಿಎಸ್ವೈ ಕುಟುಂಬದ ಜೊತೆ ಆತ್ಮೀಯವಾಗಿ ಬೆರೆಯುತ್ತಾರೆ. ಶಿವಮೊಗ್ಗದ ಪಕ್ಷದ ಕಾರ್ಯಕ್ರಮದಲ್ಲಿ ಈಶ್ವರಪ್ಪ, ಬಿ ವೈ ರಾಘವೇಂದ್ರ ಒಟ್ಟಾಗಿ ಭಾಗವಹಿಸುತ್ತಾರೆ. (ಈಶ್ವರಪ್ಪ ವಿರುದ್ದ ದಲಿತ ಬ್ರಹ್ಮಾಸ್ತ್ರ)
ಇಲ್ಲಿ ಗೊಂದಲವಿರುವುದು ಈಶ್ವರಪ್ಪವರಲ್ಲೋ, ಬಿಜೆಪಿಯಲ್ಲೋ ಎನ್ನುವ ನಿಜವಾದ 'ಗೊಂದಲ'ಕಾಡುವುದು ರಾಜ್ಯ ಬಿಜೆಪಿ ಕಾರ್ಯಕರ್ತರಲ್ಲಿ ಎನ್ನುವ ಸತ್ಯವನ್ನು ರಾಜ್ಯ ಬಿಜೆಪಿ ಮುಖಂಡರು ಅರಿಯಬೇಕಾಗಿದೆ.
ರಾಯಣ್ಣ ಬ್ರಿಗೇಡ್ ಸ್ಥಾಪನೆ ಮಾಡಿರುವ ಉದ್ದೇಶ ಯಡಿಯೂರಪ್ಪನವರನ್ನು ಮತ್ತೆ ಸಿಎಂ ಮಾಡಲೆಂದು ಹೇಳುತ್ತಿದ್ದ ಈಶ್ವರಪ್ಪನವರು ಈಗ ಉಲ್ಟಾ ಹೊಡೆದಿದ್ದಾರೆ. (ಬಿಜೆಪಿ ಸಮಾವೇಶದಲ್ಲಿ ಅಸಮಾಧಾನ)
ಪಕ್ಷ ಬಯಸಿದರೆ ನಾನ್ಯಾಕೆ ಮುಖ್ಯಮಂತ್ರಿಯಾಗಬಾರದು ಎಂದು ಈಶ್ವರಪ್ಪ ಹೇಳುವ ಮೂಲಕ, ತಮ್ಮ ಮತ್ತು ಯಡಿಯೂರಪ್ಪ ನಡುವೆ ಯಾವುದೂ ಸರಿಯಿಲ್ಲ, ಇದ್ದರೂ ಅದು ಬರೀ ತೋರ್ಪಡಿಕೆಗೆ ಎಂದು ಸಾಬೀತು ಮಾಡಿದ್ದಾರೆ. ಮುಂದೆ ಓದಿ..
ಹಿಂದೆಯೂ ಇದ್ದ ಭಿನ್ನಮತ
ಯಡಿಯೂರಪ್ಪ ಮತ್ತು ಈಶ್ವರಪ್ಪ ನಡುವೆ ಭಿನ್ನಮತ ಹಿಂದೆಯೂ ಇತ್ತು. ಇಬ್ಬರ ನಡುವೆ ರಾಜಕೀಯ ಸಂಬಂಧಕ್ಕೆ ತುಪ್ಪ ಸುರಿಯುವಂತಹ ವಿದ್ಯಮಾನಗಳು ಆರಂಭವಾಗಿದ್ದು, ಬಿಎಸ್ವೈ ರಾಜ್ಯಾಧ್ಯಕ್ಷರಾದ ಮೇಲೆ ತಮ್ಮವರನ್ನೇ ಪಕ್ಷದ ಆಯಕಟ್ಟಿನ ಸ್ಥಾನಕ್ಕೆ ನೇಮಿಸಿದ್ದು.
ಸಂಗೊಳ್ಳಿ ರಾಯಣ್ಣ ಬ್ರಿಗೇಡ್
ಈ ಹಿಂದೆ ಕೆಜೆಪಿಯಲ್ಲಿದ್ದಾಗ ತಮ್ಮ ಪರವಾಗಿದ್ದವರಿಗೆ ಬಿಎಸ್ವೈ ಮಣೆಹಾಕುತ್ತಿದ್ದಾರೆ ಎನ್ನುವ ಬೇಸರ ಪಕ್ಷದ ಇತರ ಮುಖಂಡರಲ್ಲಿ ಇರುವುದು ಹೌದಾದರೂ, ಅದನ್ನು ಹೊರಹಾಕಿದವರು ಈಶ್ವರಪ್ಪ. ಅದರ ಫಲವೇ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಕಾನ್ಸೆಪ್ಟ್.
ನಾನ್ಯಾಕೆ ಸಿಎಂ ಆಗಬಾರದು
ನಾನು ಸಂಘ ಪರಿವಾರದ ಸಿನ್ಸಿಯರ್ ಸದಸ್ಯ. ಪಕ್ಷ ನೀಡಿದ ಹಲವಾರು ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದೇನೆ, ಅಧಿಕಾರವನ್ನೂ ಅನುಭವಿಸಿದ್ದೇನೆ. ಪಕ್ಷ ನನ್ನನ್ನು ಮುಖ್ಯಮಂತ್ರಿಯಾಗ ಬೇಕೆಂದು ಸೂಚಿಸಿದರೆ ಆಗುವುದರಲ್ಲಿ ತಪ್ಪೇನಿದೆ - ಈಶ್ವರಪ್ಪ.
ಹೇಳಿಕೆ ಮಾತು ಕೇಳುವುದು ಜಾಸ್ತಿ
ಯಡಿಯೂರಪ್ಪ ಹೇಳಿಕೆಯ ಮಾತನ್ನು ಕೇಳುವುದು ಜಾಸ್ತಿ. ಅವರು ಸಿಎಂ ಆಗಿದ್ದಾಗಲೂ ಇದೇ ಸಮಸ್ಯೆಯಿತ್ತು. ಅವರು ನಮ್ಮ ಪಕ್ಷದ ಪ್ರಶ್ನಾತೀತ ನಾಯಕ, ಇದರಲ್ಲಿ ಯಾವುದೇ ಗೊಂದಲವಿಲ್ಲ. ಅವರು ಆತ್ಮಾವಲೋಕನ ಮಾಡಿಕೊಳ್ಳುವುದು ಯಾವಾಗ ಎನ್ನುವುದು ಈಶ್ವರಪ್ಪನವರ ಪ್ರಶ್ನೆ.
ಶಿವರಾಂ ಬಿಜೆಪಿ ಸೇರ್ಪಡೆ
ಮಾಜಿ ಐಎಎಸ್ ಅಧಿಕಾರಿ ಶಿವರಾಂ, ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾಗುವ ಕಾರ್ಯಕ್ರಮದಲ್ಲಿ ಬಿಜೆಪಿ ಭಿನ್ನಮತ ಮತ್ತೆ ಜಗಜ್ಜಾಹೀರಾಗಿತ್ತು. ಈಶ್ವರಪ್ಪ, ಶೆಟ್ಟರ್ ಮುಂತಾದ ಪ್ರಮುಖರೇ ಸಾರ್ವಜನಿಕ ಸಭೆಯಲ್ಲಿ ಗೈರಾಗಿದ್ದರು.
ಸ್ವಾಗತಿಸಿದರಲ್ಲಿ ನಾನು ಮೊದಲಿಗ
ಕೆಜೆಪಿಯಿಂದ ಹೊರಬಂದು ಬಿಜೆಪಿಗೆ ಯಡಿಯೂರಪ್ಪ ಸೇರಬೇಕೆಂದು ಬಯಸಿದಾಗ ಬಿಎಸ್ವೈ ಪರವಾಗಿ ನಿಂತವರಲ್ಲಿ, ಅವರಲ್ಲಿ ಪಕ್ಷಕ್ಕೆ ಸ್ವಾಗತಿಸಿರುವವರಲ್ಲಿ ನಾನು ಮೊದಲಿಗ. ಅವರ ಜೊತೆ ಕೂತು ಮಾತನಾಡಿ ಗೊಂದಲ ಬಗೆಹರಿಸಿಕೊಳ್ಳುವ ಇರಾದೆಯನ್ನು ಈಶ್ವರಪ್ಪ ವ್ಯಕ್ತ ಪಡಿಸಿದ್ದಾರೆ. ಯಡಿಯೂರಪ್ಪ ಇದಕ್ಕೆ ಯಾವ ರೀತಿ ಸ್ಪಂಧಿಸುತ್ತಾರೋ? ಕಾದು ನೋಡಬೇಕಿದೆ.