ಬಹಿರಂಗ ಪ್ರಚಾರ ಮುಗಿದ ಬೆನ್ನಲ್ಲೇ ಅಲ್ಲೋಲಕಲ್ಲೋಲ ಸೃಷ್ಟಿಸುವ ಕಾಂಗ್ರೆಸ್ ಹೇಳಿಕೆ
ಆಂತರಿಕ ಸಮೀಕ್ಷೆಯಲ್ಲಿ ಸರಕಾರ ಉಳಿಸಿಕೊಳ್ಳುವಷ್ಟು ಸ್ಥಾನ ಬಿಜೆಪಿ ಗೆಲ್ಲುತ್ತದೆ ಎನ್ನುವ ವರದಿ ಬಂದಿದ್ದರೂ. ಬೇರೆ ಪಕ್ಷದ ಶಾಸಕರನ್ನು ಸೆಳೆಯುವ ಕೆಲಸವನ್ನು ಬಿಜೆಪಿ ಮಾಡುತ್ತಿದೆಯಾ?
ಉಪಚುನಾವಣೆಯಲ್ಲಿ ಕನಿಷ್ಠ ಎಂಟು ಸ್ಥಾನವನ್ನು ಗೆಲ್ಲುವ ವಿಶ್ವಾಸವನ್ನು ಬಿಜೆಪಿ ಕಳೆದುಕೊಂಡಿದೆಯಾ ಎನ್ನುವ ಪ್ರಶ್ನೆ, ಕಾಡುವುದು ಕೆಪಿಸಿಸಿ ಅಧ್ಯಕ್ಷರು ನೀಡಿರುವ ಹೇಳಿಕೆ.
ಸರಕಾರ ಉಳಿಸಿಕೊಳ್ಳಲು ಬಿಜೆಪಿ, ಆಪರೇಷನ್ ಕಮಲಕ್ಕೆ ಕೈ ಹಾಕಿದರೆ, ಕಾಂಗ್ರೆಸ್, ರಿವರ್ಸ್ ಆಪರೇಷನ್ ಮಾಡುವ ಸುದ್ದಿ, ಮಂಗಳವಾರ (ಡಿ 3) ಹರಿದಾಡುತ್ತಿತ್ತು.
ಉಪಚುನಾವಣೆಗೆ ಬಹಿರಂಗ ಪ್ರಚಾರ ಮುಗಿದ ಬೆನ್ನಲ್ಲೇ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಬಿಜೆಪಿಯ, ಮತ್ತೊಂದು ಸುತ್ತಿನ 'ಆಪರೇಷನ್ ಕಮಲ'ದ ಬಗ್ಗೆ ಮಹತ್ವದ ಹೇಳಿಕೆಯನ್ನು ನೀಡಿದ್ದಾರೆ.

ಆಪರೇಷನ್ ಕಮಲಕ್ಕೆ ಕೈಹಾಕುವ ಸಾಧ್ಯತೆ
ಒಂದು ವೇಳೆ ನಿರೀಕ್ಷಿತ ಸ್ಥಾನವನ್ನು ಗೆಲ್ಲದಿದ್ದರೆ, ಮತ್ತೊಂದು ಸುತ್ತಿನ ಆಪರೇಷನ್ ಕಮಲಕ್ಕೆ ಬಿಜೆಪಿ ಕೈಹಾಕುವ ಸಾಧ್ಯತೆಯ ಬಗ್ಗೆ ಕಾಂಗ್ರೆಸ್ ವಲಯದಲ್ಲಿ ಚರ್ಚೆ ನಡೆದಿತ್ತು. ಈ ವಿಚಾರವನ್ನೇ, ಇಟ್ಟುಕೊಂಡು, ದಿನೇಶ್ ಗುಂಡೂರಾವ್, ಬಿಜೆಪಿ ವಿರುದ್ದ ವಾಕ್ ಪ್ರಹಾರ ನಡೆಸಿದ್ದಾರೆ.

ಜನರೇ ಅವರಿಗೆ ಬುದ್ದಿ ಕಲಿಸಲಿದ್ದಾರೆ
"ಬಿಜೆಪಿಯವರು ಆಪರೇಷನ್ ಕಮಲವನ್ನು ಮತ್ತೆ ಮುಂದುವರೆಸಿದರೆ ಜನರೇ ಅವರಿಗೆ ಬುದ್ದಿ ಕಲಿಸಲಿದ್ದಾರೆ. ಡಿಸೆಂಬರ್ 9ರ ನಂತರ ರಾಜ್ಯ ರಾಜಕಾರಣದಲ್ಲಿ ಬದಲಾವಣೆಯಾಗಲಿದೆ. ಯಾವ ಸರ್ಕಾರ ಬರುತ್ತದೆ ಎನ್ನುವುದು ಮುಖ್ಯವಲ್ಲ. ಬಿಜೆಪಿಯನ್ನು ಸೋಲಿಸುವುದನ್ನೇ ನಮ್ಮ ಗುರಿ ಎನ್ನುವುದನ್ನು ಪ್ರಚಾರದ ವೇಳೆ ಇಟ್ಟುಕೊಂಡಿದ್ದೆವು" - ದಿನೇಶ್ ಗುಂಡೂರಾವ್.

ಚುನಾವಣೆಯಲ್ಲಿ ಸೋಲಿನ ಭಯ
"ನಮ್ಮ ಪಕ್ಷದ ಶಾಸಕರನ್ನು ಮತ್ತೆ ಸಂಪರ್ಕಿಸುತ್ತಿರುವ ಮೂಲಕ, ಬಿಜೆಪಿ, ಮತ್ತೆ ಆಪರೇಷನ್ ಕಮಲಕ್ಕೆ ಕೈಹಾಕಿದೆ. ಅವರಿಗೆ ಉಪಚುನಾವಣೆಯಲ್ಲಿ ಸೋಲಿನ ಭಯ. ಮತ್ತೊಮ್ಮೆ, ಇಂತಹ ದುಸ್ಸಾಹಸಕ್ಕೆ ಕೈಹಾಕಿದರೆ, ಜನ ನಿಮ್ಮನ್ನು ಬೀದಿ ಬೀದಿಯಲ್ಲಿ ಅಟ್ಟಾಡಿಸಿಕೊಂಡು ಹೊಡೆಯಲಿದ್ದಾರೆ" - ದಿನೇಶ್ ಗುಂಡೂರಾವ್.

ಚುನಾವಣೆಯ ನಂತರವೂ ಬಿಜೆಪಿ 105ರ ಮೇಲೆ ಹೋಗುವುದಿಲ್ಲ
"ಚುನಾವಣೆಯ ನಂತರವೂ ಬಿಜೆಪಿ 105ರ ಮೇಲೆ ಹೋಗುವುದಿಲ್ಲ" ಎಂದು ಭವಿಷ್ಯ ನುಡಿದ ದಿನೇಶ್, ಯಶವಂತಪುರ, ರಾಜರಾಜೇಶ್ವರಿ ನಗರ ಮತ್ತು ಕೆ.ಆರ್.ಪುರಂನ ಅನರ್ಹ ಶಾಸಕರು ಮತ್ತೆ ಕಾಂಗ್ರೆಸ್ಸಿಗೆ ಬರಲು ಬಯಸಿದ್ದರು. ಆದರೆ, ಕಾಂಗ್ರೆಸ್ ಅವರಿಗೆ ಅವಕಾಶ ನೀಡಲಿಲ್ಲ" ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿದ ಬಿಜೆಪಿ
"ಬಿಜೆಪಿ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿ, ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿ ಅನೈತಿಕ ರಾಜಕಾರಣ ಮಾಡುತ್ತಿದೆ. ಆದರೆ ಕಾಂಗ್ರೆಸ್ ಕಳಂಕ ರಹಿತರಿಗೆ, ಅರ್ಹರಿಗೆ ಟಿಕೆಟ್ ನೀಡಿದೆ. ಎಲ್ಲಿಯೂ ಕಾನೂನು ಮೀರಿ, ನೀತಿ ಸಂಹಿತೆ ಉಲ್ಲಂಘನೆ ಮಾಡಿಲ್ಲ. ಹಾಗಾಗಿ ನಮ್ಮ ಅಭ್ಯರ್ಥಿಗಳಿಗೆ ಮತ ಚಲಾಯಿಸಿ ಎಂದು ಮನವಿ ಮಾಡುವೆ" ಎಂದು ದಿನೇಶ್ ಗುಂಡೂರಾವ್ ಮನವಿ ಮಾಡಿದ್ದಾರೆ.












Click it and Unblock the Notifications