ಅನಂತ್ ಕುಮಾರ್ ಹೆಗಡೆ ವಿರುದ್ಧ ಕೇಂದ್ರ ಸಚಿವ ಅಠವಳೆ ವಾಗ್ದಾಳಿ
ಮುಂಬೈ, ಜನವರಿ 22: ಬೇಕಾಬಿಟ್ಟಿ ನಾಲಿಗೆಯನ್ನು ಹರಿಯಬಿಡುವ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ವಿರುದ್ಧ ಸ್ವಪಕ್ಷೀಯರೇ ತಿರುಗಿ ಬಿದ್ದಿದ್ದಾರೆ. 'ಟೀಕಾಕಾರರನ್ನು ಬೊಗಳುವ ನಾಯಿಗಳು' ಎಂದ ಹೆಗಡೆ ಮೇಲೆ ಸ್ವತಃ ಕೇಂದ್ರ ಸಚಿವರಾಗಿರುವ ಮಹಾರಾಷ್ಟ್ರದ ದಲಿತ ನಾಯಕ ರಾಮದಾಸ್ ಅಠವಳೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ಹೆಗಡೆಗೆ ತಾವಾಡುವ ಮಾತಿನ ಮೇಲೆ ನಿಯಂತ್ರಣವಿಲ್ಲ. ಈ ಹಿಂದೆ ಅವರು ಭಾರತದ ಸಂವಿಧಾನವನ್ನು ಬದಲಾಯಿಸುವ ಬಗ್ಗೆ ಹೇಳಿದ್ದರು. ಈಗ ಭೀಮ ಕೊರೆಗಾಂವ್ ಘಟನೆಗೆ ಸಂಬಂಧಿಸಿದಂತೆ ಅವರು ಟೀಕಾಕಾರರನ್ನು ಬೊಗಳುವ ನಾಯಿಗಳಿಗೆ ಹೋಲಿಸಿದ್ದಾರೆ," ಎಂದು ಸಾಮಾಜಿನ ನ್ಯಾಯ ಇಲಾಖೆ ರಾಜ್ಯದರ್ಜೆ ಸಚಿವ ಅಠವಳೆ ಕಿಡಿಕಾರಿದ್ದಾರೆ.
ಕೇಂದ್ರದ ಯೋಜನೆಗಳ ವಿರುದ್ಧ ಗೊತ್ತಿದ್ದೂ ಮಾತನಾಡುತ್ತಿರುವ ಅನಂತ್ ಕುಮಾರ್ ಹೆಗಡೆ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅಠವಳೆ ಆಗ್ರಹಿಸಿದ್ದಾರೆ.

"ಹೆಗಡೆ ದಲಿತರ ವಿರುದ್ಧ ಅಹಿತಕರ ಪದ ಪ್ರಯೋಗಿಸಿದ್ದಾರೆ. ಇದನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ," ಎಂದು ಅಠವಳೆ ಸ್ಪಷ್ಟವಾಗಿ ಗಟ್ಟಿ ದನಿಯಲ್ಲಿ ಹೇಳಿದ್ದಾರೆ.
ಬಳ್ಳಾರಿಯಲ್ಲಿ ಶನಿವಾರ ಮಾತನಾಡಿದ್ದ ಹೆಗಡೆ "ನಾವು ಮೊಂಡುತನದ ಜನರು. ರಸ್ತೆಗಳಲ್ಲಿ ನಾಯಿಗಳು ಬೊಗಳಿದರೆ ತಲೆ ಕೆಡಿಸಿಕೊಳ್ಳುವುದಿಲ್ಲ," ಎಂದು ಹೇಳಿದ್ದರು.












Click it and Unblock the Notifications