ಭಾರತ್ ಜೋಡೋ, ಪ್ರಜಾಧ್ವನಿ ಯಾತ್ರೆ ಸಂಪೂರ್ಣ ವಿಫಲ: ಅರುಣ್ ಸಿಂಗ್
ಪ್ರಜಾಧ್ವನಿ ಯಾತ್ರೆಯಲ್ಲೂ ಕುರ್ಚಿಗಳು ಖಾಲಿ ಇವೆ. ಡಿ.ಕೆ.ಶಿವಕುಮಾರ್- ಸಿದ್ದರಾಮಯ್ಯ ನಡುವೆ ಜಗಳ ಮುಂದುವರಿದಿದ್ದು, ಜನರ ವಿಶ್ವಾಸವನ್ನು ಕಾಂಗ್ರೆಸ್ ಕಳೆದುಕೊಂಡಿದೆ ಎಂದು ಅರುಣ್ ಸಿಂಗ್ ಹೇಳಿದರು.
ಗದಗ,ಜನವರಿ27: ಕಾಂಗ್ರೆಸ್ ಪಕ್ಷದ ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆ ಸಂಪೂರ್ಣ ವಿಫಲವಾಗಿದೆ. ನಕ್ಸಲೈಟ್ಗಳು, ವಿಭಜನವಾದಿಗಳು, ಗಡಿ ಸಮಸ್ಯೆಗಳಿಗೆ ಮತ್ತು ದೇಶ ವಿಭಜಿಸುವ ಶಕ್ತಿಗಳನ್ನು ಕಾಂಗ್ರೆಸ್ ಬೆಂಬಲಿಸಿತ್ತು ಎಂದು ಜನರಿಗೆ ತಿಳಿದಿತ್ತು. ಆದ್ದರಿಂದ ಈ ಯಾತ್ರೆಗೆ ಜನ ಸಮರ್ಥನೆ ಸಿಕ್ಕಿಲ್ಲ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರು ತಿಳಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವು ತುಷ್ಟೀಕರಣದ ರಾಜಕೀಯ ಮಾಡುತ್ತದೆ. ದಿಗ್ವಿಜಯ್ ಸಿಂಗ್ ಮತ್ತು ಕಂಪೆನಿಯು ಸರ್ಜಿಕಲ್ ಸ್ಟ್ರೈಕ್ಗೆ ಸಾಕ್ಷಿ ಕೇಳುತ್ತಾರೆ. ದೇಶದ ಏಕತೆ, ಅಖಂಡತೆ ಕುರಿತು ಕಾಂಗ್ರೆಸ್ ಎಂದೂ ಚಿಂತಿಸಿಲ್ಲ. ನೆಹರೂ ಆಡಳಿತದಲ್ಲಿದ್ದಾಗ ಕಾಶ್ಮೀರದಲ್ಲಿ ಪ್ರತ್ಯೇಕ ಧ್ವಜ, ವಿಶೇಷ ಸ್ಥಾನಮಾನಕ್ಕೆ ಒಪ್ಪಂದ ಆಗಿತ್ತು. ಮೋದಿಜಿ ಅವರು 370ನೇ ವಿಧಿಯನ್ನು ರದ್ದುಪಡಿಸಿದರು. ಬಿಜೆಪಿ ದೇಶದ ಏಕತೆ, ಅಖಂಡತೆಗಾಗಿ ಶ್ರಮಿಸುತ್ತಿದೆ ಎಂದು ಹೇಳಿದರು.
ಪತ್ರಿಕೆಗಳ ಜಾತಿ ಮೂಲ ಹುಡುಕಿ ಬಿಜೆಪಿ ಸರ್ಕಾರದ ಜಾಹೀರಾತು; ಪ್ರಿಯಾಂಕ್ ಖರ್ಗೆ ಹೀಗೆ ಹೇಳಿದ್ದು ಯಾಕೆ?
ಪ್ರಜಾಧ್ವನಿ ಯಾತ್ರೆಯಲ್ಲೂ ಕುರ್ಚಿಗಳು ಖಾಲಿ ಇವೆ. ಡಿ.ಕೆ.ಶಿವಕುಮಾರ್- ಸಿದ್ದರಾಮಯ್ಯ ನಡುವೆ ಜಗಳ ಮುಂದುವರಿದಿದೆ. ಇಬ್ಬರೂ ಸಿಎಂ ಹುದ್ದೆಯ ಸ್ಪರ್ಧೆಯಲ್ಲಿದ್ದಾರೆ. ಇದರಿಂದ ಜನರ ವಿಶ್ವಾಸವನ್ನು ಕಾಂಗ್ರೆಸ್ ಕಳೆದುಕೊಂಡಿದೆ. ಕಾಂಗ್ರೆಸ್ ಸರಕಾರವಿದ್ದಾಗ 35 ಸಾವಿರ ಕೋಟಿಯ ಹಗರಣ, ಶಿಕ್ಷಕರ ನೇಮಕಾತಿ ಹಗರಣ ನಡೆದಿತ್ತು. ಪಿಎಫ್ಐಗೆ ಬೆಂಬಲ ಕೊಟ್ಟಿದ್ದ ಅವರಲ್ಲಿ ಹೇಳಿಕೊಳ್ಳಲು ಏನೂ ಉಳಿದಿಲ್ಲ ಎಂದರು.
ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಏನು ಮಾಡಿದ್ದಾರೆ? ಹೇಳಲು ಅವರಲ್ಲಿ ಒಂದು ಶಬ್ದವೂ ಇಲ್ಲ ಎಂದರು. ಅವರು ಈಗ ಜನರು ಕನಸು ಕಾಣುವಂತೆ ಮಾಡುತ್ತಿದ್ದಾರೆ. ತಾವು ಅಧಿಕಾರ ಪಡೆದರೆ ಆಕಾಶದಿಂದ ನಕ್ಷತ್ರ ತಂದು ಕೊಡುವ ಭರವಸೆಯನ್ನೂ ನೀಡುತ್ತಾರೆ ಎಂದು ಟೀಕಿಸಿದರು.
ರಾಜಸ್ಥಾನ ಮತ್ತು ಛತ್ತೀಸಗಡದಲ್ಲಿ ನೀಡಿದ ಭರವಸೆಗಳನ್ನು ಕಾಂಗ್ರೆಸ್ ಈಡೇರಿಸಿಲ್ಲ. ರೈತರ ಸಾಲ ಮನ್ನಾ, ನಿರುದ್ಯೋಗ ಭತ್ಯೆ ಕುರಿತು ಭರವಸೆ ಈಡೇರಿಲ್ಲ ಎಂದು ಟೀಕಿಸಿದ ಅವರು, ಗದಗದಲ್ಲಿ 1 ಲಕ್ಷಕ್ಕೂ ಹೆಚ್ಚು ರೈತರಿಗೆ ನಮ್ಮ ಸರಕಾರಗಳು ಒಟ್ಟು 10 ಸಾವಿರ ಮೊತ್ತವನ್ನು ಕಿಸಾನ್ ಸಮ್ಮಾನ್ ಅಡಿಯಲ್ಲಿ ಖಾತೆಗೆ ಭರ್ತಿ ಮಾಡುತ್ತಿವೆ. ಇವರು ಮಾಡಿದ್ದಾದರೂ ಏನು ಎಂದು ಪ್ರಶ್ನಿಸಿದರು. ಗದಗ ಜಿಲ್ಲೆಯಲ್ಲಿ 1.65 ಲಕ್ಷ ಮನೆಗಳಿಗೆ ನಳ್ಳಿನೀರಿನ ಸಂಪರ್ಕ ಕೊಡಲಾಗಿದೆ. ನೀವೇನು ಮಾಡಿದ್ದೀರಿ? ಈ ಜಿಲ್ಲೆಯಲ್ಲಿ 3 ಲಕ್ಷ ಜನರಿಗೆ ಆಯುಷ್ಮಾನ್ ಕಾರ್ಡಿನ ಪ್ರಯೋಜನ ಸಿಕ್ಕಿದೆ ಎಂದು ವಿವರಿಸಿದರು. ವಿವಿಧ ಯೋಜನೆಗಳ ಅನುಷ್ಠಾನ ಕುರಿತು ಅವರು ಮಾಹಿತಿ ಕೊಟ್ಟರು.
ಗದಗದಲ್ಲಿ ನಾಲ್ಕರಲ್ಲಿ ನಾಲ್ಕೂ ಸೀಟು ಸೇರಿ ರಾಜ್ಯದಲ್ಲಿ 150 ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ. ಕಾಂಗ್ರೆಸ್ ಭ್ರಷ್ಟರ ಪಕ್ಷ. ಒಳಸಂಚು ಅದರ ಭಾಗವಾಗಿದೆ. ಕಾಮನ್ ಮ್ಯಾನ್ ಸಿಎಂ ವಿರುದ್ಧ ವಾಗ್ದಾಳಿ ನಡೆಸುವುದು ಅವರ ಕುತಂತ್ರ. ಅವರ ಬಳಿ ನೈಜ ವಿಷಯವೇ ಇಲ್ಲ. ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಬೊಮ್ಮಾಯಿಯವರ ಕುರಿತ ಮಾತನ್ನು ಮತ್ತು ಟೀಕೆಯನ್ನು ಜನರು ಸಹಿಸುವುದಿಲ್ಲ ಎಂದು ತಿಳಿಸಿದರು.
ಕಾಂಗ್ರೆಸ್ ಹೀನಾಯ ಸೋಲು ಅನುಭವಿಸಲಿದೆ. ಮೋದಿಜಿ ಅವರ ಜನಪ್ರಿಯತೆ ನಿರಂತರವಾಗಿ ಹೆಚ್ಚುತ್ತಿದೆ. ಜನರು ಕರ್ನಾಟಕದ ಅಸೆಂಬ್ಲಿ ಮತ್ತು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲ ಕೊಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.