ಬಿಡಿಎ ಸೈಟು ಆರೋಪ, ವಿ.ಆರ್.ಸುದರ್ಶನ್ಗೆ ಕ್ಲೀನ್ಚಿಟ್
ಬೆಂಗಳೂರು, ಮಾ. 26 : ಸುಳ್ಳು ಪ್ರಮಾಣ ಪತ್ರ ಸಲ್ಲಿಸಿ ವಿ.ಆರ್.ಸುದರ್ಶನ್ ಅವರು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ನಿವೇಶನ ಪಡೆದಿಲ್ಲ ಎಂಬುದು ಲೋಕಾಯುಕ್ತ ತನಿಖೆಯಿಂದ ಸಾಬೀತಾಗಿದೆ. ಟಿ.ಜೆ.ಅಬ್ರಾಹಂ ಸಲ್ಲಿಸಿದ್ದ ದೂರಿನ ತನಿಖೆ ನಡೆಸಿದ ಲೋಕಾಯುಕ್ತರು ಸುದರ್ಶನ್ ಅವರಿಗೆ ಕ್ಲೀನ್ಚಿಟ್ ನೀಡಿದ್ದಾರೆ.
ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಾಹಂ ಅವರು 2015ರ ಜನವರಿಯಲ್ಲಿ ವಿ.ಆರ್.ಸುದರ್ಶನ್ ಸುಳ್ಳು ಪ್ರಮಾಣ ಪತ್ರ ಗಳನ್ನು ನೀಡಿ ಬಿಡಿಎ ಸೈಟು ಪಡೆದಿದ್ದಾರೆ. ಅವರಿಗೆ ನೀಡಿರುವ ನಿವೇಶನವನ್ನು ವಾಪಸ್ ಪಡೆಯಬೇಕು ಎಂದು ಲೋಕಾಯುಕ್ತರಿಗೆ ದೂರು ನೀಡಿದ್ದರು. [ಸುದರ್ಶನ್ ನೇಮಕಕ್ಕೆ ರಾಜ್ಯಪಾಲರ ಒಪ್ಪಿಗೆ ಇಲ್ಲ]

ದೂರಿನ ಅನ್ವಯ ತನಿಖೆ ನಡೆಸಿದ ಲೋಕಾಯುಕ್ತ ಪೊಲೀಸರು ಸುದರ್ಶನ್ ಅವರು ಸುಳ್ಳು ಪ್ರಮಾಣ ಪತ್ರಗಳನ್ನು ನೀಡಿ ನಿವೇಶನ ಪಡೆದಿರುವುದು ಸಾಬೀತಾಗಿಲ್ಲ ಎಂದು ಕ್ಲೀನ್ಚಿಟ್ ನೀಡಿದ್ದಾರೆ. ನಿಯಮಗಳಿಗೆ ಅನ್ವಯವಾಗಿಯೇ ಅವರಿಗೆ ಸೈಟು ನೀಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ದೂರಿನಲ್ಲಿ ಏನಿತ್ತು : 2001ರಲ್ಲಿ ಸುದರ್ಶನ್ ಅವರಿಗೆ ಬಿಡಿಎಯಿಂದ ಜಿ ಕೆಟಗರಿ ನಿವೇಶನ ಮಂಜೂರಾಗಿತ್ತು. ಆಗ ಅವರು ತಮ್ಮ ಹೆಸರಿನಲ್ಲಿ ನಗರದಲ್ಲಿ ನಿವೇಶನವಿಲ್ಲ ಎಂದು ಪ್ರಮಾಣ ಪತ್ರ ಸಲ್ಲಿಸಿದ್ದರು. ಸುದರ್ಶನ್ ಅವರ ಪುತ್ರ ವಿ.ಎಸ್.ಅರ್ಜುನ್ ಅವರಿಗೆ ಎನ್ಐಟಿ ಗೃಹ ನಿರ್ಮಾಣ ಸಂಘದಿಂದ ನಿವೇಶನ ಮಂಜೂರಾಗಿತ್ತು. ಆದ್ದರಿಂದ ಸುಳ್ಳು ಪ್ರಮಾಣ ಪತ್ರ ಸಲ್ಲಿಸಿದ್ದಾರೆ ಎಂದು ಆರೋಪಿಸಲಾಗಿತ್ತು.
ಲೋಕಾಯುಕ್ತ ತನಿಖೆಯಲ್ಲಿ ವಿ.ಎಸ್.ಅರ್ಜುನ್ ಅವರು ಪಡೆದಿರುವ ಸೈಟಿಗೆ ಅವರೇ ಮಾಲೀಕರು ಎಂಬುದು ತಿಳಿದುಬಂದಿದೆ. ಆದ್ದರಿಂದ, ಸುದರ್ಶನ್ ಅವರು ಸುಳ್ಳು ಪ್ರಮಾಣ ಪತ್ರ ಸಲ್ಲಿಸಿಲ್ಲ ಎಂದು ಸಾಬೀತಾಗಿದ್ದು, ಬಿಡಿಎ ನಿಯಮಗಳ ಅನ್ವಯವೇ ನಿವೇಶನ ಹಂಚಿಕೆಯಾಗಿದೆ ಎಂದು ಹೇಳಿರುವ ಪೊಲೀಸರು ಸುದರ್ಶನ್ ಅವರಿಗೆ ಕ್ಲೀನ್ಚಿಟ್ ನೀಡಿದ್ದಾರೆ.
ವಿ.ಆರ್.ಸುದರ್ಶನ್ ಅವರ ಹೆಸರನ್ನು ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷ ಹುದ್ದೆಗೆ ಶಿಫಾರಸು ಮಾಡಲಾಗಿತ್ತು. ಆದರೆ, ಅವರ ವಿರುದ್ಧ ಅಕ್ರಮವಾಗಿ ಸೈಟು ಪಡೆದ ಆರೋಪವಿದೆ ಎಂದು ಬಿಜೆಪಿ ರಾಜ್ಯಪಾಲರಿಗೆ ದೂರು ನೀಡಿತ್ತು. ರಾಜ್ಯಪಾಲರು ಸುದರ್ಶನ್ ಅವರನ್ನು ಅಧ್ಯಕ್ಷ ಹುದ್ದೆಗೆ ನೇಮಕ ಮಾಡಲು ಒಪ್ಪಿಗೆ ನೀಡಿಲ್ಲ.












Click it and Unblock the Notifications