ಜೆಡಿಎಸ್ ತೊರೆಯಲು ಮುಂದಾದ ಮಲ್ಲಿಕಾರ್ಜುನ ಖೂಬಾ!
ಬೆಂಗಳೂರು, ಫೆಬ್ರವರಿ 25: ಬಸವಕಲ್ಯಾಣ ಕ್ಷೇತ್ರದ ಶಾಸಕ ಮಲ್ಲಿಕಾರ್ಜುನ ಖೂಬಾ ಅವರು ಪಕ್ಷವನ್ನು ಜಾತ್ಯಾತೀತ ಜನತಾ ದಳ(ಜೆಡಿಎಸ್) ತೊರೆಯಲು ನಿರ್ಧರಿಸಿದ್ದಾರೆ. ಹೋಳಿ ಹಬ್ಬದ ಸಂಭ್ರಮದ ನಂತರ ಜೆಡಿಎಸ್ ಗೆ ಕಹಿ ಸುದ್ದಿ ನೀಡಲು ಮುಂದಾಗಿದ್ದು, ರಾಷ್ಟ್ರೀಯ ಪಕ್ಷವೊಂದನ್ನು ಸೇರುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 'ನಾನು ಮತ್ತೆ ಜೆಡಿಎಸ್ನಿಂದ ಸ್ಪರ್ಧಿಸುವುದಿಲ್ಲ ಎಂದು ಪಕ್ಷದ ವರಿಷ್ಠರಿಗೆ ಮೊದಲೇ ತಿಳಿಸಿದ್ದೆ. ಆದ್ದರಿಂದ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ನನ್ನ ಹೆಸರು ಇಲ್ಲ' ಎಂದು ಹೇಳಿದರು.

'ಬೆಂಬಗಲಿಗರು ಹಾಗೂ ಕಾರ್ಯಕರ್ತರ ಜೊತೆ ಚರ್ಚೆ ನಡೆಸಿ ನನ್ನ ಮುಂದಿನ ನಿರ್ಧಾರವನ್ನು ಪ್ರಕಟಿಸುತ್ತೇನೆ. ಒಂದು ವೇಳೆ ಚುನಾವಣೆ ಸ್ಪರ್ಧಿಸುವ ಸಂದರ್ಭ ಬಂದರೆ ರಾಷ್ಟ್ರೀಯ ಪಕ್ಷವನ್ನು ಸೇರುತ್ತೇನೆ. ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳಿಂದ ಆಹ್ವಾನ ಬಂದಿದೆ, ಆದರೆ, ಈ ಬಗ್ಗೆ ನಿರ್ಧರಿಸಿಲ್ಲ' ಎಂದರು.
ರಾಜ್ಯವು ಕಾಂಗ್ರೆಸ್ ಮುಕ್ತವಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಉತ್ತಮ ಕೆಲಸ ಮಾಡುತ್ತಿದ್ದು, ಅವರನ್ನು ಶ್ಲಾಘಿಸಿದರೆ ತಪ್ಪೇನು' ಎಂದಿರುವ ಖೂಬಾ ಅವರು ಬಿಜೆಪಿ ಕಡೆಗೆ ತಮ್ಮ ಒಲವು ಇರುವುದನ್ನು ತೋರಿಸಿದರು.
ಜೆಡಿಎಸ್ ಬಿಡುಗಡೆ ಮಾಡಿದ ಮೊದಲ ಪಟ್ಟಿಯಲ್ಲಿ ಬೀದರ್ ನ 6 ಕ್ಷೇತ್ರಗಳ ಪೈಕಿ ಬೀದರ್ ದಕ್ಷಿಣದಿಂದ ಬಂಡೆಪ್ಪ ಕಾಶೆಂಪುರ, ಹುಮನಾಬಾದ್ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ನಸೀಮ್ ಪಟೇಲ್ ಹೆಸರು ಪ್ರಕಟಿಸಲಾಗಿದೆ. ಆದರೆ, ಬಸವಕಲ್ಯಾಣ ಸೇರಿ ಮಿಕ್ಕ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಘೋಷಿಸಿಲ್ಲ. ಜೆಡಿಎಸ್ ನಿಂದ 2004, 2013ರಲ್ಲಿ ಗೆದ್ದಿರುವ ಖೂಬಾ ಅವರು 2008ರಲ್ಲಿ ಸೋಲು ಕಂಡಿದ್ದರು.












Click it and Unblock the Notifications