ಬಾಲಬ್ರೂಯಿಯನ್ನು ಸಾಂವಿಧಾನಿಕ ಕಬ್ಲ್ ಮಾಡಲು ಹೈಕೋರ್ಟ್ ಒಪ್ಪಿಗೆ
ಬೆಂಗಳೂರು, ಜನವರಿ 17; ಸುಮಾರು ಐದಾರು ವರ್ಷಗಳಿಂದ ನೆನಗುದಿಗೆ ಬಿದ್ದಿರುವ ಬೆಂಗಳೂರು ನಗರದ ಬಾಲಬ್ರೂಯಿ ಅತಿಥಿ ಗೃಹವನ್ನು ಸಾಂವಿಧಾನಿಕ ಕ್ಲಬ್ ಆಗಿ ಪರಿವರ್ತಿಸುವುದಕ್ಕೆ ಕೊನೆಗೂ ಘಳಿಗೆ ಕೂಡಿ ಬಂದಂತೆ ಕಾಣುತ್ತಿದೆ.
ಒಂದೂವರೆ ವರ್ಷದಿಂದ ನ್ಯಾಯಾಲಯದ ಮುಂದಿದ್ದ ವಿಚಾರದಲ್ಲಿ ಕೊನೆಗೂ ಹೈಕೋರ್ಟ್ ಒಪ್ಪಿಗೆ ನೀಡಿದೆ. ಹಾಗಾಗಿ ಸುಮಾರು 150 ರಿಂದ 200 ವರ್ಷಗಳ ಹಳೆಯ ಮರಗಳ ನಡುವೆ ಇರುವ ನಗರದ ಪಾರಂಪರಿಕ ಕಟ್ಟಡಗಳಲ್ಲಿ ಒಂದಾದ ಬಾಲಬ್ರೂಯಿ ಅತಿಥಿ ಗೃಹ ಕಾನ್ಸ್ಟಿಟ್ಯೂಷನ್ ಕ್ಲಬ್ ಆಗಿ ಪರಿವರ್ತನೆಯಾಗಲಿದೆ.
ದತ್ತಾತ್ರೇಯ ಟಿ. ದೇವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ. ಬಿ. ವರಳೆ ಮತ್ತು ಆಶೋಕ್ ಎಸ್. ಕಿಣಗಿ ಅವರಿದ್ದ, ವಿಭಾಗೀಯ ಪೀಠ ಈ ಆದೇಶ ನೀಡಿದೆ.

ಬಾಲಬ್ರೂಯಿ ಕಟ್ಟಡ ಮತ್ತು ಪುರಾತನ ಮರಗಳಿಗೆ ಹಾನಿಯಾಗದಂತೆ ಕಾನ್ಸ್ಟಿಟ್ಯೂಷನ್ ಕ್ಲಬ್ ಸ್ಥಾಪನೆ ಮಾಡಬಹುದು ಎಂದು ಆದೇಶ ನೀಡಿದೆ, ಜತೆಗೆ ಬಾಲಬ್ರೂಯಿ ಅತಿಥಿ ಗೃಹವನ್ನು ಕಾನ್ಸ್ಟಿಟ್ಯೂಟ್ ಕ್ಲಬ್ ಅನ್ನಾಗಿ ಪರಿವರ್ತಿಸುವ ನಿರ್ಧಾರ ಮತ್ತು ಅತಿಥಿ ಗೃಹದ ಆವರಣದಲ್ಲಿನ ಮರಗಳನ್ನು ಕಡಿಯುವುದರ ಸಂಬಂಧ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ 2021ರ ಅಕ್ಟೋಬರ್ 7 ರಂದು ಹೈಕೋರ್ಟ್ನ ವಿಭಾಗೀಯ ಪೀಠ ನೀಡಿದ್ದ ಆದೇಶವನ್ನು ಮಾರ್ಪಾಡು ಮಾಡಿದೆ.
ಸರ್ಕಾರಿ ವಕೀಲರು, ಕಟ್ಟಡದ ಕುರಿತು ಯಥಾಸ್ಥಿತಿ ಕಾಯ್ದಕೊಳ್ಳುವಂತೆ ಈ ಹಿಂದೆ ನೀಡಿದ್ದ ಆದೇಶ ತೆರವು ಕೋರಿ ಮಧ್ಯಂತರ ಅರ್ಜಿ ಸಲ್ಲಿಸಿದರು.
ಅಲ್ಲದೆ, ಅತಿಥಿ ಗೃಹದ ಪುನರ್ ನಿರ್ಮಾಣ, ಮರು ವಿನ್ಯಾಸ ಮತ್ತು ಕಟ್ಟಡ ಕೆಡವಬೇಕು ಎಂಬ ಪ್ರಸ್ತಾಪ ಸರ್ಕಾರದ ಮುಂದಿಲ್ಲ. ಕಟ್ಟಡದಲ್ಲಿ ಯಾವುದೇ ಮಾರ್ಪಾಡುಗಳನ್ನು ಮಾಡದೆ ಒಳಾಂಗಣದ ಸೌಂದರ್ಯ ಹೆಚ್ಚಳ ಮಾಡುವ ಪ್ರಸ್ತಾಪ ಇದೆ. ಜತೆಗೆ, ಈ ಕಟ್ಟಡವನ್ನು ಕಾನ್ಸ್ಟಿಟ್ಯೂಷನ್ ಕ್ಲಬ್ನ್ನಾಗಿ ಬದಲಾಯಿಸುವ ಉದ್ದೇಶವಿದೆ. ಕಟ್ಟಡದ ಆವರಣದಲ್ಲಿರುವ ಯಾವುದೇ ಮರಗಳನ್ನು ಕಡಿಯುವುದು, ಹಾನಿ ಮಾಡುವುದಕ್ಕೆ ಮುಂದಾಗುವುದಿಲ್ಲ ಎಂದು ಸರ್ಕಾರದ ಭರವಸೆ ನೀಡಿತು.
ಐತಿಹಾಸಿಕ ಹಿನ್ನೆಲೆ: ಬ್ರಿಟೀಷ್ ಆಡಳಿತದಲ್ಲಿ ಕಮಿಷನರ್ ಆಗಿದ್ದ ಮಾರ್ಕ್ ಕಬ್ಬನ್ ಸುಮಾರು 14 ಎಕರೆ ಪ್ರದೇಶದಲ್ಲಿ ಬಾಲಬ್ರೂಯಿ ಅತಿಥಿ ಗೃಹವನ್ನು ನಿರ್ಮಿಸಿದ್ದರು. ಈ ಕಟ್ಟಡದ ಆವರಣದಲ್ಲಿರುವ 200 ವರ್ಷಗಳಿಗೂ ಹಳೆಯ ಮರಗಳ 40 ಅಡಿಗಳಷ್ಟು ಬೇರು ಹೊಂದಿದ್ದು, ಮಳೆ ನೀರನ್ನು ಸಂಗ್ರಹಿಸುತ್ತವೆ.
ಅಲ್ಲದೇ, ರಾಷ್ಟ್ರಪಿತ ಮಹಾತ್ಮಾ ಗಾಂಧಿ, ಭಾರತ ರತ್ನ ಸರ್. ಎಂ. ವಿಶ್ವೇಶ್ವರಯ್ಯ, ರವೀಂದ್ರನಾಥ ಟಾಗೂರ್ ಸೇರಿದಂತೆ ಹಲವು ಪ್ರಧಾನ ಮಂತ್ರಿಗಳು, ಮುಖ್ಯ ಮಂತ್ರಿಗಳು ತಂಗಿದ್ದ ಇತಿಹಾಸವಿದೆ. ಹೀಗಾಗಿ ಕಟ್ಟಡವನ್ನು ಪರಿವರ್ತನೆ ಮಾಡದಂತೆ ಕೋರಿದ್ದರು.












Click it and Unblock the Notifications