ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಪುತ್ರನಿಗೆ ಬ್ಲಾಕ್ ಮೇಲ್
ಬೆಂಗಳೂರು, ಜ. 09: ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಅವರ ಪುತ್ರ ನಿಶಾಂತ್ ಅಶ್ಲೀಲ ವಿಡಿಯೋ ತೋರಿಸಿ ಬ್ಲಾಕ್ ಮೇಲ್ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಕುರಿತು ಸಚಿವ ಸೋಮಶೇಖರ್ ಅವರ ಪುತ್ರ ನಿಶಾಂತ್ ಸೈಬರ್ ಕ್ರೈಂ ಪೊಲೀಸರಿಗೆ ನೀಡಿರುವ ದೂರನ್ನಾಧರಿಸಿ ಸಿಸಿಬಿ ಹಾಗೂ ಸೈಬರ್ ಪೊಲೀಸರ ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ.
ಇತರೆ ಮೂವರನ್ನು ವಶಕ್ಕೆ ಪಡೆದಿದ್ದಾರೆ. ರಾಹುಲ್ ಭಟ್ ಬಂಧಿತ ಅರೋಪಿಯಾಗಿದ್ದು, ಸಚಿವ ಸೋಮಶೇಖರ್ ಅವರ ಮಾಜಿ ಗನ್ ಮ್ಯಾನ್ನನ್ನು ಗೋವಾದಲ್ಲಿ ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಈ ಪ್ರಕರಣದಲ್ಲಿ ಉತ್ತರ ಕರ್ನಾಟಕ ಮೂಲದ ಶಾಸಕಿಯೊಬ್ಬರ ಪುತ್ರಿಯೂ ಶಾಮೀಲಾಗಿರುವ ಮಾತು ಕೇಳಿ ಬರುತ್ತಿದೆ.
ಬಂಧಿತ ಜ್ಯೋತಿಷಿಯಬ್ಬರ ಪುತ್ರ ರಾಹುಲ್ ಭಟ್ ಎಂಬುದು ಗೊತ್ತಾಗಿದೆ. ಇತ್ತೀಚೆಗೆ ಸೋಮಶೇಖರ್ ಅವರ ಆಪ್ತ ಸಹಾಯಕರ ಮೊಬೈಲ್ ಸಂಖ್ಯೆಗೆ ವಿದೇಶಿ ಮೊಬೈಲ್ ಸಂಖ್ಯೆಯಿಂದ ವಾಟ್ಸಾಪ್ನಲ್ಲಿ ಸಂದೇಶ ರವಾನಿಸಲಾಗಿತ್ತು. ನಿಮ್ಮ ಪುತ್ರನ ಅಶ್ಲೀಲ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ಬಿಡುಗಡೆ ಮಾಡುತ್ತೇವೆ. ಇದನ್ನು ತಡೆಯಲು ಒಂದು ಕೋಟಿ ರೂ. ನೀಡುವಂತೆ ಬೇಡಿಕೆ ಇಟ್ಟಿದ್ದಾರೆ.

ಹಣಕ್ಕೆ ಬೇಡಿಕೆ ಇಟ್ಟು ಬೇಡಿಕೆ ಮಾಡಿರುವ ಹಿನ್ನೆಲೆಯಲ್ಲಿ ಸೋಮಶೇಖರ್ ಅವರ ಪುತ್ರ ನಿಶಾಂತ್ ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಬಳಿಕ ಇದೀಗ ಒಬ್ಬ ಅರೋಪಿಯನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

ಸೋಮಶೇಖರ್ ಹೇಳಿಕೆ: ಯುಕೆ ನಂಬರ್ನಿಂದ ಡಿ. 25 ರಂದು ವಾಟ್ಸಾಪ್ ಸಂದೇಶ ರವಾನಿಸಲಾಗಿತ್ತು. ನನ್ನನ್ನು ರಾಜಕೀಯವಾಗಿ ತೇಜೋವಧೆ ಮಾಡುವ ಉದ್ದೇಶದಿಂದ ಈ ಕೃತ್ಯ ಮಾಡಿರುವ ಸಂಶಯವಿದೆ. ಹೀಗಾಗಿ ನಾನು ದೂರು ನೀಡಿದ್ದೇನೆ. ಆದರೆ, ನನ್ನ ಪುತ್ರ ಊಟ ಮಾಡುವ ಚಿತ್ರಗಳನ್ನು ಪಡೆದು ವಿಡಿಯೋ ಮಾಡಿದ್ದು, ಇದನ್ನು ಮಾರ್ಫ್ ಮಾಡಿರುವ ಸಾಧ್ಯತೆಯಿದೆ. ಹೀಗಾಗಿ ವಿಡಿಯೋ ಸಮೇತ ದೂರು ನೀಡಿದ್ದೇವೆ. ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಬಳಿಕ ಅಸಲಿ ಸತ್ಯ ಗೊತ್ತಾಗಲಿದೆ ಎಂದು ಸೋಮಶೇಖರ್ ಸ್ಪಷ್ಟನೆ ನೀಡಿದ್ದಾರೆ.

ಈ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಲಿದೆ. ಕಾಲ ಮಿಂಚಿಲ್ಲ. ಇದನ್ನು ಇತ್ಯರ್ಥ ಮಾಡಿಕೊಳ್ಳಿ ಎಂದು ನನ್ನ ಆಪ್ತರಿಗೆ ಪದೇ ಪದೇ ಸಂದೇಶ ಮಾಡಿದ್ದಾರೆ. ಸಂದೇಶ ಮಾಡಿದ ಕೂಡಲೇ ಮೊಬೈಲ್ ಆಫ್ ಮಾಡಿಕೊಳ್ಳುತ್ತಿದ್ದರು. ಹೀಗಾಗಿ ಈ ಕುರಿತು ದೂರು ಕೊಡಲಾಗಿದೆ. ಯುಕೆ ಆಧಾರಿತ ಮೊಬೈಲ್ ನಂಬರ್ನಿಂದ ಸಂದೇಶ ಬಂದಿದೆ ಎಂದು ಸೋಮಶೇಖರ್ ಖಾಸಗಿ ವಾಹಿನಿಯೊಂದಕ್ಕೆ ಸ್ಪಷ್ಟನೆ ನೀಡಿದ್ದಾರೆ.












Click it and Unblock the Notifications