ಗಡಿ ವಿವಾದ; ನಮ್ಮ ನಿಲುವು ಕಾನೂನು ಬದ್ಧವಾಗಿದೆ: ಬಸವರಾಜ ಬೊಮ್ಮಾಯಿ
ಬೆಂಗಳೂರು, ಡಿಸೆಂಬರ್ 1: ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿ ವಿವಾದದಲ್ಲಿ ರಾಜ್ಯದ ನಿಲುವು ಸ್ಪಷ್ಟವಾಗಿದ್ದು, ಸಾಂವಿಧಾನಿಕ ಹಾಗೂ ಕಾನೂನು ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತ ಯ್ಯನವರ ಪುಣ್ಯತಿಥಿಯ ಅಂಗವಾಗಿ ವಿಧಾನ ಸೌಧದ ಆವರಣದಲ್ಲಿರುವ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಸಂಬಂಧ ಇಂದು ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆ ನಡೆಯಲಿದೆ. ರಾಜ್ಯದ ನಿಲುವು ಸ್ಪಷ್ಟವಾಗಿದೆ. ಮಹಾರಾಷ್ಟ್ರದ ಅರ್ಜಿಯನ್ನು ನ್ಯಾಯಾಲಯ ಪರಿಗಣಿಸುವುದಿಲ್ಲ. ನಮ್ಮ ರಾಜ್ಯದ ನಿಲುವು ಬಹಳ ಸ್ಪಷ್ಟ, ಮಹಾರಾಷ್ಟ್ರದ ಅರ್ಜಿ ಮೇಂಟೇನೇಬಲ್ ಅಲ್ಲ ಅನ್ನೋದು ನಮ್ಮ ನಿಲುವು, ಇದನ್ನೇ ನಮ್ಮ ವಕೀಲರು ವಾದ ಮಾಡ್ತಾರೆ. ಆ ಎಲ್ಲ ಅಂಶಗಳನ್ನು ನಮ್ಮ ವಕೀಲರು ವಾದ ಮಾಡ್ತಾರೆ ಎಂದರು.
ಜನವರಿಯಲ್ಲಿ ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ ವೇ ಓಪನ್?
ರೌಡಿ ಶೀಟರ್ ಸುನೀಲ್ ಪಕ್ಷಕ್ಕೆ ಸೇರಿಸಿಕೊಳ್ಳುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಇದರ ಬಗ್ಗೆ ನಾನು ಹೆಚ್ಚಿಗೆ ಮಾತಾಡಲು ಹೋಗಲ್ಲ, ನಾವು ಯಾವುದೇ ರೌಡಿಗಳನ್ನು ಸೇರಿಸಿಕೊಂಡಿಲ್ಲ. ರೌಡಿಗಳನ್ನು ನಾವು ಪ್ರೋತ್ಸಾಹನೂ ಮಾಡಲ್ಲ.ಅವರಿಗೆ ಯಾವುದೇ ಅವಕಾಶಗಳನ್ನೂ ಕೊಡಲ್ಲ, ಇದು ಬಹಳ ಸ್ಪಷ್ಟ, ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟ ಪಡಿಸಿದರು.
ವಕ್ಫ್ ಬೋರ್ಡ್ ನಿಂದ ಮುಸ್ಲಿಮ್ ಯುವತಿಯರಿಗೆ ಪ್ರತ್ಯೇಕ ಕಾಲೇಜು ತೆರೆಯುವ ವಿಚಾರವಾಗಿ ಮಾತನಾಡಿ, ಪ್ರತ್ಯೇಕ ಕಾಲೇಜು ಬಗ್ಗೆ ನಮ್ಮ ಸರ್ಕಾರದಲ್ಲಿ ಯಾವುದೇ ಚರ್ಚೆ ನಡೆದಿಲ್ಲ, ಇದು ನಮ್ಮ ಸರ್ಕಾರದ ನಿಲುವು ಕೂಡಾ ಆಗಿಲ್ಲ. ಆ ಥರದ್ದು ಏನಾದರೂ ಪ್ರಸ್ತಾವನೆ ಇದ್ರೆ ವಕ್ಫ್ ಬೋರ್ಡ್ ಅಧ್ಯಕ್ಷರೇ ಬಂದು ನನ್ನ ಜತೆ ಚರ್ಚೆ ಮಾಡಲಿ ಎಂದರು.
ಕೆಂಗಲ್ ಹನುಮಂತಯ್ಯ ಕರ್ನಾಟಕಕ್ಕೆ ಅಭಿವೃದ್ಧಿಯ ನೀಲನಕ್ಷೆ ಹಾಕಿದವರು
ಕೆಂಗಲ್ ಹನುಮಂತಯ್ಯನವರು ಕರ್ನಾಟಕದ ಅಭಿವೃದ್ಧಿಗೆ ನೀಲನಕ್ಷೆ ಹಾಕಿದವರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ವಿಧಾನಸೌಧದ ನಿರ್ಮಾತೃ, ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಕೆಂಗಲ್ ಹನುಮಂತಯ್ಯ ಅವರ ಪುಣ್ಯತಿಥಿಯ ಅಂಗವಾಗಿ ಅವರನ್ನು ಇಂದು ಸ್ಮರಿಸಿದ್ದೇವೆ. ಅವರ ಕಾರ್ಯಕ್ರಮಗಳು, ಬಿಟ್ಟು ಹೋಗಿರುವ ತತ್ವ ಆದರ್ಶಗಳನ್ನು ಸ್ಮರಿಸುವ ದಿನವಾಗಿದೆ. ಕೆಂಗಲ್ ಹನುಮಂತಯ್ಯ ಅವರು ಮೈಸೂರು ಪ್ರಾಂತ್ಯದ ಅತ್ಯಂತ ಹಿರಿಯ, ಪ್ರಮುಖ ನಾಯಕರಾಗಿದ್ದರು. ಕರ್ನಾಟಕದ ಏಕೀಕರಣದಲ್ಲಿ ಮಹತ್ವದ ಪಾತ್ರವನ್ನು ವಹಿಸಿ ಅವರು ಇಡೀ ಕನ್ನಡ ನಾಡಿನ ಬಗ್ಗೆ ಅಪ್ರತಿಮ ಪ್ರೀತಿ, ಕನ್ನಡಿಗರು ಒಂದಾಗಬೇಕೆಂಬ ಹೆಬ್ಬಯಕೆ ಇತ್ತು. ಮೈಸೂರು ಒಡೆಯರ ರಾಜಮನೆತನದ ಪ್ರಭಾವ ಅವರ ಮೇಲಿತ್ತು. ಅಭಿವೃದ್ಧಿಯನ್ನು ರಾಜಕಾರಣದ ಮೂಲ ಮಂತ್ರವಾಗಬೇಕು ಎಂದು ನಾಡಿನ ಅಭಿವೃದ್ಧಿಯ ಬಗ್ಗೆ ಸದಾ ಚಿಂತನೆ ಮಾಡಿದವರು ಎಂದರು.
ಅಂದಿನ ಮೈಸೂರು ರಾಜ್ಯವಾದ ತಕ್ಷಣ ಬೆಂಗಳೂರು ಅದರ ಶಕ್ತಿ ಕೇಂದ್ರವಾಗಬೇಕೆಂದು ಯೋಚಿಸಿ, ಕರ್ನಾಟಕದ ಶಕ್ತಿ ಸೌಧ ವಿಧಾನಸೌಧದ ನಿರ್ಮಿಸಿದರು. ಅವರ ದೂರದೃಷ್ಟಿಯಿಂದ ಭವ್ಯವಾದ ವಿಧಾನಸೌಧ ನಮಗೆ ಕೊಟ್ಟಿದ್ದಾರೆ. ಇಡೀ ಭಾರತ ದೇಶದಲ್ಲಿ ವಿಧಾನ ಮಂಡಲಗಳ ಕಚೇರಿ ಯಾವುದೇ ರಾಜ್ಯದಲ್ಲಿ ಇಲ್ಲ. ಇದರಲ್ಲಿ ಕುಳಿತು ಅವರ ಆಡಳಿತ ಮಾಡಲು ಸಾಧ್ಯವಾಗಲಿಲ್ಲ. ಆದರೆ ಜನಮಾನಸದಲ್ಲಿ, ತಮ್ಮದೇ ಆದ ಶಾಶ್ವತ ಸ್ಥಾನ ಗಳಿಸಿದ್ದಾರೆ.
ಕೇಂದ್ರದ ರೈಲ್ವೆ ಸಚಿವರಾಗಿ ರಾಜ್ಯದಲ್ಲಿ ಡಬಲ್ ಲೈನ್ ರೈಲ್ವೆ ಆಗಬೇಕೆಂದು ಪ್ರಥಮ ಬಾರಿಗೆ ಚಿಂತನೆ ಮಾಡಿದವರು ಹನುಮಂತಯ್ಯ ಅವರು. ಅವರು ಹಾಕಿರುವ ಬುನಾದಿಯಿಂದ ಕರ್ನಾಟಕದಲ್ಲಿ ಪ್ರಗತಿ ಕಾಣಲು ಸಾಧ್ಯವಾಯಿತು. ಆಡಳಿತದ ಬಗ್ಗೆ ಬಹಳಷ್ಟು ವಿಚಾರ ಗಳಿದ್ದಂಥವರು. ಆಡಳಿತ ಸುಧಾರಣೆಯ ಅಧ್ಯಕ್ಷರಾಗಿ ಕೆಲಸ ಮಾಡಿದವರು. ಸ್ವಾತಂತ್ರ್ಯ ನಂತರ ಅವರನ್ನು ಸದಾ ಸ್ಮರಣೆ ಮಾಡಿ, ಅವರು ಹಾಕಿಕೊಟ್ಟ ಹಾದಿಯಲ್ಲಿ ನಡೆಯಬೇಕು. ಜಾತಿ , ಮತ, ಪಂಥವನ್ನು ಮೀರಿ ಕೆಲಸ ಮಾಡಿದವರು. ಪ್ರಾಮಾಣಿಕತೆಗೆ ಮತ್ತೊಂದು ಹೆಸರಾಗಿದ್ದರು.ಅವರ ಆದರ್ಶ ಬರುವ ದಿನಗಳಲ್ಲಿ ನಮಗೆ ದಾರಿ ದೀಪವಾಗುತ್ತದೆ ಎಂದರು.