ಭಾರತ್ ಬಂದ್; ಕೃಷಿ ಮಸೂದೆಯ ಪ್ರಮುಖ ಅಂಶ ತಿಳಿಯಿರಿ
ನವದೆಹಲಿ, ಡಿಸೆಂಬರ್ 08 : ಕೇಂದ್ರ ಸರ್ಕಾರದ ಕೃಷಿ ನೀತಿಗಳ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆ 11ನೇ ದಿನಕ್ಕೆ ಕಾಲಿಟ್ಟಿದೆ. ಕೇಂದ್ರ ಸರ್ಕಾರ ರೈತರ ಜೊತೆ ನಡೆಸಿದ 5 ಸುತ್ತಿನ ಮಾತುಕತೆ ವಿಫಲವಾಗಿದೆ.
ಮಂಗಳವಾರ ಭಾರತ್ ಬಂದ್ ನಡೆಸಲು ರೈತರು ಕರೆ ನೀಡಿದ್ದಾರೆ. ಬೆಳಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆಯ ತನಕ ರೈತರು ಪ್ರತಿಭಟನೆ ನಡೆಸಲಿದ್ದಾರೆ. ದೇಶದ ವಿವಿಧ ರಾಜ್ಯಗಳಲ್ಲಿ ಬೆಳಗ್ಗೆಯಿಂದಲೇ ಪ್ರತಿಭಟನೆ ಆರಂಭವಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ರೈತರ ಪ್ರತಿಭಟನೆ ಪರ, ವಿರೋಧ ಚರ್ಚೆಗಳು ನಡೆಯುತ್ತಿವೆ. ಕೇಂದ್ರ ಸರ್ಕಾರ ಜಾರಿಗೊಳಿಸಲಿರುವ ಕೃಷಿ ನೀತಿಯಲ್ಲಿ ಏನಿದೆ? ಎಂಬ ಬಗ್ಗೆ ಹಲವಾರು ಪೋಸ್ಟ್ಗಳನ್ನು ಶೇರ್ ಮಾಡಲಾಗುತ್ತಿದೆ.
ಕೃಷಿ ಉತ್ಪನ್ನ ಮಾರಾಟ ಮತ್ತು ವಾಣಿಜ್ಯ (ಉತ್ತೇಜನ ಮತ್ತು ಸೌಲಭ್ಯ) ವಿಧೇಯಕ 2020ರ ಪ್ರಮುಖ ಅಂಶಗಳನ್ನು ಶೇರ್ ಮಾಡಲಾಗುತ್ತಿದೆ. ಸತ್ಯವನ್ನು ತಿಳಿಯೋಣ...ಜಾಗೃತರಾಗೋಣ ಎಂದು ಪೋಸ್ಟ್ಗಳನ್ನು ಹಾಕಲಾಗುತ್ತಿದೆ.

ಎಪಿಎಂಸಿಯ ಹೊರಗೆ ಮಾರಾಟಕ್ಕೆ ಅವಕಾಶ
ರಾಜ್ಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ)ಗಳ ಹಕ್ಕುಗಳ ಮೇಲೆ ಈ ಮಸೂದೆ ಆಕ್ರಮಣ ಮಾಡುತ್ತದೆ ಎಂದು ಸುಳ್ಳು ಸುದ್ದಿಯನ್ನು ಹಬ್ಬಿಸಲಾಗುತ್ತಿದೆ.
ಈ ಮಸೂದೆ ಎಪಿಎಂಸಿ ಕಾಯ್ದೆ ಅಡಿಯಲ್ಲಿ ಅವುಗಳ ಸಮುಚ್ಛಯಕ್ಕೆ ನುಗ್ಗುವುದಿಲ್ಲ ಮತ್ತು ಅದು ರಾಜ್ಯಗಳಲ್ಲಿ ಕಾರ್ಯಾಚರಣೆ ಮುಂದುವರೆಸುತ್ತದೆ. ಈ ಮಸೂದೆ ಎಪಿಎಂಸಿಯ ಹೊರಗೆ ಮಾರಾಟಕ್ಕೆ ಹೆಚ್ಚುವರಿ ಅವಕಾಶ ನೀಡುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ.

ಹೆಚ್ಚಿನ ಆದಾಯ ಸೇರಿ ಹಲವು ಪ್ರಯೋಜನ
ಕೃಷಿ ರಾಜ್ಯದ ವಿಷಯವಾಗಿದ್ದು, ಈ ಮಸೂದೆ ಕಾನೂನು ಬಾಹಿರವಾಗಿದೆ. ರೈತರಿಗೆ ಮತ್ತು ಗ್ರಾಮೀಣ ಆರ್ಥಿಕತೆಗೆ ಬದಲಾಗಿ ಇದು ಕೇವಲ ಸಾಂಸ್ಥಿಕ ಸಂಸ್ಥೆಗಳಿಗೆ ಪ್ರಯೋಜನಕಾರಿ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ.
7ನೇ ಪರಿಚ್ಛೇದ ಮತ್ತು ಭಾರತದ ಸಂವಿಧಾನ ರಾಷ್ಟ್ರೀಯ ಹಿತದ ದೃಷ್ಟಿಯಿಂದ ಕೇಂದ್ರ ಸರ್ಕಾರ ಶಾಸನ ರೂಪಿಸಬಹುದು ಎಂದು ಮಸೂದೆ ಹೇಳುತ್ತದೆ. ರೈತರು ಈ ಒಪ್ಪಂದದ ಅಡಿಯಲ್ಲಿ ಖಾತ್ರಿ ಪಡಿಸಿದ ಹೆಚ್ಚಿನ ಆದಾಯ ಸೇರಿದಂತೆ ಬಹು ಪ್ರಯೋಜನ ಪಡೆಯುತ್ತಾರೆ.

ಮಾರಾಟಕ್ಕೆ ಹೊಸ ಕಾನೂನು ವ್ಯಾಪ್ತಿ
ಕೇಂದ್ರ ಸರ್ಕಾರ ವಿವಿಧ ರಾಜ್ಯಗಳು ಜಾರಿಗೆ ತಂದಿರುವ ಎಪಿಎಂಸಿ ಕಾಯ್ದೆಗಳನ್ನು ತೆಗೆದು ಹಾಕುತ್ತದೆ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗಿದೆ.
ಕೃಷಿ ಮಸೂದೆಗಳು ಯಾವುದೇ ರೀತಿಯಿಂದಲೂ ರಾಜ್ಯಗಳ ಕಾಯ್ದೆಯಾದ ಎಪಿಎಂಸಿ ಕಾಯ್ದೆಯ ಅತಿಕ್ರಮಣ ಮಾಡುವುದಿಲ್ಲ. ಕೃಷಿ ಮಾರುಕಟ್ಟೆ ಹೊರಗೆ ನಡೆಯುವ ಮಾರಾಟಕ್ಕೆ ಹೊಸ ಕಾನೂನು ವ್ಯಾಪ್ತಿಗೆ ಬರುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ.
Recommended Video

ವಿವಾದಗಳ ಇತ್ಯರ್ಥಕ್ಕೆ ಕಾಲಮಿತಿ
ಬಂಡವಾಳಶಾಹಿಗಳಿಗೆ ತಮ್ಮ ಭೂಮಿಯನ್ನು ರೈತರು ಮಾರಾಟ ಮಾಡುವುದನ್ನು ಸರ್ಕಾರ ಬಯಸುತ್ತದೆ ಎಂದು ಸುಳ್ಳು ಹಬ್ಬಿಸಲಾಗುತ್ತಿದೆ.
ಮಸೂದೆಯಲ್ಲಿ ರೈತರಿಗೆ ಸಾಕಷ್ಟು ರಕ್ಷಣೆ ನೀಡಲಾಗಿದೆ. ಜಮೀನಿನ ಮಾರಾಟ, ಭೋಗ್ಯ ಅಥವ ಅಡಮಾನವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಮತ್ತು ಯಾವುದೇ ವಸೂಲಾತಿಯಿಂದ ಸಂರಕ್ಷಿಸಲಾಗಿದೆ. ವಿವಾದಗಳ ಪರಿಹಾರಕ್ಕೆ ಸಮರ್ಥ ವ್ಯವಸ್ಥೆಯನ್ನು ಒದಗಿಸಲಾಗಿದ್ದು, ಇತ್ಯರ್ಥಕ್ಕೆ ಕಾಲಮಿತಿ ನಿಗದಿ ಮಾಡಲಾಗಿದೆ ಎಂದು ಸ್ಪಷ್ಟಪಡಿಸಲಾಗಿದೆ.












Click it and Unblock the Notifications