ಬಾವನ ಮೇಲಿನ ಕೋಪದಿಂದ ವಿಮಾನ ನಿಲ್ದಾಣಕ್ಕೆ ಹುಸಿಬಾಂಬ್ ಕರೆ - ಬಾಮೈದ ಸೆರೆ
ಬೆಂಗಳೂರು, ಮೇ 20: ಮನೆಯಲ್ಲಿ ವೈಮನಸ್ಸು ಉಂಟಾಗಲು ಹಲವಾರು ಕಾರಣಗಳಿರುತ್ತದೆ. ಕುಟುಂಬದಲ್ಲಿನ ಕಲಹದ ಕಿಚ್ಚು ಹೊರಹಾಕಬೇಕು. ದ್ವೇಷವನ್ನು ತೀರಿಸಿಕೊಳ್ಳಬೇಕು ಅನ್ನೋ ಚಲ ಅದೆಷ್ಟೋ ಜನಕ್ಕೆ ಬರುತ್ತೆ. ಕೋಪದ ಕೈಗೆ ಬುದ್ದಿ ಕೊಟ್ಟು ಮಾಡಿದ ಕೆಲಸಕ್ಕೆ ಬೆತ್ತ ಕೊಟ್ಟು ತಾನೇ ಹೊಡೆಸಿಕೊಂಡತಾಗಿದೆ. ಇಲ್ಲೊಬ್ಬ ಭೂಪ ಭಾವನನ್ನು ಪೊಲೀಸರಿಗೆ ತಗ್ಲಾಕಲು ಹೋಗಿ ಹುಸಿ ಬಾಂಬ್ ಕರೆ ಮಾಡಿ ತಾನೇ ಸಿಕ್ಕಿಬಿದ್ದಿದ್ದಾನೆ.
ಮೇ20ರ ಬೆಳಗಿನ ಜಾವ 3.30ಕ್ಕೆ ನಗರದ ಕಂಟ್ರೋಲ್ ರೂಂಗೆ ಕರೆ ಬರುತ್ತೆ. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಾಂಬ್ ಇಟ್ಟಿದಿವಿ. ಇನ್ನು ಕೆಲವೇ ಕ್ಷಣದಲ್ಲಿ ಬ್ಲಾಸ್ಟ್ ಆಗುತ್ತೆ ಎಂದು ತನ್ನ ಹೆಸರನ್ನ ಹೇಳಿ ಫೋನ್ ಕಟ್ ಮಾಡಿದ್ದ. ಈ ರೀತಿ ಹುಸಿ ಬಾಂಬ್ ಬೆದರಿಕೆ ಸಾಕಷ್ಟು ಬಾರಿ ಬಂದಿದೆ. ಆದರೆ ಸೂಕ್ಷ್ಮ ವಿಚಾರವಾಗಿದ್ದ ಕಾರಣ ರಿಸ್ಕ್ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಡಾಗ್ ಸ್ಕ್ವಾಡ್ ಸಮೇತ ಪೊಲೀಸರು ವಿಮಾನ ನಿಲ್ದಾಣಕ್ಕೆ ದೌಡಾಯಿಸಿ ಪೊಲೀಸರು ತಪಾಸಣೆಯನ್ನು ನಡೆಸಿದ್ದರು.
ಭಯ ಬಿದ್ದ ಖಾಕಿ ಪಡೆಯಿಂದ ಇಡೀ ವಿಮಾನ ನಿಲ್ದಾಣ ಪರಿಶೀಲನೆ
ರಾಜ್ಯ ದೇಶದಲ್ಲಿ ಮಂದಿರ ಮಸೀದಿ, ಆಝಾನ್, ರಾಮ ಜಪ ವಿವಾದದಂತೆ ಒಂದಷ್ಟು ಕೋಮು ಸಂಘರ್ಷಕ್ಕೆ ಎಡೆ ಮಾಡಿಕೊಡುವ ಸಂಗತಿಗಳು ನಡೆಯುತ್ತಲೇ ಇದೆ. ಈ ಸಂದರ್ಭದಲ್ಲಿ ಯಾವೂದನ್ನೂ ಅಲ್ಲಗೆಳೆಯುವಂತಿಲ್ಲ. ಈ ಸಂದರ್ಭದಲ್ಲಿ ಯಾವುದೇ ಕೃತ್ಯಗಳ ಬಗ್ಗೆ ಮೆಸೆಜ್ ಬಂದರೆ ಅದನ್ನ ಪೊಲೀಸರು ಕೂಲಂಕಷವಾಗಿ ನೋಡಿ ಪರಿಶೀಲಿಸಬೇಕಿದೆ. ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಾಂಬ್ ಇಡಲಾಗಿದೆ ಎಂಬ ಕರೆಗೆ ಸಹಜವಾಗಿಯೇ ಬೆಚ್ಚಿ ಬಿದ್ದ ಪೊಲೀಸರು ಡಾಗ್ ಸ್ಕ್ವಾಡ್ , ಬಾಂಬ್ ನಿಷ್ಕ್ರೀಯ ದಳಗಳನ್ನ ಕರೆಸಿ ಸಂಪೂರ್ಣ ವಿಮಾನ ನಿಲ್ದಾಣವನ್ನು ತಪಾಸಣೆಯನ್ನು ಮಾಡಿದರು. ತಪಸಣೆಯ ವೇಳೆಯಲ್ಲಿ ಯಾವುದೇ ಬಾಂಬ್ ಆಗಿರಲಿಲ್ಲ.
ಅಕ್ಕನ ವಿಚ್ಚೇಧನ, ಬಾವನಿಗೆ ಬುದ್ದಿ ಕಲಿಸಲು ಬಾಂಬ್ ನಾಟಕ
ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗೆ ಬಂದಿದ್ದು ಹುಸಿಬಾಂಬ್ ಕರೆ ಅನ್ನೋದು ಪೊಲೀಸರು ಖಚಿತ ಪಡಿಸಿಕೊಂಡಿದ್ದಾರೆ. ಆ ಬಳಿಕ ಪೊಲೀಸ್ ಕಂಟ್ರೋಲ್ ರೂಮ್ ಗೆ ನಂಬರ್ 112ಗೆ ಕರೆ ಬಂದ ನಂಬರನ್ನ ಟ್ರೇಸ್ ಮಾಡಿದ ಏರ್ಪೋರ್ಟ್ ಪೊಲೀಸರು ಸುಭಾಷಿಶ್ ಗುಪ್ತಾ ಎಂಬಾತನನ್ನ ಬಂಧಿಸಿದ್ದಾರೆ. ಬಂಧನದ ಬಳಿಕ ವಿಚಾರಣೆ ನಡೆಸಿದಾಗ ಅಸಲಿ ಸತ್ಯ ಹೊರ ಬಿದ್ದಿದೆ. ಸುಭಾಷಿಶ್ ತನ್ನ ಬಾವನಿಗೆ ಬುದ್ದಿ ಕಲಿಸೋಕೆ ಈ ರೀತಿ ಕೃತ್ಯ ಎಸಗಿರೋದಾಗಿ ಬಾಯ್ಬಿಟ್ಟಿದ್ದಾನೆ. ಕಳೆದ ಹತ್ತು ವರ್ಷದ ಹಿಂದೆ ತನ್ನ ಸಹೋದರಿಗೆ ಮದ್ವೆಯಾಗಿತ್ತು. ನಂತರ ಪತಿ ಪತ್ನಿ ನಡುವಿನ ಜಗಳದಿಂದಾಗಿ ಇಬ್ಬರಿಗೂ ವಿಚ್ಛೇಧನ ಪಡೆದಿದ್ದರು. ಅಕ್ಕನ ಮೇಲಿನ ಪ್ರೀತಿ ಹಾಗು ಬಾವನಿಗೆ ಬುದ್ದಿ ಕಲಿಸುವ ಉದ್ದೇಶದಿಂದ ತನ್ನ ಬಾವನ ಹೆಸರಿನಲ್ಲಿ ಕಂಟ್ರೋಲ್ ರೂಂಗೆ ಕರೆ ಮಾಡಿ ಬಾಂಬ್ ಇಟ್ಟಿರೋದಾಗಿ ಹೇಳಿದ್ದ. ಹೀಗೆ ಮಾಡಿದರೆ ಪೊಲೀಸರು ಬಾವನನ್ನ ಬಂಧಿಸ್ತಾರೆ ಎಂಬ ಉದ್ದೇಶದಿಂದ ಈ ರೀತಿಯ ಕೃತ್ಯ ಎಸಗಿರೋದಾಗಿ ಬಾಯ್ಬಿಟ್ಟಿದ್ದಾನೆ.
ಡಿಸಿಪಿ ಅನೂಪ್ ಶೆಟ್ಟಿ ಹೇಳಿದ್ದೇನು..?
""ಬೆಳಗಿನ ಜಾವ 3.30ಕ್ಕೆ ಕರೆ ಬಂದಿರುತ್ತೆ. ಬಾಂಬ್ ಇಟ್ಟಿರುವ ಬಗ್ಗೆ ಹೇಳಿ ಕರೆಯನ್ನು ಕಟ್ ಮಾಡಿದ್ದರು. ಈ ಮಾಹಿತಿಯನ್ನು ಆಧರಿಸಿ ಏರ್ಪೋರ್ಟ್ ಪೊಲೀಸರು ತಪಸಣೆಯನ್ನು ಮಾಡಿದ್ದರು. ಆರೋಪಿಯನ್ನು ಬಂಧಿಸಿ ವಿಧಾನಸೌಧ ಪೊಲೀಸರಿಗೆ ಒಪ್ಪಿಸಲಾಗಿದೆ'' ಎಂದು ಡಿಸಿಪಿ ಅನೂಪ್ ಶೆಟ್ಟಿ ತಿಳಿಸಿದ್ದಾರೆ
ಹುಸಿಬಾಂಬ್ ಕರೆ ಬರುತ್ತಲೇ ಇರುತ್ತೆ. ಆದರೆ ಯಾವುದನ್ನೂ ನಿರ್ಲಕ್ಷ್ಯ ಮಾಡಬಾರದು. ಹಾಗಂತ ಯಾವುದೇ ವ್ಯವಸ್ಥೆಯನ್ನ ಈ ರೀತಿ ದುರ್ಬಳಕೆ ಕೂಡ ಮಾಡಿಕೊಂಡರೇ ಜೈಲು ಅಥಿತಿಯಾಗುವುದು ಖಚಿತ