ಬೆಂ.ಉತ್ತರದ ಅಭ್ಯರ್ಥಿ ಸದಾನಂದ ಗೌಡರ ಪರಿಚಯ
ಬೆಂಗಳೂರು, ಮಾ.26 : ಹಲವಾರು ದಿನಗಳ ಹಗ್ಗಜಗ್ಗಾಟದ ನಂತರ ಬಿಜೆಪಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರಕ್ಕೆ ಆಯ್ಕೆ ಮಾಡಿದ ಅಭ್ಯರ್ಥಿ ಡಿವಿ ಸದಾನಂದ ಗೌಡ. ಮಾಜಿ ಮುಖ್ಯಮಂತ್ರಿಯಾಗಿ, ಬಿಜೆಪಿ ರಾಜ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಸದಾನಂದ ಗೌಡರು ಲೋಕಸಭೆ ಚುನಾವಣೆಯಲ್ಲಿ ಜಯಗಳಿಸಿ ಪುನಃ ಸಂಸತ್ ಭವನ ಪ್ರವೇಶಿಸುವ ಉತ್ಸಾಹದಲ್ಲಿದ್ದಾರೆ.
2004 ರಲ್ಲಿ ಮಂಗಳೂರು ಕ್ಷೇತ್ರದಿಂದ ಜಯಗಳಿಸಿ ಸಂಸತ್ ಪವೇಶಿಸಿದ್ದ ಗೌಡರು, 2009 ರಲ್ಲಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸದಸ್ಯರಾಗಿ ಎರಡನೇ ಅವಧಿಗೆ ಆಯ್ಕೆಯಾದರು. ನಂತರ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿದ್ದ ಬಿಜೆಪಿ ಪಕ್ಷದಲ್ಲಿನ ಆಂತರಿಕ ಬೆಳವಣಿಗೆಗಳಿಂದಾಗಿ ಮುಖ್ಯಮಂತ್ರಿ ಹುದ್ದೆ ಸದಾನಂದ ಗೌಡರನ್ನು ಹುಡುಕಿಕೊಂಡು ಬಂದಿತು.
ಸದಾ ಹಸ್ಮನುಖಿಯಾಗಿರುವ ಸದಾನಂದ ಗೌಡರು 2011ರ ಆಗಸ್ಟ್ 3 ರಿಂದ 2012ರ ಜುಲೈ 12ರ ತನಕ ಕರ್ನಾಕಟದ 26ನೇ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿ ಜನರ ಮೆಚ್ಚುಗೆಗೆ ಪಾತ್ರರಾದರು. ಪುನಃ ಪಕ್ಷದಲ್ಲಿ ಭುಗಿಲೆದ್ದ ಅಸಮಾಧಾನದಿಂದಾಗಿ ಸಿಎಂ ಹುದ್ದೆ ತ್ಯಜಿಸಿದ ಸದಾನಂದ ಗೌಡರು ಸದ್ಯ ವಿಧಾನಪರಿಷತ್ ಪ್ರತಿಪಕ್ಷ ನಾಯಕನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಬಿಎಸ್ ಸಿ, ಎಲ್ಎಲ್ ಬಿ ಪದವೀಧರರಾಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಮಂಡೆಕೋಲಿನ ದೇವರಗುಂಡ ವೆಂಕಪ್ಪ ಸದಾನಂದ ಗೌಡ, 2014ರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಸದಾನಂದ ಗೌಡರ ಸಂಕ್ಷಿಪ್ತ ಪರಿಚಯ ಇಲ್ಲಿದೆ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

ಸಂಘಟನೆಗಳ ಮೂಲಕ ರಾಜಕಾರಣಕ್ಕೆ
* ಸದಾನಂದ ಗೌಡರು ವಿವಿಧ ಸಂಘಟನೆಗಳಲ್ಲಿ ಕಾರ್ಯ ನಿರ್ವಹಿಸುವ ಮೂಲಕ ರಾಜಕಾರಣಕ್ಕೆ ಪ್ರವೇಶ ಮಾಡಿದರು
* ಭಾರತೀಯ ಮಜ್ದೂರ್ ಸಂಘದ ಪುತ್ತೂರು ವಿಭಾಗದ ಪ್ರಧಾನ ಕಾರ್ಯದರ್ಶಿಯಾಗಿ
* 1977 ರಿಂದ 1982ರ ವರೆಗೆ ಸುಳ್ಯ ತಾಲೂಕು ಬೀಡಿ ಮಜ್ದೂರರ ಸಂಘದ ಅಧ್ಯಕ್ಷರಾಗಿ
* ಸುಳ್ಯ ತಾಲೂಕು ಆಟೋ ರಿಕ್ಷಾ ಮಾಲಕರ ಮತ್ತು ಚಾಲಕರ ಸಂಘದ ಅಧ್ಯಕ್ಷರಾಗಿ
* ಕರ್ನಾಟಕ ಕೈಗಾರಿಕೆಗಳ ಸಿಬ್ಬಂದಿ ಯೂನಿಯನ್ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ.

ರಾಜಕಾರಣಕ್ಕೆ ಬಂದ ಗೌಡರು
* ಜನಸಂಘದ ಪ್ರಾಥಮಿಕ ಸದಸ್ಯನಾಗಿ ಡಿವಿ ಸದಾನಂದ ಗೌಡರು ರಾಜಕಾರಣಕ್ಕೆ ಬಂದರು
* ಭಾರತೀಯ ಜನತಾ ಪಾರ್ಟಿಯ ಸುಳ್ಯ ಕ್ಷೇತ್ರ ಸಮಿತಿಯ ಅಧ್ಯಕ್ಷ
* ದಕ್ಷಿಣಕನ್ನಡ ಜಿಲ್ಲಾ ಬಿ.ಜೆ.ಪಿ. ಯುವ ಮೋರ್ಚಾದ ಅಧ್ಯಕ್ಷ
* ದ.ಕ. ಜಿಲ್ಲಾ ಜಿ.ಜೆ.ಪಿ. ಉಪಾಧ್ಯಕ್ಷ
* ಯುವ ಮೋರ್ಚಾದ ರಾಜ್ಯ ಸಮಿತಿಯ ಕಾರ್ಯದರ್ಶಿ
* ರಾಜ್ಯ ಬಿ.ಜೆ.ಪಿ. ಕಾರ್ಯದರ್ಶಿ, ರಾಷ್ಟ್ರೀಯ ಕಾರ್ಯದರ್ಶಿ
* 2006ರಲ್ಲಿ ರಾಜ್ಯ ಬಿಜೆಪಿ ಚುಕ್ಕಾಣಿ ಹಿಡಿದ ಗೌಡರು 2008 ರಲ್ಲಿ ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ಪೂರ್ಣ ಪ್ರಮಾಣದ ಸರ್ಕಾರವನ್ನು ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ವಿಧಾನಸಭೆ ಪ್ರವೇಶ
* 1989 ರಲ್ಲಿ ಪ್ರಪ್ರಥಮ ಬಾರಿಗೆ ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ. ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧೆ
* 1994ರಲ್ಲಿ ಸದಾನಂದ ಗೌಡರು ಮೊತ್ತ ಮೊದಲ ಬಾರಿಗೆ ಶಾಸಕನಾಗಿ ಚುನಾಯಿತರಾದರು, 1999ರಲ್ಲಿ ಪುನರಾಯ್ಕೆಯಾದರು.
* ಶಾಸಕನಾಗಿ ದ್ವಿತೀಯ ಅವಧಿಯಲ್ಲಿ ರಾಜ್ಯ ವಿಧಾನಸಭೆಯಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಉಪನಾಯಕನಾಗಿ ಆಯ್ಕೆಯಾದರು.

ರಾಷ್ಟ್ರ ರಾಜಕಾರಣಕ್ಕೆ ಗೌಡರ ಪಾದಾರ್ಪಣೆ
* 2004 ರಲ್ಲಿ ಮಂಗಳೂರು ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾದರು.
* ಸಂಸದರಾದ ನಂತರ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿಯಾಗಿ ನೇಮಕಗೊಂಡರು
* 2006ರಲ್ಲಿ ಕರ್ನಾಟಕ ಬಿಜೆಪಿಯ ಚುಕ್ಕಾಣಿ ಗೌಡರ ಕೈ ಸೇರಿತು
* 2007 ರಲ್ಲಿ ಇವರು ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಪುರಾಯ್ಕೆಗೊಂಡರು
* 2008 ರಲ್ಲಿ ರಾಜ್ಯದಲ್ಲಿ ಮೊದಲ ಬಾರಿಗೆ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತಂದು, ರಾಷ್ಟ್ರೀಯ ನಾಯಕರ ಮೆಚ್ಚುಗೆಗೆ ಕಾರಣರಾದರು
* 2009ರಲ್ಲಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿ, ಅತ್ಯಧಿಕ ಮತಗಳ ಅಂತರದಿಂದ ಗೆದ್ದು ಬಂದರು.

ಒಲಿದು ಬಂತು ಸಿಎಂ ಸ್ಥಾನ
2008ರಲ್ಲಿ ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದಿದ್ದ ಡಿವಿ ಸದಾನಂದ ಗೌಡರಿಗೆ 2011ರಲ್ಲಿ ಮುಖ್ಯಮಂತ್ರಿಯಾಗುವ ಅವಕಾಶ ದೊರೆಯಿತು. ಸಂಸತ್ ಸ್ಥಾನಕ್ಕೆ ರಾಜೀನಾಮೆ ನೀಡಿ ವಿಧಾನ ಪರಿಷತ್ ಸದಸ್ಯರಾದ ಗೌಡರು, 2011ರ ಆಗಸ್ಟ್ 3 ರಿಂದ 2012ರ ಜುಲೈ 12ರ ತನಕ ಕರ್ನಾಕಟದ 26ನೇ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದರು. ಪುನಃ ಪಕ್ಷದಲ್ಲಿ ಉಂಟಾದ ಗೊಂದಲದಿಂದಾಗಿ ಒಂದು ವರ್ಷ ಅಧಿಕಾರ ನಡೆಸಿದ ಗೌಡರು ಸಿಎಂ ಸ್ಥಾನ ತ್ಯಜಿಸಬೇಕಾಯಿತು.

ಕ್ರೀಡಾ ಪ್ರೇಮಿ, ಕಲಾಸಕ್ತ
ಸದಾನಂದ ಗೌಡರು ರಾಜಕಾರಣಕ್ಕೆ ಮಾತ್ರ ಸೀಮಿತವಾಗಿಲ್ಲ. ಕ್ರೀಡಾ ಪ್ರೇಮಿಯೂ ಆಗಿರುವ ಅವರರು ವಿದ್ಯಾರ್ಥಿಯಾಗಿದ್ದಾಗ ಖೋಖೋ ಆಡುತ್ತಿದ್ದರು. ಬ್ಯಾಂಡ್ಮಿಂಟನ್ ಮತ್ತು ಟೆನಿಸ್ ನಲ್ಲಿಯೂ ಗೌಡರಿಗೆ ವಿಶೇಷ ಆಸಕ್ತಿ ಇದೆ. ಕರಾವಳಿಯ ಜಾನಪದ ಕಲೆಯಾದ ಯಕ್ಷಗಾನದ ಬಗ್ಗೆಯೂ ಸದಾನಂದ ಗೌಡರಿಗೆ ವಿಶೇಷ ಆಸಕ್ತಿಯಿದೆ. ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಬಳಿಕ ಕನ್ನಡ ಚಿತ್ರವೊಂದರಲ್ಲಿ ನಟನೆಯನ್ನು ಮಾಡುವ ಮೂಲಕ ಚಿತ್ರರಂಗಕ್ಕೂ ಅವರು ಪ್ರವೇಶ ಮಾಡಿದರು.












Click it and Unblock the Notifications