ಜಿಲ್ಲಾ ಉಸ್ತುವಾರಿ ಸಚಿವರುಗಳನ್ನು ನೇಮಿಸಿದ ಬಸವರಾಜ ಬೊಮ್ಮಾಯಿ
ಬೆಂಗಳೂರು, ಆಗಸ್ಟ್ 4: ರಾಜ್ಯದಲ್ಲಿ ಕೋವಿಡ್-19 ನಿರ್ವಹಣೆ ಹಾಗೂ ನೆರೆ ಹಾವಳಿ ಪರಿಹಾರ ಕೆಲಸಗಳ ಪರಿಶೀಲನೆಗೆ ಮುಖ್ಯಮಂತ್ರಿ ಬಸವರಾಜ ಎಸ್.ಬೊಮ್ಮಾಯಿ, ಸಚಿವರುಗಳನ್ನು ಜಿಲ್ಲೆಗಳಿಗೆ, ತಕ್ಷಣದಿಂದ ಜಾರಿಗೆ ಬರುವಂತೆ, ಮುಂದಿನ ಆದೇಶದವರೆಗೆ ಹಂಚಿಕೆ ಮಾಡಿ ಆದೇಶಿಸಿದ್ದಾರೆ.
ಸಚಿವರುಗಳಿಗೆ ಜಿಲ್ಲೆಗಳನ್ನು ತಾತ್ಕಾಲಿಕವಾಗಿ ಹಂಚಿಕೆ ಮಾಡಲಾಗಿದೆ. ಸಚಿವರು ಹಂಚಿಕೆಯಾದ ಜಿಲ್ಲೆಗಳಿಗೆ ತೆರಳಿ ಕೋವಿಡ್ ನಿರ್ವಹಣೆ ಮತ್ತು ನೆರೆ ಹಾವಳಿ ಪರಿಹಾರ ಕೆಲಸಗಳನ್ನು ತ್ವರಿತವಾಗಿ ನಿರ್ವಹಿಸಲು ಸಚಿವರಿಗೆ ಸೂಚನೆ ನೀಡಲಾಗಿದೆ. ಮುಂದಿನ ಆದೇಶದವರೆಗೆ ಸಚಿವರು ಹಂಚಿಕೆಯಾದ ಜಿಲ್ಲೆಗಳ ಉಸ್ತುವಾರಿ ವಹಿಸಿ ಕಾರ್ಯ ನಿರ್ವಹಣೆ ಮಾಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಬಹುತೇಕ ನಿರೀಕ್ಷೆಯಂತೆ ಆಯಾ ಜಿಲ್ಲೆಗಳಿಂದ ವಿಧಾನಸಭೆಗೆ ಶಾಸಕರಾಗಿ ಆಯ್ಕೆಯಾದವರಿಗೆ ಉಸ್ತುವಾರಿ ಸಿಕ್ಕಿದೆ. ಕೆಲ ಸಚಿವರುಗಳಿಗೆ ಅಕ್ಕಪಕ್ಕದ ಜಿಲ್ಲೆ ಸಿಕ್ಕಿದೆ. ಈ ಪಟ್ಟಿ ಮುಂದಿನ ಬದಲಾವಣೆಗೆ ಒಳಪಟ್ಟಿದೆ. ಸಚಿವರ ಪ್ರಾತಿನಿಧ್ಯ ಕಾಣದ 13 ಜಿಲ್ಲೆಗಳಿಗೆ ಸದ್ಯಕ್ಕೆ ಉಸ್ತುವಾರಿ ಸಚಿವರುಗಳೇ ದಿಕ್ಕು ಎನ್ನಬಹುದು. ಆಗಸ್ಟ್ 15ರಂದು ಆಯಾ ಜಿಲ್ಲಾ ಕೇಂದ್ರಗಳಲ್ಲಿ ಈ ಸಚಿವರುಗಳೇ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಸಚಿವರಿಗೆ ಹಂಚಿಕೆಯಾದ ಜಿಲ್ಲೆಗಳು
1. ವಿ ಸೋಮಣ್ಣ- ರಾಯಚೂರು
2. ಶಂಕರ್ ಪಾಟೀಲ್ ಮುನೇನಕೊಪ್ಪ-ಧಾರವಾಡ
3. ಜೆ.ಸಿ ಮಾಧುಸ್ವಾಮಿ- ತುಮಕೂರು
4. ಮುರುಗೇಶ್ ನಿರಾಣಿ-ಕಲಬುರಗಿ
5. ಸಿ. ಸಿ ಪಾಟೀಲ-ಗದಗ
6. ಬಿ.ಸಿ ಪಾಟೀಲ್-ಹಾವೇರಿ
7. ಉಮೇಶ್ ಕತ್ತಿ-ಬಾಗಲಕೋಟೆ
8. ಶಶಿಕಲಾ ಜೊಲ್ಲೆ- ವಿಜಯಪುರ
9. ಆರ್ ಅಶೋಕ-ಬೆಂಗಳೂರು ನಗರ
10. ಎಸ್ ಟಿ ಸೋಮಶೇಖರ್-ಮೈಸೂರು ಹಾಗೂ ಚಾಮನಗರ
11. ಡಾ. ಸಿ. ಎನ್ ಅಶ್ವಥ ನಾರಾಯಣ-ರಾಮನಗರ
12. ಆರಗ ಜ್ಞಾನೇಂದ್ರ- ಚಿಕ್ಕಮಗಳೂರು
13. ಕೆ ಗೋಪಾಲಯ್ಯ-ಹಾಸನ
14. ಡಾ. ಸುಧಾಕರ್-ಚಿಕ್ಕಬಳ್ಳಾಪುರ
15. ಕೆ. ಸಿ ನಾರಾಯಣ ಗೌಡ- ಮಂಡ್ಯ
16. ಬೈರತಿ ಬಸವರಾಜ್- ದಾವಣಗೆರೆ
17: ಕೆ.ಎಸ್ ಈಶ್ವರಪ್ಪ-ಶಿವಮೊಗ್ಗ
18. ಗೋವಿಂದ ಕಾರಜೋಳ-ಬೆಳಗಾವಿ
19. ಹಾಲಪ್ಪ ಆಚಾರ್- ಕೊಪ್ಪಳ
20. ಆನಂದ್ ಸಿಂಗ್-ಬಳ್ಳಾರಿ ಮತ್ತು ವಿಜಯನಗರ
21 ಕೋಟಾ ಶ್ರೀನಿವಾಸ ಪೂಜಾರಿ-ಕೊಡಗು
22. ಪ್ರಭು ಚೌವಾಣ್- ಬೀದರ್
23. ಸುನಿಲ್ ಕುಮಾರ್-ಉಡುಪಿ
24 ಬಿ. ಸಿ ನಾಗೇಶ್- ಯಾದಗಿರಿ
25. ಎಸ್ ಅಂಗಾರ- ದಕ್ಷಿಣ ಕನ್ನಡ
26. ಬಿ ಶ್ರೀರಾಮುಲು-ಚಿತ್ರದುರ್ಗ
27. ಶಿವರಾಂ ಹೆಬ್ಬಾರ್-ಉತ್ತರ ಕನ್ನಡ
28. ಮುನಿರತ್ನ- ಕೋಲಾರ
29. ಎಂ. ಟಿ. ಬಿ ನಾಗರಾಜ್- ಬೆಂಗಳೂರು ಗ್ರಾಮಾಂತರ
ಸಚಿವರು ನಾಳೆಯಿಂದಲೇ ಈ ಜಿಲ್ಲೆಗಳಿಗೆ ತೆರಳಿ ಅಲ್ಲಿನ ಅಧಿಕಾರಿಗಳೊಂದಿಗೆ ಪರಿಸ್ಥಿತಿಯ ಕುರಿತು ಅವಲೋಕಿಸಬೇಕಿದೆ. ಅಲ್ಲದೇ ನೆರೆ ಪೀಡಿತ ಪ್ರದೇಶಗಳಲ್ಲಿ ಆದ ಹಾನಿ ಸಂಬಂಧ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಬೇಕಿದೆ.
13 ಜಿಲ್ಲೆಗಳಿಗೆ ಸಿಗದ ಪ್ರಾತಿನಿಧ್ಯ: ಮೈಸೂರು, ಚಾಮರಾಜನಗರ, ರಾಮನಗರ, ವಿಜಯಪುರ, ಕೊಡಗು, ಯಾದಗಿರಿ, ಹಾಸನ, ಚಿಕ್ಕಮಗಳೂರು, ಕೋಲಾರ ಜಿಲ್ಲೆಯ ಶಾಸಕರನ್ನು ನೂತನ ಸಂಪುಟಕ್ಕೆ ಪರಿಗಣಿಸಲಿಲ್ಲ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಳ್ಳಾರಿ, ರಾಯಚೂರು, ಕಲಬುರಗಿ, ಯಾದಗಿರಿ ಜಿಲ್ಲೆಗೆ ಪ್ರಾತಿನಿಧ್ಯ ಸಿಕ್ಕಿಲ್ಲ. ವಿಜಯನಗರ, ಕೊಪ್ಪಳ, ಬೀದರ್ ಜಿಲ್ಲೆಗೆ ಮಾತ್ರ ಸಚಿವ ಸ್ಥಾನ ಸಿಕ್ಕಿದೆ.
2023ರ ವಿಧಾನಸಭೆ ಚುನಾವಣೆಗೆ ಸಿದ್ಧತೆ ಆರಂಭವಾಗಿದ್ದು, ಜಾತಿ, ಮತ, ಪಂಥ, ಪ್ರಾದೇಶಿಕತೆ, ಸಂಘಟನೆ, ಅನುಭವ ಎಲ್ಲವನ್ನು ಅಳೆದು ತೂಗಿ ಸಚಿವ ಸ್ಥಾನಕ್ಕೆ ಹೆಸರುಗಳನ್ನು ಅಂತಿಮಗೊಳಿಸಲಾಗಿದೆ. ಬೆಂಗಳೂರು ಭಾಗದ 7 ಮಂದಿ ಶಾಸಕರಿಗೆ ಸಚಿವರಾಗುವ ಅವಕಾಶ ದಕ್ಕಿದೆ, ಈ ಮೂಲಕ ಮುಂಬರುವ ಬಿಬಿಎಂಪಿ ಚುನಾವಣೆ ಮೇಲೆ ಬಿಜೆಪಿ ಕಣ್ಣಿಟ್ಟಿರುವುದು ಸ್ಪಷ್ಟವಾಗಿದೆ.
ಹವಾಮಾನ ವರದಿ: ಕರ್ನಾಟಕದಲ್ಲಿ ಇನ್ನೂ ಎರಡು ಮೂರು ದಿನ ಮಳೆಯಾಗುವ ಸಂಭವವಿದ್ದು, ಆನಂತರ ಮಳೆ ಪ್ರಮಾಣ ಕಡಿಮೆಯಾಗಲಿದೆ ಎಂದು ರಾಜ್ಯ ಪ್ರಾಕೃತಿಕ ವಿಕೋಪ ಉಸ್ತುವಾರಿ ಕೇಂದ್ರ ಮುನ್ಸೂಚನೆ ನೀಡಿದೆ. ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಮಳೆಯಾಗುವ ಸಂಭವವಿದೆ. ಉಳಿದೆಡೆ ಒಣಹವೆ ಇದ್ದು, ಮೋಡ ಕವಿದ ವಾತಾವರಣವಿರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದ ಕರಾವಳಿ, ಮಲೆನಾಡು ಭಾಗದ ಜಿಲ್ಲೆಗಳಲ್ಲದೆ, ಕೃಷ್ಣಾ ನದಿ ಪಾತ್ರದಲ್ಲೂ ಈ ಬಾರಿ ಜನರು ಸಂಕಷ್ಟ ಎದುರಿಸಿದ್ದಾರೆ.
''ಪ್ರವಾಹದಿಂದ ಮನೆ ಕಳೆದುಕೊಂಡವರಿಗೆ ಈ ಕೂಡಲೇ ಪರಿಹಾರ ನೀಡಲಾಗುವುದು, ಹಾಳಾಗಿರುವ ಹೆದ್ದಾರಿಯ ಶಾಶ್ವತ ಕಾಮಗಾರಿಗೆ ಸುಮಾರು 70 ಕೋಟಿಗೂ ಅಧಿಕ ಅನುದಾನಕ್ಕಾಗಿ ಹೆದ್ದಾರಿ ಪ್ರಾಧಿಕಾರ ಪ್ರಸ್ತಾವ ಸಲ್ಲಿಸಲು ಸರ್ಕಾರ ಮುಂದಾಗಿದೆ,''' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇತ್ತೀಚೆಗೆ ರಾಜ್ಯ ಪ್ರವಾಸದ ಸಂದರ್ಭದಲ್ಲಿ ಭರವಸೆ ನೀಡಿದ್ದಾರೆ.
ಕೋವಿಡ್ 19 ಕೇಸ್ ಹೆಚ್ಚಳ: ನೆರೆ ರಾಜ್ಯಗಳಾದ ಮಹಾರಾಷ್ಟ್ರ, ಕೇರಳ ಹಾಗೂ ತಮಿಳುನಾಡಿನಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಬೆನ್ನಲ್ಲೇ ಕರ್ನಾಟಕದಲ್ಲೂ ಅದರ ಪರಿಣಾಮ ಕಂಡುಬರುತ್ತಿದೆ. ನಿನ್ನೆಗಿಂತ ಇಂದು ಹೆಚ್ಚು ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಗಡಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಚಾಮರಾಜನಗರ, ಮೈಸೂರು, ಕೊಡಗು ಗಡಿಗಳಲ್ಲಿ ಜಿಲ್ಲಾಡಳಿತದಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ರಾಜ್ಯದ ಪಾಸಿಟಿವಿಟಿ ದರ ಶೇ. 1.04ಕ್ಕೆ ಇಳಿಕೆಯಾಗಿದ್ದು, ಕೋವಿಡ್ ಡೆತ್ ರೇಟ್ ಶೇ.1.69ರಷ್ಟಾಗಿದೆ.












Click it and Unblock the Notifications