ಗೌರಿ ಹತ್ಯೆ: ಆರೋಪಿಗಳು ಬಳಸಿದ್ದ ಬೈಕ್ ಪತ್ತೆ, ಪಿಸ್ತೂಲಿಗಾಗಿ ಹುಡುಕಾಟ
ಬೆಂಗಳೂರು, ಆಗಸ್ಟ್ 07: ಗೌರಿ ಹತ್ಯೆ ತನಿಖೆಯಲ್ಲಿ ಪ್ರಮುಖ ಸಾಕ್ಷ್ಯವನ್ನು ಎಸ್ಐಟಿ ಪೊಲೀಸರು ಕಲೆ ಹಾಕಿದ್ದು, ಆರೋಪಿಗಳು ಬಳಸಿದ್ದ ಬೈಕ್ ಅನ್ನು ಎಸ್ಐಟಿ ವಶಪಡಿಸಿಕೊಂಡಿದೆ.
ಗೌರಿ ಹತ್ಯೆ ಪ್ರಕರಣದಲ್ಲಿ ಕುಣಿಗಲ್ನಲ್ಲಿ ಬಂಧಿತನಾದ ಸುರೇಶ್ ಎಂಬಾತನಿಗೆ ಸೇರಿದ್ದ ಬೈಕ್ ಇದಾಗಿದ್ದು, ಗೌರಿ ಲಂಕೇಶ್ ಹತ್ಯೆ ಆರೋಪಿಗಳು ಇದೇ ಹಿರೋ ಹೊಂಡಾ ಬೈಕಿನಲ್ಲಿ ಗೌರಿ ಅವರ ಮನೆ ಬಳಿ ಸುತ್ತಾಡಿ ಯೋಜನೆಗಳನ್ನು ರೂಪಿಸಿದ್ದರು. ಬೈಕ್ನ ನಂಬರ್ ಪ್ಲೇಟ್ ಅನ್ನು ಸುರೇಶ್ ಸುಟ್ಟು ಹಾಕಿದ್ದಾನೆ ಎಂದು ಎಸ್ಐಟಿ ಆರೋಪಿಸಿದೆ.
ಸುರೇಶ್ ತನ್ನ ಮನೆಯಲ್ಲೇ ಮೂವರು ಆರೋಪಿಗಳಿಗೆ ಇರಲು ಅವಕಾಶ ಮಾಡಿಕೊಟ್ಟಿದ್ದ ಅಲ್ಲದೆ ಆತನಿಗೆ ಸಾಕ್ಷ್ಯನಾಶ ಮಾಡುವ ಜವಾಬ್ದಾರಿಯನ್ನು ಹಂತಕ ತಂಡದ ಮುಖ್ಯಸ್ಥ ನೀಡಿದ್ದ ಹಾಗಾಗಿ, ಆತ ಬೈಕಿನ ನಂಬರ್ ಪ್ಲೇಟ್, ಹತ್ಯೆ ದಿನ ಪರಶುರಾಮ್ ವಾಘ್ಮೋರೆ ಹಾಗೂ ಬೈಕ್ ಚಾಲಕ ಧರಿಸಿದ್ದ ಬಟ್ಟೆ, ಹೆಲ್ಮೆಟ್ ಎಲ್ಲವನ್ನೂ ನಿರ್ಜನ ಪ್ರದೇಶಕ್ಕೆ ಕೊಂಡು ಹೋಗಿ ಸುಟ್ಟು ಹಾಕಿದ್ದ.

ಆದರೆ ಹತ್ಯೆಗೆ ಬಳಸಿದ್ದ ಪಿಸ್ತೂಲು ಇನ್ನೂ ಪತ್ತೆಯಾಗದಿರುವುದು ಎಸ್ಐಟಿಗೆ ಅಲ್ಪ ಹಿನ್ನಡೆ ಮಾಡಿದೆ. ಪಿಸ್ತೂಲಿನ ಕುರಿತು ತನಿಖೆ ಜಾರಿಯಲ್ಲಿದ್ದು, ಆದಷ್ಟು ಶೀಘ್ರವಾಗಿ ಅದನ್ನೂ ಪತ್ತೆ ಹಚ್ಚಲಾಗುವುದು ಎಂದು ಎಸ್ಐಟಿ ಹೇಳಿದೆ. ಈಗ ಪತ್ತೆಯಾಗಿರುವ ಬೈಕ್ ಕೊಲೆಯ ದಿನ ಬಳಸಿದ್ದಲ್ಲ ಬದಲಿಗೆ, ಕೊಲೆಗೆ ಮುಂಚೆ ಗೌರಿ ಅವರ ಮನೆ ನೋಡಲು, ಹಾಗೂ ಅಲ್ಲಿಂದ ತಪ್ಪಿಸಿಕೊಳ್ಳಲು ದಾರಿಗಳನ್ನು ಹುಡುಕಿದ್ದು. ಕೊಲೆಯ ದಿನ ಬಳಸಿದ್ದ ಬೈಕ್ ಅನ್ನು ಪತ್ತೆ ಮಾಡಬೇಕಿದೆ.
ಆರೋಪಿ ಸುರೇಶ್ನನ್ನು ಈ ಮೊದಲು ವಿಚಾರಿಸಿದಾಗ ಮೂರು ಜನ ನಮ್ಮ ಮನೆಯಲ್ಲಿ ಬಾಡಿಗೆಗೆ ಇದ್ದರು ಆ ನಂತರ ಅವರು ಮನೆ ಖಾಲಿ ಮಾಡಿ ಹೋದರು ಎಂದು ಹೇಳಿದ್ದ ಹಾಗಾಗಿ ಆತನನ್ನು ಎಸ್ಐಟಿಯು ಸಾಕ್ಷವಾಗಿ ಪರಿಗಣಿಸಿತ್ತು. ಆದರೆ ಹುಬ್ಬಳ್ಳಿಯಲ್ಲಿ ಗಣೇಶ್ ವಿಸ್ಕಿನ್ ಮತ್ತು ಅಮಿತ್ ಬದ್ದಿ ವಶವಾದ ನಂತರ ಸುರೇಶ್ ಕೂಡ ಕೃತ್ಯದಲ್ಲಿ ಶಾಮೀಲಾಗಿರುವುದು ಬೆಳಕಿಗೆ ಬಂದಿದೆ.












Click it and Unblock the Notifications