ಆಂಬುಲೆನ್ಸ್ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು

ಬೈಕ್ ಸವಾರ ಅಮ್ಜದ್ ಪಾಷಾ (23) ಮೃತಪಟ್ಟ ದುರ್ದೈವಿ. ಈತನ ಜತೆ ಪಿಲಿಯನ್ ರೈಡರ್ ಆಗಿದ್ದ ಮತ್ತೊಬ್ಬ ಯುವಕ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಏಕಮುಖ ಸಂಚಾರ ರಸ್ತೆಯಲ್ಲಿ ಎದುರಿನಿಂದ ವೇಗವಾಗಿ ಬಂದ ಖಾಸಗಿ ಆಂಬುಲೆನ್ಸ್ ವಾಹನವು ಆರ್ ಟಿ ನಗರದ ಅಮ್ಜದ್ ಪಾಷಾ ಅವರ ಬೈಕಿಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ. ಇದರಿಂದ ಅಮ್ಜದ್ ಪಾಷಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಲಾಸಿಪಾಳ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ. ಆಂಬುಲೆನ್ಸ್ ಚಾಲಕನನ್ನು ಬಂಧಿಸಿದ್ದಾರೆ.
ಬಾಗಲಕೋಟೆಯ ಹುನಗುಂದ ಸಮೀಪ ಮತ್ತೊಂದು ಭೀಕರ ರಸ್ತೆ ಅಪಘಾತ ನಡೆದಿದ್ದು, ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವೇಗವಾಗಿ ಬಂದ ಲಾರಿಯೊಂದು ಕಾರಿಗೆ ನೇರವಾಗಿ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ನಾಲ್ಕೂ ಮಂದಿ ಅಸುನೀಗಿದ್ದಾರೆ.
ಮೃತರನ್ನು ಇಳಕಲ್ ಮೂಲದ ಅನಿಲ್ ಕುಮಾರ್ ನಾವಿಕನವರ್ (48), ಡಾ. ವಿಜಯ್ ಮಹಾಂತೇಶ ಸಣ್ಣಶೆಟ್ಟರ್ (46), ಜಯಶ್ರೀ (40) ಮತ್ತು ಮನೋಜ್ (16) ಎಂದು ಗುರುತಿಸಲಾಗಿದೆ.
ಇಳಕಲ್ ಕಡೆಯಿಂದ ಇವರೆಲ್ಲರೂ ಕಾರಿನಲ್ಲಿ ಬರುತ್ತಿದ್ದಾಗ ಹುನಗುಂದ ಪೊಲೀಸ್ ಠಾಣೆ ವ್ಯಾಪ್ತಿಯ ನಾಗೂರು ಕ್ರಾಸಿನಲ್ಲಿ ವೇಗವಾಗಿ ಬಂದ ಲಾರಿ ಕಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಸ್ಥಳದಲ್ಲೇ ನಾಲ್ವರೂ ಮೃತಪಟ್ಟರೆ ಕಾರಿನಲ್ಲಿದ್ದ ಮಕ್ಕಳಾದ ಆದಿತ್ಯ ಮತ್ತು ಪ್ರತೀಕ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಹುನಗುಂದ ಆಸ್ಪತ್ರೆಗೆ ದಾಖಲಿಸಲಾಗಿದೆ. ಹುನಗುಂದ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸಿದ್ದಾರೆ.












Click it and Unblock the Notifications