Banu Mushtaq Row: "ನಮಗೆ ಅವರಿವರು ಹೇಳಿದ್ದು ಮುಖ್ಯವಲ್ಲ, ಸಂವಿಧಾನ ಪರಮೋಚ್ಛ"
Banu Mushtaq Row: ಮೈಸೂರು ದಸರಾ ಉದ್ಘಾಟನೆ ವಿಚಾರವು ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೂಕರ್ ಪ್ರಶಸ್ತಿ ವಿಜೇತ ಲೇಖಕಿ ಬಾನು ಮುಷ್ತಾಕ್ ಅವರ ಹೆಸರನ್ನು ಘೋಷಿಸಿದ ಬೆನ್ನಲ್ಲೇ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ನಡುವೆ ಜಟಾಪಟಿ ಶುರುವಾಗಿದೆ. ಇದು ಧರ್ಮಕ್ಕೆ ಸಂಬಂಧಿಸಿದ ವಿಚಾರ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದರೆ, ಕಾಂಗ್ರೆಸ್ ನಾಯಕರು ಈ ವಿಚಾರದಲ್ಲಿ ವಿವಾದ ಸೃಷ್ಟಿ ಮಾಡುವ ಅಗತ್ಯತೆ ಇಲ್ಲ ಎನ್ನುತ್ತಿದ್ದಾರೆ.
ಈ ಸಂಬಂಧ ಸೋಷಿಯಲ್ ಮೀಡಿಯಾ ಎಕ್ಸ್ನಲ್ಲಿ ಟ್ವೀಟ್ ಮಾಡಿರುವ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು, ಕೋಮು ವಿರೋಧಿ ಕಾರ್ಯಪಡೆ, ದ್ವೇಷ ಭಾಷಣ ಮಸೂದೆ, ರೋಹಿತ್ ವೇಮುಲ ಮಸೂದೆ ಎಂದು ಕರೆಯಲ್ಪಡುವ ರಾಹುಲ್ ಗಾಂಧಿಯವರ ಒತ್ತಾಯದ ಮೇರೆಗೆ ಸಂಶಯಾಸ್ಪದ ಧರ್ಮಸ್ಥಳ ಎಸ್ಐಟಿ ರಚನೆ ಮತ್ತು ಈಗ ಕಾಂಗ್ರೆಸ್ ಸರ್ಕಾರವು ಕನ್ನಡವನ್ನು ತಾಯಿ ಭುವನೇಶ್ವರಿ ಎಂದು ಪೂಜಿಸುವುದಕ್ಕೆ ತನ್ನ ವಿರೋಧವನ್ನು ಬಹಿರಂಗವಾಗಿ ವ್ಯಕ್ತಪಡಿಸಿರುವ ಬಾನು ಮುಸ್ತಾಕ್ ಅವರಿಗೆ ಅವಕಾಶ ನೀಡಿದೆ.

ಕನ್ನಡ ಧ್ವಜದೊಂದಿಗೆ ಸಂಬಂಧಿಸಿದ ಹಿಂದೂ ಸಾಂಸ್ಕೃತಿಕ ಸಂಕೇತವನ್ನು ಆಕ್ಷೇಪಿಸಿ ಪವಿತ್ರ ದಸರಾ ಚಾಮುಂಡೇಶ್ವರಿ ಪೂಜೆಯನ್ನು ಉದ್ಘಾಟಿಸುವ ನಿರ್ಧಾರವನ್ನು ಮುಂದಿಟ್ಟಿದೆ. ಇವೆಲ್ಲವೂ ಪ್ರತ್ಯೇಕವಾದ ಕ್ರಮಗಳಲ್ಲ. ಅವು ನಗರ ನಕ್ಸಲರು ಮತ್ತು ಮಾರ್ಕ್ಸ್ವಾದಿಗಳು ರಚಿಸಿದ ಒಂದೇ, ಉತ್ತಮವಾಗಿ ರೂಪಿಸಿದ ಆಟದ ಯೋಜನೆಯ ಭಾಗವಾಗಿದ್ದು, ಇದನ್ನು ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ರಾಜ್ಯ ಸರ್ಕಾರದ ಪೂರ್ಣ ಉತ್ಸಾಹದಿಂದ ಕಾರ್ಯ ರೂಪಕ್ಕೆ ತರುತ್ತಿದೆ. ನಾವು ಈ ವಿಷಯಗಳನ್ನು ಎಚ್ಚರಿಕೆಯಿಂದ ನೋಡಬೇಕು ಮತ್ತು ನಮ್ಮ ಎಲ್ಲಾ ಶಕ್ತಿಯಿಂದ ಅದನ್ನು ವಿರೋಧಿಸಬೇಕು ಎಂದು ಸೋಷಿಯಲ್ ಮೀಡಿಯಾ ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.
ಇನ್ನು ಈ ವಿಚಾರವಾಗಿ ಕಾಂಗ್ರೆಸ್ ನಾಯಕರು ಸಹ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಈ ಬಾರಿಯ ದಸರಾ ಮಹೋತ್ಸವವನ್ನು ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರು ಉದ್ಘಾಟಿಸಲಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸುತ್ತಿದ್ದಂತೆಯೇ ವಿರೋಧ ಬಿಜೆಪಿಯ ಕೆಲವು ನಾಯಕರಿಂದ ವಿರೋಧ ವ್ಯಕ್ತವಾಗಿದೆ.
ಮಾಜಿ ಸಂಸದ ಪ್ರತಾಪ್ ಸಿಂಹ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಸಂಸದ ತೇಜಸ್ವಿ ಸೂರ್ಯ ಸೇರಿದಂತೆ ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಮಾಜ ಕಲ್ಯಾಣ ಖಾತೆ ಸಚಿವ ಡಾ. ಎಚ್ ಸಿ ಮಹದೇವಪ್ಪ ಅವರು, ಆಕ್ಷೇಪಣೆ ಎತ್ತಿದರೆ ಏನಂತೆ ಈಗ. ನಮಗೆ ಅವರಿವರು ಹೇಳಿದ್ದು ಮುಖ್ಯವಲ್ಲ, ಸಂವಿಧಾನ ಹೇಳುವುದು ಮಾತ್ರ ಪರಮೋಚ್ಛ. ದಸರಾ ನಾಡಿನ ಸಾಂಸ್ಕೃತಿಕ ಜೀವನವನ್ನು ಅಭಿವ್ಯಕ್ತಿಗೊಳಿಸುವ ನಾಡಹಬ್ಬವಾಗಿದೆ. ದಸರಾವನ್ನು ಎಲ್ಲಾ 140 ಕೋಟಿ ಭಾರತೀಯರು ಅಚರಿಸುತ್ತಾರೆ ಎಂದು ಅವರು ಹೇಳಿದ್ದಾರೆ.
ಮುಂದುವರಿದು ರಾಜಕೀಯ ಪಕ್ಷಗಳು ಧರ್ಮದ ವಿಚಾರವನ್ನು ಚರ್ಚಿಸಲೇಬಾರದು. ಧರ್ಮದ ಆಚರಣೆಯು ಜನರ ಆಯ್ಕೆ ಹಾಗೂ ವಿವೇಚನೆಗೆ ಬಿಟ್ಟ ವಿಷಯ. ಸರ್ವರಿಗೂ ಸಮಬಾಳು ಸಮಪಾಲು ಎಂದು ಸಂವಿಧಾನ ಹೇಳುತ್ತದೆ ಎಂದಿದ್ದಾರೆ. ಒಟ್ಟಾರೆ ಈ ವಿಚಾರವು ಪರ - ವಿರೋಧ ಚರ್ಚೆಗೆ ಕಾರಣವಾಗಿದೆ. ಸೋಷಿಯಲ್ ಮೀಡಿಯಾದಲ್ಲೂ ಇದು ಪರ ಮತ್ತು ವಿರೋಧ ಚರ್ಚೆಗೆ ಕಾರಣವಾಗಿದೆ.












Click it and Unblock the Notifications