ಮೈಸೂರು-ಬೆಂಗಳೂರು 10 ಪಥದ ರಸ್ತೆ 2021ಕ್ಕೆ ಪೂರ್ಣ : ರೇವಣ್ಣ
ಬೆಂಗಳೂರು, ಜೂನ್ 11 : 'ಬೆಂಗಳೂರು-ಮೈಸೂರು ನಡುವಿನ ಹತ್ತು ಪಥದ ರಸ್ತೆ ಕಾಮಗಾರಿಗೆ 4 ರಿಂದ 5 ಸಾವಿರ ಕೋಟಿ ವೆಚ್ಚವಾಗಲಿದೆ. 2021ರಲ್ಲಿ ಕಾಮಗಾರಿ ಪೂರ್ಣವಾಗಲಿದೆ' ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಹೇಳಿದರು.
ಮಂಗಳವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಲೋಕೋಪಯೋಗಿ ಇಲಾಖೆಯ ಸಭೆ ನಡೆಯಿತು. ಸಭೆಯ ಬಳಿಕ ಎಚ್.ಡಿ.ರೇವಣ್ಣ ಅವರು ಪತ್ರಿಕಾಗೋಷ್ಠಿ ನಡೆಸಿದರು.
'ರಾಜ್ಯದಲ್ಲಿ ರಸ್ತೆ ಅಭಿವೃದ್ಧಿ ಮಾಡಲು ಕೆಲವೊಂದು ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ' ಎಂದು ಹೇಳಿದ ರೇವಣ್ಣ ಅವರು ರಸ್ತೆ ನಿರ್ಮಾಣದ ವೆಚ್ಚಗಳ ಬಗ್ಗೆ ಮಾಹಿತಿ ನೀಡಿದರು. 'ಲೋಕೋಪಯೋಗಿ ಇಲಾಖೆಯಲ್ಲಿ 750 ಇಂಜಿನಿಯರ್ಗಳ ನೇಮಕಕ್ಕೆ ಪರೀಕ್ಷೆಯನ್ನು ಕೆಇಎ ಮೂಲಕ ನಡೆಸಲಾಗುತ್ತಿದೆ' ಎಂದು ತಿಳಿಸಿದರು.
'ನೇಮಕಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಇದೆ. ಶೇ 85ರಷ್ಟು ಲಿಖಿತ ಪರೀಕ್ಷೆ, ಶೇ 15ರಷ್ಟು ಸಂದರ್ಶನ ಇರುತ್ತದೆ. ಯಾವುದೇ ಅಕ್ರಮ ನಡೆದರೂ ಪರೀಕ್ಷಾ ಪ್ರಾಧಿಕಾರ ಜವಾಬ್ದಾರಿಯಾಗಿರುತ್ತದೆ. ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಶೇ 15ರಷ್ಟು ಸಂದರ್ಶನ ವ್ಯವಸ್ಥೆ ಮಾಡಿದ್ದೇವೆ' ಎಂದು ರೇವಣ್ಣ ವಿವರಣೆ ನೀಡಿದರು.....

ಎರಡು ಹಂತದಲ್ಲಿ ಕಾಮಗಾರಿ
ಮೈಸೂರು-ಬೆಂಗಳೂರು 10 ಪಥದ ರಸ್ತೆ ಕಾಮಗಾರಿಯನ್ನು ಎರಡು ಹಂತದಲ್ಲಿ ಕೈಗೊಳ್ಳಲಾಗುತ್ತಿದೆ. ಮೊದಲ ಹಂತದಲ್ಲಿ 56.20 ಕಿ.ಮೀ. ಮೈಸೂರು-ನಿಢಗಟ್ಟ ರಸ್ತೆ ನಿರ್ಮಾಣವಾಗಲಿವೆ. ಎರಡನೇ ಹಂತದಲ್ಲಿ 61.10 ಕಿ.ಮೀ.ರಸ್ತೆ ನಿಢಗಟ್ಟ-ಮೈಸೂರು ರಸ್ತೆ ನಿರ್ಮಾಣವಾಗಲಿದೆ. 2ನೇ ಹಂತದ ಕಾಮಗಾರಿ ಈ ತಿಂಗಳಿನಲ್ಲಿ ಆರಂಭವಾಗಲಿದೆ.

10 ಪಥದ ರಸ್ತೆಯಲ್ಲಿ ಬೈಪಾಸ್ ನಿರ್ಮಾಣ
ಬೆಂಗಳೂರು-ಮೈಸೂರು ರಸ್ತೆಯಲ್ಲಿ ಬೈಪಾಸ್ ರಸ್ತೆ ಸಹ ನಿರ್ಮಾಣವಾಗಲಿದೆ. ರಾಮನಗರ-ಚನ್ನಪಟ್ಟಣ 22 ಕಿ.ಮೀ., ಮಂಡ್ಯದಲ್ಲಿ 9 ಕಿ.ಮೀ.ರಸ್ತೆ, ಶ್ರೀರಂಗ ಪಟ್ಟಣದಲ್ಲಿ 7 ಕಿ.ಮೀ. ಬೈಪಾಸ್ ರಸ್ತೆ ನಿರ್ಮಾಣವಾಗಲಿದೆ.

ಯಾವ-ಯಾವ ರಸ್ತೆ ಅಭಿವೃದ್ಧಿ?
ಬೆಂಗಳೂರು-ಮೈಸೂರು ರಸ್ತೆ ಹೊರತುಪಡಿಸಿ ದಾಂಡೇಲಿ-ಬೆಂಗಳೂರು 1008 ಕೋಟಿ, ಚನ್ನರಾಯಪಟ್ಟಣ ಬೈಪಾಸ್ ರಸ್ತೆಯನ್ನು 451 ಕೋಟಿ ವೆಚ್ಚದಲ್ಲಿ 4 ಪಥವಾಗಿ ವಿಸ್ತರಣೆ ಮಾಡಲಾಗುತ್ತದೆ. ರಾಜ್ಯದಲ್ಲಿ ಕೆಶಿಪ್ನಲ್ಲಿ 1,700 ಕಿ.ಮೀ ರಸ್ತೆ 25 ಸಾವಿರ ಕೋಟಿ ಯೋಜನೆ ಚಾಲನೆಯಲ್ಲಿದೆ. ಕೆಶಿಪ್ ಯೋಜನೆಗೆ ವಿಶ್ವಬ್ಯಾಂಕ್ನಿಂದ 2100 ಕೋಟಿ ಧೀರ್ಘಾವದಿ ಸಾಲ ಪಡೆಯಲಾಗಿದೆ ಎಂದು ರೇವಣ್ಣ ಮಾಹಿತಿ ನೀಡಿದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ
ರಾಜ್ಯದಲ್ಲಿ ಒಟ್ಟಾರೆ 3400 ಕಿ.ಮೀ.ಅನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ತೆಗೆದುಕೊಳ್ಳಲಾಗಿದೆ. ಎಲ್ಲಾ ಹಂತದ ಯೋಜನೆಗೆ 37 ಸಾವಿರ ಕೋಟಿ ವೆಚ್ಚವಾಗಲಿದೆ. ಬೆಂಗಳೂರಿನಿಂದ ನಿಢಗಟ್ಟವರೆಗೆ 450 ರಿಂದ 500 ಎಕರೆ ಜಮೀನನ್ನು ಭೂ ಸ್ವಾಧೀನ ಮಾಡಿಕೊಳ್ಳಲಾಗಿದೆ. ಇದಕ್ಕೆ ಪರಿಹಾರ ನೀಡಲಾಗಿದೆ ಎಂದು ರೇವಣ್ಣ ಹೇಳಿದರು.











Click it and Unblock the Notifications