ಬೆಳಿಗ್ಗೆ ರೆಸಾರ್ಟ್ ರಾಜಕೀಯಕ್ಕೆ ಛೀ ಎಂದರು, ಸಂಜೆ ತಾವೇ ರೆಸಾರ್ಟ್ಗೆ ಹೋದರು
ಬೆಂಗಳೂರು, ಜನವರಿ 18: ರಾಜ್ಯದಲ್ಲಿ ಮತ್ತೊಮ್ಮೆ ರೆಸಾರ್ಟ್ ರಾಜಕಾರಣ ಪ್ರಾರಂಭವಾಗಿದೆ. ಈ ಬಾರಿ ಇದಕ್ಕೆ ಶ್ರೀಕಾರ ಹಾಕಿದ್ದು ಬಿಜೆಪಿಯಾದರೆ ಕಾಂಗ್ರೆಸ್ ಪಕ್ಷವು ಅದನ್ನು ಮುಂದುವರೆಸುತ್ತಿದೆ.
ಬಿಜೆಪಿಯ ಹಲವು ಶಾಸಕರು ದೂರದ ಹರಿಯಾಣದ ಗುರುಗ್ರಾಮದ ರೆಸಾರ್ಟ್ ಒಂದರಲ್ಲಿ ಬೀಡು ಬಿಟ್ಟಿದ್ದರೆ. ಇತ್ತ ಕಾಂಗ್ರೆಸ್ ಶಾಸಕರು ನಗರದ ಹೊರವಲಯದ ಈಗಲ್ಟನ್ ರೆಸಾರ್ಟ್ಗೆ ತೆರಳಿದ್ದಾರೆ.
ಕಾಂಗ್ರೆಸ್ನ ಹಲವು ಮುಖಂಡರು ಶುಕ್ರವಾರ ಬೆಳಿಗ್ಗೆ ರೆಸಾರ್ಟ್ ರಾಜಕೀಯವನ್ನು ಹೀನಾ-ಮಾನ ಟೀಕಿಸಿದ್ದರು. ಆದರೆ ಸಂಜೆ ತಾವೇ ಮುಂದೆ ನಿಂತು ತಮ್ಮ ಶಾಸಕರನ್ನು ರೆಸಾರ್ಟ್ಗೆ ಕರೆದುಕೊಂಡು ಹೋದರು!
ರಾಜ್ಯದ ಎರಡೂ ಪಕ್ಷಗಳ ರೆಸಾರ್ಟ್ ರಾಜಕೀಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ವಿರೋಧ ಕೇಳಿ ಬರುತ್ತಿದೆ. ಆದರೆ ರಾಜಕಾರಣಿಗಳಿಗೆ ಇದು ತಾಗುವುದಿಲ್ಲ, ಅವರು ರೆಸಾರ್ಟ್ನ ಮೋಜಿನಲ್ಲಿ ಮುಳುಗಿದ್ದಾರೆ.

ರೆಸಾರ್ಟ್ ರಾಜಕಾರಣ ಟೀಕಿಸಿದ್ದ ಸಿದ್ದರಾಮಯ್ಯ
'ಬಿಜೆಪಿ ಶಾಸಕರು ಬರಗಾಲದ ಚರ್ಚೆಗೆ ರೆಸಾರ್ಟ್ಗೆ ಹೋಗಿದ್ದಾರೆಯೇ' ಎಂದು ಕೇಳಿದ್ದ ಸಿದ್ದರಾಮಯ್ಯ ಅವರೇ ಇಂದು ತಮ್ಮ ಶಾಸಕರು ರೆಸಾರ್ಟ್ಗೆ ಹೋಗುತ್ತಿರುವುದನ್ನು ಮಾಧ್ಯಮಗಳಿಗೆ ಹೇಳಿದರು. ಬಿಜೆಪಿಯ ರೆಸಾರ್ಟ್ ರಾಜಕೀಯವನ್ನು ಟೀಕಿಸಿದ್ದ ಕೆಲವೇ ಗಂಟೆಗಳಲ್ಲಿ ಸಿದ್ದರಾಮಯ್ಯ ಸಹ ರೆಸಾರ್ಟ್ ಒಳಗೆ ಆರಾಮ ಕುರ್ಚಿಯಲ್ಲಿ ಕೂತರು.

ಬಿಜೆಪಿ ರೆಸಾರ್ಟ್ ರಾಜಕೀಯದ ಬಗ್ಗೆ ಟ್ವೀಟ್ ಮಾಡಿದ್ದ ಕಾಂಗ್ರೆಸ್
ರೆಸಾರ್ಟ್ನಲ್ಲಿ ಮೋಜು ಮಾಡಿದ್ದು ಸಾಕು, ಬಂದು ಕ್ಷೇತ್ರದ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಎಂದು ಕರ್ನಾಟಕ ಕಾಂಗ್ರೆಸ್ ಒಂದು ದಿನದ ಹಿಂದಷ್ಟೆ ಟ್ವೀಟ್ ಮಾಡಿತ್ತು. ಈಗ ಅದರ ಶಾಸಕರೇ ರೆಸಾರ್ಟ್ನಲ್ಲಿದ್ದಾರೆ! ಬಿಜೆಪಿಯಾದರೂ ವಿರೋಧ ಪಕ್ಷ ಆದರೆ ಕಾಂಗ್ರೆಸ್ ಆಡಳೀತದಲ್ಲಿ ಭಾಗಿದಾರ ಪಕ್ಷ ಅದಕ್ಕೆ ಬಿಜೆಪಿಗಿಂತಲೂ ಹೆಚ್ಚಿನ ಜವಾಬ್ದಾರಿ ಇದೆ, ಆದರೆ ಅದನ್ನು ಮರೆತಂತೆ ಕಾಣುತ್ತಿದೆ.

ಮತ್ತೊಮ್ಮೆ ಹೀನ ರೆಸಾರ್ಟ್ ರಾಜಕಾರಣ
ರಾಜ್ಯದಲ್ಲಿ ಮತ್ತೊಮ್ಮೆ ಹೀನ ರೆಸಾರ್ಟ್ ರಾಜಕಾರಣ ಶುರುವಾಗಿದೆ. ಮತ ಹಾಕಿದ ಜನರು ತಮ್ಮ ಎಂದಿನ ಸಮಸ್ಯೆಗಳ ನಡುವೆ ಒದ್ದಾಡುತ್ತಿದ್ದಾರೆ. ಮತ ಹಾಕಿಸಿಕೊಂಡು ಆಯ್ಕೆಯಾದ ಶಾಸಕರು ರೆಸಾರ್ಟ್ನಲ್ಲಿ ಕೂತು ರಾಜಕೀಯ ಹಿತಾಸಕ್ತಿಗಾಗಿ ಮತದಾರನ ಅನಾಥರನ್ನಾಗಿಸಿದ್ದಾರೆ.

ರಾಜಕೀಯ ಪಕ್ಷಗಳ ಅವಕಾಶವಾದಿತನ ಬತ್ತಲು
ರಾಜ್ಯದಲ್ಲಿ ನಡೆಯುತ್ತಿರುವ ರೆಸಾರ್ಟ್ ರಾಜಕೀಯವು ಪಕ್ಷಗಳ ಅವಕಾಶವಾದಿತನವನ್ನು ಮತ್ತೊಮ್ಮೆ ಜನಗಳ ಮುಂದೆ ಬತ್ತಲು ಮಾಡಿದೆ. ಬಿಜೆಪಿ ರೆಸಾರ್ಟ್ಗೆ ಹೋಗಿದ್ದಾಗ ಟೀಕಿಸಿದ್ದ ಕಾಂಗ್ರೆಸ್, ಈಗ ರೆಸಾರ್ಟ್ನಲ್ಲಿದೆ. ಕಾಂಗ್ರೆಸ್ ರೆಸಾರ್ಟ್ಗೆ ಹೋಗಿದ್ದನ್ನು ಬಿಜೆಪಿ ಟೀಕಿಸುತ್ತಿದೆ. ಎರಡರ ತಟ್ಟೆಯಲ್ಲೂ ಗೊಬ್ಬರವಿದ್ದರೂ ಇನ್ನೊಬ್ಬರನ್ನು ಟೀಕಿಸುತ್ತಾ ಪರಸ್ಪರ ಸಮಾನ ಹೀನರೆಂದು ಪಕ್ಷಗಳು ತೋರಿಸಿಕೊಳ್ಳುತ್ತಿವೆ.












Click it and Unblock the Notifications