Vande Bharat Train; ಬೆಂಗಳೂರು-ಹುಬ್ಬಳ್ಳಿ ವೇಳಾಪಟ್ಟಿ ಕೇಳಿದ ಮಂಡಳಿ
ಬೆಂಗಳೂರು, ನವೆಂಬರ್ 10; ದಕ್ಷಿಣ ಭಾರತದ ಮೊದಲ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸೇವೆಗೆ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ. ಚೆನ್ನೈ- ಬೆಂಗಳೂರು-ಮೈಸೂರು ನಡುವೆ ರೈಲು ಸಂಚಾರ ನಡೆಸಲಿದೆ.
ಕರ್ನಾಟಕದಲ್ಲಿ ಎರಡನೇ ವಂದೇ ಭಾರತ್ ರೈಲು ಸಂಚಾರ ನಡೆಸಲು ರೈಲ್ವೆ ಇಲಾಖೆ ಸಿದ್ದತೆ ನಡೆಸಿದೆ. ಬೆಂಗಳೂರು-ಹುಬ್ಬಳ್ಳಿ ನಡುವೆ ರಾಜ್ಯದ ಎರಡನೇ ರೈಲು ಸಂಚಾರ ನಡೆಸಲಿದೆ. ಈ ಮೂಲಕ ಉತ್ತರ ಕರ್ನಾಟಕದ ಜನರಿಗೆ ಶುಭಸುದ್ದಿ ಸಿಕ್ಕಿದೆ.
ವಂದೇ ಭಾರತ್ ಎಕ್ಸ್ಪ್ರೆಸ್ ರೈಲು: ಚೆನ್ನೈ-ಮೈಸೂರು ಮಾರ್ಗದ ಸಮಯ, ನಿಲ್ದಾಣಗಳ ವಿವರಗಳು
ಬೆಂಗಳೂರು-ಹುಬ್ಬಳ್ಳಿ ನಡುವೆ ವಂದೇ ಭಾರತ್ ರೈಲು ಸಂಚಾರ ನಡೆಸಬೇಕು ಎಂಬ ಬೇಡಿಕೆ ಇಡಲಾಗಿತ್ತು. ಧಾರವಾಡ ಸಂಸದ ಮತ್ತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಈ ಕುರಿತು ಒತ್ತಾಯಿಸಿದ್ದರು. ಅಲ್ಲದೇ ಧಾರವಾಡದ ತನಕ ರೈಲು ವಿಸ್ತರಣೆ ಮಾಡಬೇಕು ಎಂದು ಮನವಿ ಮಾಡಿದ್ದರು.
ದಕ್ಷಿಣ ಭಾರತದ ಮೊದಲ ವಂದೇ ಭಾರತ್ ರೈಲು ಪ್ರಾಯೋಗಿಕ ಸಂಚಾರ ಆರಂಭ
ಚೆನ್ನೈ-ಬೆಂಗಳೂರು-ಮೈಸೂರು ವಂದೇ ಭಾರತ್ ರೈಲು ಸಂಚಾರ ಪ್ರಾರಂಭವಾದ ಬಳಿಕ ಕರ್ನಾಟಕದ ಮತ್ತೊಂದು ರೈಲಿನ ಸಂಚಾರ ಯಾವಾಗ? ಎಂಬ ದಿನಾಂಕ ತಿಳಿಯಲಿದೆ. ರಾಜ್ಯದಲ್ಲಿ ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿದೆ. ಆದ್ದರಿಂದ, ಹೊಸ ವರ್ಷದ ಕೊಡುಗೆಯಾಗಿ ಕೇಂದ್ರ ಸರ್ಕಾರ ಮತ್ತೊಂದು ರೈಲು ಘೋಷಣೆ ಮಾಡಬಹುದು ಎಂದು ನಿರೀಕ್ಷಿಸಲಾಗುತ್ತಿದೆ.
ಬೆಂಗಳೂರು-ಬೆಳಗಾವಿ ಮಧ್ಯೆ ವಂದೇ ಭಾರತ್ ರೈಲು?
ವೇಳಾಪಟ್ಟಿ ನೀಡುವಂತೆ ಕೇಳಿದ ಇಲಾಖೆ
ರೈಲ್ವೆ ಮಂಡಳಿ ನೈಋತ್ಯ ರೈಲ್ವೆಗೆ ಪತ್ರವೊಂದನ್ನು ಬರೆದಿದೆ. ಬೆಂಗಳೂರು-ಹುಬ್ಬಳ್ಳಿ ನಡುವೆ ವಂದೇ ಭಾರತ್ ರೈಲು ಸಂಚಾರ ಆರಂಭಿಸಲು ವೇಳಾಪಟ್ಟಿ ನೀಡುವಂತೆ ಸೂಚನೆ ನೀಡಿದೆ. ನೈಋತ್ಯ ವಲಯ ಈಗಾಗಲೇ ವೇಳಾಪಟ್ಟಿಯನ್ನು ಕಳುಹಿಸಿಕೊಟ್ಟಿದೆ.
ನೈಋತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಸಂಜೀವ್ ಕಿಶೋರ್ ಇದನ್ನು ಖಚಿತಪಡಿಸಿದ್ದಾರೆ. ಉಭಯ ನಗರಗಳ ನಡುವೆ ವಂದೇ ಭಾರತ್ ರೈಲು ಸಂಚಾರ ಆರಂಭವಾದರೆ ರಾಜಧಾನಿ ಬೆಂಗಳೂರು ಮತ್ತು ಉತ್ತರ ಕರ್ನಾಟಕದ ನಡುವಿನ ಸಂಚಾರಕ್ಕೆ ಸಹಾಯಕವಾಗಲಿದೆ.
ರಾಜ್ಯದ ಸಂಸದರೊಂದಿಗೆ ಸಭೆ
ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವೆ ದರ್ಶನಾ ಜರ್ದೋಶ್ ರಾಜ್ಯದ ಸಂಸದರೊಂದಿಗೆ ಕೆಲವು ದಿನಗಳ ಹಿಂದೆ ಸಭೆ ನಡೆಸಿದ್ದರು. ಆಗ ಬೆಂಗಳೂರು-ಹುಬ್ಬಳ್ಳಿ ನಡುವಿನ ವಂದೇ ಭಾರತ್ ರೈಲು ಬಗ್ಗೆಯೂ ಚರ್ಚೆ ನಡೆಯಿತು. ಸಂಸದರ ಮನವಿಗಳನ್ನು ಅಧಿಕಾರಿಗಳು ಸಹ ಪರಿಶೀಲಿಸುತ್ತಿದ್ದಾರೆ.
ಬೆಂಗಳೂರು-ಹುಬ್ಬಳ್ಳಿ ನಡುವೆ ಹಲವು ಕಡೆ ಜೋಡಿ ಹಳಿ, ವಿದ್ಯುದೀಕರಣ ಕಾಮಗಾರಿ ನಡೆಯುತ್ತಿದೆ. ಈ ಕಾಮಗಾರಿ ಪೂರ್ಣಗೊಂಡ ಬಳಿಕ ಮಾತ್ರ ವಂದೇ ಭಾರತ್ ರೈಲು ಓಡಿಸಲು ಸಾಧ್ಯ ಎಂದು ನೈಋತ್ಯ ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ.
ಧಾರವಾಡದ ತನಕ ವಿಸ್ತರಣೆ?
ಧಾರವಾಡ ಸಂಸದ ಪ್ರಹ್ಲಾದ್ ಜೋಶಿ ಬೆಂಗಳೂರು-ಹುಬ್ಬಳ್ಳಿ ವಂದೇ ಭಾರತ್ ರೈಲು ಧಾರವಾಡದ ತನಕ ವಿಸ್ತರಣೆ ಮಾಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ನೈಋತ್ಯ ರೈಲ್ವೆ ಅಧಿಕಾರಿಗಳ ಪ್ರಕಾರ ಮನವಿಯನ್ನು ರೈಲ್ವೆ ಮಂಡಳಿಗೆ ಸಲ್ಲಿಕೆ ಮಾಡಲಾಗಿದೆ. ಚಿಕ್ಕಜಾಜೂರು ಬಳಿ ಜೋಡಿ ಮಾರ್ಗ ಕಾಮಗಾರಿ ನಡೆಯುತ್ತಿದೆ. ವಿದ್ಯುದೀಕರಣ ಕಾಮಗಾರಿಯೂ ಪ್ರಗತಿಯಲ್ಲಿದೆ. ಮಾರ್ಚ್ ವೇಳೆಗೆ ಕಾಮಗಾರಿ ಪೂರ್ಣವಾಗುವ ನಿರೀಕ್ಷೆ ಇದೆ. ಬಳಿಕ ಮಾತ್ರ ವಂದೇ ಭಾರತ್ ರೈಲು ಸಂಚಾರ ನಡೆಸಲಿದೆ. ಆದ್ದರಿಂದ ಈಗ ತಾತ್ಕಾಲಿಕ ವೇಳಾಪಟ್ಟಿ ಮಾತ್ರ ಕಳಿಸಲಾಗಿದೆ.
ದೇಶದ 5ನೇ ರೈಲು ಸಂಚಾರ
ಚೆನ್ನೈ-ಬೆಂಗಳೂರು-ಮೈಸೂರು ವಂದೇ ಭಾರತ್ ರೈಲು ದೇಶದ 5ನೇ ಮತ್ತು ದಕ್ಷಿಣ ಭಾರತದ ಮೊದಲ ರೈಲಾಗಿದೆ. ಕರ್ನಾಟಕದಲ್ಲಿ ಬೆಂಗಳೂರು-ಹುಬ್ಬಳ್ಳಿ, ಬೆಂಗಳೂರು-ಬೆಳಗಾವಿ ನಡುವೆ ಸಹ ರೈಲು ಸಂಚಾರ ನಡೆಸಬೇಕು ಎಂಬ ಬೇಡಿಕೆ ಇದೆ.
ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಅತ್ಯಾಧುನಿಕ ವ್ಯವಸ್ಥೆಯನ್ನು ಹೊಂದಿದೆ. ವಿಮಾನ ಪ್ರಯಾಣದಂತಹ ಅನುಭವಗಳನ್ನು ಪ್ರಯಾಣಿಕರಿಗೆ ನೀಡುತ್ತದೆ. ಇದು ದೇಶೀಯವಾಗಿ ಅಭಿವೃದ್ಧಿಪಡಿಸಲಾದ ಅತಿ ವೇಗದ ರೈಲು.