ಟ್ಯಾಂಕರ್ ನೀರು ಪೂರೈಕೆ ಬಗ್ಗೆ ಬಿಗ್ ಅಪ್ಡೇಟ್!
ಕರ್ನಾಟಕ ಈ ಬಾರಿ ಭೀಕರ ನೀರಿನ ಬರ ಎದುರಿಸಿದೆ. ಅದರಲ್ಲೂ ಕನ್ನಡಿಗರ ರಾಜಧಾನಿ ಬೆಂಗಳೂರಿನಲ್ಲಿ ಹನಿ ಹನಿ ನೀರಿಗೂ ಬರ ಎದುರಾಗಿದೆ. ಹೀಗಿದ್ದಾಗ ಜನರು ಪ್ರತಿನಿತ್ಯವೂ ನೀರು ಹಿಡಿಯಲು ಪರದಾಡುತ್ತಿದ್ದಾರೆ. ಬಹುತೇಕ ಪ್ರದೇಶದಲ್ಲಿ ಟ್ಯಾಂಕರ್ ನೀರಿಗೆ ಜನರು ಮುಗಿಬೀಳುವ ಪರಿಸ್ಥಿತಿ ಇದೆ. ಹೀಗಿದ್ದಾಗಲೇ ಬೆಂಗಳೂರು ಜಿಲ್ಲಾಧಿಕಾರಿ ಮಹತ್ವದ ಆದೇಶ ಹೊರಡಿಸಿದ್ದಾರೆ.
ಅಂದಹಾಗೆ ಬೆಂಗಳೂರು ನಗರ ಜಿಲ್ಲೆಯ ಎಲ್ಲಾ ತಾಲೂಕುಗಳನ್ನೂ ಬರ ಪೀಡಿತ ತಾಲೂಕುಗಳು ಎಂದು ಸರ್ಕಾರ ಘೋಷಿಸಿದ್ದು, ಜಿಲ್ಲೆಯ 5 ತಾಲೂಕುಗಳ ಯಾವುದೇ ಭಾಗದಲ್ಲು ಕುಡಿಯುವ ನೀರಿನ ಸಮಸ್ಯೆ ಕಂಡು ಬಂದ್ರೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು & ಸಂಬಂಧಪಟ್ಟಿರುವ ಇಲಾಖೆ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಬೇಕು. ಹಾಗೇ ಸಮನ್ವಯದಿಂದ ಆ ಸಮಸ್ಯೆ ಬಗೆಹರಿಸಲು ಕ್ರಮವಹಿಸಬೇಕು ಎಂದು, ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ಎ. ದಯಾನಂದ ಅವರು ಇಂದು ಖಡಕ್ ಸೂಚನೆ ನೀಡಿದ್ದಾರೆ.

ಪ್ರತಿ ಪ್ರದೇಶಕ್ಕೂ ನೀರು ಪೂರೈಕೆ
ಬೆಂಗಳೂರಲ್ಲಿ ಈ ಬಗ್ಗೆ ಮಾತನಾಡಿದ ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ಎ. ದಯಾನಂದ ಅವರು, ಮುಂಗಾರು ಹಂಗಾಮಿನಲ್ಲಿ ಎದುರಾಗುವ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಸ್ಥಳೀಯ ಖಾಸಗಿ ಕೊಳವೆ ಬಾವಿ ಗುರುತಿಸಿ, ನೀರಿನ ಗುಣಮಟ್ಟವನ್ನ ಪರಿಶೀಲಿಸಿ, ತಾಲೂಕು ಮಟ್ಟದಲ್ಲಿ ಕಡ್ಡಾಯವಾಗಿ ಟೆಂಡರ್ ಅಹ್ವಾನಿಸಲು ಸೂಚಿಸಲಾಗಿದೆ. ಈ ಮೂಲಕವಾಗಿಯೆ ಮಾಲೀಕರ ಜೊತೆಗೆ ಒಪ್ಪಂದ ಮಾಡಿಕೊಂಡು ಟ್ಯಾಂಕರ್ ಮೂಲಕ ಪ್ರತಿ ಪ್ರದೇಶಕ್ಕೆ, ಶಾಲಾ-ಕಾಲೇಜು, ವಿದ್ಯಾರ್ಥಿ ನಿಲಯ & ಜನ ಜಾನುವಾರುಗಳಿಗೆ, ಕುಡಿಯುವ ನೀರಿನ ಸರಬರಾಜು ಮಾಡಬೇಕು ಎಂದು ಅಧಿಕಾರಿಗಳಿಗೆ ಬೆಂಗಳೂರು ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.
ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ
ಕುಡಿವ ನೀರಿನ ಸಮಸ್ಯೆ ಬಗೆಹರಿಸಲು ಪ್ರತಿ ತಾಲೂಕಿನಲ್ಲಿ ಸಹಾಯವಾಣಿ ಸ್ಥಾಪಿಸಿ ದೂರುಗಳು ಬಂದ ತಕ್ಷಣ ಅದಕ್ಕೆ ಸ್ಪಂದಿಸಿಬೇಕು. ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹರಿಸೋಕೆ ಕೈಗೊಂಡ ಕ್ರಮಗಳ ಕುರಿತು ಹದಿನೈದು ದಿನಗಳ ಒಳಗಾಗಿ ವರದಿ ಸಲ್ಲಿಸಬೇಕು. ಅಧಿಕಾರಿಗಳು, ಸಿಬ್ಬಂದಿ ಕಾರ್ಯನಿರ್ವಹಿಸಲು ವಿಫಲವಾದಲ್ಲಿ, ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿಸಿ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪಿ.ಎಸ್. ಕಾಂತರಾಜು ಅವರು ಮಾತನಾಡಿ, ಕುಡಿವ ನೀರಿಗೆ ಸಂಬಂಧಿಸಿದ ಯಾವುದೆ ಸಮಸ್ಯೆಗಳು ಇದ್ದಲ್ಲಿ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಳು ತಮ್ಮ ಹಂತದಲ್ಲಿ ಸಭೆ ಕರೆದು ಚರ್ಚಿಸಿ ತುರ್ತು ಅಗತ್ಯವಿದ್ದ ಸ್ಥಳಗಳಲ್ಲಿ ಅನುಮತಿ ಪಡೆದು ಹೊಸ ಕೊಳವೆ ಬಾವಿ ಕೊರೆಯಲು ಟೆಂಡರ್ ಅಹ್ವಾನಿಸಬೇಕು, ಪೈಪ್ ಲೈನ್ ಅಳವಡಿಕೆ, ಕೊಳವೆ ಬಾವಿ ದುರಸ್ತಿ ಸೇರಿ ಇನ್ನಿತರ ಸಮಸ್ಯೆಗೂ ತಮ್ಮ ಹಂತದಲ್ಲಿ ಪರಿಹಾರ ಕಂಡುಕೊಳ್ಳಬೇಕು ಎಂದು ಸೂಚಿಸಿದರು.

ಒಟ್ನಲ್ಲಿ ಇದೀಗ ಬೆಂಗಳೂರಿನಲ್ಲಿ ಎದುರಾಗಿರುವ ನೀರಿನ ಸಮಸ್ಯೆಗೆ ಒಂದು ಮುಕ್ತಿಯನ್ನು ಕಾಣಿಸೋದಕ್ಕೆ ಬೆಂಗಳೂರು ಜಿಲ್ಲಾಡಳಿತ ಕ್ರಮ ಕೈಗೊಂಡಿದೆ. ಆದರೆ ಇದೀಗ ಕೈಗೊಂಡ, ಹಲವು ಕ್ರಮಗಳು ಅದೆಷ್ಟು ವೇಗವಾಗಿ ಜಾರಿಗೆ ಬರಲಿವೆ..? ಈ ಮೂಲಕ ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಹೇಗೆ ಬಗೆಹರಿಯುತ್ತೆ? ಅನ್ನೋದನ್ನ ಕಾದು ನೋಡಬೇಕಿದೆ.












Click it and Unblock the Notifications