ರಾಜಕೀಯ, ವೈಯಕ್ತಿಕ ಸಂಬಂಧ ಬೇರೆ ಬೇರೆ: ಮತ್ತೆ ಋಜುವಾತು ಮಾಡಿದ ಬಿಜೆಪಿ, ಕಾಂಗ್ರೆಸ್ ನಾಯಕರು
ಸದನದ ಒಳಗೆ, ಸಾರ್ವಜನಿಕವಾಗಿ ಕಿತ್ತಾಡಿಕೊಳ್ಳುವ ರಾಜಕೀಯ ಮುಖಂಡರು, ತಮ್ಮ ವಿರೋಧಿಗಳ ಜೊತೆ ಅಷ್ಟೇ ಉತ್ತಮ ಸಂಬಂಧವನ್ನು ಇಟ್ಟುಕೊಂಡಿರುತ್ತಾರೆ ಎನ್ನುವುದಕ್ಕೆ ಹಲವು ಉದಾಹರಣೆಗಳಿವೆ.
ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರು 'ರಾಜಕೀಯವೇ ಬೇರೆ, ವೈಯಕ್ತಿಕ ಸಂಬಂಧಗಳೇ ಬೇರೆ' ಎಂದು ಹಲವು ಬಾರಿ ಅಸೆಂಬ್ಲಿಯಲ್ಲಿ ಹೇಳಿದ್ದುಂಟು. ಸಿಎಂ ಯಡಿಯೂರಪ್ಪ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೂಡಾ ಈ ಬಗ್ಗೆ ಮಾತನಾಡಿದ್ದುಂಟು.
ಒಂದು ಎಂಪಿ ಸೀಟು ಸಾಕು, ಎರಡು ಎಂಎಲ್ಎ ಸೀಟು ಬಿಟ್ಟು ಕೊಡ್ತೀವಿ ಇಟ್ಕೊಳ್ಳಿ !
ಅದೇ ರೀತಿಯ ವಿದ್ಯಮಾನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ದಕ್ಷಿಣ ಕನ್ನಡದ ನಿವಾಸದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮವೊಂದು ಸಾಕ್ಷಿಯಾಗಿದೆ.
ಬಿಜೆಪಿ 'ವಂಶವೃಕ್ಷ' ರಾಜಕಾರಣದ ಫುಲ್ ಲಿಸ್ಟ್ ಕೊಟ್ಟ ಕಾಂಗ್ರೆಸ್
ಈ ಕಾರ್ಯಕ್ರಮದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಮುಖಂಡರು ಪಾಲ್ಗೊಂಡಿದ್ದರು. ಈ ಅದ್ದೂರಿ ಕಾರ್ಯಕ್ರಮದಲ್ಲಿ ಜಿಲ್ಲೆಯ ಮತ್ತು ರಾಜ್ಯದ ಗಣ್ಯಾತೀತ ಗಣ್ಯರು ಭಾಗವಹಿಸಿದ್ದು ವಿಶೇಷವಾಗಿತ್ತು.
ಕಟೀಲ್ ಮನೆಯ ಹದಿಮೂರು ಪರಿವಾರ ದೈವಗಳ ನೇಮೋತ್ಸವ
ನಳಿನ್ ಕಟೀಲ್ ಅವರ ಹುಟ್ಟೂರಾದ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ, ಪಾಲ್ತಾಡಿ, ಕುಂಜಾಡಿ ತರವಾಡು ನಿವಾಸದಲ್ಲಿ ಧರ್ಮ ನೇಮೋತ್ಸವ ಕಾರ್ಯಕ್ರಮ ನಡೆಯುತ್ತಿದೆ. ಸುಮಾರು ಆರು ದಶಕಗಳ ನಂತರ ನಡೆಯುತ್ತಿರುವ ಕಾರ್ಯಕ್ರಮ ಇದಾಗಿದ್ದು, ಪಿಲಿಚಾಮುಂಡಿ, ರಕ್ತೇಶ್ವರಿ ಸೇರಿದಂತೆ ಹದಿಮೂರು ಪರಿವಾರ ದೈವಗಳ ನೇಮೋತ್ಸವ ಕಾರ್ಯಕ್ರಮ ನಡೆಯುತ್ತಿದೆ. ಏಪ್ರಿಲ್ ಆರರಿಂದ ಕಾರ್ಯಕ್ರಮ ಆರಂಭವಾಗಿದ್ದು ಏಪ್ರಿಲ್ 9ಕ್ಕೆ ಸಂಪನ್ನಗೊಳ್ಳಲಿದೆ.
ಸಂಸದ ಬಿ.ವೈ.ರಾಘವೇಂದ್ರ ಸೇರಿದಂತೆ ಹಲವು ಮುಖಂಡರು ಭಾಗಿ
ಈ ಕಾರ್ಯಕ್ರಮದಲ್ಲಿ ದಿನ ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ.ಸುರೇಶ್, ಕಾಂಗ್ರೆಸ್ ನಾಯಕ ಮಿಥುನ್ ರೈ, ಬಿಜೆಪಿಯ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಸಂಸದ ಬಿ.ವೈ.ರಾಘವೇಂದ್ರ, ಸಚಿವರಾದ ಸೋಮಶೇಖರ್, ಪ್ರತಾಪ್ ಸಿಂಹ, ಕೆ.ಎಸ್.ಈಶ್ವರಪ್ಪ, ಶೋಭಾ ಕರಂದ್ಲಾಜೆ ಸೇರಿದಂತೆ ಹಲವು ನಾಯಕರುಗಳು ಭಾಗವಹಿಸಿದ್ದರು.
ಯಡಿಯೂರಪ್ಪನವರ ಜನ್ಮದಿನದ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ
ಈ ಹಿಂದೆ ಯಡಿಯೂರಪ್ಪನವರ ಜನ್ಮದಿನದ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಭಾಗವಹಿಸಿದ್ದರು. ಬೆಂಗಳೂರಿನ ಅರಮನೆ ಮೈದಾನದಲ್ಲಿ ಬಿಎಸ್ವೈ ಅವರ 78ನೇ ಜನ್ಮದಿನದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಆಗಮಿಸುವಂತೆ ಬಿ.ವೈ.ವಿಜಯೇಂದ್ರ ಅವರು ಸಿದ್ದರಾಮಯ್ಯನವರ ನಿವಾಸಕ್ಕೆ ಹೋಗಿ ಆಹ್ವಾನಿಸಿದ್ದರು. ಈ ಕಾರ್ಯಕ್ರಮದಲ್ಲಿ ಸಿಎಂ ಯಡಿಯೂರಪ್ಪನವರು ಬೆಳೆದ ಬಂತ ರೀತಿ ಸೇರಿದಂತೆ ಹಲವು ವಿಚಾರಗಳಲ್ಲಿ ಸಿದ್ದರಾಮಯ್ಯನವರು ಅವರನ್ನು ಹೊಗಳಿದ್ದರು.
Recommended Video
ರಾಜಕೀಯ, ವೈಯಕ್ತಿಕ ಸಂಬಂಧ ಬೇರೆ ಬೇರೆ
ಈ ಹಿಂದೆ ಡಿ.ಕೆ.ಶಿವಕುಮಾರ್, ಜಮೀರ್ ಅಹ್ಮದ್ ಮಗಳ ಮದುವೆ ಕಾರ್ಯಕ್ರಮದಲ್ಲೂ ಯಡಿಯೂರಪ್ಪ, ದೇವೇಗೌಡ್ರು, ಕುಮಾರಸ್ವಾಮಿ ಮುಂತಾದ ಇತರ ಪಕ್ಷದ ನಾಯಕರೂ ಭಾಗವಹಿಸಿದ್ದರು. ಹಾಗಾಗಿ, ಸಾರ್ವಜನಿಕವಾಗಿ ರಾಜಕೀಯ ನಾಯಕರುಗಳು ತಮ್ಮ ವಿರೋಧಿಗಳ ಜೊತೆ ಹೇಗೆ ಇರುತ್ತಾರೋ ಅದು ಒಂದು ಕಡೆ, ಅವರ ನಡುವಿನ ವೈಯಕ್ತಿಕ ಸಂಬಂಧಗಳು ಇನ್ನೊಂದು ಕಡೆ.