ದೇವದಾಸಿ ಪದ್ಧತಿ ಸಮಗ್ರ ಕಾಯ್ದೆ ರಚಿಸಲು ಜನಜಾಗೃತಿ ಕಲಾ ಜಾಥಾ
ಸಂಪ್ರದಾಯದ ಹೆಸರಿನಲ್ಲಿ ದೇವದಾಸಿ ಪದ್ಧತಿಯು ಇಂದಿಗೂ ಜೀವಂತವಾಗಿದೆ. ಹುಣ್ಣಿಮೆ ಬೆಳದಿಂಗಳಂದು ದಲಿತ ಸಮುದಾಯದ ಹೆಣ್ಣುಮಕ್ಕಳ ಬದುಕನ್ನೇ ಬಲಿತೆಗೆದುಕೊಳ್ಳುವ ಅಮಾನವೀಯ ಪದ್ಧತಿ ಇದು. ಈ ಪದ್ಧತಿಗೆ ಹುಟ್ಟಿದ ಮಕ್ಕಳು ಮೊಮ್ಮಕ್ಕಳ ಬದುಕು ಶೋಚನೀಯ ಸ್ಥಿತಿಯಲ್ಲಿದೆ.
ರಾಜ್ಯದ ಉತ್ತರ ಕರ್ನಾಟಕದ 15 ಜಿಲ್ಲೆಗಳಲ್ಲಿ ದೇವದಾಸಿ ಪದ್ಧತಿ ಹೆಚ್ಚಿತ್ತು ಎಂಬುದಕ್ಕೆ ಇಂದು ಮಾಜಿ ದೇವದಾಸಿ ತಾಯಂದಿರು ಸರ್ಕಾರದಿಂದ ಪಡೆಯುತ್ತಿರುವ ಮಾಸಾಶನವೇ ಸಾಕ್ಷಿ. 1975ರಲ್ಲಿ ದಲಿತ ಸಂಘರ್ಷ ಸಮಿತಿ ನಡೆಸಿದ ಜನಾಂದೋಲನ ಮತ್ತು ಸಮುದಾಯಕ್ಕೆ ಶಿಕ್ಷಣದಿಂದ ಸಿಕ್ಕ ಅರಿವು ಈ ಪದ್ಧತಿ ವಿರುದ್ಧ ಮೊಳಗಿದ ಮೊದಲ ಧ್ವನಿ. ಈ ಹೋರಾಟದ ಫಲವಾಗಿಯೇ 1982ರಲ್ಲಿ ದೇವದಾಸಿ ಪದ್ಧತಿ ನಿಷೇಧಿಸಿ ಕಾಯಿದೆ ತರಲಾಯಿತು. ಅದಾಗ್ಯೂ ಈ ಪದ್ಧತಿಯನ್ನು ಸಂಪೂರ್ಣ ನಿಲ್ಲಿಸಲಾಗಲಿಲ್ಲ. ಗುಡಿಗಳಲ್ಲಿ ದಾಸಿ ಬಿಡುವ ಬದಲು ವಿವಿಧ ಮಾರ್ಗಗಳಲ್ಲಿ ದಾಸಿ ಬಿಡುವ ಪದ್ಧತಿ ಇಂದಿಗೂ ಜೀವಂತವಾಗಿದೆ.
ಅಲ್ಲೊಂದು ಇಲ್ಲೊಂದು ಮಾಧ್ಯಮ ವರದಿಗಳು ಬರುತ್ತವೆ. ಆ ಬಗ್ಗೆ ಕಾನೂನಿನ ಕ್ರಮವೂ ಪೂರ್ಣವಾಗಿ ಜರುಗುತ್ತಿಲ್ಲ. ಜಾಗೃತಗೊಂಡಿರುವ ದೇವದಾಸಿ ಮಕ್ಕಳು ತಮ್ಮ ಅಸ್ಮಿತೆಯ ಪ್ರಶ್ನೆಗಳನ್ನು ಮುಂದಿಡುತ್ತಿದ್ದಾರೆ. ಅಪ್ಪ ಯಾರು, ಇತರೆ ಮಕ್ಕಳಂತೆ ನಮಗೂ ಅವರ ಪ್ರೀತಿ ಬೇಕು, ಅವನ ಆಸ್ತಿಯಲ್ಲಿ ಪಾಲು ಬೇಕು, ಅಮ್ಮನ ಹೆಸರಿನ ಜೊತೆ ಅಪ್ಪನ ಹೆಸರೂ ಶಾಲೆಯಲ್ಲಿ ಬರೆಸಬೇಕು. ಅಮ್ಮನ ಬಳಿ ಅಪ್ಪ ಯಾರೆಂದು ಕೇಳಿದರೆ ಮೌನಕ್ಕೆ ಜಾರಿ ಕಣ್ಣೀರಾಗುತ್ತಾಳೆ. ನಮ್ಮ ಅಸ್ಮಿತೆ ಕಂಡುಕೊಳ್ಳುವುದಾದರೂ ಹೇಗೆ...? ಇಂಥವೇ ಪ್ರಶ್ನೆಗಳನ್ನು ಹೊತ್ತು ಆ ಮಕ್ಕಳು ಕಂಗಾಲಾಗಿದ್ದಾರೆ.

ಈ ಎಲ್ಲಾ ಅಂಶಗಳ ಬಗ್ಗೆ ಜನ ಜಾಗೃತಿಗಾಗಿ ವಿಜಯಪುರ, ರಾಯಚೂರು, ಸಿಂಧನೂರು, ಬಳ್ಳಾರಿ, ವಿಜಯನಗರ, ಕೊಪ್ಪಳ, ಕುಷ್ಟಗಿ, ಬಾಗಲಕೋಟೆ, ಗದಗ, ಧಾರವಾಡ, ಬೆಳಗಾವಿ, ಹಾವೇರಿ, ದಾವಣಗೆರೆ ಹೀಗೆ ಒಟ್ಟು 14 ಜಿಲ್ಲೆಗಳಲ್ಲಿ ಶನಿವಾರದಿಂದ 8 ದಿನಗಳ ಕಲಾ ಜಾಥಾ ಏರ್ಪಡಿಸಲಾಗಿದೆ.
ದೇವದಾಸಿ ಮಕ್ಕಳ ಮುಂದಿನ ಭವಿಷ್ಯಕ್ಕಾಗಿ ಹೊಸ ಕಾನೂನು ತರಬೇಕಿದೆ. ದೇವದಾಸಿ ಪದ್ಧತಿ ನಿಷೇಧ ಕಾಯಿದೆಗೆ ತಿದ್ದುಪಡಿ ತಂದು ಸಮಗ್ರ ಕಾಯಿದೆ ರೂಪಿಸಬೇಕಿದೆ. ಈ ನಿಟ್ಟಿನಲ್ಲಿ ಈಗಾಗಲೇ The Karnataka Devadasi Prevention, prohibition, relief and rehabilitation bill 2018 ಎಂಬ ಸಮಗ್ರ ಕರಡು ಮಸೂದೆಯನ್ನು ನ್ಯಾಷನಲ್ ಲಾ ಸ್ಕೂಲ್ ಪರಿಣತರ ನೆರವಿನಲ್ಲಿ ಸಿದ್ಧಪಡಿಸಿ ಆಗಿನ ಮುಖ್ಯ ಕಾರ್ಯದರ್ಶಿ ರತ್ನಪ್ರಭ ಅವರಿಗೆ ಸಲ್ಲಿಸಲಾಗಿತ್ತು. ಈವರೆಗೆ ಸರ್ಕಾರ ಅದರ ಬಗ್ಗೆ ಗಮನಹರಿಸಿಲ್ಲ. ಹಾಗಾಗಿ ದೇವದಾಸಿಯರ ಮಕ್ಕಳಿಗೆ ಸಲ್ಲಬೇಕಾದ ನ್ಯಾಯದ ಕುರಿತು ಜನಾಭಿಪ್ರಾಯ ಜನ ಜಾಗೃತಿ ಕಲಾಜಾಥಾ ಹಮ್ಮಿಕೊಳ್ಳುತ್ತಿದ್ದೇವೆ.
ಹಕ್ಕೊತ್ತಾಯಗಳು
1. ದೇವದಾಸಿ ಮತ್ತು ಅವರ ಮಕ್ಕಳ ಸಂವಿಧಾನಾತ್ಮಕವಾಗಿ ಗೌರವಯುತವಾಗಿ ಬದುಕುವ ಹಕ್ಕು ರಕ್ಷಣೆ ಮಾಡುವುದು ಸರ್ಕಾರಗಳ ಕರ್ತವ್ಯ, ದೇವದಾಸಿ ಮತ್ತು ಅವರ ಮಕ್ಕಳ ಹಕ್ಕು ಮಾನವ ಹಕ್ಕುಗಳ ಪ್ರಶ್ನೆ, ಅವರ ಹಕ್ಕುಗಳನ್ನು ರಕ್ಷಿಸುವ ಹೊಣೆ ಸರ್ಕಾರದ್ದು. ಹಾಗಾಗಿ ದೇವದಸಿ ಪದ್ಧತಿ ನಿರ್ಮೂಲನೆ ಮತ್ತು ಪುನರ್ವಸತಿಗಾಗಿ 2019ರಲ್ಲಿ ಸರ್ಕಾರಕ್ಕೆ ಸಲ್ಲಿಸಲಾಗಿರುವ The Karnataka Devadasi (Prvention, prohibition, relief and rehabilitation) Bill 2018 ಅನ್ನು ಕಾಯಿದೆಯಾಗಿ ಜಾರಿಗೆ ತರಬೇಕು.
2. ದೇವದಾಸಿಗೆ ಜನಿಸಿದ ಪ್ರತಿ ಮಗುವಿಗೆ ತನ್ನ ತಂದೆ ಯಾರೆಂದು ತಿಳಿದುಕೊಳ್ಳುವುದು ಮೂಲ ಹಕ್ಕು ಮತ್ತು ಸಾಮಾಜಿಕ ನ್ಯಾಯ. ಅದು ಆಚರಣೆಗೆ ಬರಬೇಕು. ಈ ಮಕ್ಕಳಿಗೆ ತಾಯಿ ಮತ್ತು ತಂದೆ ಮೂಲದಿಂದ ಬರುವ ಆಸ್ತಿ ಹಕ್ಕು ಸಿಕ್ಕಬೇಕು.
3. ದಾಸಿ ಬಿಡುವ ಪದ್ಧತಿ ಸಂಪೂರ್ಣ ನಿಲ್ಲುವವರೆಗೆ ಕಾಲಕಾಲಕ್ಕೆ ದೇವದಾಸಿಯರ ಸಮೀಕ್ಷೆ ನಡೆಸಬೇಕು. ನೋಂದಣಿಯಾದ ಎಲ್ಲರಿಗೂ ಮಾಸಾಶನ ಒದಗಿಸಬೇಕು.
4. ದೇವದಾಸಿ ಪದ್ಧತಿಗೆ ಉತ್ತೇಜಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು.
5. ದೇವದಾಸಿಯರು ಮತ್ತವರ ಮಕ್ಕಳು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ನೆರವಾಗುವಂತ ವಿಶೇಷ ಪ್ಯಾಕೇಜ್ ಘೋಷಿಸಬೇಕು.
6. ದೇವದಾಸಿ ಪದ್ಧತಿ ನಿಷೇಧಿಸುವ ನಿಟ್ಟಿನಲ್ಲಿ ಗ್ರಾಮ, ತಾಲ್ಲೂಕು, ಜಿಲ್ಲಾ ಪಂಚಾಯ್ತಿ, ನಗರಾಡಳಿತ ಸಂಸ್ಥೆಗಳು ಸಕ್ರಿಯವಾಗಿ ಕೆಲಸ ಮಾಡಬೇಕು.











Click it and Unblock the Notifications