BJP VS BJP : ನನ್ನ ಕೊಂದು 6 ತಿಂಗಳಲ್ಲಿ ಬೈ ಎಲೆಕ್ಷನ್ ನಡೆಸುವ ಕುತಂತ್ರ: ಪ್ರಭು ಚವ್ಹಾಣ್
ಬೀದರ್, ಆಗಸ್ಟ್ 10: ರಾಜ್ಯ ಬಿಜೆಪಿಯಲ್ಲಿ ಸ್ವಪಕ್ಷದ ನಾಯಕರ ನಡುವೆ ಬಹಿರಂಗ ಅಸಮಾಧಾನ ಜೋರಾಗಿದ್ದು, ಇದೀಗ ಬಿಜೆಪಿ ಶಾಸಕ ಪ್ರಭು ಚವ್ಹಾಣ್ ಹಾಗೂ ಕೇಂದ್ರ ಸಚಿವ ಭಗವಂತ್ ಖೂಬಾ ನಡುವಿನ ಸಮರ ಜೋರಾಗಿದೆ.
ಹೌದು, ಕೇಂದ್ರ ಸಚಿವ ಭಗವಂತ್ ಖೂಬಾ ಅವರು ನನ್ನನ್ನು ಕೊಲೆ ಮಾಡಿ ಆರು ತಿಂಗಳಲ್ಲಿ ಉಪ ಚುನಾವಣೆ ನಡೆಸಲು ಕುತಂತ್ರ ನಡೆಸುತ್ತಿದ್ದಾರೆ ಎಂದು ಔರಾದ್ ಶಾಸಕ ಪ್ರಭು ಚವ್ಹಾಣ್ ಗಂಭೀರ ಆರೋಪ ಮಾಡಿದ್ದಾರೆ. ತಾವು ಸಾಕಿದ ಗುಂಡಾಗಳಿಂದ ನನ್ನ ಹತ್ಯೆಗೆ ಸಂಚು ರೂಪಿಸಿದ್ದಾರೆ ಎಂದು ಬಹಿರಂಗವಾಗಿ ವಾಗ್ದಾಳಿ ನಡೆಸಿದ್ದಾರೆ.

ಬೀದರ್ ಜಿಲ್ಲೆಯ ಔರಾದ್ ಪಟ್ಟಣದಲ್ಲಿ ನಡೆದ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, 2023 ರ ವಿಧಾನಸಭಾ ಚುನಾವಣೆಯಲ್ಲಿ ನನ್ನನ್ನು ಸೋಲಿಸಲು ಭಗವಂತ್ ಖೂಬಾ ಸಾಕಷ್ಟು ಪ್ರಯತ್ನ ಮಾಡಿದರು. ಆದರೆ, ಅವರ ಪ್ರಯತ್ನ ವಿಫಲವಾಗಿದ್ದು, ತಾನು ಸಾಕಿದ ಗುಂಡಾಗಳಿಂದ ಹತ್ಯೆಗೆ ಸಂಚು ಮಾಡುತ್ತಿದ್ದಾರೆ. ರಸ್ತೆ ನಡುವೆ ನನಗೆ ಗುಂಡು ಹಾರಿಸಿ ಕೊಲೆ ಮಾಡಿಸಲು ಸಂಚು ರೂಪಿಸಲಾಗಿದೆ ಎಂದು ಬಹಿರಂಗವಾಗಿ ಆರೋಪ ಮಾಡಿದ್ದಾರೆ.
ಸ್ವಪಕ್ಷದ ನಾಯಕರ ವಿರುದ್ದ ಗಂಭೀರ ಆರೋಪ ಮಾಡಿರುವ ಔರಾದ್ ಶಾಸಕ ಪ್ರಭು ಚವ್ಹಾಣ್, ನನ್ನ ಕೊಲೆ ಮಾಡಲು ಸಂಚು ರೂಪಿಸಿದ್ದಾರೆ. ಇದು ಕೇಂದ್ರ ಸಚಿವ ಭಗವಂತ ಖೂಬಾ ಅವರ ಬೆಂಬಲಿಗರಿಂದಲೇ ಗೊತ್ತಾಗಿದೆ ಎಂದು ಹೇಳಿದರು.
1998 ರಿಂದ ನಾನು ಬಿಜೆಪಿಯಲ್ಲಿದ್ದೇನೆ. ಈಗಿನ ಕೇಂದ್ರ ಸಚಿವ ನಿತಿನ್ ಗಡ್ಕರಿ ಹಾಗೂ ಗೋಪಿನಾಂಥ ಮುಂಡೆ ಅವರ ಜೊತೆಗೂಡಿ ಪಕ್ಷ ಕಟ್ಟಿದ್ದೇನೆ. ಇದನ್ನೆಲ್ಲ ನೋಡಿಯೇ ನನಗೆ 2008ರಲ್ಲಿ ಇಲ್ಲಿಯ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಕೊಟ್ಟಿದ್ದಾರೆ. ನನ್ನ ಸ್ವಭಾವ ಮತ್ತು ಕೆಲಸ ನೋಡಿ ಜನ ನನಗೆ ನಾಲ್ಕು ಬಾರಿ ಶಾಸಕನಾಗಿ ಆಯ್ಕೆಮಾಡಿದ್ದಾರೆ ಎಂದು ಹೇಳಿದರು. ನಿಮ್ಮಂತೆ ನಾನು ಎಂದೂ ಪಕ್ಷ ವಿರೋಧಿ ಕೆಲಸ ಮಾಡಿಲ್ಲ ಎಂದು ಕಿಡಿಕಾರಿದರು.
ವಿಧಾನಸಭಾ ಚುನಾವಣೆಯಲ್ಲಿ ನೀವು ಕಾಂಗ್ರೆಸ್ನವರ ಜೊತೆಗೆ ಸೇರಿ ನನ್ನನ್ನು ಸೋಲಿಸಲು ಪ್ರಯತ್ನಿಸಿದ್ದೀರಿ. 2014ರ ಲೋಕಸಭಾ ಚುನಾವಣೆಯಲ್ಲಿ ಅನೇಕರ ವಿರೋಧ ಕಟ್ಟಿಕೊಂಡು ನಿಮಗೆ ಟಿಕೆಟ್ ಕೊಡುವಂತೆ ಹೈಕಮಾಂಡ್ ಮೇಲೆ ಒತ್ತಡ ಹಾಕಿದೆ. ನಿಮ್ಮ ಗೆಲುವಿಗಾಗಿ ನಾನು ಸಾಕಷ್ಟು ಪ್ರಯತ್ನಿಸಿದ್ದೇನೆ. ಬಿಜೆಪಿ ಪಕ್ಷದ ಕಾರ್ಯಕರ್ತರು ಹಾಗೂ ಮೋದಿ ಕೃಪೆಯಿಂದ ಗೆದ್ದು ಮಂತ್ರಿಯಾದ ನೀವೇ ನಿಜವಾದ ಲಕ್ಕಿ ಮ್ಯಾನ್. ನನ್ನನ್ನು ಲಕ್ಕಿ ಮ್ಯಾನ್ ಎಂದು ಹೇಳಿದ್ರಿ, ನಿಜವಾದ ಲಕ್ಕಿ ಮ್ಯಾನ್ ನೀವು ಎಂದು ಕುಟುಕಿದರು.
ಇನ್ನೂ ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಬಲ್ಲೂರ್ ಬಳಿ ಸಿಪೆಟ್ ಕೇಂದ್ರ ವಿಳಂಬ ಆಗಲೂ ಕೇಂದ್ರ ಸಚಿವ ಭಗವಂತ್ ಖೂಬಾ ಅವರೇ ಕಾರಣ ಎಂದು ಹೇಳಿದ ಅವರು, ಭಗವಂತ್ ಖೂಬಾ ಅವರು ತಮ್ಮ ಬೆಂಬಲಿಗರ ಮೂಲಕ ತಾಲೂಕಿನ ಅನೇಕ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿ ಮಾಡಿದ್ದಾರೆ. ನನ್ನ ವಿರುದ್ಧ ಸದಾ ಕತ್ತಿ ಮಸಿಯುತ್ತಾ ನನ್ನ ಜಾತಿ ಕುರಿತು ಕೋರ್ಟ್ ಮೆಟ್ಟಿಲು ಹತ್ತುವಂತೆ ಮಾಡಿದ್ದಾರೆ ಎಂದು ಕಿಡಿಕಾರಿದರು.












Click it and Unblock the Notifications