ಆಡಿಯೋ ಟೇಪ್ : ಆಪರೇಷನ್ ಕಮಲಕ್ಕೆ ಬಿತ್ತು ತಾತ್ಕಾಲಿಕ ತಡೆ!
Recommended Video

ಬೆಂಗಳೂರು, ಫೆಬ್ರವರಿ 12 : ಆಡಿಯೋ ಟೇಪ್ ಅಸ್ತ್ರದ ಮೂಲಕ ಕರ್ನಾಟಕದಲ್ಲಿ ಆಪರೇಷನ್ ಕಮಲಕ್ಕೆ ತಾತ್ಕಾಲಿಕವಾದ ತಡೆ ಬಿದ್ದಿದೆ. ಬಿಜೆಪಿ ಹೈಕಮಾಂಡ್ ಸಹ 2019ರ ಲೋಕಸಭಾ ಚುನಾವಣೆಯತ್ತ ಗಮನಕೊಡಿ ಎಂದು ಪಕ್ಷದ ನಾಯಕರಿಗೆ ಮೌಖಿಕವಾಗಿ ಸೂಚನೆ ನೀಡಿದೆ.
ಆಪರೇಷನ್ ಕಮಲದ ಆಡಿಯೋ ಬಗ್ಗೆ ರಾಷ್ಟ್ರ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಇದರಿಂದಾಗಿ ಬಿಜೆಪಿಗೆ ಮುಜುಗರ ಉಂಟಾಗಿದೆ. ಅದರಲ್ಲೂ ಆಡಿಯೋದಲ್ಲಿ ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಅವರ ಧ್ವನಿ ಇದೆ ಎಂಬುದು ಚರ್ಚೆಗೆ ಕಾರಣವಾಗಿದೆ.
ಕರ್ನಾಟಕದಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾದ ದಿನದಿಂದ ಬಿಜೆಪಿ ಸರ್ಕಾರ ಬೀಳಿಸಲು ಪ್ರಯತ್ನ ನಡೆಸುತ್ತಿದೆ ಎಂಬ ಆರೋಪವಿತ್ತು. ಕಾಂಗ್ರೆಸ್-ಜೆಡಿಎಸ್ ನಾಯಕರು ಆಡಿಯೋ ಟೇಪ್ ಬಿಡುಗಡೆ ಮಾಡುವ ಮೂಲಕ ಬಿಜೆಪಿಯ ಪ್ರಯತ್ನಕ್ಕೆ ತಡೆ ಹಾಕಿದೆ.
ಆಡಿಯೋ ಪ್ರಕರಣವನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗಲು ಮೈತ್ರಿ ಸರ್ಕಾರ ನಿರ್ಧರಿಸಿದೆ. ಈ ಬಗ್ಗೆ ತನಿಖೆ ನಡೆಸಲು ಸರ್ಕಾರ ಆದೇಶ ನೀಡುವ ಸಾಧ್ಯತೆ ಇದೆ. ಆದರೆ, ಎಸ್ಐಟಿ ತನಿಖೆಗೆ ಬಿಜೆಪಿ ನಾಯಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ...

ವ್ಯವಸ್ಥಿತ ಕಾರ್ಯತಂತ್ರ
ಭಾನುವಾರ ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರು ಸುಧೀರ್ಘವಾದ ಚರ್ಚೆಯನ್ನು ನಡೆಸಿ ಆಡಿಯೋ ಪ್ರಕರಣವನ್ನು ಈ ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಎಚ್.ಡಿ.ಕುಮಾರಸ್ವಾಮಿ ಅವರು ಭಾನುವಾರ ದೇವೇಗೌಡರ ಜೊತೆ ಚರ್ಚೆ ನಡೆಸಿದ್ದರು. ಎಲ್ಲರೂ ಸೇರಿಯೇ ವ್ಯವಸ್ಥಿತ ಕಾರ್ಯತಂತ್ರ ಮಾಡಿ ಆಡಿಯೋ ಅಸ್ತ್ರವನ್ನು ಸಿದ್ಧಪಡಿಸಿದ್ದಾರೆ.

ಹೈಕಮಾಂಡ್ಗೂ ಮಾಹಿತಿ
ಕರ್ನಾಟಕದ ಕಾಂಗ್ರೆಸ್ ನಾಯಕರು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೂ ಆಡಿಯೋ ಬಗ್ಗೆ ಮಾಹಿತಿ ನೀಡಿದ್ದರು. ಸಂಸತ್ನಲ್ಲಿಯೂ ವಿಷಯ ಪ್ರಸ್ತಾಪಿಸಿ ಬಿಜೆಪಿಗೆ ರಾಷ್ಟ್ರ ಮಟ್ಟದಲ್ಲಿ ಮುಜುಗರ ಉಂಟು ಮಾಡಲು ತೀರ್ಮಾನಿಸಲಾಗಿತ್ತು. ಸಂಸತ್ನಲ್ಲಿ ಸೋಮವಾರ ಆಡಿಯೋ ಬಗ್ಗೆ ಚರ್ಚೆ ನಡೆಯಿತು.

ಯಡಿಯೂರಪ್ಪ ಟಾರ್ಗೆಟ್
ಆಡಿಯೋದಲ್ಲಿ ಯಡಿಯೂರಪ್ಪ ಧ್ವನಿ ಇದೆ ಎಂಬುದನ್ನು ಪ್ರಮುಖ ಅಸ್ತ್ರವಾಗಿ ಮಾಡಿಕೊಂಡು ಕಾಂಗ್ರೆಸ್-ಜೆಡಿಎಸ್ ವಾಗ್ದಾಳಿ ನಡೆಸಿದವು. ಸ್ಪೀಕರ್ ರಮೇಶ್ ಕುಮಾರ್ ಅವರಿಗೆ 50 ಕೋಟಿ ಕೊಡುವ ಬಗ್ಗೆ ಹೇಳಿದ ಮಾತನ್ನು ಬಳಸಿಕೊಂಡು ಯಡಿಯೂರಪ್ಪ ವಿರುದ್ಧ ವ್ಯವಸ್ಥಿತವಾಗಿ ಟೀಕೆಗಳನ್ನು ನಡೆಸಿ ಅವರನ್ನು ಕಟ್ಟಿಹಾಕುವ ತಂತ್ರವನ್ನು ಎರಡೂ ಪಕ್ಷಗಳು ಮಾಡಿದವು.

ಹೈಕಮಾಂಡ್ ಸೂಚನೆ
ಬಿಜೆಪಿ ಹೈಕಮಾಂಡ್ ಸಹ ಆಡಿಯೋ ಟೇಪ್ ಬಗ್ಗೆ ಪ್ರತಿಕ್ರಿಯೆ ನೀಡಿದೆ. ಕರ್ನಾಟಕದಲ್ಲಿ ಸರ್ಕಾರ ಉರುಳಿಸುವ ಕೆಲಸವನ್ನು ಕೈ ಬಿಟ್ಟು ಲೋಕಸಭಾ ಚುನಾವಣೆ ಸಿದ್ಧತೆಯತ್ತ ಗಮನಹರಿಸಿ ಎಂದು ರಾಜ್ಯದ ನಾಯಕರು ಮೌಖಿಕವಾದ ಸೂಚನೆಯನ್ನು ನೀಡಲಾಗಿದೆ. ಆದ್ದರಿಂದ, ಆಪರೇಷನ್ ಕಮಲಕ್ಕೆ ತಡೆ ಬಿದ್ದಿದೆ.












Click it and Unblock the Notifications