ಶಿಕ್ಷಣ ಸಚಿವ ಬಿಸಿ ನಾಗೇಶ್ ವಿರುದ್ಧ ದೋಷಾರೋಪಣ ಪತ್ರದಲ್ಲೇನಿದೆ?
ಬೆಂಗಳೂರು, ಜೂ. 15: ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಶಿಕ್ಷಣ ಇಲಾಖೆಯಲ್ಲಿ ಎಸಗಿರುವ ಲೋಪಗಳಿಗೆ ಸಂಬಂಧಿಸಿದಂತೆ ಬಹುತ್ವ ಕರ್ನಾಟಕ ಸಂಸ್ಥೆ ಸಾರ್ವಜನಿಕ ದೋಷಾರೋಪ ಪತ್ರವನ್ನು ಬಿಡುಗಡೆ ಮಾಡಿದೆ. ಶಿಕ್ಷಣ ಸಚಿವರು ಎಸಗಿರುವ ಆರು ಪ್ರಮಾದಗಳನ್ನು ಉಲ್ಲೇಖಿಸಿ ರಾಜೀನಾಮೆ ನೀಡುವಂತೆ ಬಹುತ್ವ ಕರ್ನಾಟಕ ಸಂಘಟನೆ ಅಗ್ರಹಿಸಿದೆ.
ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಬಹುತ್ವ ಕರ್ನಾಟಕ ನ್ಯಾಯ ಸೌಹಾರ್ದತೆ ಹಾಗೂ ಐಕ್ಯತೆ ವೇದಿಕೆ, ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ಕರ್ನಾಟಕದ ಮಕ್ಕಳ ಭವಿಷ್ಯವನ್ನು ಕಸಿದುಕೊಂಡಿದ್ದಾರೆ. ಸಚಿವರಾಗಿ ತಮ್ಮ ಪಾತ್ರ ನಿರ್ವಹಿಸಲು ವಿಫಲವಾಗಿರುವ ನಾಗೇಶ್ ರಾಜೀನಾಮೆ ನೀಡಬೇಕು. ಕೋವಿಡ್ ಪರಿಸ್ಥಿತಿಯಲ್ಲಿ ಮಕ್ಕಳ ಶಿಕ್ಷಣವನ್ನು ಪಣಕ್ಕೆ ಒಡ್ಡಿ ರಾಜ್ಯದ ಶಿಕ್ಷಣವನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿದ್ದಾರೆ. ಅಪೌಷ್ಠಿಕತೆ ಹೆಚ್ಚಿಸಿದ್ದರೂ ಅದನ್ನು ನಿಯಂತ್ರಿಸಲು ಯಾವುದೇ ಕ್ರಮ ಜರುಗಿಸಿಲ್ಲ. ಶಿಕ್ಷಣವನ್ನು ಬ್ರಾಹ್ಮಣವಾದಿ ಹಿಡಿತಕ್ಕೆ ಸಿಲುಕಿಸುವ ಪ್ರಯತ್ನ ಮಾಡಿದ್ದಾರೆ ಎಂದು ಆರೋಪಿಸಿದೆ.
ವಿನೂತನ ದೋಷಾರೋಪ ಪತ್ರ: ಸಾಮಾನ್ಯವಾಗಿ ಯಾವುದಾದರೂ ಅಪರಾಧ ಕೃತ್ಯ ಎಸಗಿದರೆ ಪೊಲೀಸರು ಕೃತ್ಯಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ ತಪ್ಪಿಸ್ಥರಿಗೆ ಶಿಕ್ಷೆ ನೀಡುವಂತೆ ಕೋರಿ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸುತ್ತಾರೆ. ಬಹುತ್ವ ಕರ್ನಾಟಕ ಶಿಕ್ಷಣ ಸಚಿವರು ಮಾಡಿರುವ ಪ್ರಮಾದಗಳನ್ನು ಅಪರಾಧ ಕೃತ್ಯಗಳೆಂದು ಪರಿಗಣಿಸಿ ಸಾರ್ವಜನಿಕ ದೋಷಾರೋಪ ಪತ್ರವನ್ನು ಬಿಡುಗಡೆ ಮಾಡಿದೆ. ಶಿಕ್ಷಣ ಸಚಿವರು ಎಸಗಿರುವ ಪ್ರಮಾದಗಳು, ಕಾನೂನು ಉಲ್ಲಂಘನೆ ಕುರಿತ ಸಾರ್ವಜನಿಕ ದೋಷಾರೋಪಣ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಅದರ ವಿವರ ಹೀಗಿದೆ.

ದೋಷಾರೋಪಣ ಪತ್ರದ ವಿವರ:
ಅರೋಪಿ ಹೆಸರು: ಬಿ.ಸಿ. ನಾಗೇಶ್
ಹುದ್ದೆ: ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರು, ಕರ್ನಾಟಕ ಸರ್ಕಾರ,
ವಿಳಾಸ: ವಿಧಾನಸೌಧ, ಅಂಬೇಡ್ಕರ್ ವೀದಿ, ಬೆಂಗಳೂರು,
ಅಪರಾಧ ಕೃತ್ಯ ನಡೆದ ಸ್ಥಳ: ಕರ್ನಾಟಕ
ಸಂತ್ರಸ್ತರು: ಕರ್ನಾಟಕದ ಮಕ್ಕಳು, ಸರ್ಕಾರಿ ಹಾಗೂ ಖಾಸಗಿ ಶಾಲಾ ಮಕ್ಕಳು.
ಕೃತ್ಯ ನಡೆದ ದಿನಾಂಕ: 2021 ಆಗಸ್ಟ್ 04 ರಿಂದ 2022 ಜೂನ್ 14.
ಶಿಕ್ಷೆ ವಿಧಿಸಬಹುದಾದ ಸೆಕ್ಷನ್: ಸಚಿವ ಸ್ಥಾನ ಹಾಗೂ ಶಾಸಕ ಸ್ಥಾನದಿಂದ ವಜಾ
ಆರೋಪ 1 :
ಕೋವಿಡ್ನಿಂದ ಶಾಲೆಯಿಂದ ಹೊರಗೆ ಉಳಿದ ಮಕ್ಕಳನ್ನು ಶಾಲೆಗೆ ವಾಪಸು ಕರೆ ತರುವಲ್ಲಿ ವಿಫಲವಾಗಿದ್ದಾರೆ. ಕೋವಿಡ್ನಿಂದ ಎರಡು ವರ್ಷ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಕೋವಿಡ್ನಿಂದ ಶಿಕ್ಷಣ ವಂಚಿತ ಮಕ್ಕಳನ್ನು ವಾಪಸು ಕರೆ ತರಲು ಯಾವುದೇ ಕ್ರಮ ಜರುಗಿಸಿಲ್ಲ. ಹೀಗಾಗಿ ಶಿಕ್ಷಣ ಹಕ್ಕು ಕಾಯ್ದೆ ಜಾರಿಗೊಳಿಸುವಲ್ಲಿ ಬಿ.ಸಿ. ನಾಗೇಶ್ ವಿಫಲರಾಗಿದ್ದಾರೆ. ಶಿಕ್ಷಣ ಹಕ್ಕು ಕಾಯ್ದೆ ಅಡಿ ಶಿಕ್ಷಕರನ್ನು ನೇಮಿಸಬೇಕೆಂದು ಇದ್ದರೂ ಈವರೆಗೂ ನೇಮಕ ಮಾಡದೇ ಮಕ್ಕಳ ಕಲಿಕೆಗೆ ಧಕ್ಕೆ ಉಂಟು ಮಾಡಿದ್ದಾರೆ.

ಸಂವಿಧಾನ ಉಲ್ಲಂಘನೆ: ಈ ಮೇಲಿನ ಆರೋಪದಿಂದ ಭಾರತ ಸಂವಿಧಾನದ ವಿಧಿ 14, 15, 21, 21A, 24.39 (E) (F), 41, 46 ಮತ್ತು 47 ಉಲ್ಲಂಘನೆ ಮಾಡಿದ್ದಾರೆ ಎಂದು ಬಹುತ್ವ ಕರ್ನಾಟಕ ಅರೋಪಿಸಿದೆ. ಅಲ್ಲದೇ ಮಕ್ಕಳ ಹಕ್ಕು ಕಾಯ್ದೆ ಸೆಕ್ಷನ್ 3, 4, 8, 25, 26, 29, 34, ಉಲ್ಲಂಘನೆ ಎಂದು ಉಲ್ಲೇಖಿಸಲಾಗಿದೆ.
ಆರೋಪ 2 :
ಅಪೌಷ್ಠಿಕತೆ ಕ್ರಮ ಕೈಗೊಳ್ಳದೇ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಉಲ್ಲಂಘನೆ:
ಐದನೇ ರಾಷ್ಟ್ರೀಯ ಆರೋಗ್ಯ ಮತ್ತು ಕುಟುಂಬ ಸಮೀಕ್ಷೆ ಪ್ರಕಾರ ಕರ್ನಾಟಕದಲ್ಲಿ ಶೇ. 35 ರಷ್ಟು ಮಕ್ಕಳು ಕುಂಠಿತವಾಗಿದ್ದು, ಶೇ. 32 ರಷ್ಟು ಮಕ್ಕಳು ಕಡಿಮೆ ತೂಕ ಹೊಂದಿರುತ್ತಾರೆ ಎಂದು ಹೇಳಿದೆ. ಅಪೌಷ್ಠಿಕ ಮಕ್ಕಳಿಗೆ ವಾರಕ್ಕೆ ಐದು ಮೊಟ್ಟೆ ನೀಡುವಲ್ಲಿ ವಿಫಲರಾಗಿದ್ದು, ಧಾರ್ಮಿಕ ಗುಂಪುಗಳ ಜಾತೀಯ ಮನೋಭಾವನೆ ಇದಕ್ಕೆ ಕಾರಣವಾಗಿದೆ. ಬಿಸಿಯೂಟ ಜತೆಗೆ ಮೊಟ್ಟೆ ನೀಡದೆ ಶಿಕ್ಷಣ ಸಚಿವರು ದ್ರೋಹ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.

ಕಾಯ್ದೆ ಉಲ್ಲಂಘನೆ: ಈ ಮೂಲಕ ಆಹಾರ ಭದ್ರತಾ ಕಾಯ್ದೆ 2013 ಸೆಕ್ಷನ್ 5.6.7 ಉಲ್ಲಂಘನೆ ಮಾಡಿದ್ದಾರೆ ಎಂದು ಸಾರ್ವಜನಿಕ ದೋಷಾರೋಪ ಪತ್ರದಲ್ಲಿ ದೂರಲಾಗಿದೆ.
ಆರೋಪ 03:
ಹಿಜಾಬ್ ಹೆಸರಿನಲ್ಲಿ ಶಿಕ್ಷಣ ಹಕ್ಕು ಉಲ್ಲಂಘನೆ: ಕರ್ನಾಟಕ ಹೈಕೋರ್ಟ್ ತೀರ್ಪನ್ನು ಉದ್ದೇಶ ಪೂರ್ವಕವಾಗಿ ಸರಿಯಾಗಿ ಜಾರಿಗೆ ತರದೇ ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರು ಪರೀಕ್ಷೆ ಬರೆಯಲು ಅವಕಾಶ ನೀಡಿಲ್ಲ. ಬಹು ಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳು ಅಲ್ಪ ಸಂಖ್ಯಾತ ಸಮುದಾಯದ ವಿದ್ಯಾರ್ಥಿನಿಯರನ್ನು ಶಿಕ್ಷಣ ಸಂಸ್ಥೆಗಳಲ್ಲಿ ಹಿಂಸೆ ನೀಡಿ ತಾರತಮ್ಯ ಎಸಗಲು ಕಾರಣವಾಗಿದ್ದಾರೆ. ಅಲ್ಪ ಸಂಖ್ಯಾತ ವಿದ್ಯಾರ್ಥಿನಿಯರು ಶಿಕ್ಷಣದಿಂದ ವಂಚಿತರಾಗುವಂತೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಉಲ್ಲಂಘನೆ: ಸಂವಿಧಾನದ ವಿಧಿ 14, 15, 19ರ ಉಲ್ಲಂಘನೆಯಾಗಿದೆ.
ಆರೋಪ 04:
ಪಠ್ಯ ಪುಸ್ತಕ ಪರಿಷ್ಕರಣೆ ವಿವಾದ: ವಿದ್ಯಾರ್ಥಿಗಳು ಒಳ್ಳೆಯ ನಾಗರಿಕನಾಗಲು ಪಠ್ಯ ಪುಸ್ತಕಗಳು ಮಾರ್ಗದರ್ಶನ ನೀಡೇಕು. ಅವೈಜ್ಞಾನಿಕ ಮತ್ತು ಜಾತಿವಾದಿ ಪಠ್ಯ ಪುಸ್ತಕ ಪರಿಷ್ಕರಣೆ ಮಾಡಿ ಶಿಕ್ಷಣ ಹಕ್ಕು ಕಾಯ್ದೆ ಉಲ್ಲಂಘಿಸಿದ್ದಾರೆ. ಪಿ. ಲಂಕೇಶ್, ಅಬೂಬಕರ್ ಕೃತಿ ತೆಗೆದು ಹಾಕಿ, ಅಂಬೇಡ್ಕರ್, ಬಸವಣ್ಣ ಅವರಿಗೆ ಸಂಬಂಧಿಸಿದ ಐತಿಹಾಸಿಕ ಸಂಗತಿಗಳನ್ನು ತಿರುಚಿ ಪಠ್ಯ ಪುಸ್ತಕ ಪರಿಷ್ಕರಣೆಗೆ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಕಾರಣರಾಗಿರುತ್ತಾರೆ.

Recommended Video
ಉಲ್ಲಂಘನೆ: ಶಿಕ್ಷಣ ಹಕ್ಕು ಕಾಯ್ದೆ 29 ಹಾಗೂ ರಾಷ್ಟ್ರೀಯ ಕರಿಕುಕಲಮ್ ಫ್ರೇಮ್ ವರ್ಕ್ 2005 ರ ಉಲ್ಲಂಘನೆ ಮಾಡಿದ್ದಾರೆ ಎಂದು ಬಹುತ್ವ ಕರ್ನಾಟಕ ಆಪಾದಿಸಿದೆ.
ಆರೋಪ 05:
ಪಠ್ಯ ಪುಸ್ತಕ ವಿತರಣೆ ವಿಳಂಬ: ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ಒಂದು ತಿಂಗಳಿಗಿಂತ ಹೆಚ್ಚು ಕಾಲ ಪಠ್ಯ ಪುಸ್ತಕ ವಿತರಣೆಯನ್ನು ವಿಳಂಬ ಮಾಡಿದ್ದಾರೆ. 2023 ರ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳ ಮೇಲೆ ಇದು ದುಷ್ಪರಿಣಾಮ ಬೀರಲಿದೆ.
ಉಲ್ಲಂಘನೆ: ಶಿಕ್ಷಣ ಹಕ್ಕು ಕಾಯ್ದೆ ನಿಯಮ 3 ಮತ್ತು 23 ರ ಉಲ್ಲಂಘನೆ.
ಆರೋಪ 06:
ಸಂವಿಧಾನಿಕ ಪ್ರತಿಜ್ಞೆ ಅನುಸರಿಸಲು ವಿಫಲ: ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ಸಂವಿಧಾನದ ಮೌಲ್ಯಗಳನ್ನು ನಂಬಿ ಅದರಂತೆ ನಡೆದುಕೊಳ್ಳುವುದಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಆದರೆ, ಅರ್ಟಿಇ ಕಾಯ್ದೆಗೆ ಬದ್ಧರಾಗದೇ ವಿದ್ಯಾರ್ಥಿಗಳಿಗೆ ಪೋಷಕಾಂಶ ಪೂರೈಸದೇ ನಿರಾಕರಿಸಿದ್ದಾರೆ. ಅಲ್ಪ ಸಂಖ್ಯಾತ ವಿದ್ಯಾರ್ಥಿನಿಯರ ಶಿಕ್ಷಣ ಹಕ್ಕುಗಳನ್ನು ಕಸಿದುಕೊಂಡಿದ್ದಾರೆ. ಈ ಮೂಲಕ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ ಎಂದು ಬಹುತ್ವ ಕರ್ನಾಟಕ ಅರೋಪಿಸಿದೆ. ಹೀಗಾಗಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ರಾಜೀನಾಮೆ ನೀಡಬೇಕು ಎಂದು ಬಹುತ್ವ ಕರ್ನಾಟಕ ಒತ್ತಾಯಿಸಿದೆ.












Click it and Unblock the Notifications