Bajrang Dal Ban Dispute: ಡ್ಯಾಮೇಜ್ ಕಂಟ್ರೋಲ್ಗೆ ಮುಂದಾದ ಕಾಂಗ್ರೆಸ್, ನಾಳೆ ಬ್ಯಾನ್ ಪ್ರಸ್ತಾಪ ವಾಪಸ್?
ಬೆಂಗಳೂರು, ಮೇ 02: ಕರ್ನಾಟಕ ರಾಜ್ಯದ ವಿರೋಧ ಪಕ್ಷ ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧ ಕುರಿತು ಪ್ರಸ್ತಾಪಿಸಿದೆ. ಈ ಬಗ್ಗೆ ವ್ಯಾಪಕ ಟೀಕೆ ಟಿಪ್ಪಣಿಗಳು ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಬುಧವಾರ ಬ್ಯಾನ್ ಪ್ರಸ್ತಾಪ ವಾಪಾಸ್ ಪಡೆಯುವ ಸಾಧ್ಯತೆ ಇದೆ.
ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇದ ಕುರಿತು ಪ್ರಸ್ತಾಪಿಸುತ್ತಿದ್ದಂತೆ ಬಿಜೆಪಿ ನಾಯಕರು ಸಾಲು ಸಾಲು ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ ನಾಯಕರ ಹೊರತಾಗಿರುವ ವಿವಿಧೆಡೆಯಿಂದ ಕಾಂಗ್ರೆಸ್ ವಿರುದ್ಧ ವ್ಯಾಪಕ ಆಕ್ರೋಶ ಕೇಳಿಬರುತ್ತಿವೆ ಎನ್ನಲಾಗಿದೆ.

ಈ ಬ್ಯಾನ್ ಪ್ರಸ್ತಾಪವು ಚುನಾವಣೆ ಹೊತ್ತಲ್ಲಿ ಪಕ್ಷಕ್ಕೆ ಸಂಕಷ್ಟವಾಗುವ ಸಾಧ್ಯತೆ ಇದೆ. ವಿಪಕ್ಷಗಳಿಗೆ ಇದು ಅಸ್ತ್ರವಾಗುವ ಸಾಧ್ಯತೆ ಇದ್ದು, ಕಾಂಗ್ರೆಸ್ಗೆ ಹೆಚ್ಚು ಹೊಡೆತ ಕೊಡಲಿದೆ ಎಂದು ಅಂದಾಜಿಸಲಾಗಿದೆ. ಈ ಸಂಬಂಧ ಇಂದು ಮಂಗಳವಾರ ರಾತ್ರಿಯೇ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಇನ್ನಿತರ ನಾಯಕರ ಸಮ್ಮುಖದಲ್ಲಿ ಮಹತ್ವದ ಸಭೆ ನಡೆಯಲಿದೆ.
ಆದರೆ ಸಭೆಯಲ್ಲಿನ ನಿರ್ಣಯದ ಬಗ್ಗೆ ಇಂದು ರಾತ್ರಿಯೇ ಮಾಹಿತಿ ಹೊರಬೀಳವುದಿಲ್ಲ. ಬದಲಾಗಿ ಬುಧವಾರ ಕಾಂಗ್ರೆಸ್ ತಾನು ಪ್ರಣಾಳಿಕೆಯಲ್ಲಿ ಪ್ರಸ್ತಾಪವನ್ನು ಹಿಂಪಡೆಯವುದರ ಕುರಿತು ಅಧಿಕೃತವಾಗಿ ತಿಳಿಸಲಿದೆ ಎಂದು ಮೂಲಗಳು ತಿಳಿಸಿವೆ. ಈ ಮೂಲಕ 'ಕೈ' ಪಡೆಯ ನಾಯಕರು ಸಂಭವನೀಯ ಅಪಾಯ ತಡೆಗೆ ಪ್ರಯತ್ನಿಸುತ್ತಿದ್ದಾರೆ.

ಭಜರಂಗ ದಳ ಬ್ಯಾನ್ ವಿವಾದ ಹೇಗಾಯಿತು?
ಮಂಗಳವಾರ ಕಾಂಗ್ರೆಸ್ 2023 ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಅದರಲ್ಲಿ ಧರ್ಮ ಮತ್ತು ಜಾರಿಯ ಹೆಸರಿನಲ್ಲಿ ದ್ವೇಷವನ್ನು ಬಿತ್ತಿ ವಿಭಜನೆಗೆ ಕಾರಣವಾಗುವ ವ್ಯಕ್ತಿಗಳು ಮತ್ತು ಸಂಘಟನೆಗಳ ವಿರುದ್ಧ ಕಠಿಣ ಮತ್ತು ನೀರ್ಣಾಯಕ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲು ಕಾಂಗ್ರೆಸ್ ಬದ್ಧವಾಗಿದೆ. ವ್ಯಕ್ತಿಗಳಾಗಲಿ ಬಜರಂಗದಳ ಮತ್ತು ಪಿಎಫ್ಐ ಸೇರಿದಂತೆ ಬಹುಸಂಖ್ಯಾತ, ಅಲ್ಪಸಂಖ್ಯಾತ ಸಂಘಟನೆಗಳ ನಿಷೇಧ ಮಾಡುವುದಾಗಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಿದೆ.
ಪಿಎಫ್ಐ ಸಾಕಷ್ಟು ಭಯೋತ್ಪಾದಕ ಕೃತ್ಯಗಳಲ್ಲಿ ಪಾಲು ಹೊಂದಿದೆ. ದೇಶ ಒಡೆಯುವ ಕೃತ್ಯ ವೆಸಗಿದೆ ಎಂಬ ಆರೋಪಕ್ಕೆ ಕೇಂದ್ರ ಸರ್ಕಾರ ಅಗತ್ಯ ದಾಖಲೆ ಸಹಿತ ಬ್ಯಾನ್ ಮಾಡಿದೆ. ಅಂತಹ ಸಂಘಟನೆಗೆ ಧಾರ್ಮಿಕ ಕೆಲಸ ಮಾಡುವ ಬಜರಂಗದಳ ಹೊಲಿಕೆ ಮಾಡಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಬಿಜೆಪಿ ನಾಯಕರು ಕಟುವಾಗಿ ವಿರೋಧಿಸಿದ್ದಾರೆ. ಈ ಹಿನ್ನೆಲೆ ಕಾಂಗ್ರೆಸ್ ಎಚ್ಚೆತ್ತುಕೊಂಡಿದೆ.












Click it and Unblock the Notifications