ಪಿಯು ವಿದ್ಯಾರ್ಥಿಗಳು ಮುಚ್ಚಳಿಕೆ ಬರೆದು ಕೊಡುವುದು ಇನ್ನು ಕಡ್ಡಾಯ
ಬೆಂಗಳೂರು, ಜೂನ್ 28: ಹಾಜರಾತಿಯಲ್ಲಿ ಶೇ.75ರಷ್ಟು ವಿದ್ಯಾರ್ಥಿಗಳು ಇರದಿದ್ದರೆ ಪರೀಕ್ಷೆಗೆ ಹಾಜರಾಗುವಂತಿಲ್ಲ, ಇನ್ನುಮುಂದೆ ಹಾಜರಾತಿ ವಿಚಾರವಾಗಿ ಉಪನ್ಯಾಸಕರು, ಪ್ರಾಂಶುಪಾಲರನ್ನು ದೂರುವಂತೆಯೂ ಇಲ್ಲ, ಹಾಜರಾತಿಗೆ ಅವರವರೇ ಹೊಣೆಯಾಗುತ್ತಾರೆ ಇಂತಹದೊಂದು ಆಲೋಚನೆಯನ್ನು ಪದವಿಪೂರ್ವ ಶಿಕ್ಷಣ ಇಲಾಖೆ ಮಾಡಿದೆ.
ಕಾಲೇಜು ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ಕಡಿಮೆ ಅಂಕ ಬರಲು ಅವರು ತರಗತಿಗೆ ಹಾಜರಾಗದಿರುವುದೇ ಮುಖ್ಯ ಕಾರಣ ಎಂದು ಹೇಳಿರುವ ಪದವಿಪೂರ್ವ ಶಿಕ್ಷಣ ಇಲಾಖೆ ವಿದ್ಯಾರ್ಥಿಗಳಿಂದ ಮುಚ್ಚಳಿಕೆ ಬರೆಸಿಕೊಳ್ಳಲು ನಿರ್ಧರಿಸಿದೆ.
ತರಗತಿಗೆ ಸೇರುವಾಗಲೇ ಇನ್ನುಮುಂದೆ ಶೇ.75ರಷ್ಟು ಹಾಜರಾತಿ ಹೊಂದಿದರೆ ಮಾತ್ರ ಪರೀಕ್ಷೆಗೆ ಹಾಜರಾಗಲು ಅವಕಾಶ ಕೊಡಿ, ಇಲ್ಲವಾದರೆ ಇದಕ್ಕೆಲ್ಲ ನಾನೇ ಹೊಣೆಗಾರನಾಗುತ್ತೇನೆ ಎನ್ನುವ ಮುಚ್ಚಳಿಕೆಯನ್ನು ಬರೆದುಕೊಡುವುದು ಕಡ್ಡಾಯವಾಗಲಿದೆ. ಈ ಹಿಂದಿನ ಕ್ರಮದಲ್ಲಿ ಯಾವುದೇ ವಿದ್ಯಾರ್ಥಿ ತರಗತಿಯ ಹಾಜರಾತಿ ಕೊರತೆ ಬಂದಾಗ ಉಪನ್ಯಾಸಕರು, ಪ್ರಾಂಶುಪಾಲರ ಮೇಲೆ ಜವಾಬ್ದಾರಿ ಹೊರಿಸಿದ ಬಳಿಕ ವಿದ್ಯಾರ್ಥಿಗಳು ಜಾರಿಕೊಳ್ಳುತ್ತಿದ್ದರು.

ಕಾಲವೊಂದು ಬಾರಿ ವಿದ್ಯಾರ್ಥಿಗಳು ಕಾನೂನಿನ ಮೊರೆ ಹೋಗಿ ತಮ್ಮ ತಪ್ಪನ್ನು ಬದಿಗಿಟ್ಟು ಉಪನ್ಯಾಸಕರಿಂದಲೇ ಅನ್ಯಾಯವಾಗಿದೆ ಎನ್ನುವ ವಾದ ಮುಂದಿಟ್ಟುಕೊಂಡು ಪರೀಕ್ಷೆಗೆ ಹಾಜರಾಗುತ್ತಿದ್ದರು. ಇದೀಗ ವಿದ್ಯಾರ್ಥಿಗಳು ಮಾಡಿದ ತಪ್ಪಿಗೆ ವಿದ್ಯಾರ್ಥಿಗಳನ್ನೇ ಹೊಣೆಗಾರನಾಗಿ ಮಾಡುವುದು ಎಂದು ತೀರ್ಮಾನಿಸಲಾಗಿದೆ.
ಮೇ 2ರಂದು ಕಾಲೇಜು ಸೇರಿದ ವಿದ್ಯಾರ್ಥಿಗಳಿಗೆ ಈ ಮುಚ್ಚಳಿಕೆ ಸಮಸ್ಯೆ ಕಾಡುವುದಿಲ್ಲ ಕಾರಣ ಅವರು ಕಾಲೇಜು ಆರಂಭವಾದ ತಕ್ಷಣ ಬಂದು ಸೇರಿವುದರಿಂದ ಅವರಿಗೆ ಬರೋಬ್ಬರಿ 200 ದಿನಗಳಷ್ಟು ತರಗತಿಗಳು ಸಿಗುತ್ತದೆ. ಆದರೆ ಜೂನ್ 30ರವರೆಗೆ ಕಾಲೇಜು ಪ್ರವೇಶ ದಿನಾಂಕವನ್ನು ವಿಸ್ತರಿಸಿರುವುದರಿಂದ ತಡವಾಗಿ ಸೇರುವ ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ.












Click it and Unblock the Notifications