ಯಡಿಯೂರಪ್ಪಗೆ ವಯಸ್ಸಾಯ್ತು, ಮೊಮ್ಮಕ್ಕಳ ಜೊತೆ ಆಡಿಕೊಂಡಿರಲಿ!
ಬಿಜೆಪಿಯಲ್ಲಿ ಬಂಡಾಯದ ಕಹಳೆ ಮೊಳಗಿಸಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮಾಜಿ ಸಿಎಂ ಹಾಗೂ ಬಿಜೆಪಿ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ಅವರ ಬಗ್ಗೆ ವ್ಯಂಗ್ಯ ಮಾಡಿದ್ದಾರೆ. ಯಡಿಯೂರಪ್ಪ ಅವರಿಗೆ ವಯಸ್ಸಾಗಿದ್ದು, ಅವರ ಮೊಮ್ಮಕ್ಕಳ ಜೊತೆ ಆಟವಾಡಿಕೊಂಡಿರಲಿ ಎಂದು ಸಲಹೆ ನೀಡಿದ್ದಾರೆ.
ಮೊಮ್ಮಕ್ಕಳೊಂದಿಗೆ ಆಟವಾಡಿಕೊಂಡಿರುವುದು ಬಿಟ್ಟು ಮಗ ಬಿ.ವೈ.ವಿಜಯೇಂದ್ರ ಪರ ಹೋರಾಟ ಮಾಡುತ್ತಿದ್ದಾರೆ. ವಿಜಯೇಂದ್ರ ಅವರಿಗೆ ಸಾಮರ್ಥ್ಯ ಇದ್ದರೆ, ಬೆಳೆಯುತ್ತಾರೆ. ಇಲ್ಲದಿದ್ದರೆ ನಾವೇ ಬರುತ್ತೇವೆ ಎಂದೂ ಯತ್ನಾಳ್ ಸಂದೇಶ ರವಾನಿಸಿದ್ದಾರೆ.

ಬಿಜೆಪಿ ಗೆದ್ದಾಗ ಮಾತ್ರ ಬಿ.ಎಸ್.ಯಡಿಯೂರಪ್ಪ ಅವರ ನಾಯಕತ್ವ ಎನ್ನುತ್ತಾರೆ. ಈಗ ಚುನಾವಣೆಯಲ್ಲಿ ಬಿಜೆಪಿ ಸೋತಿದೆ. ಅದರ ಹೊಣೆಯನ್ನೂ ಅವರು ಹೊರಬೇಕು. ಒಂದು ವೇಳೆ ಬಿಜೆಪಿ ಗೆದ್ದಿದ್ದರೆ ಯತ್ನಾಳ್ ಪ್ರಯತ್ನದಿಂದ ಆಯ್ತು ಎಂದು ಹೇಳ್ತಿದ್ರಾ? ಕಂಡಿತವಾಗಿ ಇಲ್ಲ ಎಂದಿದ್ದಾರೆ.
ಬಿ.ವೈ.ವಿಜಯೇಂದ್ರ ನಿಜವಾಗಿ ಹೋರಾಟವನ್ನೇ ಮಾಡೋದಿಲ್ಲ. ವಿಜಯೇಂದ್ರ ವಕ್ಫ್ ವಿರುದ್ಧ ಎಲ್ಲಿ ಹೋರಾಟ ಮಾಡಿದ್ದಾನೆ ಎಂದು ಯತ್ನಾಳ್ ಪ್ರಶ್ನಿಸಿದ್ದಾರೆ. ವಿಜಯೇಂದ್ರ ಯಾವ ಹಳ್ಳಿಗೆ ಹೋಗಿದ್ರು, ಯಾವ ರೈತರ ಮನವಿ ಸ್ವೀಕರಿಸಿದ್ದಾನೆ? ಎಂದು ಗುಡುಗಿದ್ದಾರೆ.

ರಾತ್ರಿಯಾದರೆ ಡಿ.ಕೆ.ಶಿವಕುಮಾರ್ ಸಿದ್ದರಾಮಯ್ಯ ಅವರ ಮನೇಲಿ ಇರುತ್ತಾರೆ. ಅವರೆಲ್ಲ ರೈತರ ವಿಚಾರದಲ್ಲಿ ಹೋರಾಟ ಮಾಡುತ್ತಾರಾ? ಯಡಿಯೂರಪ್ಪನವರ ಮೇಲೆ ನೂರಾರು ಕೇಸ್ಗಳಿವೆ. ಅದಕ್ಕಾಗಿ ನಮ್ಮನ್ನ ಕಾಪಾಡು ಎಂದು ಡಿ.ಕೆ.ಶಿವಕುಮಾರ್ ಹಾಗೂ ಸಿಎಂ ಸಿದ್ದರಾಮಯ್ಯ ಮನೆಯಲ್ಲಿ ಇರುತ್ತಾರೆ ಎಂದು ಯತ್ನಾಳ್ ಲೇವಡಿ ಮಾಡಿದ್ದಾರೆ.
ಇವರು ಬಿಜೆಪಿಯ ಒರಿಜಿನಲ್ ಕಾರ್ಯಕರ್ತರಲ್ಲ. ಇವರೆಲ್ಲರೂ ರಾತ್ರಿ ಕಾಂಗ್ರೆಸ್ ನಾಯಕರ ಜೊತೆ ಇರ್ತಾರೆ. ಬೆಳಿಗ್ಗೆ ಬಂದು ಜೈಶ್ರೀರಾಂ ಎನ್ನುತ್ತಾರೆ. ಅವರು ನಮಗೆ ಬೇಕಾಗಿಲ್ಲ. ನಾವು ಹೊಸ ತಂಡ ರಚಿಸೋಣ ಎಂದು ಯತ್ನಾಳ್ ಸಾರ್ವಜನಿಕವಾಗಿ ಯಡಿಯೂರಪ್ಪ ಅವರಿಗೆ ತೊಡೆ ತಟ್ಟಿದ್ದಾರೆ.
ಹೋರಾಟ ನಿಲ್ಲಿಸಿ ಒಂದಾಗಲು ಬಿಎಸ್ವೈ ಮನವಿ
ಯತ್ನಾಳ್ ಅವರ ನಡೆ ಹೈಕಮಾಂಡ್ ಗಮನಕ್ಕೂ ಬಂದಿದೆ. ಮುಂದೆ ಏನು ಮಾಡುತ್ತಾರೋ ನೋಡೋಣ ಎಂದು ಯಡಿಯೂರಪ್ಪ ಹೇಳಿದ್ದಾರೆ. ಬಸನಗೌಡ ಪಾಟೀಲ್ ಯತ್ನಾಳ್ ಸೇರಿ ನಡೆಸುತ್ತಿರುವ ಹೋರಾಟ ಕೂಡಲೇ ನಿಲ್ಲಿಸಿ, ನಮ್ಮೊಂದಿಗೆ ಕೈಜೋಡಿಸಿ ಎಂದು ವಿಜಯೇಂದ್ರ ವಿನಂತಿ ಮಾಡಿಕೊಂಡರೂ ಪ್ರತ್ಯೇಕ ಹೋರಾಟ ಮಾಡುತ್ತಿರುವುದು ಅವರಿಗೆ ಶೋಭೆ ತರಲ್ಲ ಎಂದಿದ್ದಾರೆ. ಪಕ್ಷದ ನಾಯಕರು ಈಗಲಾದರೂ ಒಗ್ಗೂಡಿ ಪಕ್ಷವನ್ನು ಬಲಪಡಿಸಲು ಮುಂದಾಗಬೇಕು. ನಾವು ಯತ್ನಾಳ್ ಅವರಿಗೆ ಮನವಿ ಮಾಡುತ್ತೇವೆ. ಆದರೆ ಉಳಿದದ್ದು ಅವರಿಗೆ ಹಾಗೂ ಹೈಕಮಾಂಡ್ಗೆ ಬಿಟ್ಟಿದ್ದು ಎಂದು ಯಡಿಯೂರಪ್ಪ ಮುಂದಿನ ಅಪಾಯವನ್ನು ಎಚ್ಚರಿಸಿದ್ದಾರೆ.
ವಕ್ಫ್ ವಿರುದ್ಧ ಸಮರ ಸಾರಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಬೀದರ್ನಿಂದ ಚಾಮರಾಜನಗರದವರೆಗೆ ಜನಜಾಗೃತಿ ಅಭಿಯಾನ ಆರಂಭಿಸಿದ್ದಾರೆ. ಇದು ಡಿಸೆಂಬರ್ 25ರಂದು ಬೆಂಗಳೂರಿನಲ್ಲಿ ಸಮಾರೋಪಗೊಳ್ಳಲಿದೆ.












Click it and Unblock the Notifications