ಅತ್ತ ಭಾರತ್ ಜೋಡೋ, ಇತ್ತ ಕಾಂಗ್ರೆಸ್ಸಿನಲ್ಲಿ ಡಿಕೆಶಿ ತೋಡೋ
ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯವರ ಮಹತ್ವಾಕಾಂಕ್ಷೆಯ ಭಾರತ್ ಜೋಡೋ ಯಾತ್ರೆ ಕನ್ಯಾಕುಮಾರಿಯಿಂದ ಸೆಪ್ಟಂಬರ್ 6ರಂದು ಆರಂಭವಾಗಿದ್ದು, ಸದ್ಯ ಈಗ ಕೇರಳದ ಮೂಲಕ ಸಾಗಿ ಬರುತ್ತಿದೆ.
ರಾಜ್ಯದ ಚಾಮರಾಜನಗರ, ಮೈಸೂರು, ಮಂಡ್ಯ, ತುಮಕೂರು, ಚಿತ್ರದುರ್ಗ, ಬಳ್ಳಾರಿ ಮತ್ತು ರಾಯಚೂರು ಭಾಗದಲ್ಲಿ ಯಾತ್ರೆ ಸಾಗಿ ಬರಲಿದೆ. ಈಗಿನ ವೇಳಾಪಟ್ಟಿಯ ಪ್ರಕಾರ ಸೆಪ್ಟಂಬರ್ 30ರಂದು ಯಾತ್ರೆ ರಾಜ್ಯ ಪ್ರವೇಶಿಸಲಿದೆ. 511 ಕಿ. ಮೀ. ದೂರವನ್ನು 21ದಿನಗಳಲ್ಲಿ ಕ್ರಮಿಸುವ ಯೋಜನೆಯನ್ನು ಎಐಸಿಸಿ ಹಾಕಿಕೊಂಡಿದೆ.
ಭಾರತ್ ಜೋಡೋ ಯಾತ್ರೆಗೆ ಇದುವರೆಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಆದರೆ, ಕರ್ನಾಟಕದಲ್ಲಿ ಯಾತ್ರೆಯ ಯಶಸ್ಸಿನ ವಿಚಾರದಲ್ಲಿ ಅನುಮಾನ ಮೂಡುವಂತೆ ಮಾಡಿದೆ. ಇದಕ್ಕೆ ಕಾರಣ ರಾಜ್ಯದ ಇಬ್ಬರು ಪ್ರಮುಖ ನಾಯಕರುಗಳ ನಡುವಿನ ಶೀತಲ ಸಮರ ಎಂದು ವ್ಯಾಖ್ಯಾನಿಸಲಾಗುತ್ತಿದೆ.
ದಿನವೊಂದಕ್ಕೆ 21 ಕಿ. ಮೀ. ಪಾದಯಾತ್ರೆ ನಡೆಯಲಿದ್ದು, ಬಳ್ಳಾರಿಯಲ್ಲಿ ಬಹಿರಂಗ ಸಭೆಯನ್ನು ಆಯೋಜಿಸಲಾಗಿದೆ. ಈ ಸಭೆಗೆ 1 ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆಯಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಹೇಳಿದ್ದಾರೆ.

ಭಾರತ್ ಜೋಡೋ ಯಾತ್ರೆಗೆ ಇದುವರೆಗೆ ಉತ್ತಮ ಪ್ರತಿಕ್ರಿಯೆ
ಕೆಪಿಸಿಸಿ ಅಧ್ಯಕ್ಷರು ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನಡುವೆ ಮನಸ್ತಾಪ ಇಲ್ಲ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದರೂ, ಅದು ಹಲವು ಬಾರಿ ಬಹಿರಂಗವಾಗಿದೆ. ಭಾರತ್ ಜೋಡೋ ಯಾತ್ರೆಯ ಸಂಬಂಧ ಇಬ್ಬರ ನಡುವೆ ಅಷ್ಟಕಷ್ಟೇ ಎನ್ನುವುದಕ್ಕೆ 'ಆ ಸಭೆಗೆ ನನ್ನನ್ನು ಕರೆಯಲಿಲ್ಲ, ನಾನ್ಯಾಕೆ ಹೋಗಬೇಕು'ಎನ್ನುವ ಸಿದ್ದರಾಮಯ್ಯನವರ ಬಹಿರಂಗ ಹೇಳಿಕೆಯನ್ನು ಉದಾಹರಣೆಯನ್ನಾಗಿ ತೆಗೆದುಕೊಳ್ಳಬಹುದಾಗಿದೆ.

ಪರೋಕ್ಷವಾಗಿ ಸಭೆಯಲ್ಲೇ ಅಸಮಾಧಾನ
"ಸ್ವಾತಂತ್ರ್ಯೋತ್ಸವದ ನಡಿಗೆಗೆ ಕೆಲವರು ಬಂದರು, ಮುಖ ತೋರಿಸಿ ಹೋದರು. ಅದು ನನಗೂ ಗೊತ್ತಿದೆ, ಎಐಸಿಸಿಗೂ ಗೊತ್ತಿದೆ"ಎಂದು ಭಾರತ್ ಜೋಡೋ ಕಾರ್ಯಕ್ರಮದ ರೂಪುರೇಷೆಯ ಪೂರ್ವಭಾವಿ ಸಭೆಯಲ್ಲಿ ಡಿ. ಕೆ. ಶಿವಕುಮಾರ್ ಬಹಿರಂಗವಾಗಿಯೇ ತಮ್ಮ ನಾಯಕರ ವಿರುದ್ದ ಅಸಮಾಧಾನ ಹೊರ ಹಾಕಿದ್ದರು. ಇನ್ನು, ಸಿದ್ದರಾಮೋತ್ಸವ ಕಾರ್ಯಕ್ರಮದ ಗೌರವ ಅಧ್ಯಕ್ಷರಾಗಿದ್ದ ಆರ್. ವಿ. ದೇಶಪಾಂಡೆ ವಿರುದ್ದ ಪರೋಕ್ಷವಾಗಿ ಸಭೆಯಲ್ಲೇ ಅಸಮಾಧಾನ ಹೊರಹಾಕಿದರು.

ಶಿವಕುಮಾರ್ ಬಹಳ ಸ್ಪೀಡ್ ನಲ್ಲಿದ್ದಾರೆ
"ನನ್ನ ಜೊತೆ ಬರುವವರು ನನ್ನ ವೇಗಕ್ಕೆ ಸಾಥ್ ನೀಡಬೇಕು, ಆದರೆ ಯಾರೂ ಸಾಥ್ ನೀಡುತ್ತಿಲ್ಲ" ಎನ್ನುವ ಡಿಕೆಶಿ ಹೇಳಿಕೆಗೆ ಸಿದ್ದರಾಮಯ್ಯನವರ ಬಣದಲ್ಲಿ ಗುರುತಿಸಿಕೊಂಡಿರುವ ದೇಶಪಾಂಡೆ ತಿರುಗೇಟು ನೀಡಿದ್ದಾರೆ. "ಹೌದು, ಬಿಡಿ ಡಿ. ಕೆ. ಶಿವಕುಮಾರ್ ಬಹಳ ಸ್ಪೀಡ್ ನಲ್ಲಿದ್ದಾರೆ. ನಾನೂ ಕೂಡಾ ಕಾಂಗ್ರೆಸ್ಸಿನಲ್ಲಿ ವಿದ್ಯಾರ್ಥಿ ನಾಯಕನಾಗಿ ಕೆಲಸ ಮಾಡಿಕೊಂಡು, ರಾಜ್ಯಾಧ್ಯಕ್ಷನಾಗಿಯೂ ಕೆಲಸ ನಿರ್ವಹಿಸಿರುವ ಅನುಭವವಿದೆ"ಎಂದು ದೇಶಪಾಂಡೆ ಮಾಧ್ಯಮದ ಮೂಲಕ ತಿರುಗೇಟು ನೀಡಿದರು.

ಕೆಪಿಸಿಸಿ ಜೋಡೋ ಎಂದು ಬಿಜೆಪಿಯವರಿಗೆ ಗೇಲಿ ಮಾಡಲು ಅಸ್ತ್ರ
ಭಾರತ್ ಜೋಡೋ ಸಂಬಂಧ ನಡೆದ ಕಾರ್ಯಕ್ರಮದಲ್ಲಿ ಡಿ. ಕೆ. ಶಿವಕುಮಾರ್ ಅತ್ಯಂತ ಸ್ಪಷ್ಟವಾಗಿ ಸಹಕಾರ ನೀಡದ ಮುಖಂಡರ ವಿರುದ್ದ ಕಿಡಿಕಾರಿದ್ದರು. ಇದಕ್ಕೆ, ಸಿದ್ದರಾಮಯ್ಯ ಬಣ ಕೂಡಾ ತಿರುಗೇಟು ನೀಡಿತ್ತು. ಹಾಗಾಗಿ, ರಾಹುಲ್ ಗಾಂಧಿಯವರ ಯಾತ್ರೆ ರಾಜ್ಯಕ್ಕೆ ಪ್ರವೇಶಿಸಲು ಇನ್ನೂ ಹತ್ತನ್ನೆರಡು ದಿನವಿರುವಾಗ ರಾಜ್ಯ ಕಾಂಗ್ರೆಸ್ಸಿನ ಭಿನ್ನಮತ ಜೋರಾಗುತ್ತಿದೆ. ಇದು, ಮೊದಲು ಕೆಪಿಸಿಸಿ ಜೋಡೋ ಎಂದು ಬಿಜೆಪಿಯವರಿಗೆ ಗೇಲಿ ಮಾಡಲು ಅಸ್ತ್ರ ಸಿಕ್ಕಂತಾಗಿದೆ.











Click it and Unblock the Notifications