ಭಟ್ಕಳ: ಅಲೆಗಳ ಹೊಡೆತಕ್ಕೆ ಬೋಟು ಮುಳುಗಡೆ
ಮೀನುಗಾರಿಕೆ ನಡೆಸಿ ರಾತ್ರಿ ವೇಳೆ ಹಿಂತಿರುಗಿ ಬರುತ್ತಿದ್ದ ಎರಡು ಮೀನುಗಾರಿಕಾ ಬೋಟುಗಳು ಮುಳುಗಡೆಯಾದ ಘಟನೆ ಭಟ್ಕಳ ಸಮೀಪದ ತೆಂಗಿನಗುಂಡಿಯಲ್ಲಿ ನಡೆದಿದೆ. ಸಮುದ್ರ ತಟದಲ್ಲಿರುವ ಹೂಳಿಗೆ ಸಿಲುಕಿ ಬೋಟುಗಳು ಮುಳುಗಡೆಯಾಗಿವೆ ಎನ್ನಲಾಗಿದೆ.
ಭಟ್ಕಳ, ಫೆಬ್ರವರಿ 9: ಮೀನುಗಾರಿಕೆ ನಡೆಸಿ ರಾತ್ರಿ ವೇಳೆ ಹಿಂತಿರುಗಿ ಬರುತ್ತಿದ್ದ ಎರಡು ಮೀನುಗಾರಿಕಾ ಬೋಟುಗಳು ಮುಳುಗಡೆಯಾದ ಘಟನೆ ಭಟ್ಕಳ ಸಮೀಪದ ತೆಂಗಿನಗುಂಡಿಯಲ್ಲಿ ನಡೆದಿದೆ. ಸಮುದ್ರ ತಟದಲ್ಲಿರುವ ಹೂಳಿಗೆ ಸಿಲುಕಿ ಬೋಟುಗಳು ಮುಳುಗಡೆಯಾಗಿವೆ ಎನ್ನಲಾಗಿದೆ. ಬೋಟಿನಲ್ಲಿದ್ದ 8 ಮೀನುಗಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಆಳ್ವೆಕೊಡಿಯ ಯಶವಂಶ ಮಾಸ್ತಿ ಮೋಗರ್ ಹಾಗೂ ಲಕ್ಷ್ಮಣ ಶನಿಯಾರ ಮೊಗೇರ್ ರಿಗೆ ಸೇರಿದ ದುರ್ಗಗೌರಿ ಹಾಗೂ ಧನಲಕ್ಷ್ಮಿ ಎಂಬ ಎರಡು ಬೋಟುಗಳು ಆಳ್ವೆಕೋಡಿಯಿಂದ ಮೀನುಗಾರಿಕೆಗೆ ತೆರಳಿದ್ದವು. ಮೀನುಗಾರಿಕೆ ನಡೆಸಿ ರಾತ್ರಿ ಹೊತ್ತು ಹಿಂತಿರುಗುವಾಗ ತೆಂಗಿನ ಗುಂಡಿ ಸಮುದ್ರ ತಟದ ಬಳಿ ಅಲೆಗಳಿಗೆ ಸಿಲುಕಿ ಈ ಬೋಟುಗಳು ಸಮುದ್ರ ಪಾಲಾಗಿವೆ. ಬೋಟಿನಲ್ಲಿದ್ದ 8 ಜನ ಮೀನುಗಾರರನ್ನು ಸ್ಥಳೀಯರು ರಕ್ಷಿಸಿದ್ದಾರೆ.[ನೇತ್ರಾವತಿ ನದಿಗೆ ಸಮುದ್ರದೊಳಗೆ ಅಣೆಕಟ್ಟು: ಐ.ಐ.ಎಸ್.ಸಿಯಿಂದ ನೂತನ ಯೋಜನೆ]
ಜಖಂಗೊಂಡು ಬೋಟನ್ನೂ ದಡಕ್ಕೆ ತರಲಾಗಿದೆ. ಒಟ್ಟು 30ಲಕ್ಷಕ್ಕೂ ಹೆಚ್ಚು ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ತೆಂಗಿನಗುಂಡಿ ಸಮುದ್ರ ಕಿನಾರೆಯಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಹೂಳು ತುಂಬಿರುವುದರಿಂದ ಇಲ್ಲಿ ಭಾರೀ ಎತ್ತರದ ಲೆಗಳು ಏಳುತ್ತಿವೆ. ಇವೇ ದುರಂತಕ್ಕೆ ಕಾರಣ ಎನ್ನಲಾಗಿದೆ.[ಮಂಗಳೂರು: ತಲಪಾಡಿ ಟೋಲ್ ಗೇಟ್ ವಿರುದ್ಧ ರೊಚ್ಚಿಗೆದ್ದ ಜನ]
ತೆಂಗಿನಗುಂಡಿ ಕಡಲ ಕಿನಾರೆ ಮೀನುಗಾರರ ಪಾಲಿಗೆ ಜೀವನ್ಮರಣದ ಸಮಸ್ಯೆಯಾಗಿ ಕಾಡುತ್ತಿದೆ. ಈ ಬಗ್ಗೆ ಸಾಕಷ್ಟು ಮನವಿ ಬೇಡಿಕೆಗಳನ್ನು ಸಲ್ಲಿಸಿದರೂ ಸಂಬಂಧಪಟ್ಟ ಇಲಾಖೆ ಮಾತ್ರ ಮೌನವಾಗಿದೆ ಎಂದು ಮೀನುಗಾರರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಭಟ್ಕಳ ಗ್ರಾಮೀಣ ಠಾಣಾ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.